'ಬೆಂಳೂರಿನ ಸೆಂಟ್ರಲ್ ಕಾಲೇಜ್ ನಲ್ಲಿ ಓದುತ್ತಿದ್ದ ಸಮಯದ ವಿದ್ಯಾರ್ಥಿ ಜೀವನ' !



ಅಂಬಿಗ ! ದಡ ಹಾಯಿಸು ...
(ಭೌತವಿಜ್ಞಾನದ ಪ್ರಾಧ್ಯಾಪಕ, ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕತೆ)
ನಿರೂಪಣೆ : ಕಲ್ಗುಂಡಿ ನವೀನ್
ಸಂಪಾದಕರು : ಡಾ. ವೈ. ಸಿ. ಕಮಲ, ಸುಮಂಗಲಾ ಎಸ್. ಮುಮ್ಮಿಗಟ್ಟಿ
ಉದಯಭಾನು ಕಲಾಸಂಘ
ಉದಯಭಾನು ಉನ್ನತ ಅಧ್ಯಯನ ಕೇಂದ್ರ
ವಿಜ್ಞಾನ-ತಂತ್ರಜ್ಞಾನ ಅಧ್ಯಯನಾಂಗ
ಬೆಂಗಳೂರು -೫೬೦ ೦೧೯
ಪ್ರೊ. ಎಚ್. ಆರ್. ರಾಮಕೃಷ್ಣರಾಯರ ಆತ್ಮಕತೆಯಿಂದ ಆಯ್ದ ಕೆಲವು ಭಾಗವನ್ನು, ಓದುಗರ ಮುಂದೆ ಇಡಲು ಇಚ್ಛಿಸುತ್ತೇನೆ.
-ಎಚ್ಚಾರೆಲ್
ಎಚ್. ಆರ್. ರಾಮಕೃಷ್ಣರಾಯರು, ಬೆಂಗಳೂರಿನಲ್ಲಿ ಜನಿಸಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಸತ್ವಪೂರ್ಣ ಬಾಲ್ಯವನ್ನು ಕಳೆದು ಭಾರತದ ಸ್ವಾತಂತ್ರ್ಯೋದಯವನ್ನು ಕಣ್ಣಾರೆ ಕಂಡು ಅದರ ಹಿಂದಿದ್ದ ಹೋರಾಟ, ತ್ಯಾಗಗಳನ್ನು ಅರ್ಥಮಾಡಿಕೊಂಡಿದ್ದರು. ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಸೆಂಟ್ರೆಲ್ ಕಾಲೇಜುಗಳಲ್ಲಿ ಓದಿ ಪದವಿ ಪಡೆದು ಸ್ನಾತಕೋತ್ತರ ಪದವಿಗೆ ಸಜ್ಜಾಗುತ್ತಿದ್ದಾಗ ಕುಟುಂಬದ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ, 'ಭಾರತೀಯ ಪೋಸ್ಟಲ್ ಸರ್ವಿಸ್' ಗೆ ಕೆಲಸಕ್ಕೆ ಸೇರಿದರು. ೯ ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ, ನಂತರ ಎಂ.ಎಸ್.ಸಿ ( ಭೌತ ಶಾಸ್ತ್ರ) ಗೆ ಸೇರಿ ಜಯ ಸಾಧಿಸಿದರು. ಇದೊಂದು ಅಸಾಮಾನ್ಯ ಸಾಧನೆಯೆಂದು ಅವರ ಗೆಳೆಯರು, ಬಂಧುಗಳು ಮತ್ತು ಹಿತೈಷಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಆಚಾರ್ಯ ಪಾಠಶಾಲೆ ಕಾಲೇಜು, ಸೆಂಟ್ ಜಾನ್ ಕಾಲೇಜು, ಕ್ರೈಸ್ಟ್ ಕಾಲೇಜುಗಳಲ್ಲಿ ಭೌತ ಶಾಸ್ತ್ರವನ್ನು ಬೋಧಿಸಿದರು. ಪ್ರೊ. ರಾಜು, ಪ್ರೊ. ಶಾಸ್ತ್ರೀ, ಮೊದಲಾದ ಗೆಳೆಯರ ಜತೆ ಸೇರಿ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡಸಂಘವನ್ನು ಕಟ್ಟಿ, ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸುವಲ್ಲಿ ತಮ್ಮ ಯೋಗದಾನಮಾಡಿದರು. ಪ್ರೊ. ಎಚ್.ಆರ್.ರಾಮಕೃಷ್ಣರಾಯರ ಸ್ಮರಣೀಯ ಕಾರ್ಯಗಳನ್ನು ಹೀಗೆ ಗುರುತಿಸಬಹುದು :
೧. ಆಕಾಶ ವೀಕ್ಷಣೆ,
೨. ವಿದ್ಯಾರ್ಥಿಗಳಿಗೆ ಚಾರಣದಲ್ಲಿ ಆಸಕ್ತಿಮೂಡಿಸುವುದು,
೩. ಡಾ. ರಾಜಾರಾಮಣ್ಣ, ಡಾ. ಸಿ.ಏನ್.ಆರ್.ರಾವ್, ಡಾ.ಯು.ಆರ್.ರಾವ್, ಮುಂತಾದ ಹಿರಿಯ ವಿಜ್ಞಾನಿಗಳ ಜತೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸಂದರ್ಶನ ನಡೆಸಿದ್ದಾರೆ.
೪. ಬೆಂಗಳೂರಿನ ೧೮ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದರು.
೫. ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿಪೂರ್ವ ತರಗತಿಗಳಿಗೆ ಪಠ್ಯ ಪುಸ್ತಕಗಳನ್ನು ವಿನ್ಯಾಸಮಾಡಿ ಸಿದ್ಧಪಡಿಸಿದರು.
೬. 'ಕರ್ಣಾಟಕ ಭಾಗವತ ಉದ್ಗ್ರಂಥ' ದ ತಾಳೆಗರಿ ಪ್ರತಿಗಳನ್ನು ಪ್ರಿಂಟ್ ಮಾಧ್ಯಮಕ್ಕೆ ತರುವಲ್ಲಿ ಭಾರತೀಯ ಅಮೇರಿಕನ್ ವಿಜ್ಞಾನಿ, ಡಾ. ಚಂದ್ರಶೇಖರ್ ರವರಿಗೆ ಸಂಪನ್ಮೂಲ ವ್ಯಕ್ತಿಯಾಗಿ ದುಡಿದರು.
೭. ಬೆಂಗಳೂರಿನ ಗುಟ್ಟಹಳ್ಳಿಯಲ್ಲಿರುವ 'ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ'ರಾಗಿ, ಕಾರ್ಯನಿರ್ವಹಿಸಿದ್ದಾರೆ. ಭೌತ ವಿಜ್ಞಾನ ಮತ್ತು ಸಾಹಿತ್ಯಿಕ ಸಾಂಸ್ಕೃತಿಕ ವಲಯಗಳಲ್ಲಿ ಶ್ರಮಿಸಿದ್ದಾರೆ.
'ಬೆಂಗಳೂರಿನ ಸೆಂಟ್ರಲ್ ಕಾಲೇಜ್ ನಲ್ಲಿ ಓದುತ್ತಿದ್ದ ಸಮಯದ ವಿದ್ಯಾರ್ಥಿ ಜೀವನ' !
ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ನನಗೆ ಮುಂದೆ ಪದವಿ ಗಳಿಸಲು ಸೆಂಟ್ರೆಲ್ ಕಾಲೇಜಿಗೆ ಹೋಗಬೇಕಿತ್ತು. ಆಗ ಆ ತರಗತಿಗಳು ನ್ಯಾಷನಲ್ ಕಾಲೇಜ್ ನಲ್ಲಿ ಇರಲಿಲ್ಲ. ಆ ಕಾಲೇಜಿನ ಕಟ್ಟಡವನ್ನು ನೋಡಿಯೇ ನಮಗೆ ಭಯವಾಗಿತ್ತು. ಅದರ ಮುಂದೆ ನ್ಯಾಷನಲ್ ಕಾಲೇಜ್ ಕಟ್ಟಡ ಒಂದು ಪ್ರೈಮರಿ ಶಾಲೆಯಂತೆ ಕಾಣಿಸುತ್ತಿತ್ತು. ಅಲ್ಲಿನ ಮೇಷ್ಟ್ರುಗಳು ಪ್ರಕಾಂಡ ಪಂಡಿತರು ಹಾಗೂ ಪ್ರಸಿದ್ದರು. ಪ್ರೊ. ಅನಂತ ರಾಮಯ್ಯ, ಪ್ರೊ. ವಿ. ಸೀ, ಪ್ರೊ. ಜಿ. ಪಿ.ರಾಜರತ್ನಂ, ಪ್ರೊ. ಗುರುರಾಜರಾವ್, ಪ್ರೊ. ಎ. ಎನ್. ಮೂರ್ತಿರಾವ್, ಹೀಗೆ.
ಆಗ ಭಾಷೆಗಳಲ್ಲಿ ೧೪ ಪೇಪರ್ ಗಳು. ಅವುಗಳಿಗೆ ಪುಸ್ತಕದ ಹಂಚಿಕೆ, ಒಂದು ವಿದೇಶಿ ಲೇಖಕನದು. ಇನ್ನೊಂದು ಭಾರತೀಯ ಲೇಖಕನದು, ಕಾವ್ಯ,ನಾಟಕ, ಕಾದಂಬರಿ, ಎಲ್ಲವೂ ಹೀಗೆಯೇ. ವಿಸೀ ಯವರು ತರಗತಿಗೆ ಬಂದು ಅವರು ಪಾಠ ಮಾಡಬೇಕಾಗಿದ್ದ 'ಶಿವರಾಮ ಕಾರಂತರ ಕುಡಿಯರ ಕೂಸು', ಪುಸ್ತಕವನ್ನು ಎತ್ತಿ ಹಿಡಿದು, "ನೋಡಿ ಈ ಪುಸ್ತಕವನ್ನು ಇಡೀ ವರ್ಷ ಪಾಠಮಾಡಬೇಕೆಂದು ವಿಶ್ವವಿದ್ಯಾನಿಲಯ ಹೇಳಿದೆ. ಮಾಡ್ತೀನಿ. ಆದರೆ, ನೀವೆಲ್ಲರೂ ಒಮ್ಮತದಿಂದ ಇದನ್ನು ನಾವೇ ಓದಿಕೊಳ್ಳುತ್ತೀವಿ ಎಂದರೆ ನಾನು ಕಾರಂತರ ಎಲ್ಲ ಪುಸ್ತಕಗಳನ್ನೂ ಪಾಠ ಮಾಡುತ್ತೀನಿ. ನಿಮಗೇನು ಬೇಕು ಒಮ್ಮತದಿಂದ ವಿಚಾರಮಾಡಿ ಹೇಳಿ ಎಂದರು. ನಾವು ಸರ್, ಆ ಪುಸ್ತಕವನ್ನು ನಾವೇ ಓದಿಕೊಳ್ಳುತ್ತೀವಿ ನೀವು ಕಾರಂತರ ಎಲ್ಲಾ ಕಾದಂಬರಿಗಳನ್ನು ಪಾಠ ಮಾಡಿರಿ ಎಂದೆವು. ಅವರುಹಾಗೇ ಮಾಡಿದರು. ಕಾರಂತರ ಆವರೆಗಿನ ಎಲ್ಲ ಕಾದಂಬರಿ ಅವರ ಇತರ ಪುಸ್ತಕಗಳನ್ನು ಪಾಠ ಮಾಡಿದರು. ಅವರ ಸಾಹಸಗಳು ಎಲ್ಲವನ್ನೂ ಪರಿಚಯಿಸಿದರು. ಇನ್ನು ನರಸಿಂಹಮೂರ್ತಿ ಎನ್ನುವ ಮತ್ತೊಬ್ಬ ಉಪನ್ಯಾಸಕರು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಕೃಶದೇಹಿ. ಮುಂದೆ ಅವರು ಐ. ಎ. ಎಸ್. ಪಾಸ್ ಮಾಡಿ ಸರ್ಕಾರದಲ್ಲಿ ಅಧಿಕಾರಿಯಾಗಿ ಹೋದರು.
ವಿಸೀ ನಮಗೆ ರನ್ನನ ಗದಾಯುದ್ಧವನ್ನೂ ಪಾಠಮಾಡಿದರು. ಅದೊಂದು ಎಂದೂ ಮರೆಯಲಾಗದ ಅನುಭವ. ದುರ್ಯೋಧನ ವೈಶಂಪಾಯನ ಸರೋವರದಿಂದ ಎದ್ದು ಬಂದು ಅವುಡುಗಚ್ಚಿ, "ಕೃಷ್ಣಮ್ ಗಡ ", "ಭೀಮಂಗಡ" ಎಂದು ಕಿರಿಚುವುದನ್ನು ಅಭಿನಯಪೂರ್ವಕವಾಗಿ ತೋರಿಸುತ್ತಿದ್ದರು. ವಿಸೀ ಮುಖ ಪೂರ್ಣವಾಗಿ ಕೆಂಪಾಗಿದೆ. ಕೈ ಮುಷ್ಠಿಮಾಡಿ "ಕೃಷ್ಣಮ್ ಗಡ", "ಭೀಮಂಗಡ" ಎನ್ನುವಾಗ ಆ ಮುಷ್ಟಿಯನ್ನು ಮೇಜೆನಮೇಲೆ ಗುದ್ದುತ್ತಿದ್ದರೆ, ನಮಗೆ ಅವರ ಕೈಗೇನಾಗುವುದೋ ಎಂದು ಭಯವಾಗುತ್ತಿತ್ತು. ಅವರ ಇಂಗ್ಲಿಷ್ ಬಹಳ ಸೊಗಸಾದದ್ದು. ಆ ಸಂದರ್ಭಕ್ಕೆ ತಕ್ಕಂತಹ ಪದಗಳು ತಂತಾವೇ ಬಂದು ಸರಿಯಾದ ಜಾಗದಲ್ಲಿ ಕೂರುತ್ತಿದ್ದವು. ಆ ಸಂದರ್ಭಕ್ಕೆ ಒಪ್ಪಾದ ಉಚ್ಚಾರ ! ಒಟ್ಟಾರೆ ನಮಗದು ರಸದೌತಣ. ನಮಗೆ ನಾವಿದ್ದ ಸ್ಥಳ, ನಮ್ಮ ಗುರುತು, ಧರಿಸಿದ್ದ ಬಟ್ಟೆ, ಎಲ್ಲವೂ ಮರೆಯಾಗಿ, ಬೇರೊಂದು ಲೋಕದಲ್ಲಿ ವಿಹರಿಸುತ್ತಿದ್ದೆವು.
ಇನ್ನು ರಾಜರತ್ನಂ ಕುರಿತು ಹೇಳಬೇಕಾಗಿಯೇ ಇಲ್ಲ. ಸೆಂಟ್ರೆಲ್ ಕಾಲೇಜಿನಲ್ಲಿನ ಕರ್ನಾಟಕ ಸಂಘದ ಜೀವನಾಡಿ ಅವರು. ಆಗ ಸಂಘಕ್ಕೆ ಇಬ್ಬರು ವಿದ್ಯಾರ್ಥಿ ಕಾರ್ಯದರ್ಶಿಗಳು. ಅಲ್ಲಿ ಚುನಾವಣೆ ಎಂದರೆ ಮಾತು ಮತ್ತು ಬರಹ ಮೂಲಕ ಆಗುತ್ತಿತ್ತು., ಅಂದರೆ ಯಾರು ಚೆನ್ನಾಗಿ ಮಾತಾಡಬಲ್ಲರೋ, ಅವರು ಮತ್ತು ಯಾರ ಬರವಣಿಗೆ ಚೆನ್ನಾಗಿರುತ್ತದೋ, ಅವರು ಮತ್ತೊಬ್ಬ ಕಾರ್ಯದರ್ಶಿಗಳು ಹೀಗೆ. ಅದಕ್ಕೆ ಚುನಾವಣೆ ನೇರವಾಗಿಯೇ ನಡೆಯುತ್ತಿತ್ತು. ಯಾರು ಬೇಕಾದರೂ ತಮ್ಮ ಬರವಣಿಗೆಯನ್ನು ಸಲ್ಲಿಸಬಹುದಿತ್ತು. ಹಾಗೆಯೇ ಯಾರು ಬೇಕಾದರೂ ಚರ್ಚೆಗೆ ಹೆಸರು ಕೊಡಬಹುದಿತ್ತು. ಮಾತಿನ ಮೂಲಕ ಕಾರ್ಯದರ್ಶಿಯಾಗಿ ನಾನು ಆಯ್ಕೆಯಾಗಿದ್ದೆ. ಕರ್ನಾಟಕ ಸಂಘ, ಅಂದು ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿತ್ತು.
ಒಮ್ಮೆ ಅಂತಾರಾಷ್ಟ್ರೀಯ ಖ್ಯಾತಿಯ ಕವಿ 'ಸ್ಟಿಫನ್ ಸ್ಪೆನ್ಡರ್' ಬೆಂಗಳೂರಿಗೆ ಬಂದಿದ್ದರು. ಅವರನ್ನು ಭಾಷಣ ಮಾಡಲು ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಗೆ ಕರೆಸಿದ್ದರು. ಆದರೇ ಆ ಸಭೆಗೆ ಸ್ಪೀಕರ್ ಆಗಿ ಒಬ್ಬರು ಬೇಕಾಗಿತ್ತು. ಯಾರನ್ನು ಕರೆಯುವುದು ? ಇನ್ಸ್ಟಿ ಟ್ಯೂಟ್ ನ ಕೋದಂಡ ರಾಮಯ್ಯನವರು ಸೆಂಟ್ರೆಲ್. ಕಾಲೇಜಿಗೆ ಒಬ್ಬರನ್ನು ಕಳಿಸಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಅನಂತರಾಮಯ್ಯನವರನ್ನು ಕೇಳಲು ಹೇಳಿದ್ದರು. ಅವರು "ಹೌದೋ ಈ ಕಾರ್ಯಕ್ರಮಕ್ಕೆ ನಾನು ಬರುವುದಾಗುವುದಿಲ್ಲ. ನಮ್ಮ ಇಲಾಖೆಯ ಯಾರೂ ಆಗುವುದಿಲ್ಲ"ಎಂದರು. ಅದಕ್ಕೆ ಅವರು "ಅಯ್ಯೋ ನೀವು ಹೀಗೆ ಹೇಳಿದರೆ, ನಾನೆಲ್ಲಿ ಹುಡುಕಿಕೊಂಡು ಹೋಗಲಿ ? ಆನರ್ಸ್ ಕಾಲೇಜು ಇದೊಂದೇ ಇರುವುದು ಎಂದರು.
ಅದಕ್ಕೆ ಅನಂತರಾಮಯ್ಯ ಸ್ವಲ್ಪ ಇರ್ರಿ. " ನೋಡಿ. ನಾನು ಹೇಳಿದ ಹಾಗೆ ಮಾಡಿ, ಇಲ್ಲಿ ಕರ್ನಾಟಕ ಸಂಘದಲ್ಲಿ ವಿಸೀ ಇದ್ದಾರೆ. ಅವರನ್ನು ಕೇಳಿ. ಅವರು ಒಪ್ಪಿಕೊಂಡರೆ ನೀವು ಪುಣ್ಯ ಮಾಡಿದ್ದೀರಿ. ಆದರೆ, ನಾನು ಹೇಳಿದೆ, ಎಂದು ಹೇಳಬೇಡಿ " ಎಂದುಬಿಟ್ಟರು. ಕೋದಂಡರಾಮಯ್ಯನವರು ಬಂದು ವಿಸೀ ಯವರನ್ನು ಕೇಳಿದರು. ಅದಕ್ಕೆ ವಿಸೀ, "ಆಗಲಿ ಬರುತ್ತೇನೆ ಒಪ್ಪಿಕೊಂಡಿದ್ದೇನೆ. ಅದಿರಲಿ ಈಗ ಹೇಳಿ ನನ್ನನ್ನು ಕರೆಯಲು ನಿಮಗೆ ಯಾರು ಹೇಳಿದ್ದು ಎಂದು. ಕೋದಂಡರಾಮಯ್ಯನವರಿಗೆ ನಾನು ಗೊತ್ತಿಲ್ಲ" ಎಂದು ಬಿಟ್ಟರು. "ಪರವಾಗಿಲ್ಲ ಹೇಳಿ" ಎಂದಮೇಲೆ, ಮೆಲ್ಲನೆ ಅವರು ಅನಂತರಾಮಯ್ಯ ಎಂದು ಗುಟ್ಟು ಬಿಟ್ಟುಕೊಟ್ಟರು. ವಿಸೀ "ಅಂದುಕೊಂಡೆ, ಅವರದ್ದೇ ಈ ಕಿತಾಪತಿಯೆಲ್ಲ " ಎಂದು ಹೇಳಿದರು.
ಮುಂದೆ ಬಿ. ಸಿ. ರಾಮಚಂದ್ರ ಶರ್ಮರವರ ಒಂದು ಪುಸ್ತಕ ಬಿಡುಗಡೆಯಾಗುವಾಗ ನಾನು ವಂದನಾರ್ಪಣೆ ಮಾಡಬೇಕಾಗಿತ್ತು. ರಾಜರತ್ನಂ "ನೋಡು, ಹೇಳುವಾಗ ಕಾವ್ಯದಲ್ಲಿ ಅರ್ಥಕ್ಕಿಂತ ಭಾವವೇ ಮುಖ್ಯ ಎಂದು ಒತ್ತಿ ಹೇಳಿಬಿಡು. ಅಧ್ಯಕ್ಷರು ( ಅಂದರೆ ವಿಸೀ) ಕೆನ್ನೆಗೆ ಹೊಡೆದರೂ ಪರವಾಗಿಲ್ಲ; ಹೊಡೆಸಿಕೊ". ಎಂದರು. ನಾನು ಹಾಗೇ ಭಾಷಣದಲ್ಲಿ "ಕಾವ್ಯಕ್ಕೆ ಅರ್ಥವಲ್ಲ ಭಾವ ಮುಖ್ಯ" ಎಂದು ಒತ್ತಿ ಒತ್ತಿ ಹೇಳಿಬಿಟ್ಟೆ. ಕಾರ್ಯಕ್ರಮ ಮುಗಿದಮೇಲೆ ವಿಸೀ 'ಎಲ್ಲಾದರೂ ಹೋಗುವ ಕಾರ್ಯಕ್ರಮವಿದೆಯೋ' ಎಂದು ಕೇಳಿದರು. 'ಬಿಡುವಿದೆ ಸರ್' ಎಂದೆ ; 'ಸರಿ ನಡೆಯಿರಿ ಮುಂದೆ. ಅಲ್ಲಿ ಹುಲ್ಲಿನ ಆಮೇಲೆ ಕುಳಿತು ಸ್ವಲ್ಪ ಮಾತಾಡಿ ಆಮೇಲೆ ಹೋಗೋಣ' ಎಂದರು. ಸರಿ ಅಲ್ಲಿ ಹುಲ್ಲಿನ ಮೇಲೆ ಕುಳಿತಾಗ, ನನ್ನ ಕಡೆ ಕೈತೋರಿಸಿ, "ಈ ನಮ್ಮ ಮಿತ್ರ ಕಾವ್ಯದಲ್ಲಿ ಅರ್ಥವಲ್ಲ ಭಾವ ಮುಖ್ಯ ವೆನ್ನುತ್ತಾರೆ" ಎಂದು ಇಂಗ್ಲಿಷ್ ಗೀತಗಳಲ್ಲಿನ ಎರಡು ಮೂರೂ ಕವನಗಳನ್ನು ಅಧ್ಭುತವಾಗಿ ಹಾಡಿದರು. ಅದನ್ನು ರೆಕಾರ್ಡ್ ಮಾಡಿಕೊಳ್ಳಲು ಸೌಲಭ್ಯಗಳಿರಲಿಲ್ಲವಲ್ಲ ಎಂದು ಪರಿತಪಿಸಿದೆವು. ಅವರು ಹಾಡಿ, "ಏನರ್ಥವಾಯಿತು" ? ಎಂದು ಕೇಳಿದರು.ನಾನು 'ಏನೂ ಇಲ್ಲ' ಅಂದೆ. 'ಮತ್ತೆ ಯಾತಕ್ಕೆ ದೆವ್ವ ಬಡಿದವನಂತೆ ಕೂತು ಕೇಳಿದೆ' ಎಂದರು. 'ಅದು ಹಾಗಿತ್ತು' ಎಂದು ಹೇಳಿದೆ. 'ಈಗ ಹೇಳು ಅರ್ಥ ಮುಖ್ಯವೋ ಭಾವವೋ'. ಆಗ ಈ ಎಲ್ಲವೂ ರಾಜರತ್ನಂರವರ. ಕಿತಾಪತಿ, ಎಂದು ಗೊತ್ತಾಯಿತು. ಅವರೂ ನಕ್ಕು 'ಅಲ್ಲಪ್ಪ ನನಗೇ ಕೇಳಿದ್ದಾರೆ ಹೇಳುತ್ತಿರಲಿಲ್ಲವೇ' ? ಎಂದರು. ಅದಕ್ಕೆ ರಾಜರತ್ನಂ, 'ನಾನು ಆಗಲೇ ಹೇಳಿಬಿಟ್ಟಿದ್ದರೆ ಇದನ್ನು ಕೇಳುವ ಭಾಗ್ಯ ಸಿಗುತ್ತಿತ್ತೇ' ಎಂದರು.
ಮತ್ತೊಮ್ಮೆ ಯಾವುದೊ. ಕೆಲಸಮಾಡುತ್ತಿದ್ದ ನನಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಸಂಜೆ ಐದೂ ಮುಕ್ಕಾಲು ಆಗಿಹೋಗಿತ್ತು. ನಾನು ಏನೂ ತಿಂದಿರಲಿಲ್ಲ. ವಿಸೀ ನಡಿ ಇಲ್ಲೊಬ್ಬರನ್ನು ಭೇಟಿಮಾಡಬೇಕು ಎಂದು ಹೇಳಿ ಕರೆದುಕೊಂಡು ಬಂದರು. ದಾರಿಯಲ್ಲಿ ಭೇಟಿಮಾಡಲು ಹೋಗುತ್ತಿರುವವರ ಬಗ್ಗೆ ಹೇಳಿದರು ಅವರು ಶಿವರಾಂ ಅಂತ. ಡಾಕ್ಟರು. ಮಲೆಯಾಳಿ, ಆದರೆ ಎಂಥ ಕನ್ನಡ ಮಾತಾಡುತ್ತಾನೆ ಗೊತ್ತಾ ? ಎಂದು. ಅಲ್ಲಿಗೆ ಹೋದಮೇಲೆ ನನ್ನನ್ನು ತೋರಿಸಿ, 'ಇವರು ನನ್ನ ಶಿಷ್ಯ. ತಲೆನೋವಂತೆ ನೋಡಿ' ಎಂದು ಬಿಟ್ಟರು ಶಿವರಾಂ ಆಗ, 'ಹೌದೋ ತಲೆನೋವುತ್ತೋ ಎಂದು ಹೇಳಿ ಬೆಳಿಗ್ಯೆ ಏನು ತಿಂದೆ' ? ಎಂದು ಕೇಳಿದರು 'ನಾನು ಏನಿಲ್ಲ' ಅಂದೆ. ಅವರು ಜೇಬಿನಿಂದ ಐದು ರೂಪಾಯಿ ತೆಗೆದುಕೊಟ್ಟು 'ಹೀಗೆ ಕೆಳಗೆ ಹೋಗು ಮುಂದೆ ಅಲ್ಲಿ ಉಡುಪಿ ಕೃಷ್ಣ ಭವನ ಅಂತ ಇದೆ. ಅಲ್ಲಿ ದೋಸೆ ಮತ್ತು ಏನೇನು ಬೇಕೋ ಎಲ್ಲ ತಿಂದು ಕಾಫಿ ಕುಡಿದು ಬಾ. ಅಷ್ಟೊತ್ತಿಗೆ ಔಷಧಿ ಮಾಡಿ ಇಟ್ಟುರುತ್ತೀನಿ' ಎಂದರು. ಎಲ್ಲರೂ ನಗುತ್ತಿದ್ದಾರೆ. ಶಿವರಾಂ 'ನೋಡಯ್ಯ, ನನಗೆ ಕೊರವಂಜಿಗೆ ಬರೆಯಲು ವಿಷಯ ಸಿಕ್ಕಿತು. ಎಷ್ಟೋ ತಲೆನೋವುಗಳಿಗೆ ಮಾತ್ರೆ ಬೇಕಾಗಲ್ಲ ಉಡುಪಿ ಕೃಷ್ಣಭವನದ ದೋಸೆಯೇ ಸಾಕಾಗುತ್ತದೆ' ಎಂದರು. ಇಂತಹ ಅನೇಕ ರಸಘಟ್ಟಿಗಳಿಂದ ಕೂಡಿದ ದಿನಗಳಾಗಿದ್ದವು, ನನ್ನ ಪದವಿ ಓದಿನ ದಿನಗಳು.
ಇದೇ ಸಂಧರ್ಭದಲ್ಲಿ ಮೊದಲ ವರ್ಷ ಬಿ. ಎಸ್. ಸಿ. ಓದುತ್ತಿದ್ದಾಗ, ದಾವಣಗೆರೆಯಲ್ಲಿ ಒಂದು ಸ್ಕೌಟ್ ರ್ಯಾಲಿ ನಡೆಯಿತು. ಕೊಂಡಜ್ಜಿ ಬಸಪ್ಪ ಎನ್ನುವರು ಅದನ್ನು ನಡೆಸಿದರು. ನಾನು ಆ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ಅಲ್ಲಿಗೆ ಅಸ್ಸಾಂ ಮತ್ತು ಒರಿಸ್ಸಾದಿಂದ ಬಂದಿದ್ದಂತಹ ಒಬ್ಬರು ಹ್ಯಾಮ್ ರೇಡಿಯೋ ಪ್ರಾತ್ಯಕ್ಷಿಕೆ ಕೊಟ್ಟರು. ಹಾಗೆಯೆ ಮೋರ್ಸ್ ಕೋಡ್ ಬಳಸಿಕೊಂಡು ಸಂದೇಶಗಳನ್ನು ಕಳಿಸುವುದು ಸ್ವೀಕರಿಸುವುದು ಎಲ್ಲವನ್ನೂ ತಿಳಿಸಿ ಸ್ಕೌಟ್ ನಲ್ಲಿರುವವರು ಇದನ್ನೆಲ್ಲಾ ತಿಳಿದಿರಬೇಕು. ಸಂಪರ್ಕ ಮಾಧ್ಯಮಗಳು ಕಡಿದುಹೋದಾಗ ಇವನ್ನು ಬಳಸಿ ಸಂಪರ್ಕ ಸಾಧಿಸಬಹುದು. ಜನಗಳಿಗೆ ಬಹಳ ಸಹಾಯವಾಗುತ್ತದೆ. ಜನಗಳಿಗೆ ಸಹಾಯ ಮಾಡುವುದೇ ಸ್ಕೌಟ್ಸಗಳ ಮುಖ್ಯವಾದ ಕಾರ್ಯ ಎಂದೆಲ್ಲಾ ಹೇಳಿದರು. ಇದು ನನಗೆ ಬಹಳ ಕುತೂಹಲಕಾರಿ ಎನ್ನಿಸಿತು. ಚೆನ್ನಾಗಿ ಕಲಿತುಕೊಂಡೆ. ಬೆಂಗಳೂರಿಗೆ ಬಂದಮೇಲೆ ಸೆಂಟ್ರೆಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ, ಪರಿಚಯಿಸಿಕೊಂಡೆ. ಅಲ್ಲಿ ಹ್ಯಾಮ್ಸ್ ಕಲಿತುಕೊಂಡೆ ಅಲ್ಲಿ ನನ್ನದೇ ಆದ ಹ್ಯಾಮ್ ರೇಡಿಯೋ ಮಾಡಿಕೊಂಡೆ. ಮೊರ್ಸ್ ಕೋಡ್ ಬಳಸಿ ಸಂದೇಶಗಳನ್ನು ಕಲಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡೆ. ಬೇಸಿಗೆ ರಜೆಯಲ್ಲಿ ಮತ್ತೆ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡೆ. ಅವರಿಗೆ ವೃತ್ತಿಪರ ಟೆಲಿಗ್ರಾಫಿಸ್ಟ್ ಗಳ ಅವಶ್ಯಕತೆ ಇತ್ತು. ಅದರಲ್ಲೂ ಬೆಂಗಳೂರು-ಮುಂಬಯಿ ಲೈನ್ ಸದಾ ಬ್ಯುಸಿ ಇರುತ್ತಿತ್ತು. ಅಲ್ಲಿನ ಸಂದೇಶಗಳನ್ನು ಸ್ವೀಕರಿಸುವುದನ್ನು ಕಲಿಸಿದರು. ಒಂದು ಸಂದೇಶವನ್ನು ಸ್ವೀಕರಿಸಿದರೆ ಒಂದು ಕಾಸು ಸಿಗುತ್ತಿತ್ತು. ವಾರಕ್ಕೆ ಹತ್ತು ರೂಪಾಯಿಗಳವರೆಗೂ ಸಂಪಾದಿಸುತ್ತಿದ್ದೆ. ಆ ಹಣ ನನಗೆ ತುಂಬಾ ಸಹಾಯ ಮಾಡಿತು.