'ವೀರ' ವಸಂತ
ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ ಬಗ್ಗೆಯ ಪದ್ಯದ ಅನುವಾದವನ್ನು ಹಾಕೋಣವೆನ್ನಿಸಿತು!
ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು
ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ
ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ-
ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು ||
ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 1)
ಪ್ರಫುಲ್ಲ ಚೂತಾಂಕುರತೀಕ್ಷ್ಣಸಾಯೋ
ದ್ವಿರೇಫಮಾಲಾ ವಿಲಸದ್ಧನುರ್ಗುಣಃ
ಮನಾಂಸಿ ವೇದ್ಧುಮ್* ಸುರತಃಪ್ರಸಂಗಿನಾಂ^
ವಸಂತಯೋದ್ಧಾ~ ಸಮುಪಾಗತಃ ಪ್ರಿಯೇ
प्रफुल्लचूताङ्कुरतीक्ष्णसायो
द्विरेफमालाविलसद्धनुर्गुणः।
मनांसि वेद्धुम् सुरतप्रसङ्गिनां
वसन्तयोद्धा समुपागतः प्रिये॥६-१||
-ಹಂಸಾನಂದಿ
ಚಿತ್ರ: ಹೂಬಿಟ್ಟ ಮಾಮರ, ವಿಕಿಪೀಡಿಯಾದಿಂದ
ಕೊ: ಈ ಪಾಠಾಂತರಗಳೂ ಇವೆ: * – ಭೇತ್ತುಮ್ ; ^ – ಸುರತೋತ್ಸುಕಾನಾಮ್ ; ~ – ಯೋಧಃ ; ಇವುಗಳಿಂದ ಅರ್ಥದಲ್ಲೇನೂ ಭಾರಿ ಬದಲಾಗುವುದಿಲ್ಲ.
ಕೊ.ಕೊ: (ಕೆಲವು 1:1 ಅನುವಾದವಿಲ್ಲದಿದ್ದರೂ ಒಟ್ಟಾರೆ ಭಾವವನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ.
ಕೊ.ಕೊ.ಕೊ: "ವೀರವಸಂತ" ಎನ್ನುವುದು ಕರ್ನಾಟಕ ಸಂಗೀತದ ಒಂದು ರಾಗವೂ ಹೌದು. ಸ್ವಲ್ಪ ಅಪರೂಪವಾದ ರಾಗವೇ. ಇದರಲ್ಲಿ ತ್ಯಾಗರಾಜರ "ಏಮನಿ ಪೊಗಡುದುರಾ" ಮತ್ತೆ ಮುದ್ದುಸ್ವಾಮಿ ದೀಕ್ಷಿತರ "ವೀರವಸಂತ ತ್ಯಾಗರಾಜ" ಅನ್ನುವ ರಚನೆಗಳು ಇವೆ.