ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ? (ನನ್ನ ಚೊಚ್ಚಲ ಕವನ)

ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ? (ನನ್ನ ಚೊಚ್ಚಲ ಕವನ)

ಅಂದು ನಮ್ಮೂರ ಕೇರಿಯಲ್ಲೊಬ್ಬ ಸತ್ತು ಬಿದ್ದಿದ್ದ
ಆತ ತಾನಾಗಿ ಸತ್ತದ್ದಲ್ಲ ಆತನನ್ಯಾರೋ ಕೊಂದಿದ್ದ

ಅದು ಚುನಾವಣೆಯ ಸಮಯವಾಗಿತ್ತು
ಮತದಾನಕ್ಕೆ ಇನ್ನೇನು ಹತ್ತೇ ದಿನವಿತ್ತು

ಆ ಸಮಯವೇ ಈತನ ಬರ್ಬರ ಕೊಲೆಯಾಗಿತ್ತು
ಆದ್ದರಿಂದ ಈ ಕೊಲೆಗೂ ಒಂದು ವಿಶೇಷತೆಯಿತ್ತು

ಸತ್ತ ಆ ಬಡವ ನಿಷ್ಠಾವಂತನಾಗಿದ್ದನಂತೆ
ಕಾಂಗ್ರೇಸ್ ಕಾರ್ಯಕರ್ತನಾಗಿದ್ದನಂತೆ

ಸತ್ತವ ಸತ್ತ ಮೇಲೆ ಕಟ್ಟಾ ಕಾಂಗ್ರೇಸಿಗನಾದ
ಹಾಗಾಗಿಯೇ ಕೊಲೆಗಾರ ಜನತಾದವನಾದ

ಅಲ್ಲಾ, ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ?

ಹಾಗಾದರೆ ಕಾಂಗ್ರೇಸ್ ಸತ್ತವರ ಪಕ್ಷವೇ?
ಕಾಂಗ್ರೇಸಿಗರೆಲ್ಲಾ ಇದ್ದೂ ಸತ್ತಂತೆಯೇ?
ಅಲ್ಲದೆ,
ಜನತಾದವರೆಲ್ಲಾ ಕೊಲೆಗಾರರೇ ಸ್ವಾಮೀ?
***********************

ತುರ್ತು ಪರಿಸ್ಥಿತಿಯ ನಂತರ 1977ರ ಮಾರ್ಚ್ ತಿಂಗಳಲ್ಲಿ ನಡೆದ ಮಹಾಚುನಾವಣೆಯ ಸಮಯದಲ್ಲಿ ನಮ್ಮೂರು ಆತ್ರಾಡಿಯಲ್ಲಿ ಒಂದು ಕೊಲೆಯಾಗಿತ್ತು.
ಆ ಕೊಲೆ ಆಗಿದ್ದು ಆಸ್ತಿ-ಜಮೀನಿನ ಧನಿ-ಒಕ್ಕಲು ವಿವಾದದಿಂದಾಗಿಯಾದರೂ ಅದರಲ್ಲೂ ರಾಜಕೀಯವನ್ನು ತೂರಿದ್ದರು.
ಆಗ ಆ ಘಟನೆಗೆ ಸ್ಪಂದಿಸಿದ ನಾನು ನನ್ನ ಮೊಟ್ಟ ಮೊದಲ ಕವನ ಬರೆದಿದ್ದೆ.
ನಾನಾಗ ಪರ್ಕಳ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದೆ.
ಇಂದು ಇಲ್ಲಿ ನಿಮ್ಮ ಮುಂದಿಡುವ ಇಚ್ಛೆಯಾಯ್ತು.

Rating
No votes yet

Comments