ಪ್ರಯಾಸ ಕಥನ, 1/4 ಭಾಗ

ಪ್ರಯಾಸ ಕಥನ, 1/4 ಭಾಗ

ಎಲ್ಲರೂ ಪ್ರಯಾಣ ಮಾಡುತ್ತಾರೆ, ಎಲ್ಲರೂ ಪ್ರಯಾಸ ಕಥನ ಬರೆಯುತ್ತಾರೆ, ನಿಮ್ಮ ಬೊಗಳೆಯಲ್ಲೇಕಿಲ್ಲ ಎಂಬ ಅಪವಾದದಿಂದ ಅವಮಾನಿತನಾಗಿ ಉಜ್ಜೈನಿ ಯಾತ್ರೆಗೆ ತೆರಳಿದ ಅಸತ್ಯಾನ್ವೇಷಿಯಿಂದ ಬೊಗಳೆ-ರಗಳೆಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ದಯನೀಯ ಪ್ರಯಾಸ ಕಥನವಿದು. (ಚಿತ್ರ ಸಹಿತ Bogaleragale.blogspot.com)

ಪ್ರಯಾಸ ಕಥನ ಜವಾಬ್ದಾರಿಯನ್ನು ಬೊಗಳೆ-ರಗಳೆಯ ಏಕಸದಸ್ಯ ಬ್ಯುರೋ ನನಗೊಪ್ಪಿಸಿದ ಪರಿಣಾಮ ಬೇತಾಳನನ್ನೇ ಕಾಡಿದ ವಿಕ್ರಮಾದಿತ್ಯ ಆಳಿದ ಮತ್ತು ಕಳ್ಳಭಟ್ಟಿ ನೆನಪಿಸುವ ಭಟ್ಟಿ ಇರುವ ನಾಡಿಗೆ ತೆರಳಲು ನಿರ್ಧರಿಸಿದೆ. ಭಾರತದ ದೇಶದ ನಾಭಿ ಪ್ರದೇಶ ಎಂದೇ ಕರೆಯಲಾಗುವ ಉಜ್ಜಯಿನಿಗೆ ಬಹಳ ದೂರವಿದೆ. ರೈಲು ಏರಿದರೆ ಅದು ತುಂಬಾ ಉದ್ದವಿದೆ, ತಲುಪುವುದು ತಡವಾಗುತ್ತದೆ, ವಿಮಾನ ಏರಿದರೆ ಇಳಿಯುವುದಾದರೂ ಎಲ್ಲಿ? ಆಕಾಶದಲ್ಲೇ ಟ್ರಾಫಿಕ್ ಜಾಮ್ ಆದರೆ ಎಂಬ ಆತಂಕ, ಕಾರಿನಲ್ಲಿ ಹೋದರೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗೆ ಜಾಗ ಸಾಕಾಗದು. (ಎಡಚಿತ್ರ: ಉಜ್ಜಯಿನಿಯಲ್ಲಿ ಆಪ್ತವಾಗಿಬಿಟ್ಟ 'ಮೃಚ್ಛಕಟಿಕ!')

ಈ ರೀತಿ ಯೋಚನೆ ಮಾಡಿಮಾಡಿ ಕೊನೆಗೆ ಧೂಮ್ರಶಕಟವನ್ನೇರಿದಾಗ ಹೊತ್ತು ಮೀರಿತ್ತು. ಇಂದೋರಿನಿಂದ ಹೊರಟ ಈ ಧೂಮ್ರಶಕಟವು ಕಟಕಟ ಎಂದು ಸದ್ದು ಮಾಡುತ್ತಾ, ಅಕಟಕಟಾ, ನಾವೇಕೆ ಈ ಬಸ್ಸೇರಿದೆವು ಎಂದು ಚೆನ್ನಾಗಿ ಯೋಚಿಸುವಂತೆ ಮಾಡಿತು. ಧೂಳು ತುಂಬಿದ, ಹೊಂಡಾ-ಗುಂಡಿ ತುಂಬಿದ ಮಾರ್ಗದಲ್ಲಿ ಹೋಗುವಾಗ ಮನಸ್ಸು ಮಾತ್ರ "ಕಾಶೀಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು, ಜೋಗಾದ ಗುಂಡಿ ಒಡೆಯ ನಾನೆಂದು ತುಂಬಿ ಹಾಡು" ಅನ್ನೋ ರಾಜಕುಮಾರರ ಹಾಡು ಈ ಗುಂಡಿಗಳನ್ನೇ ನೋಡಿ ಮೂಡಿಬಂದಿರಬೇಕು ಅನ್ನೋದನ್ನೇ ಯೋಚಿಸುತ್ತಿತ್ತು. (ಬಲಚಿತ್ರ: ಉಜ್ಜಯಿನಿ ಮಹಾಕಾಲೇಶ್ವರ ಮಂದಿರ)

ಒಬ್ಬನೇ ಉಜ್ಜಯಿನಿಗೆ ತೆರಳುವುದೆಂದು ತೀರ್ಮಾನಿಸಿದರೂ, ನಿಲ್ದಾಣದಲ್ಲಿ ನಿಂತಿದ್ದವರೆಲ್ಲಾ ಅದೇ ಬಸ್ಸನ್ನೇರುವವರೇ! ಕೊನೆಗೆ 62 ಮಂದಿ ನನ್ನ ಜತೆಗೆ, ನಾನೆಲ್ಲಿ ಹೋಗುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಕುತೂಹಲದಿಂದಲೋ ಏನೋ ಬಂದೇ ಬಿಟ್ಟರು.

ಹೆಸರಿಗೆ ಮಾತ್ರ ಎಂಪಿಎಸ್ಆರ್ಟಿಸಿ, ನಿರ್ವಹಣೆಯೆಲ್ಲವೂ ಖಾಸಗಿಯೇ ಆದುದರಿಂದ ಈ ಧೂಮ್ರಶಕಟದೊಳಗೆ ಜನ ಗಿಜಿಗಿಜಿಗುಟ್ಟುತ್ತಿದ್ದರೂ "ಖಾಲೀ ಹೈ, ಖಾಲಿ ಹೈ, ಕೋಯೀ ನಹೀ ಹೈಂ" ಎನ್ನುತ್ತಾ ನಿರ್ವಾಹಕ ಮಹಾಶಯ ಮತ್ತಷ್ಟು ಜನರನ್ನು ಕೂಗಿ ಕೂಗಿ ಕರೆಯುತ್ತಾ ಬಸ್ಸೇರಿಸುವ ಹವಣಿಕೆಯಲ್ಲಿರುವುದು ಆತನ ಆತ್ಮವಿಶ್ವಾಸದ ಬಗ್ಗೆ ಹುಬ್ಬೇರಿಸುವಂತೆ ಮಾಡಿತು. ಎಲ್ಲಿ ತುಂಬಿಸುತ್ತಾನೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಅಂತೂ ಒತ್ತಿ ಒತ್ತಿ ಕುಳಿತಾಗ ಮೊದಲು ನೋವಾದರೂ, ಸ್ವಲ್ಪ ಸಮಯದ ಬಳಿಕ ಒಂಥರಾ ಸಮಾಧಾನಕರ ಮನೋಭಾವನೆ! ಯಾಕೇಂತ ತಪ್ಪು ತಿಳಿದುಕೊಳ್ಳಬಾರದು. ಇಷ್ಟರಲ್ಲೇ ಕಾರಣ ಹೇಳುತ್ತೇನೆ.

ಅಂತೂ ಬಸ್ಸಿನಲ್ಲಿ ಕೂತಾಗ "ಪರ್‌ದೇಸೀ ಪರ್‌ದೇಸೀ ಜಾನಾ ನಹೀಂ" ಎಂಬ ಹಾಡು ಕಿವಿ ತಮಟೆ ಹರಿಯುವಷ್ಟು ಇಂಪಾಗಿ ಮೂಡಿಬರುತ್ತಿತ್ತು. ನಾನು ಪರ-ದೇಸಿಯೇ ಆಗಿದ್ದುದರಿಂದ ನನ್ನನ್ನೇ ಉಲ್ಲೇಖಿಸಿ ಹೇಳುತ್ತಿದ್ದಾರೆ ಎಂದುಕೊಂಡು ಸಮಾಧಾನಗೊಂಡೆ.

ದಾರಿಯುದ್ದಕ್ಕೂ ಬಯಲು ಪ್ರದೇಶ. ದಖ್ಖಣದ ಪ್ರಸ್ಥಭೂಮಿ ಎಂದು ನಮಗೆ ಭೂಗೋಳ ಮೇಷ್ಟ್ರು ಹೇಳಿದ್ದು ನೆನಪಾಯಿತು. ಕಪ್ಪು ಮಣ್ಣು ಅಂತಲೂ ಹೇಳಿದ್ದರು. ಪೂರ್ತಿ ಕರ್ರಗೆ ಕಪ್ಪು ಅಲ್ಲ, ಕಡು ಬಣ್ಣದ ಮಣ್ಣು, ಸಮೃದ್ಧ ಕೃಷಿಯೋಗ್ಯ ಭೂಮಿ. ಕಣ್ಣು ಹಾಯಿಸಿದಾಗ ಯಾವುದೇ ಗಿಡ, ಮರಗಳಿಲ್ಲದಿರುವುದರಿಂದ, ದೂರಕ್ಕೆ ಕಣ್ಣು ಹಾಯಿಸಿದರೆ ಅಮೆರಿಕ, ಕೆನಡಾ, ಫ್ರಾನ್ಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಇರಾನ್, ಫ್ರಾನ್ಸ್ ಮಾತ್ರವಲ್ಲ ಭಾರತದಲ್ಲಿರುವ ಬೊಗಳೆ ರಗಳೆಯ ಓದುಗ ಮಿತ್ರರನ್ನು ನೋಡಬಹುದಾಗಿತ್ತು!

ಅಂತೂ ಸುಮಾರು 60 ಕಿ.ಮೀ. ದೂರಕ್ಕೆ ಒಂದೂ ಮುಕ್ಕಾಲು ಗಂಟೆ ಬೇಕಾಯಿತು. ಧೂಳು ತುಂಬಿದ ಮಾರ್ಗ ಉಜ್ಜಯಿನಿಯಲ್ಲಿ ಇಳಿಯುವಾಗಲೇ ಗೊತ್ತಾದದ್ದು, ನನ್ನ ಅಕ್ಕ ಪಕ್ಕ ಕೂತವರೆಲ್ಲರೂ ಬಣ್ಣ ಬದಲಿಸಿದ್ದರು, ನಾನು ಮಾತ್ರ ಧೂಳಿನ ಕಣವೂ ತಗುಲದೆ ಸ್ವಚ್ಛವಾಗಿದ್ದೆ! ಇದಕ್ಕಾಗಿಯೇ ಒತ್ತಿ ಒತ್ತಿ ಕೂತಾಗ ಮನಸ್ಸು ಸಮಾಧಾನಗೊಂಡದ್ದು! ಬೇರೆ ಯಾವ ಕಾರಣವೂ ಇಲ್ಲ. ಇಷ್ಟು ಮಾತ್ರವಲ್ಲ, ನನ್ನ ಎಲುಬುಗಳು ಕೂಡ ಸರಿಯಾಗಿದ್ದವು. ಬೇರೆಯವರೆಲ್ಲಾ ತಮ್ಮ ತಮ್ಮ ತಪ್ಪಿದ ಕೀಲುಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು!

ಮೂಲತಃ ಉಜ್ಜಯಿನಿ ಎಂಬ ಊರನ್ನು ನಾಲಿಗೆ ತಿರುಗದ ಹಿಂದಿ ಭಾಷಿಗರು ಉಜೇನ್ ಎಂದೇ ಕರೆಯುತ್ತಾರೆ. ಆವಂತಿಕಾಪುರಿ, ಪದ್ಮಾವತಿ, ಕನಕಶೃಂಗ, ಕುಶಸ್ಥಲೀ, ಕುಮುದಾವತಿ, ಅಮರಾವತಿ, ವಿಶಾಲಾ ಎಂಬ ಹೆಸರುಗಳೂ ಈ ಊರಿಗಿದೆ ಎಂದು ತಿಳಿದು ಇಂಥ ಪುಣ್ಯ ನಗರಿಗೆ ಕಾಲಿಟ್ಟಾಗ ಮನಸ್ಸು ತುಂಬಿ ಬಂತು.

ಪ್ರಯಾಣಕ್ಕಾಗಿ ಮೊದಲೇ ಶೂದ್ರಕನಿಗೆ ಫೋನ್ ಮಾಡಿ ಹೇಳಲಾಗಿತ್ತು. ಅವನು ತನ್ನ "ಮೃಚ್ಛಕಟಿಕ"ವನ್ನು ಸಿದ್ಧಪಡಿಸಿಟ್ಟು ಕಳುಹಿಸಿದ್ದ. ಅದರ ಚಿತ್ರ ಪಕ್ಕದಲ್ಲೇ ಇದೆ. (ಮೃಚ್ಛಕಟಿಕ ಎಂದರೆ ಮಣ್ಣಿನ ಗಾಡಿ ಎಂದರ್ಥವೇ? ಬಲ್ಲವರು ಹೇಳಿ.)

ಗಡಗಡ ಸದ್ದು ಮಾಡುತ್ತಾ, ಪ್ರಿಯಕರನಲ್ಲಿ ಕೋಪಗೊಂಡ ಪ್ರಿಯತಮೆ ಮೂತಿ ಬಾಪಿಸಿಕೊಂಡಂತೆ ಕಂಡುಬಂದ ಮತ್ತು ನನ್ನ ಪ್ರೀತಿಯ ಗಾಡಿಯಾಗಿ ಪರಿವರ್ತನೆಗೊಂಡ ಬಜಾಜ್ ಕಂಪನಿಯ ಈ ಮೃಚ್ಛಕಟಿಕವು 2 ರೂಪಾಯಿಯಲ್ಲಿ ನನ್ನನ್ನು ಮಹಾಕಾಲೇಶ್ವರನ ಮಂದಿರಕ್ಕೆ ತಲುಪಿಸಿತು. ಬಸ್ಸಿನೊಳಗಿದ್ದ 60ಕ್ಕೂ ಹೆಚ್ಚು ಮಂದಿ ಎಲ್ಲಿ ಹೋದರೆಂಬುದೇ ತಿಳಿಯಲಿಲ್ಲ. ಯಾಕೆಂದರೆ ಈ ಮೃಚ್ಛಕಟಿಕದಲ್ಲಿ ಅವಕಾಶವಿದ್ದದ್ದು 10-12 ಮಂದಿಗೆ ಮಾತ್ರ.

(ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಲಾಗುತ್ತಿದೆ.)

Rating
No votes yet