'ರಾಜನ ಕನಸುಗಳು' ಕಥೆ ಮತ್ತು ಉಬುಂಟು ತತ್ವಜ್ಞಾನ

'ರಾಜನ ಕನಸುಗಳು' ಕಥೆ ಮತ್ತು ಉಬುಂಟು ತತ್ವಜ್ಞಾನ

ಒಬ್ಬ ರಾಜ, ಅವನಿಗೆ ಒಂದು ದಿನ ಒಂದು ಕನಸು . ಆ ಕನಸಿನಲ್ಲಿ ಅವನ ಸುತ್ತ ನರಿಗಳು ಓಡಾಡುತ್ತಿದ್ದವು. ಇದರ ಅರ್ಥವನ್ನು ಹೇಳಿದವರಿಗೆ ಬಹುಮಾನ ಕೊಡ್ತೀನಿ ಅಂತ ಸಾರಿದ, ಒಬ್ಬ ಹಳ್ಳಿಗನಿಗೆ ಒಂದು ಹಾವು ಆ ಬಹುಮಾನವನ್ನು ಹಂಚಿಕೊಳ್ಳುವ ಶರತ್ತಿನ ಮೇಲೆ ಅರ್ಥವನ್ನು ಹೇಳಿತು. ಹಳ್ಳಿಗ ಅದಕ್ಕೆ ಒಪ್ಪಿ ಅದನ್ನು ಕೇಳಿಕೊಂಡು ಬಂದು ರಾಜನಿಗೆ ಹೇಳಿದ "ರಾಜನೇ, ನರಿಯ ಹಾಗೆ ಮೋಸಗಾರರು ಕುತಂತ್ರಿಗಳು ನಂಬಿಕೆದ್ರೋಹ ಮಾಡುವವರು ರಾಜ್ಯದಲ್ಲಿ ಹೆಚ್ಚುತ್ತಿದ್ದಾರೆ. ನೀನು ಹುಷಾರಾಗಿರಬೇಕು." ಅಂತ. ರಾಜ ಅವನಿಗೆ ಬಹುಮಾನ ಕೊಟ್ಟು ಕಳಿಸಿದ.

ಹಳ್ಳಿಗರನು ಹಾವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಅರ್ಧ ಬಹುಮಾನವನ್ನು ಹಾವಿಗೆ ಕೊಡಬೇಕಾಗುತ್ತದಲ್ಲ ಅಂದು ಹಾವನ್ನು ತಪ್ಪಿಸಿ ಬೇರೆ ದಾರಿಯಿಂದ ಮನೆ ಸೇರಿದ.

 

ಕೆಲದಿನಗಳಾದ ಮೆಲೆ ರಾಜನಿಗೆ ಮತ್ತೊಂದು ಕನಸು ಬಿತ್ತು. ಸುತ್ತೆಲ್ಲ ಖಡ್ಗಗಳು , ಕತ್ತಿಗಳು ಹಾರಾಡುತ್ತಿರುವ ಹಾಗೆ. ರಾಜ ಕೂಡಲೇ ಈ ಹಳ್ಳಿಗನಿಗೆ ಹೇಳಿ ಕಳಿಸಿದ. ಹಳ್ಳಿಗ ಹಾವನ್ನು ಮರೆತೇ ಬಿಟ್ಟಿದ್ದ. ಈಗ ಅದರ ನೆನಪಾಯಿತು. ಹಾವಿಗೆ ತಾನು ಮೋಸ ಮಾಡಿದೆ ಎಂದು ಅವನಿಗೆ ಸ್ವಲ್ಪವೂ ನಾಚಿಕೆಯಾಗಲಿಲ್ಲ. ಮತ್ತೆ ಆ ಹಾವನ್ನ್ನು ಹುಡುಕಿಕೊಂಡು ಹೋಗಿ ' ನಾನು ಮಾಡಿದ್ದು ತಪ್ಪಾಯಿತು. ದಯವಿಟ್ಟು ಕ್ಷಮಿಸು . ರಾಜನಿಗೆ ಮತ್ತೆ ಕನಸು ಬಿದ್ದಿದೆ. ಅರ್ಥ ಕೇಳಿದ್ದಾನೆ. ಬಹುಮಾನ ಕೊಡುತ್ತಾನಂತೆ, ಈ ಬಾರಿ ಈ ಬಹುಮಾನವನ್ನು ಪೂರ್ತಿಯಾಗಿ ನಿನಗೇ ಕೊಡುತ್ತೇನೆ, ದಯಮಾಡಿ ಈ ಕನಸಿನ ಅರ್ಥ ತಿಳಿಸು " ಅಂತ ಬೇಡಿಕೊಂಡ. " ಒರೆಗಳಿಂದ ಹೊರ ಬಂದ ಕತ್ತಿಗಳು ಹಾರಾಡುತ್ತಿವೆ ಎಂದರೆ ದೇಶದಲ್ಲಿ ಯುದ್ಧ ನಡೆಯುತ್ತದೆ ಎಂದರ್ಥ" ಎಂದು ಹೇಳಿತು. "ಈ ಸಲ ಖಂಡಿತವಾಗಿ ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ " ಅಂತ ಹಾವಿಗೆ ಹೇಳಿ ಬಂದು ಹಳ್ಳಿಗ ರಾಜನಿಗೆ ಈ ವಿಷಯ ಹೇಳಿ ಮತ್ತೆ ಬಹುಮಾನ ಪಡೆದ.

ವಾಪಸು ಬರುವಾಗ ಒಂದು ಹರಿತವಾದ ಕತ್ತಿಯನ್ನು ತೆಗೆದುಕೊಂಡು ತನ್ನ ಬಟ್ಟೆಯಲ್ಲಿ ಅಡಗಿಸಿಕೊಂಡು ಬಂದು ದಾರಿಯಲ್ಲಿ ಹಾದಿನೋಡುತ್ತಿದ್ದ ಹಾವಿನ ಬಳಿ ಬಂದಾಗ ಹಾವು "ಬಹುಮಾನ ಎಲ್ಲಿ ? " ಅಂತ ಕೇಳಿದಾಗ ಕತ್ತಿಯನ್ನು ಬೀಸಿ ಕೊಲ್ಲಲು ಪ್ರಯತ್ನಿಸಿದ . ಸ್ವಲ್ಪ ಗಾಯವಾದರೂ ಹಾವು ಅದು ಹೇಗೋ ತಪ್ಪಿಸಿಕೊಂಡು ಬಿಲ ಸೇರಿತು. ಹಳ್ಳಿಗ ಮನೆಗೆ ಬಂದ.

 

ಸ್ವಲ್ಪ ದಿನಗಳಾದ ಮೆಲೆ ರಾಜನಿಗೆ ಮತ್ತೂ ಒಂದು ಕನಸು ಬಿತ್ತು. ಈ ಸಲ ಅವನ ಸುತ್ತ ಕುರಿಮರಿಗಳು ಕುಣಿದಾಡುತ್ತಿದ್ದವು , ಪಾರಿವಾಳಗಳು ಹಾರಾಡಿಕೊಂಡಿದ್ದವು. ರಾಜ ಮತ್ತೆ ಹಳ್ಳಿಗನನ್ನು ಕರೆಕಳಿಸಿದ. ಈಗ ಹಳ್ಳಿಗನಿಗೆ ಭಾರೀ ಭಯವಾಯಿತು, ಕನಸಿನ ಅರ್ಥ ತಿಳಿಯದೆ ರಾಜನ ಮುಂದೆ ಹೋಗುವುದು ಹೇಗೆ? ಹಾವೋ ಎರಡು ಬಾರಿ ತನಗೆ ಅರ್ಥ ಹೇಳಿ ಸಹಾಯ ಮಾಡಿತ್ತು. ತಾನೋ ಮೋಸ ಮಾಡಿದ್ದಲ್ಲದೆ ಕೊಲ್ಲಲೂ ಪ್ರಯತ್ನಿಸಿದ್ದ, ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಮಾಡಿದ್ದ. ಇದನ್ನು ನೆನೆದು ಅವನಿಗೆ ನಾಚಿಕೆ ಆಯಿತು. ಹಾವನ್ನು ಮಾತಾಡಿಸಲು ಮುಖವಿಲ್ಲದೇ ಹೋಯಿತು. ಅರ್ಥ ಹೇಳದಿದ್ದರೆ ರಾಜನಿಗೆ ಸಿಟ್ಟು , ಶಿಕ್ಷೆ ಕೊಟ್ಟಾನು, ಹಾವು ತನ್ನ ಮೇಲೆ ಸಿಟ್ಟು ಮಾಡೀತು. ಸುಮ್ಮನೆ ಇದ್ದು ರಾಜನ ಸಿಟ್ಟಿಗೆ ಗುರಿಯಾಗುವುದಕ್ಕಿಂತ ರಯತ್ನ ಮಾಡಿ ಹಾವಿನ ಕೋಪವನ್ನು ಎದುರಿಸುವುದೇ ಮೇಲು ಎಂದು ಹಾವಿನ ಬಳಿಗೆ ಹೋದ. ಹಾವು ಅವನಿಗೆ ಬೇಗ ಸಿಗಲಿಲ್ಲ . "ನಾನು ಅಪರಾಧ ಮಾಡಿದೆ , ನನ್ನನ್ನು ಕ್ಷಮಿಸು , ದಯಮಾಡಿ ನನ್ನನ್ನು ರಾಜನಿಂದ ಉಳಿಸು " ಎಂದು ದೈನ್ಯದಿಂದ ಬೇಡಿದ ಮೇಲೆ ಹಾವು ಹುತ್ತದಿಂದ ಹೊರಗೆ ಬಂದಿತು. ರಾಜನ ಕನಸನ್ನು ಕೇಳಿ ತಿಳಿದು " ರಾಜ್ಯದಲ್ಲಿ ಇನ್ನು ಮೇಲೆ ಸುಖ, ಸುಭಿಕ್ಷಗಳು ಇರುವವು" ಎಂದು ಹೇಳಿ "ಈ ಸಲ ಅರಸನು ಬಹುಮಾನ ಕೊಟ್ಟರೆ ನೀನು ಏನು ಮಾಡುವಿ?" ಎಂದು ಕೇಳಿತು. ಹಳ್ಳಿಗನು ನಾಚಿಕೆಯಿಂದ ತಲೆ ತಗ್ಗಿಸಿ " ಈ ಸಲ ಸತ್ಯವಾಗಿ ನಿನಗೆ ಅರ್ಧ ಕೊಡುತ್ತೇನೆ" ಎಂದು ಮಾತು ಕೊಟ್ಟು ರಾಜಧಾನಿಗೆ ಬಂದ.ರಾಜನು ಕನಸಿನ ಅರ್ಥ ಕೇಳಿ ಬಹಳ ಸಂತೋಷಪಟ್ಟು ಬಹಳ ಬಹುಮಾನ ಕೊಟ್ಟು ಕಳಿಸಿದ.

 

ಈ ಸಲ ಮಾತ್ರ ಹಳ್ಳಿಗನು ಮಾತಿಗೆ ತಪ್ಪದೆ ಹಾವನ್ನು ಭೆಟ್ಟಿಯಾಗಿ " ಓ ನಾಗರಾಜಾ ನಿನ್ನ ತಾಳ್ಮೆ ಬಲು ದೊಡ್ಡದು , ನಾನು ನಿನಗೆ ಮೊದಲ ಸಲ ಮೋಸ ಮಾಡಿದರೂ ಕೂಡ , ಎರಡನೇ ಸಲ ನಿನಗೆ ಗಾಯಗೊಳಿಸಿದರೂ ಕೂಡ ,ನೀನು ನನಗೆ ಹಾನಿ ಮಾಡದೆ , ಈಗ ಮೂರನೇ ಸಲ ಕೂಡ ಸಹಾಯ ಮಾಡಿರುವಿ.ನಿನ್ನ ಉಪಕಾರಕ್ಕೆ ನಾನು ಪ್ರತಿಯಾಗಿ ಏನು ಮಾಡಲಿ? ಇದೋ ಈ ಎಲ್ಲ ಬಹುಮಾನ ನಿನಗೆ " ಎಂದು ಅರ್ಪಿಸಿ ಕೈಮುಗಿದು ಹೊರಡಲು ಎದ್ದನು.

 

ಆಗ ಹಾವು ಏನು ಹೇಳಿತು ? ಅದು ಮೃದುವಾಗಿ ಹೇಳಿತು- "ಅಯ್ಯಾ , ನಾಚಬೇಡ , ದುಃಖಪಡಬೇಡಪ್ಪ, ನೀನು ನನಗೆ ಮೋಸಮಾಡಿದುದು ನಿನ್ನ ತಪ್ಪಲ್ಲ . ನೀನು ನನಗೆ ಅಪಕಾರ ಮಾಡಿದುದು ನಿನ್ನ ತಪ್ಪಲ್ಲ. ನೀನು ಮೊದಲ ಸಲ ಬಂದಾಗ ದೇಶದ ತುಂಬ ಮೋಸ, ಸುಳ್ಳು, ಅನ್ಯಾಯ ತುಂಬಿಕೊಂಡಿತ್ತು. ಆದ್ದರಿಂದಲೇ ನೀನು ಮೋಸಗರನಾಗಿ ಸುಳ್ಳು ಹೇಳಿ ಬೇರೆ ದಾರಿಯಿಂದ ನಿನ್ನ ಹಳ್ಳಿಗೆ ಹೋದೆ. ಎರಡನೇ ಸಲ ನೀನು ಬಂದಾಗ ದೇಶದಲ್ಲಿ ಯುದ್ಧದ ವತಾವರಣ ಇತ್ತು. ಜನ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದರು, ಆದ್ದರಿಂದಲೇ ನೀನು ಉಪಕಾರ ಮರೆತು ನನ್ನನ್ನು ಕೊಲ್ಲಲು ಯತ್ನಿಸಿದೆ. ಆದರೆ ಈಗ ದೇಶದಲ್ಲಿ ಶಾಂತಿ ನೆಲೆಸಿದೆ, ಪ್ರಜೆಗಳು ನೆಮ್ಮದಿಯಾಗಿದ್ದಾರೆ. ಆದ್ದರಿಂದಲೇ ಈಗ ನೀನು ಅರಸನ ಬಹುಮಾನವನ್ನೆಲ್ಲ ನನಗೆ ಕೊಟ್ಟು ಕ್ಷಮೆ ಬೇಡುತ್ತಿರುವೆ. ಆದರೆ ಈ ಬಹುಮಾನ ನನಗೆ ಬೇಡ. ನಾನು ಹಾವಾದರೂ , ನೀನು ಮನುಷ್ಯನಾದರೂ ನಾವು ಇಬ್ಬರೂ ಒಂದೇ ದೇವರ ಮಕ್ಕಳು. ಹೋಗಿ ನಿನ್ನ ಹಳ್ಳಿಯಲ್ಲಿ ಸುಖವಾಗಿರು" ಎಂದು ಹೇಳಿ ತನ್ನ ಹುತ್ತದೊಳಕ್ಕೆ ಹೊರಟು ಹೋಯಿತು. ಹಳ್ಳಿಗನು ಅರಸನ ಬಹುಮಾನವನ್ನು ಮರಳಿ ತೆಗೆದುಕೊಂಡು ತನ್ನ ಹಳ್ಳಿಗೆ ಹೋಗಿ ಸುಖವಾಗಿದ್ದನು.

 

ಈ ಕಥೆಯನ್ನು ಜಿ. ಪಿ. ರಾಜರತ್ನಂ ಅವರು ಪಂಡಿತನ ನೆರಳು ಪುಸ್ತಕದಲ್ಲಿ ಹೇಳಿದ್ದಾರೆ.

 

ಈ ಕಥೆಯ ಅರ್ಥ ಮತ್ತು ನೀತಿಯನ್ನು ಈ ಟಿಪ್ಪಣಿಯ ಮೂಲಕ ಹೀಗೆ ಹೇಳಿದ್ದಾರೆ- ಇದು ಬರಿಯ ಕನಸಿನ ಕತೆ ಅಲ್ಲ . ಲೋಕದಲ್ಲಿ ನಾವು ಇಂತಹ್ ಸಂಗತಿ ನಡೆಯುವುದನ್ನು ಕಾಣುತ್ತೇವೆ. ವ್ಯಕ್ತಿಯಾದವನು ಸದಾಚಾರಿಯಾಗಿದ್ದರೆ ಅದು ಅವನ ಸುತ್ತೂಮುತ್ತೂ ಆಚರಿಸುತ್ತಿರುವ ಸದಾಚಾರದ ಫಲ; ಅವನು ದುರಾಚಾರಿಯಾದರೆ ಅದು ಅವನ ಸುತ್ತೂಮುತ್ತೂ ಆಚರಿಸುತ್ತಿರುವ ದುರಾಚಾರದ ಪ್ರಭಾವ. ಹತ್ತು ಜನರ ನಡುವೆ ಬದುಕುವವನು ಅವರಂತೆಯೇ ಆಗಿ ಬಿಡುವುದು ಸಹಜ. ಈ ಕತೆಯ ಹಳ್ಳಿಗನು ಇಂತಹ ವ್ಯಕ್ತಿ. ಈ ಲೋಕ ಸತ್ಯವನ್ನು ತಿಳಿದಂಥವರು ಯಾವ ವ್ಯಕ್ತಿ ದುರಾಚಾರ ಮಾಡಿದರೂ ಅವನನ್ನು ದಂಡಿಸುವುದಿಲ್ಲ, ಯಾವ ವ್ಯಕ್ತಿ ಸದಾಚಾರ ಮಾಡಿದರೂ ಅದಕ್ಕಾಗಿ ಪ್ರಶಂಶಿಸುವುದಿಲ್ಲ, ಸಮಾಜದ ಹೊಣೆಯನ್ನು ತಿಳಿದು ಸಮಾಧಾನದಿಂದಿರುತ್ತಾರೆ. ಈ ಕತೆಯ ಘಟಸರ್ಪ ಈ ಸತ್ಯವನ್ನು ತಿಳಿದು ಸಮಾಧಾನವಾಗಿದ್ದ ಪ್ರಾಣಿ.

 

ಇದೇ ತತ್ವವನ್ನು ಉಬುಂಟು ತತ್ವಜ್ಞಾನ(http://en.wikipedia.org/wiki/Ubuntu_philosophy)ದಲ್ಲೂ ಕಾಣಬಹುದು.

Rating
Average: 1 (1 vote)

Comments