ಲಗ್ನ ಪತ್ರಿಕೆ! (2)

ಲಗ್ನ ಪತ್ರಿಕೆ! (2)

ಭಾಗ ೧ ಇಲ್ಲಿದೆ

ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ ಅಂಗಡಿಗೋ ಇಲ್ಲಾ ಮಾಸ್ತಿಕಟ್ಟೆಯ ಮದನ ಶೆಟ್ಟರ ಅಂಗಡಿಗೋ ಹೋಗಬೇಕು. ಆ ಅಂಗಡಿಗಳನ್ನು ಬಿಟ್ಟರೆ ದೂರದ ಮಾದನಗೇರಿಗೋ, ಇಲ್ಲಾ ಅಂಕೋಲಾಕ್ಕೋ ಹೋಗಿ ಬರಬೇಕು. ಹಾಗಾಗಿ ಆ ಸುತ್ತಲಿನ ಹಳ್ಳಿಯ ಜನರೆಲ್ಲ ತಮ್ಮ ತುರ್ತು ಅವಶ್ಯಕತೆಗಳಿಗೆ ಹೆಚ್ಚಾಗಿ ಅವಲಂಬಿಸಿದ್ದು ಸಮೀಪದ ರಾಮಚಂದ್ರನ ಅಂಗಡಿಯನ್ನೇ. ಗೋಕರ್ಣದಿಂದ ಹಿಲ್ಲೂರಿನ ಮುಖಾಂತರ ಸಿರಸಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ತನ್ನ ತೋಟದ ಮನೆಯಲ್ಲೇ ಅಂಗಡಿಯನ್ನು ತೆರೆದಿದ್ದರು ರಾಮಚಂದ್ರ. ಅಲ್ಲಿ ದಿನ ಬಳಕೆಗೆ ಬೇಕಾಗುವ ವಸ್ತುಗಳಿಂದ ಹಿಡಿದು, ಒಣ ಮೀನು, ಹಿಂಡಿ, ಹತ್ತಿಕಾಳು, ಹುರುಳಿ ಹಿಟ್ಟು, ಸಾಬೂನು, ಪ್ಲಾಸ್ಟಿಕ್ ಸಾಮಾನುಗಳು, ಬುಟ್ಟಿ, ಕತ್ತಿ, ಬಂದಿಗಳು ಸಿಗುತಿದ್ದವೂ. ಅಲ್ಲಿಯ ಜನರಿಗೆ ಏನೇ ತುರ್ತಾಗಿ ಬೇಕಿದ್ದರೂ ರಾಮಚಂದ್ರನ ಅಂಗಡಿಯಲ್ಲಿ ಸಿಗುತ್ತಿತ್ತು. ಇನ್ನೊಂದು ವಿಷಯವೆಂದರೆ ಅಲ್ಲಿಂದ ಸಾಮಾನು ತೆಗೆದುಕೊಂಡು ಹೋಗುವವರು ಕೈಯಲ್ಲಿ ರೊಕ್ಕ ಹಿಡಿದೇ ಬರಬೇಕೆಂದಿಲ್ಲ. ರೊಕ್ಕ ಇಲ್ಲದಿದ್ದರೆ ಮನೆಯಲ್ಲಿ ಬೆಳೆದ ಬತ್ತ, ತೆಂಗಿನಕಾಯಿ, ಗೇರು ಬೀಜ, ವಾಂಟೆಹುಳಿ, ಮುರಲಕಾಯಿ ಏನೆ ಆದರೂ ಆದೀತು. ಜನರು ಆ ಸಾಮಾನುಗಳನ್ನು ಕೂಡ ಅಂಗಡಿ ಬಂದ ತಕ್ಷಣವೇ ಕೊಡಬೇಕೆಂದಿಲ್ಲ, ಈಗ ಸಾಮಾನು ತೆಗೆದುಕೊಂಡು ಹೋಗಿ ಆ ಪದಾರ್ಥಗಳು ಹೊಂದಿಕೆಯಾದ ಮೇಲೆ ತಂದು ಕೊಟ್ಟರು ಆಯಿತು. ಈ ತಿಂಗಳು ಆಗದಿದ್ದರೆ, ಮುಂದಿನ ತಿಂಗಳು. ಈ ವರ್ಷ ಆಗದಿದ್ದರೆ, ಮುಂದಿನ ವರ್ಷ ಯಾವಾಗ ಬೇಕಾದರೂ ಅಡ್ಡಿಯಿಲ್ಲ. ಅಲ್ಲಿ ಬರುವ ಜನರೆಲ್ಲ ಅಲ್ಲಿಯೇ ಹುಟ್ಟಿ ಬೆಳೆದು ಪರಿಚಿತರೇ ಆದುದರಿಂದ ಅವರ ಬಗ್ಗೆ ಚಿಂತಿಸಬೇಕಿರಲಿಲ್ಲ. ಹಾಗೆ ಜನರಿಂದ ಕೊಂಡ ಸಾಮಾನುಗಳನ್ನು ಅಂಕೋಲಾ ಪೇಟೆಗೆ ಹೋಗಿ ಮಾರಿ ಅದರಿಂದ ಬಂದ ರೊಕ್ಕದಲ್ಲಿ ಸ್ವಲ್ಪ ಲಾಭವನ್ನು ತನಗಿಟ್ಟುಕೊಂಡು ಉಳಿದಿದ್ದರಲ್ಲಿ ತನ್ನ ಅಂಗಡಿಗೆ ಸಾಮಾನು ಕೊಂಡು ಬರುತ್ತಿದ್ದ ರಾಮಚಂದ್ರ.

 

ಇಂದು ಸಾತಣ್ಣ ಮನೆಯಿಂದ ಹೊರೆ ಹೊತ್ತು ಹೊರಟಿದ್ದು, ಮುಂದೆ ಕೆಲವೇ ದಿನಗಳಲ್ಲಿ ಬರಲಿರುವ ಮಳೆಗಾಲ ಬರಲಿದ್ದು, ಆಗ ದಿನನಿತ್ಯದ ಕರ್ಚಿಗೆ ಬೇಕಾಗುವ ಸಾಮಾನುಗಳನ್ನು ತರಲು. ಗೇರು ಹಕ್ಕಲದಲ್ಲಿ ಬೆಳೆದ ಗೇರು ಬೀಜ, ಸುತ್ತಲಿನ ಕಾಡಿನಿಂದ ತಂದು ಕೊಯ್ದು ಒಣಗಿಸಿದ ವಾಂಟೆ ಹುಳಿ, ಮುರಲಕಾಯಿ ರಾಮಚಂದ್ರನ ಅಂಗಡಿಯಲ್ಲಿ ಮಾರಿ ಮಳೆಗಾಲಕ್ಕೆ ಬೇಕಾಗುವಷ್ಟು ಬೆಳ್ಳುಳ್ಳಿ, ಮೆಣಸು, ಕೊತ್ತಂಬರಿ, ಹೀಗೆ ಒಂದಿಷ್ಟು ಸಾಮಾನು ತೆಗೆದುಕೊಂಡು ಬರುವುದು, ಮನೆಗೆ ಒಂದು ಪಳದಿಗಾಗುವಷ್ಟು ಮೀನು ತೆಗೆದುಕೊಂಡು ಹೋಗುವುದು. ಇನ್ನೂ ಸ್ವಲ್ಪ ರೊಕ್ಕ ಮಿಕ್ಕಲ್ಲಿ ಮಳೆಗಾಲದ ಗದ್ದೆ ಕೆಲಸಗಳಿಗಾದೀತು ಎಂದು ಯೋಚಿಸುತ್ತಾ ರಾಮಚಂದ್ರನ ಅಂಗಡಿಯತ್ತ ಹೊರಟ.

 

ರಾಮಚಂದ್ರನ ಅಂಗಡಿ ತಲುಪುವ ಹೊತ್ತಿಗೆ, ಆಗಲೇ ಎಂಟು ಹತ್ತು ಜನ ಗಿರಾಕಿಗಳು ಬಂದು ನಿಂತಿದ್ದರು, ಸಾತಣ್ಣ ಒಳಗೆ ಬರುವ ಹೊತ್ತಿಗೆ ಅಂಗಡಿಬೈಲ್ ರಾಕಣ್ಣ ತಂದ ಬತ್ತ ತೂಗುತಿದ್ದ ರಾಮಚಂದ್ರ, ಸಾತಣ್ಣನನ್ನು ಅವನು ಹೊತ್ತ ಹೊರೆಯನ್ನು ನೋಡಿ, ಬತ್ತ ತೂಗುತ್ತಲೇ, "ಹೋ! ಸಾತು, ಬಾ, ಬಾ. ಬಾಳ್ ದಿವ್ಸಾ ಆಯ್ತ ಇಬದಿಗೆ ಬರ್ದೇ" ಎಂದು ಅಂಗಡಿಯ ಪ್ರಾಂಗಣಕ್ಕೆ ಕರೆದ. ಹೊತ್ತು ತಂದ ಹೊರೆಯನ್ನು ಅಂಗಡಿಯ ಪಕ್ಕದಲ್ಲಿಳಿಸಿ, ಅಂಗಡಿಯ ಹೊರಗೆ ಮರದ ಬಾಂಕಿನ ಮೇಲೆ "ಉಸ್ಸಪ್ಪ" ಎಂದು ಕುಳಿತ ಸಾತಣ್ಣ, ತನ್ನ ಸರದಿ ಎಂದು ಬರುವುದೆಂದು.

 

ಅಂಗಡಿಗೆ ತಮ್ಮ ಮನೆಯಿಂದ ತಂದ ಇತರರ ಸಾಮಾನುಗಳನ್ನು ತೂಗಿ ಮುಗಿಸುವಷ್ಟರಲ್ಲಿ ಹೊತ್ತು ಮುಳುಗಿತ್ತು. ಮನೆಗೆ ಬೇಕಾಗುವ ಸಾಮಾನುಗಳಲ್ಲಿ ಯಾವುದಾದರೂ ಮರೆತು ಹೋಗುತ್ತದೆಯೋ ಎನೋ ಎಂದು ತೆಗೆದುಕೊಂಡು ಹೋಗಬೇಕಾದ ಸಾಮಾನುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ ಕುಳಿತಿದ್ದ ಸಾತಣ್ಣನನ್ನು, "ಏನ್ ತಕ್ಕಂಡೆ ಬಂದಿ, ನೋಡುವಾ ತಿಗಿ" ಎಂದು ರಾಮಚಂದ್ರ ಕರೆದಾಗಲೇ ಸಾತಣ್ಣ ಯೋಚನೆಯಿಂದ ಹೊರಬಂದದ್ದು. ತಂದ ಚೀಲವನ್ನು ತೆರೆದು ರಾಮಚಂದ್ರನಿಗೆ ತೋರಿಸಿದ. ತಂದ ಸಾಮಾನುಗಳನ್ನೆಲ್ಲ ತೂಗಿ, ಸಾಮಾನನ್ನು ಅದರ ಪಕ್ಕದಲ್ಲಿ ಬೆಲೆಯನ್ನು ಬರೆದುಕೊಂಡು, ಸಾತಣ್ಣನಿಗೆ " ರೊಕ್ಕ ತಕ್ಕಂಡೆ ಹೋತ್ಯಾ ಅಥವಾ ಮನಿಗೆ ಏನಾರೂ ಸಾಮಾನ್ ತಕಂಡೆ ಹೋತ್ಯಾ" ಎಂದು ಕೇಳಿದಾಗ, ತನ್ನ ಮನೆಗೆ ಬೇಕಾಗುವ ಸಾಮಾನುಗಳ ಪಟ್ಟಿಯನ್ನು ತಿಳಿಸಿದ. ಸಾತಣ್ಣ ಹೇಳಿದ ಸಾಮಾನುಗಳನ್ನೆಲ್ಲ ಒಂದು ಚಿಕ್ಕ ಪಟ್ಟಿಯಲ್ಲಿ ಬರೆದುಕೋಂಡು ಅವುಗಳನ್ನು ಕಟ್ಟಿ ಕೊಡಲು ತನ್ನ ಮಗ ರಮೇಶನಿಗೆ ತಿಳಿಸಿ, ತಾನು ಹಣದ ಲೆಕ್ಕ ಹಾಕಿ, "ಐವತ್ ರೂಪಾಯಿ ಉಳಿತಿದ, ರೊಕ್ಕಾ ಕುಡ್ಲಾ, ಮತ್ತೇನಾದ್ರು ಬೇಕಾ?" ಎಂದು ಸಾತಣ್ಣನನ್ನು ಕೇಳಿದ. ಸಾತಣ್ಣ ಮತ್ತೊಮ್ಮೆ ಮನೆಗೆ ಬೇಕಾಗುವ ಯಾವುದಾದರೂ ಸಾಮಾನುಗಳನ್ನು ಮರೆತಿದ್ದೇನೋ ಎಂದು ಯೋಚಿಸಿ, ತಾನು ಯಾವುದನ್ನು ಮರೆತಿಲ್ಲ ಎಂದು ತನ್ನಷ್ಟಕ್ಕೆ ಖಾತ್ರಿ ಮಾಡಿಕೊಂಡು, "ಇಲ್ಲಾ ಮತ್ತೇನು ಬೇಡಾ, ಊಳದದ್ದ ರೊಕ್ಕ ಕುಟ್ಟೇ ಬಿಡ, ಮೀನರೂ ತಕಂಡೆ ಹೋತಿ" ಎಂದ. ರಾಮಚಂದ್ರ ಲೆಕ್ಕ ಹಾಕಿ ಹತ್ತರ ಐದು ನೋಟುಗಳನ್ನು ತೆಗೆದು ಸಾತಣ್ಣನ ಕೈಗಿತ್ತ. ಅದೇ ಸಮಯಕ್ಕೆ ರಮೇಶ ಸಾತಣ್ಣ ಹೇಳಿ ಬರೆಸಿದ ಸಾಮಾನುಗಳನ್ನೆಲ್ಲಾ ಪೊಟ್ಟಣ ಕಟ್ಟಿ ಸಾತಣ್ಣ ತಂದ ಚೀಲಕ್ಕೆ ತುಂಬಿ ಕೊಟ್ಟ. ರಾಮಚಂದ್ರ ಕೊಟ್ಟ ಹತ್ತರ ನೋಟುಗಳನ್ನು ಅಂಗಿಯ ಕಿಸೆಗೆ ತುರುಕಿ, ರಮೇಶಕೊಟ್ಟ ಚೀಲವನ್ನು ಹೆಗಲಮೇಲೆ ಹೊತ್ತುಕೊಂಡು, "ಬತ್ತಿನೋ ರಾಮಚಿರಣ್ಣ" ಎಂದು ಅಂಗಡಿಯಿಂದ ಹೊರಟ. ಹಾಗೆ ಹೊರಟವನು ಅಂಗಡಿಯನ್ನು , ಅಂಗಡಿಯ ಮುಂದಿನ ದಣಪೆಯನ್ನು ದಾಟಿ ಸ್ವಲ್ಪ ಮುಂದೆ ಹೊರಟಿರಬಹುದು, ಆಗ ಅಂಗಡಿಯ ಗಲ್ಲಿಯ ಮೇಲೆ ಕುಳಿತ ರಾಮಚಂದ್ರನಿಗೆ, ನಿನ್ನೆ ಅಗಸೂರಿಂದ ಬಂದು, ರಾಮಚಂದ್ರನ ಮನೆಯಲ್ಲಿ ಉಳಿದು ಬೆಳಿಗ್ಗೆ ಹೊರಡುವಾಗ, ಆ ಅಗಸೂರ ಹೊನ್ನಯ್ಯ ಸಾತಣ್ಣನಿಗೆ ಕೊಡಲು ಕೊಟ್ಟ ಅವನ ಮಗನ ಮದುವೆಯ ಕರೆಯೋಲೆ ನೆನಪಾಗಿ, "ಸಾತು, ಸಾತು, ಮಾತ್ರೆ ನಿಲ್ಲೋ ಎಂದು ಕೂಗಿದ.

 

ಮುಂದುವರಿಯುವುದು...

 

ಮಂಜು ಹಿಚ್ಕಡ್ 

Rating
No votes yet