ಸಾವಿನ ಜೊತೆ ಮಾಧ್ಯಮದವರ ಆಟ..

ಸಾವಿನ ಜೊತೆ ಮಾಧ್ಯಮದವರ ಆಟ..

ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಟಿ.ವಿ.ಯಲ್ಲಿ ಸಮಯ ನ್ಯೂಸ್ ನೋಡುತ್ತಾ ಕುಳಿತಿದ್ದರು. ಇದೇನಪ್ಪ ಧಾರಾವಾಹಿ ಸಮಯದಲ್ಲಿ ನ್ಯೂಸ್ ಚಾನೆಲ್ ನೋಡುತ್ತಿದ್ದಾರಲ್ಲ ಎಂದು ಆಶ್ಚರ್ಯದಿಂದ ನೋಡಿದರೆ. ಕನ್ನಡ ಚಲನಚಿತ್ರ ನಟ "ಶಿಷ್ಯ" ದೀಪಕ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ನಲ್ಲಿ ಮಾಗಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಬರುತ್ತಿತ್ತು. ದೀಪಕ್ ಉದಯೋನ್ಮುಖ ನಟ "ಮಾಗಡಿ" ಆತನ ಒಂಭತ್ತನೇ ಚಿತ್ರ. "ಶಿಷ್ಯ" ಚಿತ್ರದ ನಟನೆಗೆ ಉತ್ತಮ ಪ್ರಶಂಸೆ ಪಡೆದಿದ್ದ ನಟ. ಜ್ಯೂ.ಶಂಕರ್ ನಾಗ್ ಎಂದು ಸಹ ಕರೆಸಿಕೊಳ್ಳುತ್ತಿದ್ದರು. ಈಗಷ್ಟೇ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ನಟ ಇಷ್ಟು ಬೇಗ ನಮ್ಮನ್ನಗಲಿದ್ದು ಬೇಸರವಾಗುತ್ತಿದೆ. ಇನ್ನು ಏನೇನೋ ಹೇಳುತ್ತಿದ್ದರು. ನಾನು ಸಹ ಪಾಪ ಇನ್ನೂ ಚಿಕ್ಕ ಹುಡುಗ ಇಷ್ಟು ಬೇಗ ಹೀಗಾಗಬಾರದಿತ್ತು ಎಂದು ಚಾನೆಲ್ ಬದಲಿಸುತ್ತಿದ್ದಾಗ ಟಿ.ವಿ. ೯ ಹಾಕಿದೆ. ಅದರಲ್ಲೂ ಅದೇ ಸುದ್ದಿ. ಸಮಯದಲ್ಲಿ ಮೋಟೊರ್ ಬೋಟ್ ನಡೆಸುತ್ತಿದ್ದಾಗ ಅಪಘಾತ ಎಂದಿದ್ದಾರೆ ಟಿವಿ ೯ ನಲ್ಲಿ ಬೈಕ್ ರೈಡಿಂಗ್ ವೇಳೆ ಅಪಘಾತ ಎಂದಿತ್ತು. ಯಾವುದೋ ಒಂದು ಅಂತೂ ಚಿಕ್ಕ ಹುಡುಗ ಇಷ್ಟು ಬೇಗ ಹೋಗಿ ಬಿಟ್ಟ ಎಂದುಕೊಂಡು ಮತ್ತೆ ಚಾನೆಲ್ ಬದಲಿಸುತ್ತ ಮತ್ತೆ ಟಿವಿ ೯ ಗೆ ಬಂದರೆ ಆಗಷ್ಟೇ ಜಾಹಿರಾತು ಮುಗಿದು ಮತ್ತೆ ಸುದ್ದಿ ಪ್ರಸಾರ ಶುರುವಾಗಿತ್ತು. ಈ ಬಾರಿ ಆಶ್ಚರ್ಯ ಕಾದಿತ್ತು. ಅಪಘಾತದಲ್ಲಿ ದೀಪಕ್ ಮೃತಪಟ್ಟಿದ್ದಾರೆಂದು ಇನ್ನೂ ಖಚಿತ ಮಾಹಿತಿ ಬಂದಿಲ್ಲ ಎಂದರು. ಮತ್ತೆ ಕೆಲವು ಸೆಕೆಂಡ್ ಗಳಲ್ಲಿ ಸಣ್ಣ ಪುಟ್ಟ ಗಾಯಗಳಾಗಿದೆ ಆದರೆ ಜೀವಕ್ಕೆ ಅಪಾಯವಿಲ್ಲ ಎಂದರು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ದೀಪಕ್ ಅವರ ಜೊತೆ ನೇರ ಮಾತುಕತೆ ಎಂದರು. ಮರುಕ್ಷಣದಲ್ಲಿ ದೀಪಕ್ ಮಾತನಾಡಿ ಏನೋ ಸಣ್ಣ ಅಪಘಾತವಾಯಿತು ಅಷ್ಟೇ ಎಂದರು. ಕೂಡಲೇ ಸಮಯ ಚಾನೆಲ್ ಹಾಕಿದರೆ ಅದರಲ್ಲಿ ಇನ್ನೂ ಅಪಘಾತದಲ್ಲಿ ಚಿತ್ರ ನಟ ದೀಪಕ್ ಸಾವು ಎಂದೇ ಬರುತ್ತಿತ್ತು. ಯಾಕೆ ಈ ಮಾಧ್ಯಮದವರಿಗೆ ಆತುರ?ಸರಿಯಾದ ಮಾಹಿತಿ ಇಲ್ಲದೆ ಏಕೆ ಸುದ್ದಿ ನೀಡಬೇಕು?ಸುದ್ದಿ ನೋಡಿ ಅವರ ತಂದೆ ತಾಯಿ ಪರಿಸ್ಥಿತಿ ಏನಾಗಿರಬೇಡ?ಸುದ್ದಿ ನೀಡುವ ಆತುರದಲ್ಲಿ ಇಲ್ಲದ ಅವಾಂತರ ಏಕೆ ಸೃಷ್ಟಿಸಬೇಕು?ಎಂದಿಗೆ ಬುದ್ಧಿ ಬರುತ್ತದೆ ಈ ಮಾಧ್ಯಮದವರಿಗೆ?

Rating
No votes yet

Comments