ಸಾರ್ಥಕ ಸಂಜೆ.

ಸಾರ್ಥಕ ಸಂಜೆ.

ಕಳೆದಬಾರಿ ಕವಿ ನಾಗರಾಜರು ಪಂಡಿತ್ ಚತುರ್ವೇದಿ ಸುಧಾಕರ ಅವರ ಕುರಿತಾಗಿ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದಾಗ ಅದನ್ನು ಓದಿ ಪಂಡಿತರನ್ನು ಭೇಟಿ ಮಾಡುವ ಆಸೆ ಹುಟ್ಟಿತ್ತು. ಹಾಗೆಯೇ ನಾಗರಾಜ್ ಅವರನ್ನು ಭೇಟಿ ಮಾಡಿಸಲು ಕೋರಿಕೊಂಡಿದ್ದೆ. ಅದೇ ರೀತಿ ಈ ಶನಿವಾರ ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ನನ್ನ ಮೊಬೈಲ್ ಗೆ ಒಂದು ಕರೆ ಬಂದಿತು. ನಾನು ಸ್ವೀಕರಿಸಿ ಯಾರೆಂದು ಕೇಳಿದಾಗ ಕವಿ ನಾಗರಾಜ್ ಅವರು ತಮ್ಮ ಪರಿಚಯ ಮಾಡಿಕೊಂಡು ಈ ರೀತಿ ಸಂಜೆ ಪಂಡಿತರನ್ನು ಭೇಟಿ ಮಾಡಲು ಬರುವಿರ ಎಂದು ಕೇಳಿದಾಗ ನನಗೆ ಬಹಳ ಆನಂದವಾಯಿತು. 

೦೫.೩೦ ಕ್ಕೆ ಅಲ್ಲಿರುತ್ತೇನೆ ಎಂದವನು ನಾನು ಅಲ್ಲಿ ತಲುಪಿದಾಗ ೦೫.೪೦ ಆಗಿತ್ತು. ಆ ವೇಳೆಗೆ ಅಲ್ಲಿ ಯಾಗ ಶುರುವಾಗಿತ್ತು. ಪ್ರಥಮ ಬಾರಿಗೆ ಮಹಿಳೆಯರು ಯಾಗ ಮಾಡುವುದನ್ನು ನೋಡಿ ಆಶ್ಚರ್ಯವಾಯಿತು. ಯಾಗದ ನಂತರ ಪಂಡಿತ್ ಚತುರ್ವೇದಿ ಸುಧಾಕರ ಅವರು ಮಾತನಾಡಲು ಶುರು ಮಾಡಿದರು. ಅವರಿಗೆ ೧೧೫-೧೨೦ ವರ್ಷ ವಯಸ್ಸಿರಬಹುದು. ಆದರೂ ಅವರ ನೆನಪಿನ ಶಕ್ತಿ ಅಗಾಧವಾದದ್ದು. ವೇದ ಮಂತ್ರಗಳ ಜೊತೆಗೆ, ಹಾಸ್ಯದ ಜೊತೆಗೆ ಅವರ ಮಾತುಗಳು ಅಮೋಘವಾಗಿತ್ತು. ಮನುಷ್ಯ ಎಂದಿಗೂ ಬದುಕಲು ಪ್ರಯತ್ನಿಸಬೇಕೆ ಹೊರತೂ ಸಾಯಲು ಪ್ರಯತ್ನಿಸಬಾರದು. ಎಷ್ಟೋ ಜನ್ಮಗಳ ಫಲವಾಗಿ ಸಿಕ್ಕಿರುವ ಈ ಮನುಷ್ಯ ಜನ್ಮವನ್ನು ಸಾರ್ಥಕವಾಗಿ ರೂಪಿಸಿಕೊಳ್ಳಬೇಕು. ಬದುಕು ಕಷ್ಟ ಸಾವು ಸುಲಭ ಎಂದು ಸಾವನ್ನು ನಾವಾಗಿ ಕರೆಯಬಾರದು. ಅದು ಬಂದಾಗ ಹೋರಾಡಬೇಕು ಅಷ್ಟೇ. ಆಶಾವಾದವೇ ಬದುಕು ನಿರಾಶಾವಾದವೇ ಸಾವು ಎಂದು ಅವರು ಉದಾಹರಣೆಗಳನ್ನು ಕೊಡುತ್ತ ಮಾತನಾಡುತ್ತಿದ್ದಾರೆ ಮೂಕವಿಸ್ಮಿತನಾಗಿ ಕೇಳುತ್ತಿದ್ದೆ. ಜೊತೆಯಲ್ಲಿ ತಮ್ಮ ಹಾಗೂ ತಮ್ಮ ತಂದೆಯವರ ಜೊತೆ ಆಸ್ತಿಕತೆ-ನಾಸ್ತಿಕತೆ ವಿಷಯವಾಗಿ ನಡೆಯುತ್ತಿದ್ದ ಮಾತುಗಳು, ತಮ್ಮ ಹಾಗೂ ಭಗತ್ ಸಿಂಗ್ ನಡುವೆ ನಡೆದ ಸಂವಾದ, ತಮ್ಮ ಹಾಗೂ ಗಾಂಧಿಜಿ, ಕಸ್ತೂರಿ ಬಾ ಜೊತೆ ನಡೆದ ಸಂವಾದಗಳನ್ನು ಅವರು ವಿವರಿಸುತ್ತಿದ್ದರೆ ಕೇಳುತ್ತಲೇ ಇರಬೇಕೆಂಬ ಭಾವನೆ ಹುಟ್ಟುತ್ತದೆ.

ಅಂಥಹ ಮಹಾನ್ ಚೇತನರನ್ನು ಪರಿಚಯಿಸಿದ ಕವಿ ನಾಗರಾಜ್ ಅವರಿಗೆ ಅನಂತಾನಂತ ಧನ್ಯವಾದಗಳು
Rating
No votes yet

Comments