ಪುಸ್ತಕನಿಧಿ-"ಮೊನ್ನ ವನ್ನ" ಕಿರುನಾಟಕದ ಅನುವಾದ
ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್ ಮ್ಯಾಟರ್ಲಿಂಕ್ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ.
ಇದರ ಮುನ್ನುಡಿ ಮತ್ತು ಮುಖಪುಟದ ಹಿಂದೆ ಹಾಗೂ ಬೆನ್ನು ಪುಟಗಳ ಮೇಲಿನ ಲೇಖನಗಳಲ್ಲಿಯೇ ಬಹಳ ಮಹತ್ವದ ಸಂಗತಿಗಳು ನಮಗೆ ದಕ್ಕುತ್ತವೆ.
ಇದನ್ನು ಬರೆದ ಫ್ರೆಂಚ್ ಕವಿಯ ಕುರಿತಾದ ಮಾಹಿತಿಯನ್ನು ನಾವು ಓದಲೇಬೇಕು.
ಬೆಲ್ಜಿಯಂ ದೇಶದ ರಾಷ್ಟ್ರೀಯ ಸಾಹಿತ್ಯಲೋಕದಲ್ಲಿ ಉತ್ತಮೋತ್ತಮರಾದ ಅತ್ಯುದಾತ್ತ ವ್ಯಕ್ತಿಗಳಲ್ಲಿ ಮ್ಯಾಟರ್ಲಿಂಕ್ ಒಬ್ಬನು. ಪದ್ಯಕಾವ್ಯ, ನಾಟಕಸಾಹಿತ್ಯ, ತತ್ತ್ವಚಿಂತನೆಯ ಪ್ರಬಂಧಗಳು, ಅತ್ಯುಚ್ಚವಾದ ವೈಜ್ಞಾನಿಕ ವಿಚಾರಗಳು ಇವುಗಳನ್ನೊಳಗೊಂಡ ದೊಡ್ಡ ಸಾಹಿತ್ಯದ ಸಮುದಾಯವನ್ನು ತನ್ನ ದೇಶಕ್ಕೆ ಕೊಟ್ಟುಹೋದನು.
ಜೇನು ಹುಳುಗಳ ಜೀವನದಿಂದ ನಾವು ಕಲಿಯಬೇಕಾದ ಸಂಗತಿಗಳ ಕುರಿತೂ ಈತನು ಒಂದು ಪುಸ್ತಕವನ್ನು ಬರೆದಿದ್ದಾನೆ.
ಪೀಸಾ ನಗರಕ್ಕೂ ಫ್ಲಾರೆನ್ಸ್ ನಗರಕ್ಕೂ ನಡೆದ ಯುದ್ಧ ಇದರ ಹಿನ್ನೆಲೆ. ಆ ಸಂದರ್ಭದಲ್ಲಿ ಒದಗಿದ ಒಂದಾನೊಂದು ಧರ್ಮಸಂಕಟ ಇದರ ವಸ್ತು. ಆ ಧರ್ಮ ಸಂಕಟದಲ್ಲಿ ಸಿಕ್ಕಿಕೊಂಡ ಒಂದು ನಾಲ್ಕು ಜೀವಗಳ ಧೈರ್ಯ-ಸ್ಥೈರ್ಯ, ರಾಗ-ವಿರಾಗ, ಸ್ವಾರ್ಥ-ಪರಾರ್ಥ, ದಾಕ್ಷಿಣ್ಯ-ನಿರ್ದಾಕ್ಷಿಣ್ಯ ಇವುಗಳ ಚಿತ್ರಣವೆ ಇಲ್ಲಿನ ಸೊಗಸು. ಈ ಪ್ರಕರಣಗಳಲ್ಲಿ ಹೊಮ್ಮುನ ನ್ಯಾಯ ಅನ್ಯಾಯ, ಧರ್ಮ ಅಧರ್ಮ, ಋಜು - ಕುಟಿಲತೆ, ಸತ್ಯ-ಅಸತ್ಯ ಮೊದಲಾದ ದ್ವಂದ್ವಗಳ ಸಾರಾಸಾರದ ವಿವೇಚನೆಯೇ ಇಲ್ಲಿನ ಪರಿಮಳ.
ಧರ್ಮಸಂಕಟಕ್ಳೆ ಸಿಲುಕಿದವರ ಕಥೆ ನಮಗೇನೂ ಹೊಸದಲ್ಲ. ರಾಮನು ಸೀತೆಯನ್ನು ಪರಿತ್ಯಾಗ ಮಾಡಿದ ಪ್ರಕರಣ, ಹರಿಶ್ಚಂದ್ರನು ಪತ್ನೀಪುತ್ರರನ್ನು ವಿಕ್ರಯ ಮಾಡಿ ತಾನು ಅನಾಮಿಕನಿಗೆ ಆಳಾದದ್ದು, ಕರ್ಣನ ಜೀವನದಲ್ಲಿ ಕೃಷ್ಣ ಕುಂತಿಯರು ತಂದಿಟ್ಟ ಇಕ್ಕಟ್ಟು, ಅಲ್ಲಾವುದೀನನು ಚಿತ್ತೋರನ್ನು ಮುತ್ತಿದಾಗ ಪದ್ಮಿನಿಗೆ ಒದಗಬಹುದಾಗಿದ್ದ ಪಾಡು- ಇಂಥವು ಇನ್ನೂ ಎಷ್ಟೋ.
ಶ್ರೀ ರಾಮನು ಲೋಕಾತವಾದ ಭೀತಿಯಿಂದ ಸೀತೆಯನ್ನು ಪರಿತ್ಯಾಗ ಮಾಡಿದ ಕತೆಯನ್ನು "ಉತ್ತರ ರಾಮಚರಿತ'ನಾಗಿ ನಾಟಕಮಾಡಿದ ಭವಭೂತಿ ತನ್ನ ರಾಮನ ಮುಖದಿಂದ ಈ ಮಾತು ಹೇಳಿಸುತ್ತಾನೆ: “ಸತಾಂ ಕೇನಾನಿ ಕಾರ್ಯೇಣ ಲೋಕಸ್ಯಾರಾಧನಂ ವ್ರತಮ್.” ಎಂಥದೇ ಆದರೂ ಕಾರ್ಯಮಾಡಿ ಲೋಕಕ್ಕೆ ಪ್ರಸನ್ನತೆಯನ್ನು ಉಂಟುಮಾಡುವುದೇ ಸತ್ಪುರುಷರ ವ್ರತ. ಅಂಥ ವ್ರತಿಯಾದ ರಾಮನು ಒಮ್ಮೆ ಹೀಗೆ ಹೇಳುತ್ತಾನೆ :
ಸ್ನೇಹಂ ದಯಾಂ ಚ ಸೌಖ್ಯಂ ಚ ಯದಿ ವಾ ಜಾನಕೀಮಪಿ
ಆರಾಧನಾಯ ಲೋಕಾನಾಂ ಮುಂಚತೋ ನಾಸ್ತಿ ಮೇ ವ್ಯಥಾ
ಲೋಕದ ಆರಾಧನೆಗಾಗಿ ಸ್ನೇಹ, ದಯೆ, ಸೌಖ್ಯ, ಅಗತ್ಯ ಬಿದ್ದರೆ ಜಾನಕಿಯನ್ನೂ ಸಹ, ರಾಮನು ಬಿಟ್ಟು ತೊರೆಯುತ್ತಾನಂತೆ, ವ್ಯಥೆ ಪಡುವುದಿಲ್ಲವಂತೆ. ಹಾಗೆಯೇ ನಡೆಯಬೇಕಾದ ಹೊತ್ತು ಬಂದಾಗ ಬಿಟ್ಟು ತೊರೆಯುತ್ತಾನಾದರೂ ವ್ಯಥೆಪಡದೆ ಇರುವುದಿಲ್ಲ. ಈ ನಾಟಕದ ಮಾರ್ಕೊ ಮನೋಧರ್ಮದಲ್ಲಿ ಈ ರಾಮನಿಗೆ ಹೋಲಿಕೆಯಾಗುವನನು. ಇಲ್ಲಿಯ ಮೊನ್ನ ವನ್ನ ಕೂಡ, ಮಾವನಂತೆ ಅಷ್ಟು ಮಾತು ಆಡದಿದ್ದ ರೂ ತನ್ನ ನಡತೆಯಿಂದ ಅದೇ ಆರ್ಯಗಣಕ್ಕೆ ಸೇರಿದ ಜಾತಿಮುತ್ತು.
ಮಹಾಭಾರತ ಹೇಳಿದ ಮಹಾವಾಕ್ಯ ಜ್ಞಾಪಕವಾಗುತ್ತದೆ :
ತ್ಯಜೇತ್ ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ ಗ್ರಾಮಂ ಜನಸದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್
ಮನೆಯನ್ನು ಉಳಿಸಲು ಮನೆಯ ಒಬ್ಬನನ್ನು ತೊರೆಯತಕ್ಕದ್ದು, ಗ್ರಾಮವನ್ನು ಉಳಿಸಲು ಮನೆಯನ್ನು ತೊರೆಯತಕ್ಕದ್ದು. ದೇಶಕ್ಕಾಗಿ ಗ್ರಾಮವನ್ನೂ ಆತ್ಮಕ್ಕಾಗಿ ದೇಶವನ್ನೂ ತೊರೆಯತಕ್ಕದ್ದು. ಮಹಾಭಾರತದ ಈ ಮಾತಿಗೂ ಮಾರ್ಕೊ ಈ ನಾಟಕದಲ್ಲಿ ಆಡುವ ಮಾತಿಗೂ ಭಾಷೆಯಲ್ಲಿ ಮಾತ್ರ ವ್ಯತ್ಯಾಸ. ಹೆಸಿಯಡ್, ಹೋಮರ್, ಪ್ಲೇಟೊ, ಅರಿಸ್ಟಾಟ್ಲ್ ಇವರ ವಚನಾಮೃತ ಪಾನಮಾಡಿದವನು ವಿದುರನಿಗೆ, ಭೀಷ್ಮನಿಗೆ ಸಮಾನನು.
ಕರ್ಣನಿಗೂ ಹೀಗೇ ಧರ್ಮಸಂಕಟ ಬಂದಾಗ, ಅವನು ಅದನ್ನು ಹೇಗೆ ಸರಿಹೆರಿಸಿಕೊಂಡನೆಂಬುದನ್ನು ಪಂಪನ ಮಾತುಗಳಲ್ಲಿ ಕೇಳಿಕೊಳ್ಳಬಹುದು. ತಾನು ಪಾಂಡವನೆಂಬುದನ್ನು ತಿಳಿದ ಮೇಲೆ ಕೌರವನ ಪಕ್ಷವನ್ನು ಬಿಟ್ಟು ಹೋಗೋಣವೆ? ಕೂಡದು: ಹಾಗಾದರೆ, ಅವನ ಕಡೆಯೆ ಇದ್ದು, ಪಾಂಡವರನ್ನು ಕೊಲ್ಲೋ ಣವೆ? ಅದು ಹೇಗಾದೀತು : "ಹಾಗಾದರೆ, ಮಾಡತಕ್ಕ ಕರ್ತವ್ಯ ಏನು?
ಮಹಾಭಾರತವೂ ಮನುಧರ್ಮಶಾಸ್ತ್ರವೂ ಹೇಳುತ್ತದೆ:
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ ಪ್ರಿಯಂ ಚ ನಾನೃತಂ ಬ್ರೂಯಾತ್ ಏಷ ಧರ್ಮಸ್ಸನಾತನಃ
ಸತ್ಯವನ್ನು ಹೇಳಬೇಕು, ಪ್ರಿಯವನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು, ಪ್ರಿಯವಾದ ಅಸತ್ಯವನ್ನೂ ಹೇಳಬಾರದು, ಇದು ಸನಾತನ ವಾದ ಧರ್ಮ. ಮಾತು ಚೆನ್ನಾಗಿದೆ, ಕಿವಿಗೆ ಇಂಪು, ಮನಸ್ಸಿಗೆ ಮೆಚ್ಚು, ನಡಸುವುದು ಕಠಿನ. ಆದರೂ ನಡೆಸಿದವರು ಉಂಟು.
ಆದರೆ ಈ ನಾಟಕದಲ್ಲಿ? ಸತ್ಯಕ್ಕೆ ಕಟ್ಟು ಬಿದ್ದು ಒಂದು ಜೀವಕ್ಕೆ ನಡೆಸಬೇಕೋ ? ಅಥವಾ ಅಸತ್ಯಕ್ಕೆ ಜಾರಿದರೂ ಸರಿ, ಜೀವಗಳನ್ನು ಉಳಿಸಬೇಕೋ?
ಕರ್ಣ ಪರ್ವದಲ್ಲಿ ಧರ್ಮರಾಜನು ತನ್ನ ಶೌರ್ಯವನ್ನು ಅಲ್ಲಗಳೆದನೆಂದು ಅರ್ಜುನನು, ತಾನು ಹಿಂದೆ ಮಾಡಿದ್ದ ಪ್ರತಿಜ್ಞೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಅಣ್ಣನನ್ನೇ ಸಂಹರಿಸಿಬಿಡುವೆನೆಂದು ಕತ್ತಿಯೆತ್ತಿದಾಗ ಶ್ರೀಕೃಷ್ಣನು ಅವನಿಗೆ ಹೇಳುತ್ತಾನೆ :
"ಪ್ರಾಣಿವಧೆಯಿಂದ ಧರ್ಮ ವ್ಯರ್ಥವಾಗುವುದೆಂದು ನನ್ನ ಮತ. ಆಡಿದ್ದು ಸುಳ್ಳಾದರೂ ಆಗಬಹುದು, ಹಿಂಸೆ ಮಾತ್ರ ಎಂದಿಗೂ ಆಗಬಾರದು. " ಎಂದು ಹೇಳುತ್ತಾನೆ. ಇಲ್ಲಿ ಬಳಾಕ ಎಂಬ ವನಚರನ ಸಂಗತಿಯನ್ನು ಹೇಳುತ್ತಾನೆ. ( ಈ ಬಳಾಕನ ಸಂಗತಿ ನನಗೆ ಗೊತ್ತಿಲ್ಲ, ನಾನು ತಿಳಿಯಬೇಕು)
ಯಾವುದು ನ್ಯಾಯ? ಯಾವುದು ಧರ್ಮ? ಯಾವುದನ್ನು ಜನ ಮೆಚ್ಚಬೇಕು? ಯಾವುದನ್ನು ದೈವ ಒಪ್ಪುತ್ತದೆ? ಇಂತಹ ವಿಷಮವಾದ ಪರಿಸ್ಥಿತಿಯೊಳಗಿನ ಪ್ರಶ್ನೆಯನ್ನು ಕನಿ ಮ್ಯಾಟರ್ಲಿಂಕ್ ತನ್ನ ಮೊನ್ನ-ವನ್ನ ನಾಟಕದಲ್ಲಿ ಎತ್ತಿಕೊಂಡು, ಚೇತೋಹಾರಿಯಾದ ನಾಟಕದ ರಚನೆಯಲ್ಲಿ ಬದುಕಿಗೆ ಬಲಕೊಡುವ ತತ್ತ್ವಗಳನ್ನು ವಿಚಾರಮಾಡುತ್ತಾನೆ. ವನ್ನ ಇಲ್ಲಿ ದುಷ್ಕಾರ್ಯವನ್ನು ಮಾಡಿದವಳಲ್ಲ, ದುಷ್ಕರವಾದದ್ದನ್ನು ಮಾಡಿದವಳು ಎಂದು ಪ್ರತಿಪಾದಿಸುತ್ತಾನೆ.