ಸುದ್ಧಿಗಳು ಮತ್ತು ಸಿದ್ಧಾಂತಗಳು
ಮನೆಯಲ್ಲಿ ಟಿ.ವಿ. ನೋಡುವುದಾದರೆ ನನ್ನ ನೆಚ್ಚಿನ ಕಾರ್ಯಕ್ರಮಗಳೆಂದರೆ ’ವಾರ್ತೆಗಳು’. ಅವುಗಳಲ್ಲಿ ನನಗೆ ಹೆಚ್ಚು ಮೆಚ್ಚಿಗೆಯಾಗುವುದು ಉದಯ ಟಿ.ವಿ ಯ ನ್ಯೂಸ್. ಒಂದು ರೀತಿಯ ಮಸಾಲೆ ಫಿಲಂ ಥರ ಯಾವುದು ಅತಿರಂಜಿತವೋ ಅತಿ ಅಮೋಘವೋ ಹಾಗೆಯೇ ಅತ್ಯಂತ ಪ್ರಸ್ತುತವೋ ಅದನ್ನೇ ತೋರಿಸುತ್ತಾರೆ. ಸುದ್ಧಿ ಒಂದು ರೀತಿಯ ಮೊನಚಿರುತ್ತದೆ. ಹೇಳಬೇಕೆಂದಿರುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಕೆಲವು ಬಾರಿ ದೇಶದ ಹಾಗೂ ಅಂತರ್ರಾಷ್ಟ್ರೀಯ ಸುದ್ಧಿಗಾಗಿ ಆಂಗ್ಲ ಭಾಷೆಯ ಚಾನೆಲ್ಗಳನ್ನು ತಿರುಗಿಸುತ್ತಿರುತ್ತೇನೆ. ಆದರೆ ಅದರಲ್ಲಿ ’ಬ್ರೇಕಿಂಗ್ ನ್ಯೂಸ್: ಸಚಿನ್ ಸೇಸ್ ಹೆ ವಿಲ್ ನಾಟ್ ಇಗ್ನೋರ್ ಮೆಂಡಿಸ್’ ಎಂದು ಮುಖ್ಯಾಂಶ ದಲ್ಲಿ ಹೇಳಿದಾಗ ಅಲ್ಲೇ ಗೊತ್ತಾಗುತ್ತದೆ ಇವ್ರು ಇನ್ನು ಕ್ರಿಕೆಟ್ ಬಗ್ಗೆ ನಮಗೆ ಅರ್ಧ ಘಂಟೆ ಕುಯ್ತಾರೆ ಅಂತ.. ಅಲ್ಲಿಗೆ ಆ ಚಾನೆಲ್ಲಿನಿಂದ ಮುಂದೆ ಹೋಗುತ್ತೇನೆ. ಅದರಲ್ಲಿ ’ಆರುಷಿ ಕೊಲೆ’ ಅದು ಇದು ಬರುತ್ತಿರುತ್ತದೆ. ಅಲ್ಲಿಂದಲೂ ಕಾಲ್ತೆಗೆಯಬೇಕಾದ ಸಂಧರ್ಭ. ಈ ರಾಷ್ಟ್ರೀಯ ವಾಹಿನಿಗಳಿಗಿಂತ ನಮ್ಮ ಕನ್ನಡದ ಚಾನೆಲ್ಗಳು ಎಷ್ಟೋ ವಾಸಿ. ಆ ಸಮಯಕ್ಕೆ ಎಷ್ಟು ಔಚಿತ್ಯವಿರುತ್ತದೋ ಅಂತದನ್ನೇ ತೋರಿಸುತ್ತಾರೆ.
---------
ನಿನ್ನೆಯದಿನ ಗುರುಗಳೊಬ್ಬರ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅಬ್ಬಾ ಅದೇನು ಪರಿಣಿತಿ, ಅದೇನು ಜ್ಞಾನ. ಅಲ್ಲಿದ್ದವರೆಲ್ಲರೂ ಸುಮಾರು ಜನ ಐಟಿ-ಬಿಟಿ ಯುವಕ ಯುವತಿಯರೇ ಇದ್ದರು. ಅವರ ಪ್ರಶ್ನೆಗಳಿಗೆ ಅದ್ಭುತವಾಗಿ ಉತ್ತರಿಸುತ್ತಿದ್ದರು. ಜೀವನದಲ್ಲಿ ಒತ್ತಡ ದಿಂದ ಹೇಗೆ ಪಾರಾಗುವುದು ಎಂಬುದರ ವಿಷಯವಾಗಿ ಅವರು ಹೇಳುತ್ತಿದ್ದರು. ಜೀವನದಲ್ಲಿ ಪಾಲಿಸಬೇಕಾದ ಕೆಲವು ನೀತಿ ನಿಯಮಗಳು, ಆಚಾರ ವಿಚಾರಗಳು, ಸಂಸ್ಕಾರಗಳ ಬಗ್ಗೆ ಹೇಳುತ್ತಿದ್ದರು.
ಮಧ್ವ ಸಿದ್ಧಾಂತ ನನಗೆ ಇಷ್ಟವಾಗುವುದು ಇದೇ ಕಾರಣಗಳಿಗಾಗಿ. ಮನಸ್ಸಿಗೆ ಬಂದ ಎಲ್ಲ ಸಂದೇಹಗಳಿಗೂ ಅದು ಉತ್ತರ ಕೊಟ್ಟಿದೆ. ಬಹಳ ಶಿಸ್ತುಬದ್ಧ ಜೀವನ, ಸರಳ-ಶುದ್ಧ ಜೀವನಕ್ಕೆ ಅದು ಒತ್ತುಕೊಡುತ್ತದೆ.
---------