'ರಾಮಕೃಷ್ಣ ಕಾಟುಕುಕ್ಕೆಯವರ ಭಕ್ತಿ ಸಂಗೀತ ಕಾರ್ಯಕ್ರಮ', ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !

'ರಾಮಕೃಷ್ಣ ಕಾಟುಕುಕ್ಕೆಯವರ ಭಕ್ತಿ ಸಂಗೀತ ಕಾರ್ಯಕ್ರಮ', ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ !

'ಮೈಸೂರ್ ಅಸೋಸಿಯೇಷನ್, ಮುಂಬೈ', ಹಾಗೂ 'ಕನ್ನಡ ಕಲಾಕೇಂದ್ರ ಮುಂಬೈ', ಇವರ ಸಂಯುಕ್ತ ಆಶ್ರಯದಲ್ಲಿ ’ಭಕ್ತಿ ಸಂಗೀತಕಾರ್ಯಕ್ರಮ,  ದಿನಾಂಕ, ೧೮.೧೨.೨೦೧೧ ರಂದು ರವಿವಾರ ಅಂಜೆ ೬-೩೦ಕ್ಕೆ, 'ಅಸೋಸಿಯೇಷನ್ ನ, ಕಿರು ಸಭಾಗೃಹ’ ದಲ್ಲಿ ಜರುಗಿತು. ಭಜನೆ ಹಾಗೂ ಸಂಗೀತಾಸಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಕೊನೆಯತನಕ ಹಾಜರಿದ್ದು ಭಜನೆಯ ಸವಿಯುಂಡು ಧನ್ಯರಾದರು.  

ಕಾರ್ಯಕ್ರಮಕ್ಕೆ ಮೊದಲು, 'ಮೈಸೂರ್ ಅಸೋಸಿಯೇಷನ್ ನ ಹಿರಿಯ ಕಾರ್ಯಕರ್ತ', ಸಂಘಟಕ, ಹಾಗೂ ಉತ್ತಮ ನಾಟಕನಿರ್ದೇಶಕ ಶ್ರೀ. ಕೆ. ಮಂಜುನಾಥಯ್ಯನವರು, ಸಂಜೆಯ ಮುಖ್ಯ ಅತಿಥಿಗಳನ್ನು ಎಲ್ಲಾ ಸಭಿಕರಿಗೆ ಪರಿಚಯಿಸಿ, ಆತ್ಮೀಯ ಸ್ವಾಗತ ಕೋರಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆನೀಡಿದರು. ನಂತರ ಬಾಲಚಂದ್ರರಾಯರು, ಕಾಟುಕುಕ್ಕೆಯವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಿದ್ದಲ್ಲದೆ ಕಾರ್ಯಕ್ರಮದುದ್ದಕ್ಕೂ ಹಾಜರಿದ್ದು, ಪ್ರತಿಗೀತೆಗಳನ್ನು ಹಾಡುವಾಗ ಬಳಸುವ  ವಿಭಿನ್ನ ಶೈಲಿಯನ್ನು ರಸಿಕರಿಗೆ ಪರಿಚಯಿಸಿದರು. 

ಕೊನೆಯಲ್ಲಿ 'ಶ್ರೀಮತಿ ಪ್ರಫುಲ್ಲ  ಉರುವಲ್''  ರವರು, ಶ್ರೀ ಕಾಟು ಕುಕ್ಕೆಯವರಿಗೆ ಮತ್ತು ಸಹ-ಕಲಾವಿದರಿಗೆ ಪುಷ್ಪಗುಚ್ಚಗಳನ್ನಿತ್ತು ಸನ್ಮಾನಿಸಿದರು. ಸಭಿಕರು ಇನ್ನೂ ಸ್ವಲ್ಪಹೊತ್ತು ಭಜನೆಯನ್ನು  ಕೇಳಲು ಉತ್ಸುಕರಾಗಿದ್ದರು. ಮತ್ತೆ ಕೆಲವರು ತಮ್ಮ ಮೆಚ್ಚಿನ ಗೀತೆಗಳ  ಬೇಡಿಕೆಯ ಚೀಟಿಗಳನ್ನು ವೇದಿಕೆಗೆ ಕೊಟ್ಟಿದ್ದರು. ಆದರೆ ಸಮಯದ ಅಭಾವದಿಂದ ಅವುಗಳನ್ನು ತೆಗೆದುಕೊಳ್ಳಲಾಗದೆ ಕೈಬಿಡಲಾಯಿತು.
 
ಕಾಟು ಕುಕ್ಕೆಯವರ ಪರಿವಾರದ ಪರಿಚಯ :
 
ಪ್ರಸಿದ್ಧ ಭಜನ ಗಾಯಕ,   'ತಿರುಪತಿ ವೆಂಕಟರಮಣನೆ ಗೀತೆಯ ಖ್ಯಾತಿಯ 'ಕಾಟುಕುಕ್ಕೆಯವರು,  ಶ್ರೀ ಕಾಸರುಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮನಿವಾಸಿ. ಗಡಿನಾಡು ಕನ್ನಡಿಗ. ಸರಳ ಸಜ್ಜನಿಕೆಯ ವ್ಯಕ್ತಿತ್ವದ  ಕಾಟುಕುಕ್ಕೆ ನಾರಾಯಣ ರಾವ್, ಹಾಗೂ ತಾಯಿ ರತ್ನಾವತಿ ರಾವ್ ರವರ ಪುತ್ರ. ಪತ್ನಿ ಉಮಾರಾವ್. ಈ ದಂಪತಿಗಳಿಗೆ   ಆದಿತ್ಯ, ಕವನ, ಎಂಬ ಇಬ್ಬರು ಮಕ್ಕಳಿದ್ದಾರೆ.
 
ಸಂಗೀತ ಕಲಿಕೆ :
 
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನು 'ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ' ರವರಿಂದ ಕಲಿತರು. ಯೋಗೀಶ್ ಶರ್ಮರವರು, ಮಂಗಳೂರು ಆಕಾಶವಾಣಿಯ ’ಬಿ ಗ್ರೇಡ್’ ಕಲಾವಿದ. 'ರಾಮಕೃಷ್ಣ ಕಾಟುಕುಕ್ಕೆಯವರು,  ರಾಜ್ಯ ಹೊರರಾಜ್ಯ, ಮುಂಬೈಮಹಾನಗರದಲ್ಲೂ 'ದಾಸ ಸಂಕೀರ್ತನೆ', 'ಭಕ್ತಿಗಾನ', 'ರಸಮಂಜರಿ ಕಾರ್ಯಕ್ರಮ'ಗಳನ್ನು ನಡೆಸಿಕೊಟ್ಟು ಕಲಾರಸಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.
 
೨೫೦ ಕ್ಕೂ ಹೆಚ್ಚು ದಾಸರ ಪದಗಳಿಗೆ ಸ್ವರಸಂಯೋಜಿಸಿ ಹಾಡಿ ಸುಮಾರು ೧೫೦ ಕ್ಕೂ ಮಿಗಿಲಾಗಿ ದಾಸರ ಪದಗಳಿಗೆ ಹಾಗೂ ಭಕ್ತಿಗೀತೆಗಳ ಧ್ವನಿ ಸುರುಳಿಗಳು ಬಿಡುಗಡೆಗೊಂಡು ನಾಡಿನಾದ್ಯಂತ ಮನೆಮತಾಗಿದ್ದಾರೆ. ಇವರು ಹಾಡಿದ ’ತಿರುಪತಿ ವೆಂಕಟರಮಣ’ ಮತ್ತು ’ಕಣ್ಣಿನೊಳಗೆ ನೋಡು’ ಸಿಡಿ ಕ್ಯಾಸೆಟ್ ಗಳು ತಲಾ ೨ ಲಕ್ಷಕ್ಕೂ ಅಧಿಕ ಮಾರಾಟವಾಗಿ ದಾಖಲೆ ಸೃಶ್ಟಿಸಿವೆ. ಇವರು, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದಲ್ಲಿ ಉದ್ಯೋಗದಲ್ಲಿದ್ದರು. ಇದು ಕೇರಳದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತದೆ. ಶ್ರೀ ತಿರುಮಲ ದೇವಸ್ಥಾನಕ್ಕೆ ಆಹ್ವಾನಿತ ಗಾಯಕರಾಗಿ , 'ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಭಜನಾ ತರಪೇತಿ ನೀಡುವ ಸಂಪನ್ಮೂಲ ವ್ಯಕ್ತಿ' ಯಾಗಿದ್ದಾರೆ.
 
ಈ ಕಾರ್ಯಗಳ ಮಧ್ಯೆ 'ಶ್ರೀಪುರುಂದರದಾಸ ಆರಾಧನಾ ಮಹೋತ್ಸವ ಸಮಿತಿ' ರಚಿಸಿ ನಿಷ್ಠೆಯಿಂದ ಆರಾಧನೋತ್ಸವ ನಡೆಸಿ  ಸತತ ಭಜನೆ, ಕೀರ್ತನೆ, ಸತ್ಸಂಗಗಳ ಮೂಲಕ ನಾಡಿನ ಜನರ ದೈವಿಕ ಚೈತನ್ಯವೃದ್ಧಿಗೆ ಪ್ರೇರಕರಾಗಿದ್ದಾರೆ.
 
ದಾಸನಾಗು ವಿಶೇಷನಾಗು ಎಂಬ ನುಡಿ ಅವರಿಗೆ ಪ್ರಿಯವಾಯಿತು :
 
ಎಂಬ ನುಡಿಯಿಂದ ಪ್ರೇರಿತರಾಗಿ ಗಡಿನಾಡು-ಕರಾವಳಿ ಪ್ರದೇಶಗಳ ನಾನಾ ಊರುಗಳ ಮನೆ, ಮಠ, ಮಂದಿರಗಳ ೧೫೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ’ದಾಸ ಸಂಕೀರ್ತನಾಯಾತ್ರೆ’ ಯ ಅಭಿಯಾನವನ್ನು ನಡೆಸಿ ಸಾಂಪ್ರದಾಯಿಕ ಭಜನೆ ಹಾಗೂ ಹರಿದಾಸ ಸಾಹಿತ್ಯ ಪ್ರಚಾರ ಪಡಿಸಿ ಯಶಸ್ವಿಯಾಗಿದ್ದಾರೆ. ಈ ಅಭಿಯಾನವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. 'ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್' ನ ಯೋಜನೆಯನ್ನು ಕಾಸರಗೋಡು ಜಿಲ್ಲೆಯ ೧೦ ಕನ್ನಡ ಶಾಲೆಗಳಲ್ಲಿ ೬೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಜನಾತರಪೇತಿ ನೀಡುವ ಮೂಲಕ ಮನೆ-ಮನಕೆ ಹರಿಭಜನಾ ಸಾಹಿತ್ಯ ಸಂಸ್ಕೃತಿಯನ್ನು  ಬಿತ್ತರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
 
ಪ್ರಶಸ್ತಿ, ಪುರಸ್ಕಾರಗಳು :
 
* ಕೇರಳ ರಾಜ್ಯ ದಾಸ ಸಾಹಿತ್ಯ ಸಮ್ಮೇಳನದ ಗೌರವ ಪ್ರಶಸ್ತಿ
* ಕನ್ನಡ ಪಯಸ್ವಿನಿ-೨೦೦೯ ಪ್ರಶಸ್ತಿ.
 
ಇದುವರೆವಿಗೂ ಕಾಟುಕುಕ್ಕೆಯವರು ನಡೆಸಿದ ಒಂದು ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ದಾಸ ಸಂಕೀರ್ತನೆ ಹಾಗೂ 'ಭಕ್ತಿಗಾನ', 'ರಸಮಂಜರಿ ಕಾರ್ಯಕ್ರಮ'ಗಳನ್ನು ನಡೆಸಿಕೊಟ್ಟಿದ್ದಾರೆ. ಸರಳ ಗಾಯನ ಶೈಲಿ ಇವರ ವೈಶಿಷ್ಠ್ಯತೆಗಳಲ್ಲೊಂದು.
 
ಬಿಡುಗಡೆಗೊಂಡ ಧ್ವನಿ ಸುರಳಿಗಳ ಪಟ್ಟಿ :
 
* ಧರ್ಮಕ್ಕೆ ಕೈಬಾರದೀಕಾಲ(ತಿರುಪತಿ ವೆಂಕಟರಮಣ)
* ಕಣ್ಣಿನೊಳಗೆ ನೋಡು (ಹುಟ್ಟಿದೆಳು ದಿವಸದಲಿ)
* ದಾಸ ನಮನ (ಭಜನಾ ಶೈಲಿಯ ಗೀತೆಗಳು)
* ಗೋಪಿಯ ಭಾಗ್ಯವಿದು (ಹಣ್ಣು ತಾ ಬೆಣ್ಣೆ ತಾ)
* ಕರುಣಾ ಸಾಗರ ಶ್ರೀಹರಿ (ಜಯ ಜಯ ಕೃಷ್ಣ)
 
ಸಂಪರ್ಕ ವಿಳಾಸ :
 
ರಾಮಕೃಷ್ಣ ಕಾಟುಕುಕ್ಕೆ, ಶ್ರೀ ಕ್ಷೇಟ್ರ ಕಾಟುಕುಕ್ಕೆ, ಅಂಚೆ : ಕಾಟುಕುಕ್ಕೆ, ಕಾಸರಗೋಡು-೬೭೧೫೫೨
ದೂರಧ್ವನಿ : ೦೪೯೯೮೨೨೫೯೨೫, ಮೊಬೈಲ್ : ೦೯೪೪೭೬೫೨೯೨೯, ಇ -ಮೈಲ್ : ramakrishnakatukukke@gmail.com
 
 
Rating
No votes yet

Comments