" ನಿರ್ಲಿಪ್ತ ಪಯಣ "

" ನಿರ್ಲಿಪ್ತ ಪಯಣ "

                


   


ಗವ್ವೆನ್ನುವ 'ಗಾಡಾಂಧಕಾರ '
ಜೀರುಂಡೆಗಳ ಜೀಗುಟ್ಟುವ ನಿನಾದ
ಮುಗಿಲ ಚುಕ್ಕಿಗಳೂ
ಕಾಣದಂತೆ ಸರ್ವತ್ರವಾಗಿ
ವ್ಯಾಪಿಸಿರುವ 'ಕಡು ರಾತ್ರಿ'ದೆವ್ವ
ಭೂತ ಪ್ರೇತ ಪಿಶಾಚಿ ನಿಶಾಚರಿಗಳು
ವಿಜ್ರಂಭಿಸುವ 'ಕರಾಳ ಕತ್ತಲ ರಾತ್ರಿ'


ಅಪರಾಧಿಕ ಪ್ರಜ್ಞೆ ಪ್ರೇರೇಪಿಸುವ
'ತಮದ ರಾತ್ರಿ' ಆ ಪ್ರಜ್ಞೆ ಮನದ
ಮೂಲೆಯಲೆದ್ದು ಅಂಕುರಿಸಿ ಬೆಳೆದು
ಗಟ್ಟಿಗೊಂಡು ಕುಕೃತ್ಯಕ್ಕೆ ಎಳೆವ
ಪಾಪ ಪ್ರಜ್ಞೆಯನು ಮನದ ಮೂಲೆಗೆ
ತಳ್ಳುವ 'ಮುಗಿಯದ ರಾತ್ರಿ'


ಸುಪ್ತಾವಸ್ಥೆಯಲಿರುವ
'ಜಾಗೃತ ಸ್ಥಿತಿಯ ಮನ 'ಮನದ
ಒಳ ಪದರುಗಳಲ್ಲಿ ಅದರ ತುಡಿತ
ಸುಪ್ತ ಬೆಳಕಿನೆಡೆಗೆ
ಗೌತಮ 'ಬುದ್ಧ'ನಾದುದು
ಕರಾಳ ಕಡು ರಾತ್ರಿಯಲೆ ಅಲ್ಲವೆ?
ನಾವೆ ಗೌತಮ ಬುದ್ಧನಾಗುವುದೋ
ಅಂಗುಲಿಮಾಲ ನಾಗುವುದೋ
ಆಯ್ಕೆ ನಮ್ಮದು


ತಮದ ಅಂಧಕಾರದಲಿ ಸುಪ್ತ
ವಿಶ್ರಾಂತ ಸ್ಥಿತಿಯಲಿರುವ 'ರಾಗಗಳು'
ಸುಪ್ರಭಾತದ ಬೆಳಕಿನಲಿ
ಬೆಳಕಿನ ರಶ್ಮಿಗಳ ಜಾಡು ಹಿಡಿದು
ಹೊರ ಹೊಮ್ಮುತ್ತವೆ ರಾಗ
ತಾನ ಆಲಾಪಗಳಲಿ ವಿಜ್ರಂಭಿಸುತ್ತವೆ
ಅಂಧಕಾರದಿಂದ ಬಿಡುಗಡೆ ಪಡೆದು


ಜೀವನದ ದೀರ್ಘ ಪಯಣದಲಿ
ತಮದ ಪೊರೆ ಕಳಚುವ ರಾಗಗಳು
ಮನದ ಮೂಲೆಯಲಿ
ತೊನೆಯುವ 'ನಾಗರಗಳು'
ತಮೋ ರಾಗದಿಂದ ಬಿಡುಗಡೆ
ಪಡೆದ ಮನ ಸುರಾಗದಲಿ ವಿಜ್ರಂಭಿಸಿ
ಕುರಾಗಕೆ ಬೆನ್ನು ಮಾಡಿ
ವಿರಾಗದೆಡೆಗದರ 'ನಿರ್ಲಿಪ್ತ ಪಯಣ'


        ****


 

Rating
No votes yet

Comments

Submitted by nageshamysore Fri, 06/21/2013 - 21:28

ಪಾಟೀಲರೆ ನಮಸ್ಕಾರ, ಈ ನಡುವೆ ಕಾಣಿಸುತ್ತಿಲ್ಲವಲ್ಲ ಎಂದುಕೊಳ್ಳುವಾಗಲೆ ನಿಮ್ಮ ಕವನ ನೋಡಿದೆ. ಕೆಳಗಿನ ಸಾಲು ಚೆನ್ನಾಗಿದೆ - ಅಂತ್ಯದ ಪ್ರಬುದ್ಧತೆ, ಪಕ್ವತೆಯ ಪಯಣ ನಿರ್ಲಿಪ್ತದೆಡೆ ಸಾಗುವ ಬಗ್ಗೆ ಚೆನ್ನಾಗಿ ಬಿಂಬಿತವಾಗಿದೆ - ನಾಗೇಶ ಮೈಸೂರು

ನಾವೆ ಗೌತಮ ಬುದ್ಧನಾಗುವುದೋ
ಅಂಗುಲಿಮಾಲ ನಾಗುವುದೋ
ಆಯ್ಕೆ ನಮ್ಮದು

Submitted by H A Patil Sat, 06/22/2013 - 18:30

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು

ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಗಣಕ ಯಂತ್ರದ ತೊಂದರೆಯಿಂದಾಗಿ ಬರಹ ಗಳಿಗೆ ಪ್ರತಿಕ್ರಿಯಿಸುವುದಾಗಲಿ ಬರೆಯುವುದಾಗಲಿ ಆಗಲಿಲ್ಲ. ಹತ್ತಿರದ ಸಂಬಂಧಿಕ ರೋರ್ವರ ಸಾವು, ನನ್ನ ಅನಾರೋಗ್ಯದ ಕಾರಣ ಶಿವಮೊಗ್ಗದಲ್ಲಿ 4 ದಿನಗಳ ಕಾಲ ಆಸ್ಪತ್ರೆಗೆ ಸೇರಿದ್ದೆ, ಇನ್ನೂ ಸುಸ್ತು ಇದೆ, ಈ ಎಲ್ಲ ಕಾರಣಗಳಿಂದಾಗಿ ಸಂಪದಕ್ಕೆ ಬರಲಾಗಲಿಲ್ಲ, ನನ್ನ ಹಿಂದಿನ ಕವನಕ್ಕೆ ಪ್ರತಿಕ್ರಿಯೆ ಬರೆದವರಿಗೆ ಪ್ರತಿಕ್ರಿಯಿಸಲಾಗಲಿಲ್ಲ, ನಿನ್ನೆ ಇಟ್ನಾಳರ ಎರಡು ಕವನಗಳಿಗೆ ಪ್ರತಿಕ್ರಿಯೆ ಬರೆದೆ, ಇನ್ನೊಂದಕ್ಕೆ ಬರೆಯಲಾಗಲಿಲ್ಲ, ನಿಮ್ಮ ಗಂಗಾವತರಣ ಮತ್ತೂ ದ್ರೌಪದಿಯ ಕುರಿತು ಬರೆದ ಕವನಗಳು ಬಹಳ ಚೆನ್ನಾಗಿವೆ ನಿಮ್ಮ ಅಧ್ಯಯನದ ಹರವು ಬಹಳ ವಿಸ್ತಾರವಾದುದು. ಬಹಳ ಶ್ರೇಷ್ಟವಾದ ಕವನಗಳವು, ಹೀಗಯೆ ಬರೆಯುತ್ತ ಹೋಗಿ, ಅವುಗಳಿಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸಲಾಗಲಿಲ್ಲ, ಕ್ಷಮೆಯಿರಲಿ ನಿಮ್ಮ ಕಳ ಕಳಿಗೆ ಅಂತಃಕರಣಕ್ಕೆ ಧನ್ಯವಾದಗಳು.

Submitted by venkatb83 Sat, 06/22/2013 - 18:45

In reply to by H A Patil

"ಗೌತಮ 'ಬುದ್ಧ'ನಾದುದು
ಕರಾಳ ಕಡು ರಾತ್ರಿಯಲೆ ಅಲ್ಲವೆ?
ನಾವೆ ಗೌತಮ ಬುದ್ಧನಾಗುವುದೋ
ಅಂಗುಲಿಮಾಲ ನಾಗುವುದೋ
ಆಯ್ಕೆ ನಮ್ಮದು"

ಹಿರಿಯರೇ ಕೆಲ ದಿನಗಳಿಂದ ನೀವ್ ಕಾಣಿಸದೆ ಇದ್ದು ಈಗ ಒಂದು ಅರ್ಥಪೂರ್ಣ ಕವನದೊಂದಿಗೆ ಮರಳಿರುವಿರಿ .
ಈ ಕವನ ಈ ಸಂದರ್ಭಕ್ಕೆ ಬಹು ಸೂಕ್ತವಾಗಿದೆ -ನಮ್ಮದೇ ಮನಸ್ಸು -ಅದರ ನಿಯಂತ್ರಣವೂ ನಮ್ಮದೇ ..
ಕವನ ಬಹು ಇಷ್ಟ ಆಯಿತು .
ಶುಭವಾಗಲಿ

\। /

Submitted by H A Patil Sat, 06/22/2013 - 19:01

In reply to by venkatb83

ಸಪ್ತಗಿರಿಯವರಿಗೆ ವಂದನೆಗಳು

ಈ ಕವನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಕವನಗಳ ನಾಡಿ ಮಿಡಿತವನ್ನು ಗ್ರಹಿಸುವ ಕ್ರಮ ಮತ್ತು ಅದನ್ನು ದಾಖಲಿಸುವ ರೀತಿ ಮನ ತಟ್ಟುತ್ತದೆ. ನನ್ನ ಅನಾರೋಗ್ಯ, ಸಂಭಂದಿಕರೋರ್ವರ ಸಾವು ಇತ್ಯಾದಿ ಕಾರಣಗಳಿಂದಾಗಿ ಸಂಪದದಲ್ಲಿ ಕಾಣಿಸಿ ಕೊಳ್ಳಲಿಲ್ಲ, ತಮ್ಮ ಕಳಕಳಿಗೆ ಧನ್ಯವಾದಗಳು.

Submitted by ಗಣೇಶ Sun, 06/23/2013 - 21:26

>>ಮನ ಸುರಾಗದಲಿ ವಿಜ್ರಂಭಿಸಿ
ಕುರಾಗಕೆ ಬೆನ್ನು ಮಾಡಿ
ವಿರಾಗದೆಡೆಗದರ... ಪಾಟೀಲರೆ ಕವನ ಚೆನ್ನಾಗಿದೆ.
ತಮ್ಮ ಆರೋಗ್ಯವೂ ಬೇಗನೆ ಸುಧಾರಿಸಲಿ
-ಗಣೇಶ.