ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)

ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)

 



ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)



 


೧೦.೪.೨೦೧೧ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಆಕೃತಿ ಬುಕ್ ಹೌಸ್ ನಲ್ಲಿ 


"ಓಲಿಕೊಡೆ" (ಲೇ: ಶಶಿಧರ ಹೆಬ್ಬಾರ ಹಾಲಾಡಿ) ಪುಸ್ತಕ ಬಿಡುಗಡೆ. ಸಾಹಿತಿ ವಸುಧೇಂದ್ರ ಅವರು ಈ ಪ್ರಬಂಧ ಸಂಕಲನವನ್ನು ಬಿಡುಗಡೆ ಮಾಡಿ, ಹೊಸ ತಲೆಮಾರಿನ ಲಲಿತ ಪ್ರಬಂಧಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದಾಗ ಸುಮಾರು ಐವತ್ತು ಮಂದಿ ಸಾಹಿತ್ಯಾಸಕ್ತರು ಮಾತುಕತೆಯಲ್ಲಿ ಪಾಲ್ಗೊಂಡ ರೀತಿ ಅನನ್ಯ. ಆಕೃತಿ ಪುಸ್ತಕ ಮಳಿಗೆಯ ವಿನ್ಯಾಸವೇ ಹಾಗಿದೆ : ಪುಟ್ಟದೊಂದು ಹಾಲ್ನಲ್ಲಿ ಸುತ್ತಲೂ ಪುಸ್ತಕದ ಶೆಲ್ಫ್ ಗಳು: ಮಧ್ಯದಲ್ಲಿ ಒಂದಷ್ಟು ಖಾಲಿ ಜಾಗ. ಆ ಖಾಲಿ ಜಾಗದ ಅಂಚಿನಲ್ಲಿ ನಾಲ್ಕಾರು ಕುರ್ಚಿಗಳನ್ನಿಟ್ಟು, ಮಧ್ಯದಲ್ಲಿ ಬಣ್ಣ ಬಣ್ಣದ ಜಮಖಾನ ಹಾಸಿದರೆ, ಸಹೃದಯ ಸಂವಾದಕ್ಕೆ ಪರಿಪೂರ್ಣ ವಾತಾವರಣ. ಪ್ರಬಂಧಗಳ ಕುರಿತು ನಡೆದ ಚರ್ಚೆ ಗಮನಿಸಿದರೆ, ಹೊಸ ಹೊಸ ಓದುಗರು ಈಚೆಗಿನ ಪ್ರಬಂಧಗಳನ್ನು ತುಂಬಾ ಕುತೂಹಲದಿಂದ ಓದುತ್ತಿದ್ದಾರೆ ಅನ್ನಿಸಿತು. ಈ ಸಂದರ್ಭದಲ್ಲಿ ಬಿಡುಗಡೆಯಾದ "ಓಲಿಕೊಡೆ" ಪ್ರಬಂಧ ಸಂಕಲದ ಕುರಿತು ಪರಿಚಯ ಮಾಡಿಕೊಟ್ಟವರು ಶ್ರೀ ಎಲ್.ವಿ.ಮುರಳಿಧರ ಮತ್ತು ಮೈಸೂರು ಬ್ಯಾಂಕ್ ಕನ್ನಡ ಬಳಗದ ಅಧ್ಯಕ್ಷರಾದ ಶ್ರಿ ಬಿ.ಜೆ.ಶ್ರೀಪತಿ . ವಸುಧೇಂದ್ರ ಅವರು ಈ ಸಂಕಲನದ ಪ್ರಬಂಧಗಳನ್ನು ಪರಿಸರ ಪ್ರಬಂಧಗಳು ಎಂದು ಕರೆದರೆ ತಪ್ಪಾಗದು ಎನ್ನುತ್ತಾ, ಸಂಕಲನದಲ್ಲಿರುವ "ಮನೆ ಸುತ್ತಲೂ ಮರಗಳು", "ಮಳೆಗಾಲ ತಂದ ನೆನಪಿನ ಸರ", "ಚಳಿಯ ಸುಳಿಯಲ್ಲಿ" ," ಬೈಲು ದಾರಿ" ಮೊದಲಾದ ಪ್ರಬಂಧಗಳನ್ನು ಕೋಟ್ ಮಾಡಿದರು. "ಬಳ್ಳಾರಿಯವರಾದ ನಾವು ಕೊಡೆ ಉಪಯೋಗಿಸುವುದು ಬಿಸಿಲಿಗೆ ಮಾತ್ರ. ಇವರು ಮಳೆಗಾಲ ತಡೆಯಲು ಓಲಿಕೊಡೆಯನ್ನು ಉಪಯೋಗಿಸುವ ಪರಿಯು ನಮಗೆಲ್ಲಾ ಅಚ್ಚರಿಯನ್ನು ತರುತ್ತದೆ" ಎಂದರು ವಸುಧೇಂದ್ರ. "ಈ ಪುಸ್ತಕದಲ್ಲಿ ಬರುವ ಮಲೆನಾಡಿನ ಮರಗಳ ಹೆಸರುಗಳೂ ವಿಸ್ಮಯವನ್ನು ಮೂಡಿಸಿತು" ಎಂದ ವಸುಧೇಂದ್ರ ಅವರ ಮಾತುಗಳನ್ನು ಮೆಚ್ಚಿದವರು ಹಲವರು.


ಹಿಂದೆ ಹೊಸ ಬರಹಗಾರರು ಮೊದಲ ಬರಹವಾಗಿ ಕವನಗಳನ್ನು ಬರೆಯುತ್ತಿದ್ದಂತೆ, ಇಂದು ಪ್ರಬಂಧಗಳ ಮೂಲಕ ತಮ್ಮ ಒಳತೋಟಿಗಳನ್ನು ಹೊರಹಾಕುತ್ತಿದ್ದಾರೇನೊ ಎಂಬಷ್ಟು ಪ್ರಬಂಧಗಳು ಇಂದು ರಚನೆಗೊಳ್ಳುತ್ತಿವೆ ಎಂದು ವಸುಧೇಂದ್ರ ಅಭಿಪ್ರಾಯ ಪಟ್ಟರು.

Rating
No votes yet