ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಮುಂಜಾನೆ ಗಂಟೆ ಏಳೂಕಾಲು. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಮಗು ಇನ್ನೂ ಸುಖ ನಿದ್ದೆಯಲ್ಲಿದೆ. ತಾಯಿ ಹೋಗಿ ಮಗನನ್ನು ಎಬ್ಬಿಸುತ್ತಾಳೆ. “ಏಳು ಮಗಾ, ಶಾಲೆಗೆ ಹೋಗ್ಬೇಕು, ತಡ ಮಾಡಿದ್ರೆ ಶಾಲೆಯ ಬಸ್ಸು ಹೋಗಿ ಬಿಡುತ್ತದೆ, ಬೇಗ ಏಳು... ಬೇಗ ಏಳು”. ಮಗ ಏಳುವ ಲಕ್ಷಣವೇ ಕಾಣುತ್ತಿಲ್ಲ. ತಾಯಿ ಮೆಲ್ಲಗೇ ಆತನ ಕಿವಿಯಲ್ಲಿ ಉಸುರುತ್ತಾಳೆ, “ನಿನಗೆ ಇಷ್ಟವಾದ ತಿಂಡಿ ಮಾಡಿದ್ದೇನೆ. ಜೊತೆಗೆ ಎರಡು ಚಾಕಲೇಟು ಕೂಡ ಕೊಡ್ತೇನೆ. ಜಾಣ ಮರಿ ಬೇಗ ಏಳು”. ಚಾಕಲೇಟಿನ ಹೆಸರು ಕಿವಿಗೆ ಬೀಳುತ್ತಲೇ ಮಗನ ಮುಖದಲ್ಲಿ ನಸು ನಗು. ಕೂಡಲೇ ಎದ್ದು ಕುಳಿತು, “ಮೊದಲು ಚಾಕಲೇಟು ಕೊಡು, ಆಮೇಲೆ ಬರ್ತೇನೆ” ಅಂತಾನೆ. ತಾಯಿ ಕೂಡಲೇ ಚಾಕಲೇಟುಗಳನ್ನು ನೀಡ್ತಾಳೆ. ಮಗ ಎದ್ದು ಬೇಗ ಬೇಗನೇ ಪ್ರಾತಃವಿಧಿಗಳನ್ನು ಪೂರೈಸಿ ಶಾಲೆಗೆ ಶಾಲಾ ವಾಹನದಲ್ಲಿಯೇ ಹೋಗುತ್ತಾನೆ.
ಸಾಯಂಕಾಲ ಶಾಲೆಯಿಂದ ಮರಳುವ ಮಗ, ಶಾಲೆಯಲ್ಲಿ ಹೇಳಿರುವ ಮನೆಗೆಲಸಗಳನ್ನು ಮಾಡಲು ಉದಾಸೀನ ತೋರಿದಾಗ ಮತ್ತೆ ಅದೇ ತಾಯಿ, “ಹಣ್ಣಿನ ರಸ ಕೊಡುತ್ತೇನೆ, ತಂಪು ಪಾನೀಯ ಕೊಡ್ತೇನೆ, ಬಾ ಏನೆಲ್ಲಾ ಮನೆಗೆಲಸ ಕೊಟ್ಟಿದ್ದಾರೋ ಎಲ್ಲಾ ಮಾಡಿ ಮುಗಿಸು” ಅಂತಾಳೆ. ಮಗ ನಗುನಗುತ್ತಾ ಒಪ್ಪಿಕೊಳ್ತಾನೆ. ಹಾಗಲ್ಲವಾದರೆ, ಒಮ್ಮೊಮ್ಮೆ ಆ ತಾಯಿಯೇ ತನ್ನ ಮಗನ ಮನೆಗೆಲಸಗಳನ್ನೆಲ್ಲಾ ಮಾಡಿಮುಗಿಸಿ ಕೊಟ್ಟುಬಿಡುತ್ತಾಳೆ.
ಇದು ಒಂದು ಮನೆಯ ಕಥೆಯಲ್ಲ, ಒಂದು ದಿನದ ಕಥೆಯೂ ಅಲ್ಲ. ಇದು ಹೆಚ್ಚಿನ ಎಲ್ಲಾ ಮನೆಗಳಲ್ಲೂ ಹೆಚ್ಚಿನೆಲ್ಲಾ ದಿನಗಳಲ್ಲೂ ನಡೆಯುವ ಕಥೆ. ಅಲ್ಲದೆ, ಇದು ಮನೆಯೊಳಗಿನ ಭ್ರಷ್ಟಾಚಾರದ ಒಂದು ನಿದರ್ಶನ ಅಷ್ಟೇ.
ಸಾಮಾನ್ಯವಾಗಿ ಗಮನಿಸಿದಾಗ ನಮಗೆ ಇದರಿಂದೇನೂ ಅನಿಸದು. ತೀರ ಸಾಮಾನ್ಯ ವಿಷಯವಾಗಿಯೇ ಕಂಡುಬರುವುದು. ಆದರೆ ವಿಮರ್ಶಾತ್ಮಕವಾಗಿ ನೋಡಿದಾಗ, ನಮಗೆ ಕಂಡುಬರುವುದೇ ಬೇರೆ. ಪುಟ್ಟ ಪುಟ್ಟ ಮಕ್ಕಳಿಗೆ ಲಂಚ ತಿನ್ನುವ ಅಭ್ಯಾಸವನ್ನು ನಾವು ಆಗಲೇ ಕಲಿಸಿಯಾಗಿರುತ್ತದೆ. ಇನ್ನು ಮಕ್ಕಳ ವಯಸ್ಸು ಬದಲಾಗುತ್ತಾ ಹೋದಂತೆ, ಮಕ್ಕಳಿಗೆ ನೀಡುವ ಲಂಚವೂ ಬದಲಾಗುತ್ತಾ ಹೋಗುತ್ತದೆ. ಆ ಅಭ್ಯಾಸ ಕಾಲ ಕಳೆದಂತೆ ಬೆಳೆಯುತ್ತಾ ಹೋಗುತ್ತದೆ. ಇಂದು ಗಿಡನೆಟ್ಟು ಪೋಷಿಸುವ ನಾವು, ನಾಳೆ ಆ ಮರಗಳ ಕೊಂಬೆಗಳನ್ನು ಎಷ್ಟೇ ಕಡಿದರೂ, ಅದರ ಬೇರನ್ನು ಕಿತ್ತೊಗೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.
ನಾವು ನಮ್ಮ ಮಕ್ಕಳಿಗೆ, ನಮ್ಮ ಕಿರಿಯರಿಗೆ, ಮಾರ್ಗದರ್ಶಕರಾಗಬೇಕು. ಅವರ ಕೆಲಸಗಳಿಗೆ ನಾವೇ ಬದಲೀ ವ್ಯವಸ್ಥೆಯಾಗಿ ಮಾರ್ಪಡಬಾರದು. ಅವರ ಕೆಲಸಗಳನ್ನು ಅವರೇ ಮಾಡುವಂತೆ ಸದಾ ಹುರಿದುಂಬಿಸಬೇಕು. ಸಮಯ ಪಾಲನೆಯ ಬಗ್ಗೆ, ಕರ್ತವ್ಯ ನಿಷ್ಠೆಯ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. ಇವುಗಳಿಂದ ದೂರವುಳಿದಾಗ ಅವರಿಗೆ ಬಾಳಿನಲ್ಲಿ ಆಗುವ ನಷ್ಟದ ಅರಿವು ಅವರಿಗೆ ಮನದಟ್ಟಾಗುವಂತೆ ವಿವರಿಸಬೇಕು. ಅವರ ವಿದ್ಯಾಭ್ಯಾಸವೋ, ಜೀವನವೋ, ಇನ್ನೊಂದೋ ಅದೇನೇ ಇದ್ದರೂ ಅದು ಅವರಿಗಾಗಿ, ನಮಗಾಗಿ ಅಲ್ಲ. ಮಾತಾಪಿತರಿಗಾಗಿ ಅಲ್ಲ. ಅವರು ಅವುಗಳಿಂದ ವಿಮುಖರಾದರೆ ಮಾತಾಪಿತರಿಗಾಗುವ ನೋವಿಗಿಂತಲೂ, ಅಧಿಕವಾಗಿ ಅವರಿಗೇ ನಷ್ಟವಾಗುತ್ತದೆ, ನೋವುಂಟಾಗುತ್ತದೆ, ಸೋಲುಂಟಾಗುತ್ತದೆ ಎನ್ನುವುದನ್ನು ಚಿಕ್ಕಂದಿನಲ್ಲೇ ಮನದಟ್ಟು ಮಾಡಿಕೊಡಬೇಕು. ಇದರಿಂದ ಮಕ್ಕಳು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವತ್ತ ಮಾರ್ಗದರ್ಶನ ನೀಡಿದಂತಾಗುತ್ತದೆ ಅಲ್ಲದೆ, ಅವರು ಭ್ರಷ್ಟರಾಗದಂತೆ ತಡೆದಂತೆಯೂ ಆಗುತ್ತದೆ.
ಲಂಚ ಪಡೆಯುವುದನ್ನಷ್ಟೇ ಭ್ರಷ್ಟಾಚಾರ ಎನ್ನಲಾಗದು. ಓರ್ವ ವ್ಯಕ್ತಿ ತನ್ನ ವಯಸ್ಸು, ವೃತ್ತಿ ಮತ್ತು ಸ್ಥಾನಕ್ಕೆ ಸರಿಯಾದ ನೈತಿಕ ಕರ್ತವ್ಯದಿಂದ ವಿಮುಖನಾದರೆ, ತನ್ನ ವೃತ್ತಿ ಧರ್ಮ, ಸ್ಥಾನ ಧರ್ಮ ಅಥವಾ ವಯಸ್ಸಿನ ಧರ್ಮಕ್ಕೆ ವಿರುದ್ಧವಾದ ಯಾವುದೇ ಕೆಲಸ ಮಾಡಿದನಾದರೂ ಆತ ಭ್ರಷ್ಟನೆನಿಸಿಕೊಳ್ಳುತ್ತಾನೆ. ಈ ದೃಷ್ಟಿಕೋನದಿಂದ ನೋಡುವಾಗ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ಮನದಲ್ಲೂ ಭ್ರಷ್ಟಾಚಾರ ಮನೆ ಮಾಡಿದೆ ಎನ್ನುವುದರ ಅರಿವು ನಮಗಾಗುತ್ತದೆ.
ಹಾಗಾಗಿ ನಮ್ಮೆಲ್ಲರ ಮನ ಮನೆಗಳಿಂದ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯಲು ನಾವೆಲ್ಲರೂ ಪಣತೊಡಬೇಕಾಗಿದೆ.. ಈ ಪ್ರಸ್ತುತ ಜನಾಂಗಕ್ಕಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗಾಗಿಯಾದರೂ ಒಂದು ಭ್ರಷ್ಟಾಚಾರ ಮುಕ್ತ ಸುಂದರ ಸಮಾಜವನ್ನು ಬಿಟ್ಟುಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.
ನಮ್ಮೆಲ್ಲರ ಮನಗಳಲ್ಲೂ ಈ ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕೆಂಬ ಇಚ್ಛೆ ಇದ್ದೇ ಇದೆ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಭ್ರಷ್ಟಾಚಾರದ ಪಿಡುಗಿಗೆ ಬಲಿಯಾದವರೇ. ಬಿಡುವಿಲ್ಲದ ದಿನಚರಿಯ ನಡುವೆ ಸಮಯದ ಅಭಾವದಿಂದಾಗಿಯೋ, ನೈತಿಕ ಬೆಂಬಲದ ಕೊರತೆಯಿಂದಾಗಿಯೋ, ಹೋರಾಡುವ ಚೈತನ್ಯ ಮತ್ತು ಶಕ್ತಿಯ ಕೊರತೆಯಿಂದಾಗಿಯೋ, ಒಲ್ಲದ ಮನಸ್ಸಿನಿಂದ, ನಮ್ಮ ಸಿಟ್ಟನ್ನು ಅಸಹಾಯಕರಾಗಿ ಒಳಗೊಳಗೇ ನುಂಗಿಕೊಳ್ಳುತ್ತಾ ಭ್ರಷ್ಟಾಚಾರವನ್ನು ಸಹಿಸುತ್ತಾ ಬಂದಿದ್ದೇವೆ. ಅಥವಾ ಭ್ರಷ್ಟಾಚಾರದಲ್ಲಿ ನಾವೂ ಪಾಲುದಾರರಾಗಿದ್ದೇವೆ.
ಇಂದು ದೂರದ ನಾಡಿನಲ್ಲಿ ಅಣ್ಣಾ ಹಜಾರೆ ಎನ್ನುವ ಅಪರಿಚಿತ ವ್ಯಕ್ತಿ ಸೆಟೆದು ನಿಂತಾಗ, ಯಾರೋ ನಮ್ಮ ಮನದ ಬೇಗುದಿಯನ್ನು ಹೊರಹಾಕಲು ನಮಗೆ ಸಹಾಯ ಮಾಡಲು ನಿಂತಂತೆ ಕಂಡು ಬರುತ್ತಾರೆ. ಹಾಗಾಗಿ, ನಾವು ನಮ್ಮ ಬೇಸತ್ತ ಅಸಹಾಯಕ ಮನದ ದುಗುಡಗಳನ್ನು, ಘೋಷಣೆಗಳ ಮೂಲಕ, ಚರವಾಣಿ ಸಂದೇಶಗಳ ಮೂಲಕ, “ಫೇಸ್ ಬುಕ್, ಟ್ವಿಟ್ಟರ್ಗಳಂತಹ” ಮಾಧ್ಯಮಗಳ ಮೂಲಕ ಹೊರಹಾಕಲು ಧೈರ್ಯತಾಳುತ್ತೇವೆ. ನಮಗೆ ಆ ವ್ಯಕ್ತಿ ಅಷ್ಟೊಂದು ಮುಖ್ಯವಾಗುವುದಿಲ್ಲ. ಆತನ ನಿಸ್ವಾರ್ಥ ಧೋರಣೆ ನಮಗೆ ಮುಖ್ಯವಾಗುತ್ತದೆ ಮತ್ತು ಆಪ್ತವಾಗುತ್ತದೆ. ಈ ದೇಶದ ಜನತೆಯಲ್ಲಿ ದೈರ್ಯ ತುಂಬಿ, ಜನತೆಯನ್ನು ಮನ್ನಡೆಸಿಕೊಂಡು ಹೋಗಬಲ್ಲ ನಿಸ್ವಾರ್ಥಿ ನಾಯಕನೊಬ್ಬನ ಕೊರತೆಯನ್ನು ನೀಗಿಸಬಲ್ಲ ವ್ಯಕ್ತಿ ಅದು ಯಾರೇ ಆದರೂ ಅವರು ಸ್ವಾಗತಾರ್ಹರೇ. ಈಗ ಅಣ್ಣಾ ಹಜಾರೆ ಆ ಕೊರತೆಯನ್ನು ನೀಗಿದ್ದಾರೆ. ಹಾಗಾಗಿ ಅವರು ಸ್ವಾಗತಾರ್ಹರು. ನಮ್ಮ ಸಂಪೂರ್ಣ ಬೆಂಬಲಕ್ಕೆ ಅರ್ಹರು, ಭಾಜನರು.
ಬಹುಷಃ ಮಹಾತ್ಮಾ ಗಾಂಧಿಯವರ ನಂತರ ಈ ದೇಶ ಕಂಡ ಪ್ರಥಮ ರಾಷ್ಟ್ರೀಯ ನಾಯಕ ಅಣ್ಣಾ ಹಜಾರೆ ಎಂದರೆ ಅತಿಶಯೋಕ್ತಿಯೆನಿಸದು. ೧೯೭೦ರ ದಶಕದ ಉತ್ತರಾರ್ಧದಲ್ಲಿ, ಆಗಿನ ಪ್ರದಾನಿ ದಿ. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಸರ್ವಾಧಿಕಾರ ನಡೆಸಿದ್ದರು. ಆಗ ಆಕೆಯ ವಿರುದ್ದ ಸಮರ ಸಾರಿದ್ದ ಜಯಪ್ರಕಾಶ್ ನಾರಾಯಣ್ ಕೂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟೊಂದು ಸಫಲರಾಗಿರಲಿಲ್ಲ. ಅವರ ನಾಯಕತ್ವ ಉತ್ತರ ಭಾರತದ ರಾಜ್ಯಗಳಿಗಷ್ಟೇ ಸೀಮಿತವಾಗಿ ಬಿಟ್ಟಿತ್ತು. ಮಾರ್ಚ್ ೧೯೭೭ರಲ್ಲಿ ನಡೆದ ಮಹಾಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಿಂದ ಕಾಂಗ್ರೇಸ್ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಗಳಿಸಿದ್ದರು.
ಆದರೆ, ಈಗ ಪ್ರಕಟವಾಗಿರುವ ರಾಷ್ಟ್ರವ್ಯಾಪಿ ಬೆಂಬಲದಿಂದಾಗಿ ಇಂದು ಅಣ್ಣಾ ಹಜಾರೆಯವರಲ್ಲಿ ನಾವು ಓರ್ವ ರಾಷ್ಟನಾಯಕನನ್ನು ಕಾಣಲು ಸಾಧ್ಯವಾಗಿದೆ ಎಂದು ಅನಿಸುತ್ತಿದೆಯಾದರೆ ಅದರಲ್ಲಿ ತಪ್ಪೇನಿಲ್ಲ. ಇದುವರೆಗೆ ಇದ್ದ ರಾಷ್ಟ್ರೀಯ ನಾಯಕತ್ವದ ಕೊರತೆ ನೀಗಿದೆ ಎಂದು ನಮಗೀಗ ಅನಿಸುತ್ತಿದೆ. ಅಣ್ಣಾ ಹಜಾರೆಯವರು ಯಾವುದೇ ರಾಜಕೀಯ ಪಕ್ಷದತ್ತ ವಾಲದೇ, ಯಾವುದೇ ಪಟ್ಟ ಭದ್ರ ಹಿತಾಸಕ್ತಿಗಳ ಕೈವಶವಾಗದೇ, ತನ್ನ ಇಂದಿನ ಧೋರಣೆಗಳನ್ನೇ ಉಳಿಸಿಕೊಂಡು ಇದ್ದಷ್ಟು ದಿನ ನಾವು ಅವರನ್ನು ಕಣ್ಣು ಮುಚ್ಚಿಕೊಂಡು, ತುಂಬು ಮನದಿಂದ ಹಿಂಬಾಲಿಸಬಹುದು.
ಇನ್ನೇನು ಬೇಕು ನಮಗೆ? ಇನ್ನು ಕಾಯುವುದೇಕೆ? ಈ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಲ್ಲರೂ ಒಂದಾಗಿ ಮುನ್ನಡೆಯೋಣ. ಮನೆ ಮನೆಯಲ್ಲೂ, ಮನ ಮನದಲ್ಲೂ, ಭ್ರಷ್ಟಾಚಾರ ವಿರೋಧೀ ಬೀಜವನ್ನು ಬಿತ್ತೋಣ ಮತ್ತು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ, ನೈತಿಕತೆಯ ನೀರು ಮತ್ತು ಧಾರ್ಮಿಕತೆಯ ಗೊಬ್ಬರ ನೀಡುತ್ತಾ ಪೋಷಿಸೋಣ. ನಮ್ಮ ಮುಂದಿನ ಪೀಳಿಗೆಗೆ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣಗೊಳಿಸೋಣ. ಬದಲಾವಣೆ ಕಾಣಬೇಕಾಗಿರುವ ಹತ್ತು ಹಲವು ಕ್ಷೇತ್ರಗಳಲ್ಲಿ, ನಿಧಾನವಾಗಿ ಬದಲಾವಣೆಗಳನ್ನು ತರೋಣ. ನಮ್ಮ ನಿಮ್ಮೆಲ್ಲರ ಬೆಂಬಲ ಇಲ್ಲದೇ ಅಣ್ಣಾ ಹಜಾರೆಯಂಥ ನಾಯಕರದೂ ಒಂಟಿ ದನಿಯಾದೀತು. ಅರಣ್ಯ ರೋದನವಾದೀತು. ಹಾಗಾಗಿ ನಾವೆಲ್ಲರೂ ಮನದೊಳಗಿನ ಸುಪ್ತ ಇಚ್ಛಾಶಕ್ತಿಯನ್ನು ಜಾಗೃತಗೊಳಿಸೋಣ.
ಬರಿಯ ಜನ ಲೋಕಪಾಲ ಮಸೊದೆಯೊಂದೇ ಸಾಧಿಸದು ಏನನ್ನೂ, ಪ್ರತಿ ಭಾರತೀಯನೂ ಮೆರೆಯದೇ ಇದ್ದರೆ ತನ್ನ ಇಚ್ಛಾಶಕ್ತಿಯನ್ನು.
*****
- ಆಸು ಹೆಗ್ಡೆ
ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಶನಿವಾರ (೧೬ ಎಪ್ರಿಲ್ ೨೦೧೧) ದಂದು ಪ್ರಕಟವಾಗಿರುವ ಲೇಖನ!
ಇದೇ ಲೇಖನ ಈ ವಾರದ "ನಿರಂತರ ಕರ್ನಾಟಕ" ವಾರಪತ್ರಿಕೆಯಲ್ಲಿ ಹಾಗೂ ಉದಯವಾಣಿಯ ಬೆಂಗಳೂರು ಮತ್ತು ಹುಬ್ಬಳ್ಳಿ ಆವೃತ್ತಿಗಳಲ್ಲಿ ಬುಧವಾರ, ೨೦ ಎಪ್ರಿಲ್ ೨೦೧೧ರಂದು ಪ್ರಕಟವಾಗಿದೆ.
Comments
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
In reply to ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ! by partha1059
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
In reply to ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ! by kavinagaraj
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!
ಉ: ನಿಸ್ವಾರ್ಥ ರಾಷ್ಟೀಯ ನಾಯಕತ್ವದ ಕೊರತೆ ಇಂದು ನೀಗಿದೆ!