ಸೀತೆಯ ಕ್ಷಮಾ ಗುಣ

ಸೀತೆಯ ಕ್ಷಮಾ ಗುಣ

ಚಿತ್ರ

ಚಿತ್ರ ಕೃಪೆ:
http://madhusameer.files.wordpress.com/2010/09/sita-2.jpg

    ರಾಮ ಕಪಿಸೇನೆಯೊಡನೆ ಬಂದು ರಾವಣನೊಡನೆ ಯುದ್ಧ ಮಾಡಿ ಅವನನ್ನು ಕೊಂದಾದ ಮೇಲೆ ಹನುಮಂತನ ಮೂಲಕ ಈ ಸಮಾಚಾರವನ್ನು ಸೀತೆಗೆ ಹೇಳಿ ಕಳುಹಿಸುವನು. ಸೀತೆ ಒಂದು ವರುಷದಿಂದ ಇಂತಹ ಸಂತೋಷ ಸಮಾಚಾರಕ್ಕಾಗಿ ಕಾಯುತ್ತಿದ್ದಳು. ಈಗ ಹನುಮಂತನು ಅದನ್ನು ತಂದನು. ಸೀತೆ ಆನಂದ ಪರವಶಳಾಗುತ್ತಾಳೆ. "ಎಂತಹ ಮಾತನ್ನು ನೀನು ಹೇಳುತ್ತಿರುವೆ, ಇದಕ್ಕಾಗಿ ಕೊಡುವುದಕ್ಕೆ ನನ್ನ ಬಳಿ ಏನೂ ಇಲ್ಲ" ಎಂದು ವ್ಯಥೆ ಪಡುವಳು. ಆಗ ಹನುಮಂತ ಒಂದನ್ನು ಕೇಳುತ್ತಾನೆ. ಅವನು ಹಿಂದೆ ಬಂದಿದ್ದಾಗ ರಾಕ್ಷಸಿಯರು ಸೀತೆಗೆ ಕೊಡುತ್ತಿದ್ದ ಕಾಟವನ್ನು ನೋಡಿದ್ದ. ಅವರನ್ನು ಚೆನ್ನಾಗಿ ಹೊಡೆಯಬೇಕೆಂದಿದ್ದ. ಆದರೆ ಹಾಗೆ ಮಾಡಿದರೆ ಸೀತೆಯ ಪ್ರಾಣಕ್ಕೇ ಏನಾದರೂ ಅಪಾಯ ಬರಬಹುದು ಎಂದು ಸುಮ್ಮನೆ ಬಿಟ್ಟಿದ್ದ. ಆದರೆ ಈಗ ಅಂತಹ ಅಂಜಿಕೆಗೆ ಅವಕಾಶವಿಲ್ಲ. "ತಾಯಿ ನೀವು ಒಂದನ್ನು ಕೊಡಬಹುದು. ರಾಕ್ಷಸಿಯರಿಗೆ ಸ್ವಲ್ಪ ಬುದ್ಧಿ ಕಲಿಸಬೇಕೆಂದು ಆಸೆ, ಅದಕ್ಕೆ ನೀವು ಅವಕಾಶ ಮಾಡಿ ಕೊಡಿ" ಎನ್ನುತ್ತಾನೆ. ಆಗ ಸೀತೆ ತನ್ನ ಗೌರವಕ್ಕೆ ತಕ್ಕುದಾದ ಮಾತನ್ನು ಆಡುತ್ತಾಳೆ. ಆಗ ರಾಕ್ಷಸಿಯರು ರಾವಣನ ಆಜ್ಞಾನುವರ್ತಿಗಳಾಗಿದ್ದರು, ಅವರು ಸ್ವತಂತ್ರರಲ್ಲ, ಅವನು ಏನು ಹೇಳಿದರೆ ಅದನ್ನು ಮಾಡಬೇಕಿತ್ತು. ಅದು ಅವರ ತಪ್ಪಲ್ಲ. ಒಂದು ವೇಳೆ ಅವರೇ ಏನಾದರೂ ತಪ್ಪು ಮಾಡಿದರೂ ನಾವು ಅವರನ್ನು ಕ್ಷಮಿಸಬೇಕು. "ಮಗು ಈ ಪ್ರಪಂಚದಲ್ಲಿ ತಪ್ಪು ಮಾಡದವರು ಯಾರಿದ್ದಾರೆ? ಅವರನ್ನು ಕ್ಷಮಿಸುವುದೇ ಆರ್ಯರ ಮಹಾಗುಣ" ಎಂದು ಹೇಳಿ ಒಂದು ಸುಂದರವಾದ ಕಥೆಯನ್ನು ಹನುಮಂತನಿಗೆ ಹೇಳುತ್ತಾಳೆ.

    ಒಂದು ಕಾಡಿನಲ್ಲಿ ಒಬ್ಬ ನಡೆದು ಬರುತ್ತಿದ್ದ. ಹಿಂದಿನಿಂದ ಒಂದು ಹುಲಿ ಅವನನ್ನು ಅಟ್ಟಿಸಿಕೊಂಡು ಬಂದಿತು. ಅದರಿಂದ ಪಾರಾಗುವುದಕ್ಕಾಗಿ ಒಂದು ದೊಡ್ಡ ಮರವನ್ನು ಏರಿದ, ಅದರ ಮೇಲೆ ಒಂದು ಕರಡಿ ಇತ್ತು. ಕೆಳಗೆ ಕುಳಿತುಕೊಂಡು ಹುಲಿ ಮೇಲಿರುವ ಕರಡಿಗೆ ಹೇಳಿತು - ಅವನು ನಮ್ಮಿಬ್ಬರಿಗೂ ಶತ್ರು, ಅವನನ್ನು ನೂಕಿ ಬಿಡು, ತಿಂದು ಹೋಗುತ್ತೇನೆ ಎಂದು. ಆದರೆ ಕರಡಿ, ಮರ ನನ್ನ ಮನೆ, ಅತಿಥಿಯಂತೆ ಅವನು ನನ್ನ ಮನೆಗೆ ಬಂದಿದ್ದಾನೆ. ಅವನನ್ನು ಮೃತ್ಯುವಿನ ಬಾಯಿಗೆ ನಾನು ನೂಕುವುದಿಲ್ಲ ಎಂದು ಹೇಳಿತು. ಹುಲಿ ಕೆಳಗೇ ಕುಳಿತಿತ್ತು. ಸ್ವಲ್ಪ ಹೊತ್ತಾದ ಮೇಲೆ ಕರಡಿ ಸ್ವಲ್ಪ ತೂಕಡಿಸುವುದಕ್ಕೆ ಪ್ರಾರಂಭಿಸಿತು. ಆಗ ಹುಲಿ ಮನುಷ್ಯನಿಗೆ ಹೇಳಿತು. ನಾನು ನಿನ್ನನ್ನು ತಿನ್ನಲು ಬಂದೆ, ನೀನು ಹೇಗೋ ತಪ್ಪಿಸಿಕೊಂಡು ಹೋದೆ, ಈಗ ಕರಡಿಯನ್ನಾದರೂ ನೂಕು. ಅದನ್ನು ತಿಂದು ಹೋಗುತ್ತೇನೆ ಎಂದು. ಆಗ ಮನುಷ್ಯನು ತಾನು ಬದುಕಿದರೆ ಸಾಕೆಂದು ತೂಕಡಿಸುತ್ತಿದ್ದ ಕರಡಿಯನ್ನು ನೂಕುತ್ತಾನೆ. ಅದೊಂದು ದೊಡ್ಡ ಮರ, ಕೊಂಬೆಯಿಂದ ಕೊಂಬೆಗೆ ತಾಕಿ ಬೀಳುತ್ತಿದ್ದಾಗ ಮಧ್ಯ ಕರಡಿ ಎಚ್ಚೆತ್ತು ಒಂದು ಕೊಂಬೆಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಹಾಗೇ ನೇತಾಡುತ್ತಿತ್ತು. ಹುಲಿ ಕರಡಿಗೆ ಹೇಳಿತು. ನೋಡಿದೆಯಾ ನೀನು ಅವನನ್ನು ರಕ್ಷಿಸಿದೆ, ಅವನು ನಿನ್ನನ್ನು ಮೃತ್ಯುವಿನ ಬಾಯಿಗೆ ನೂಕಿದ. ಈಗಲಾದರೂ ಗೊತ್ತಾಯಿತೋ ಮನುಷ್ಯರು ಎಂತಹ ಕೃತಘ್ನರು ಎಂಬುದು. ಈಗ ಅವನನ್ನು ನೂಕು ಎಂದಿತು. ಆಗ ಕರಡಿ, ಅವನು ನನ್ನನ್ನು ನೂಕಿದರೂ, ನಾನು ಅವನನ್ನು ನೂಕಲಾರೆ ಎಂದಿತು. ಬಹುಶಃ ಯಾವ ಸ್ತ್ರೀಯಲ್ಲಿಯೂ ಇಲ್ಲದ ಇಂತಹ ಕ್ಷಮಾಶಕ್ತಿ ಸೀತೆಯಲ್ಲಿತ್ತು. ಆದಕಾರಣವೇ ಅವಳು ಆ ಗುಣಕ್ಕೆ ಗಣಿಯಾಗಿದ್ದಾಳೆ.
=======================================================================================================================================
    ವಿ. ಸೂ:  ಶ್ರೀ ರಾಮಕೃಷ್ಣಾಶ್ರಮದ, ಸ್ವಾಮಿ ಸೋಮನಾಥಾನಂದರು ರಚಿಸಿರುವ "ರಾಮಾಯಣ ಶೀಲ ಸೌರಭ"ದಲ್ಲಿ ಸೀತೆಯ ಬಗ್ಗೆ ಬರೆದ ಭಾಗದಿಂದ ಆಯ್ದ ಲೇಖನ ಭಾಗ ಇದು. ರಾಮಾಯಣದ ಇತರ ಪಾತ್ರಗಳಾದ ರಾಮ, ಲಕ್ಷ್ಮಣ, ಹನುಮಂತ, ರಾವಣ, ದಶರಥನ ಮೂವರು ಹೆಂಡತಿಯರ ಗುಣಗಳ ಬಗ್ಗೆ ಬೆಳಕು ಚೆಲ್ಲುವ ವಿಚಾರಗಳು ಈ ಪುಸ್ತಕದಲ್ಲಿವೆ. 

 

Rating
No votes yet

Comments