ಮಹಾ ಶಿವರಾತ್ರಿ ಮಹತ್ವ !



ಮುಂಬಯಿನ ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಪಾರ್ವತೀಯ ಕೋ-ಆಪರೇಟಿವ್ ಹೌಸಿಂಗ್ ಸೊಸಾಯಿಟಿಯಲ್ಲಿ ನಿರ್ಮಿಸಿರುವ ‘ಹಿಮಾಲಯೇಶ್ವರ ಮಹದೇವ್ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು’ !
ಹೆಸರೇ ಸೂಚಿಸುವಂತೆ ಶಿವನ ಆರಾಧನೆಗೆ ಮೀಸಲಾದ ಸಮಯ ‘ರಾತ್ರಿ’. ಇಡೀ ರಾತ್ರಿ ನಾವು ಜಾಗರಣೆಯಲ್ಲಿದ್ದು ಶಿವನನ್ನು ಪೂಜಿಸಬೇಕು. ರಾತ್ರಿ ಎಂದರೆ ನಿದ್ರೆ; ತಮಸ್ಸು; ಕತ್ತಲು. ಇವೆಲ್ಲವೂ ನಮ್ಮ ಎಚ್ಚರವನ್ನು ತಪ್ಪಿಸುವಂಥವು; ಪ್ರಮಾದಕ್ಕೆ ಕಾರಣವಾಗಬಲ್ಲಂಥವು. ಇಂಥ ಸಮಯ ದಲ್ಲಿ ಬೆಳಕಾಗಿ ಒದಗುವವನು ಶಿವ. ಇದರ ಸಂಕೇತವೇ ರಾತ್ರಿಯಲ್ಲಿ ನಡೆಯುವ ಅವನ ಪೂಜೆ. ಶಿವತತ್ತ್ವದ ಆಯಾಮಗಳು ಇನ್ನೂ ಹತ್ತು ಹಲವು. ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಪರ್ವವೇ ದಿಟವಾದ ‘ಶಿವರಾತ್ರಿ.’ ಶಿವನ ಕಲ್ಪನೆಯ ವ್ಯಾಪ್ತಿ ತುಂಬ ವಿಶಾಲವಾದುದು. ತ್ಯಾಗ–ಭೋಗಗಳ ಸಮನ್ವಯವನ್ನು ಎತ್ತಿಹಿಡಿದಿದ್ದಾನೆ. ತಪಸ್ವಿಗಳಿಗೂ ಅವನೇ ಆದರ್ಶ; ಗೃಹಸ್ಥರಿಗೂ ಅವನೇ ಆದರ್ಶ. ಸ್ಮಶಾನದಲ್ಲಿಯೇ ವಾಸಿಸುವಷ್ಟು ವೈರಾಗ್ಯಸಂಪನ್ನ; ಹೆಂಡತಿಗೆ ಅರ್ಧ ದೇಹವನ್ನೇ ನೀಡುವಷ್ಟು ಪ್ರೇಮಪೂರ್ಣನೂ ಹೌದು. ಅವನು ತಾಂಡವಕ್ಕೂ ಸಿದ್ಧ; ಲಾಸ್ಯಕ್ಕೂ ಬದ್ಧ. ಅನಂತಗುಣಗಳ ಪ್ರತಿನಿಧಿಯಾದ ಶಿವನ ಆರಾಧನೆಯೂ ಸುಲಭ; ಬಿಲ್ವಪತ್ರೆಗೂ ತುಂಬೆಹೂವಿಗೂ ಒಲಿಯುವಷ್ಟು ಉದಾರಿ ಅವನು; ಸುಲಭವಾಗಿ ಸಿದ್ಧಿಸಲು ಸಿಗುವವನು. ರಾವಣನು ಶಿವನನ್ನು ಕುರಿತು ತಪಸ್ಸುಮಾಡಿ ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಕತೆ ನಮಗೆ ತಿಳಿದಿದೆ. ಅದಕ್ಕಾಗಿಯೇ ಮಹಾದೇವನನ್ನು ಭೋಲೆನಾಥ್ ಎಂದು ಸ್ತುತಿಸುತ್ತಾರೆ. ಅವನಿಗೆ ಆಭರಣಗಳ ಹೊಳಪಿನ ಅಲಂಕಾರಕ್ಕಿಂತಲೂ ಜಲಾಭಿಷೇಕದ ಆರ್ದ್ರತೆಯೇ ಪ್ರಿಯ. ಇಂಥ ಸರ್ವಶಕ್ತನೂ ಲೋಕನಾಥನೂ ಸತ್ಯ–ಶಿವ–ಸುಂದರಗಳ ಸಾಕಾರಮೂರ್ತಿಯೂ ಎನಿಸಿರುವ ಶಿವನ ಪೂಜೆಗೆ ಮೀಸಲಾದ ದಿನವೇ ‘ಮಹಾಶಿವರಾತ್ರಿ’. ಶಿವರಾತ್ರಿ ಹಬ್ಬದ ನಂತರ ದಿನದ ಉಷ್ಟತೆಯಲ್ಲಿ ಗಮನಾರ್ಹ ಹೆಚ್ಚುವರಿಯಾಗುತ್ತದೆ.
ಶಿವರಾತ್ರಿಯ ಮಹತ್ವ ಮತ್ತು ವಿವರಣೆ :
ಭಾರತೀಯ ಸಂಪ್ರದಾಯದಲ್ಲಿ ಶಿವನ ಕಲ್ಪನೆ ತುಂಬ ಪ್ರಾಚೀನವಾದುದು; ಸತ್ಯಂ ಶಿವಂ ಸುಂದರಂ ಎಂದುಪರಮೇಶ್ವರನನ್ನು ಭಜಿಸುತ್ತಾ ಕೊಂಡಾಡುತ್ತಾ ಪೂಜಿಸುವುದು ವಾಡಿಕೆ. ಶಿವ, ಶಂಕರ ಎನ್ನುವ ಪದಕ್ಕೆ ಮಂಗಳಕರ – ಒಳಿತನ್ನು ಮಾಡುವವನು – ಎಂದರ್ಥ. ‘ಒಳಿತು ಯಾರಿಗೆ ಬೇಡ’ ? – ಶಿವನ ಪ್ರಸಿದ್ಧ ಹೆಸರುಗಳಲ್ಲಿ ‘ರುದ್ರ’ ಎಂಬುದೂ ಒಂದು. ರುದ್ರ ಎಂದರೆ ರೋದನ-ಅಳುವನ್ನು ಉಂಟುಮಾಡಬಲ್ಲವನಂತೆ. ಯಾರ ಜೀವನದಲ್ಲಿ ತಾನೆ ರೋದನವಿಲ್ಲದಿದ್ದೀತು? ಆದಕಾರಣ, ಅಳುವಿನಿಂದ ಬಿಡುಗಡೆ ಬೇಕು ಎಂದರೆ, ಅದರ ಮೂಲದ ಬಗ್ಗೆ ಅರಿವು ಒದಗಬೇಕು; ಆಗ ರುದ್ರನನ್ನೇ ಆಶ್ರಯಿಸಬೇಕು. ಒಟ್ಟಿನಲ್ಲಿ ಶಿವತತ್ವವೆಂದರೆ, ಶಿವನ ಕಲ್ಪನೆಯಲ್ಲೇ ನಮ್ಮ ಜೀವನದ ಕಲ್ಪನೆಯೂ ಹಾಸು ಹೊಕ್ಕಾಗಿದೆ.
ಶಿವ ತ್ರಿಮೂರ್ತಿಗಳಲ್ಲೊಬ್ಬನು. ಸೃಷ್ಟಿಕರ್ತನು ಬ್ರಹ್ಮ, ಸ್ಥಿತಿಗೆ ವಿಷ್ಣು; ಪ್ರಳಯಕಾರಕನೇ ಶಿವ ಎಂಬುದು ಭಾರತೀಯ ಸಂಸ್ಕೃತಿಯ ಎಣಿಕೆ. ಹುಟ್ಟ ಬೇಕು; ಹುಟ್ಟಿದ್ದು ಬೆಳೆಯಬೇಕು; ಬೆಳೆದದ್ದು ಕಣ್ಮರೆಯಾಗಲೇಬೇಕು. ಇದು ಸೃಷ್ಟಿನಿಯಮ; ಸೃಷ್ಟಿ, ಸ್ಥಿತಿ ಮತ್ತು ಲಯತತ್ತ್ವಗಳ ಸಾರ. ತ್ರಿಮೂರ್ತಿಗಳಲ್ಲಿ ಶಿವನ ಕೆಲಸ ಸಂಹಾರಕನ ಪಾತ್ರ; ಎಲ್ಲವನ್ನೂ ಲಯ ಮಾಡುವವನು, ಮರೆಯಾಗಿಸುವವನು. ಸಂಹಾರ ಎಂಬುದು ಮೇಲ್ನೋಟಕ್ಕೆ ತುಂಬ ಭಯಂಕರವಾಗಿಯೂ ಕ್ರೌರ್ಯ ವಾಗಿಯೂ ಕಾಣಿಸುವುದು ದಿಟವೆನ್ನಿ ! ಆದರೆ ಸಂಹಾರ ನಡೆಯದೆಯೇ ಉಗಮಕ್ಕೆ ತಾಣವೇ ಒದಗದು, ಎಂಬ ತಥ್ಯವನ್ನು ಅದು ಸಂಕೇತಿಸುತ್ತಿದೆ;
‘ತೊಟ್ಟಿಲುಗಳೆಷ್ಟೊ ಮಸಣಗಳಷ್ಟು’ ಎಂಬ ಕವಿವಾಣಿಯನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು. ಹೀಗಾಗಿ ಶಿವನು ನಡೆಸುವ ಸಂಹಾರ ಎಂದರೆ ಸೃಷ್ಟಿಚಕ್ರದ ನಿರಂತರತೆಯನ್ನು ಕಾಪಾಡುವುದು; ಬದುಕಿನಲ್ಲಿ ಎದುರಾಗುವ ರೋದನಕ್ಕೆ ಉಪಶಮನವನ್ನು ಒದಗಿಸುವುದು. ಮಹಾಕವಿ ಕಾಳಿದಾಸ, ಶಿವ ಎಂದರೆ ಇಡಿಯ ಸೃಷ್ಟಿ –ಎಂಬ ಕಲ್ಪನೆಯನ್ನು ಸೊಗಸಾಗಿ ಎತ್ತಿಹಿಡಿದಿದ್ದಾನೆ. ‘ಸೃಷ್ಟಿಕರ್ತನ ಪ್ರಥಮ ಸೃಷ್ಟಿಯಾದ ನೀರು, ಹವಿಸ್ಸನ್ನು ದೇವತೆಗಳಿಗೆ ಮುಟ್ಟಿಸುವ ಅಗ್ನಿ, ಯಜಮಾನ, ಕಾಲ ವಿಭಜನೆಗೆ ಕಾರಣರಾದ ಸೂರ್ಯಚಂದ್ರರು, ಎಲ್ಲ ಕಡೆಗೂ ವ್ಯಾಪಿಸಿರುವ ಆಕಾಶ, ಎಲ್ಲ ವಿಧದ ಬೀಜಶಕ್ತಿಗೂ ಆಧಾರವಾಗಿರುವ ಭೂಮಿ, ಎಲ್ಲ ಪ್ರಾಣಿಗಳಿಗೂ ಪ್ರಾಣವನ್ನು ಒದಗಿಸುವ ವಾಯು – ಈ ಎಂಟು ವಿವರಗಳು ಶಿವನ ಪ್ರತ್ಯಕ್ಷ ಶರೀರಗಳು’ ಎಂದು ಅವನು ಒಕ್ಕಣಿಸಿದ್ದಾನೆ. ವಿಶ್ವದ ಒಂದೊಂದು ಕಣದ ಚಲನೆಯೂ, ನಿಜವಾಗಿ ಹೇಳಬೇಕೆಂದರೆ, ಶಿವನ ಕುಣಿತ (ತಾಂಡವ ನೃತ್ಯ) ಎಂಬುದು ಇಲ್ಲಿಯ ಭಾವ. ತ್ರಿಮೂರ್ತಿಗಳು ಎಂದು ಹೇಳುವಾಗ ಅವರು ಮೂವರು ದೇವತೆಗಳಲ್ಲ, ಒಂದೇ ತತ್ತ್ವದ ಮೂರು ಆಯಾಮಗಳ ಸಂಕೇತಗಳಷ್ಟೆ.