ಪುಣ್ಯಕೋಟಿ ಎಂಬ ಹುಲಿಯು.....

ಪುಣ್ಯಕೋಟಿ ಎಂಬ ಹುಲಿಯು.....

   ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.

ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು. ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.


ಪುಣ್ಯಕೋಟಿ ಕತೆಯನ್ನು ನಾನು ನನ್ನ ಮಗಳಿಗೆ ನೂರಾರು ಬಾರಿ ಹೇಳಿರಬಹುದು.ಪ್ರತೀ ಬಾರಿಯೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದಳು.ಪ್ರಥಮ ಬಾರಿಗೆ ಕತೆ ಹೇಳಿದಾಗ ಎಲ್ಲಾ ಹೇಳಿ "ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿತು"ಎಂದು ಹೇಳಿ ಮಲಗಿಸಿದ್ದೆ.


ಆದರೆ ನಂತರದ ದಿನ ಅವಳಿಗೆ ಸಮಾಧಾನವಿರಲಿಲ್ಲ."ಯಾಕೆ ಹುಲಿ ಬೆಟ್ಟದಿಂದ ಹಾರಿತು? ಪುಣ್ಯಕೋಟಿ ಆಗ ಏನು ಮಾಡಿತು?.."ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಳು. ಅವಳಿಗೆ ಪುಣ್ಯಕೋಟಿ,ಕರುವಿನ ಮೇಲೆ ಇದ್ದಷ್ಟೇ ಪ್ರೀತಿ'ಹುಲಿ' ಮೇಲೂ ಬರಲು ಶುರುವಾಯಿತು.ಆದ್ದರಿಂದ ಅದು ಸಾಯುವುದು ಅವಳಿಗೆ ಬೇಕಿರಲಿಲ್ಲ. ಮಗಳಿಗೆ ಬೇಕಾಗಿ ಕತೆಯ ಮುಕ್ತಾಯವನ್ನು ಬದಲಾಯಿಸಿದೆ- 'ಪುಣ್ಯಕೋಟಿಯ ಸತ್ಯವನ್ನು ಮೆಚ್ಚಿ ಹುಲಿ-"ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು" ಎಂದು ಹೇಳಿ...ಬೆಟ್ಟದಿಂದ ಇಳಿದು ದೂರ ಹೋಯಿತು'  ಎಂದೆ...ಉಹೂಂ..ಮಗಳಿಗೆ ಸಮಾಧಾನವಾಗಲಿಲ್ಲ.ಇನ್ನಷ್ಟು ಪ್ರಶ್ನೆಗಳು..


ಮಾರನೆಯ ದಿನ ಪುನಃ ಕತೆಯ ಮುಕ್ತಾಯ ಬದಲಾಯಿಸಿದೆ- 'ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ..."ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ.ನಾನು ನೀನು ಗೆಳೆಯರಾಗಿರುವ ಎಂದಿತು.ಪುಣ್ಯಕೋಟಿ,ಕರು ಹುಲಿ ದಿನವೂ ಸಂಜೆ ಆಟವಾಡುತ್ತಿದ್ದವು'ಎಂದೆ. ಮಗಳಿಗಾದ ಖುಶಿ ಈಗಲೂ ನಾನು ಮರೆಯಲಾರೆ.


ದೇವೇಗೌಡರೂ ಸಹ ತನ್ನ ಮಕ್ಕಳಿಗಾಗಿ ಪುಣ್ಯಕೋಟಿ(ಕರ್ನಾಟಕ)ಕತೆಯನ್ನು ಹೇಗೇಗೋ ತೆಗೆದುಕೊಂಡು ಹೋಗುತ್ತಿದ್ದಾರೆ.ಹೇಗೆ ಮುಕ್ತಾಯವಾಗುವುದೋ?


(ಕತೆಗೆ ಒಪ್ಪುವಂತಹ ಪುಣ್ಯಕೋಟಿ ಹುಲಿಯ ಚಿತ್ರ ಕೊಟ್ಟ ಪಾಲಚಂದ್ರರಿಗೆ ನನ್ನಿ) -ಗಣೇಶ.


೨೨-೧೨-೨೦೧೧...ಪಾಲಚಂದ್ರರು ಕೊಟ್ಟ ಹುಲಿ ಯಾಕೋ ತಪ್ಪಿಸಿಕೊಂಡಿದೆ. :)


-ಗಣೇಶ.

Rating
No votes yet

Comments