ಸೆಕ್ಯುಲರಿಸಂ ಎಂಬ ಮಾಯಾಜಿಂಕೆ..

ಸೆಕ್ಯುಲರಿಸಂ ಎಂಬ ಮಾಯಾಜಿಂಕೆ..

ನಮ್ಮ ನಡುವಿನ ಇವತ್ತಿನ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಅಂದ್ರೆ ಸೆಕ್ಯುಲರಿಸಮ್ ಎನ್ನೋ ಅಪದ್ಧ ಪರಿಕಲ್ಪನೆ. ಈ ಪರಿಕಲ್ಪನೆಯ ಹುಟ್ಟು ಮತ್ತು ಇಂದು ಭಾರತೀಯ ಸಂದರ್ಭದಲ್ಲಿ ಬಳಕೆಯಾಗುತ್ತಿರುವ ರೀತಿ ತೀರಾ ವಿಚಿತ್ರವಾದುದು. ಯುರೋಪಿನಲ್ಲಿ ರಾಜ ಮತ್ತು ಚರ್ಚ್ ನ ನಡುವೆ ಅಧಿಕಾರ ಯಾರಲ್ಲಿ ಕೇಂದ್ರಿಕೃತವಾಗಿರಬೇಕೆಂಬ ವಾದವು ಮಧ್ಯಕಾಲೀನ ಸಂದರ್ಭದಲ್ಲಿ ನಡೆಯುತ್ತಿತ್ತು. ಎರಡೂ ಶಕ್ತಿಗಳು ಅಧಿಕಾರವು ತಮ್ಮಿಂದ ಕೈತಪ್ಪದಂತೆ ಹೋರಾಟ ನಡೆಸಿದವು. ಆದರೆ ಈ ಸಂಘರ್ಷವು ಬಹಳ ದಿನ ಜರುಗದೇ ಅವರಲ್ಲಿಯೇ ಒಂದು ಒಪ್ಪಂದವಾಯಿತು. ಅದುವೇ seven days circular. ಅಂದರೆ ಅಧಿಕಾರವು ವಾರದ ಆರು ದಿನ ರಾಜ ನಡೆಸತಕ್ಕದ್ದು ಭಾನುವಾರ ಈ ಅಧಿಕಾರವು ಚರ್ಚ್ ಗೆ ಸೇರಿದ್ದು ಎಂಬ ಒಡಂಬಡಿಕೆ. ಮುಂದೆ ಇದೇ ಪದವು ಸೆಕ್ಯುಲರ್ ಅಂತ ಆಗಿ ಭಾರತದಂಥ ಬಹುಸಂಸ್ಕೃತಿಗಳಿರುವ ದೇಶಕ್ಕೆ ಗೊಂದಲದ ಗೂಡಾಯಿತು. ಇದರ ದೊಡ್ದ ದೋಷವೆಂದರೆ ಇದರ ವ್ಯಾಖ್ಯಾನದಡಿಯಲ್ಲಿ ನಿರ್ದಿಷ್ಟವಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದೊಂದು ಎರಡಲಗಿನ ಖಡ್ಗದಂತೆ. ಎದುರಿಗಿರುವವರನ್ನು ಮತ್ತು ಖಡ್ಗ ಹಿಡಿದವರನ್ನು ಇಬ್ಬರನ್ನೂ ನಾಶಮಾಡುತ್ತದೆ


  ಈ ಕುರಿತು ಕೆಲ ದಿನಗಳ ಹಿಂದೆ ಒಂದು ಚೆಂದದ ಲೇಖನವನ್ನು ಮಾತುಕತೆ ಎನ್ನುವ ಪತ್ರಿಕೆಯಲ್ಲಿ ಓದಿದೆ. ಕುವೆಂಪು ವಿ ವಿ ಯ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿರುವ ಪ್ರೊ.ರಾಜಾರಾಮ್ ಹೆಗಡೆಯವರು ತಮ್ಮ ಎಂದಿನ ಸಂಶೋಧಕ ಮತ್ತು ಚಿಕಿತ್ಸಕ ದೃಷ್ಟಿಕೋನದಿಂದ ಈ ಲೇಖನ ರಚಿಸಿದ್ದಾರೆ. ಇದರ ಪೂರ್ಣಪಾಠದ ಪಿಡಿಎಫ್ ಪ್ರತಿಯನ್ನು ಅದೇ ವಿಭಾಗದ ಉಪನ್ಯಾಸಕ, ಗೆಳೆಯ ಸಂದೀಪ್ ಶೆಟ್ಟಿ ಕಳುಹಿಸಿಕೊಟ್ಟಿದ್ದರು. ನಿಮ್ಮೊಡನೆ ಈ ವಿಷಯವನ್ನು ಹಂಚಿಕೊಳ್ಳಬೇಕೆಂದು ಆಶಯದಿಂದ ಈ ಲೇಖನ. ಆ ಲೇಖನದ ಸಾರ ಮತ್ತು ರೂಪಕದಂತಿರುವ ಕೆಲವು ಸಾಲುಗಳನ್ನು ಈ ಮುಂದೆ ನೀಡಿದ್ದೇನೆ. ಅಗತ್ಯವಾದರೆ ನನ್ನ ಈ-ಮೇಲ್ ಗೆ ತಮ್ಮ ಈ-ಮೇಲ್ ವಿಳಾಸ ಕಳಿಸಿದರೆ ತಮಗೆ ಆ ಇಡೀ ಲೇಖನದ ಪಿಡಿಫ್ ಪ್ರತಿಯನ್ನು ತಮಗೆ ಕಳಿಸುವೆನು. ನನ್ನ ಈ ಮೇಲ್ : kannada@sify.com . ಇನ್ನು ಓವರ್ ಟು ಪ್ರೊ.ರಾಜಾರಾಂ ಹೆಗಡೆ


          "ಸೆಕ್ಯುಲರಿಸಂ ಬೋಧನೆ, ಪ್ರತಿಪಾದನೆ ಹಾಗೂ ಹೋರಾಟಗಳು ಹೆಚ್ಚಿದಂತೆಲ್ಲ ಕೋಮುವಾದವು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದಂತೂ ನಿದರ್ಶಿತ ಸತ್ಯ. ಇದು ತೀರಾ ಆತಂಕಕಾರಿಯಾದ ವಿಷಯ.  


 ಒಂದು ರೋಗವು ಚಿಕಿತ್ಸೆ ಮಾಡಿದಂತೆಲ್ಲ ಉಲ್ಭಣಿಸುತ್ತಲೇ ಹೋಗುತ್ತದೆ ಅಂತಿಟ್ಟುಕೊಳ್ಳಿ. ಬಹುಶ: ನಾವು ಆ ರೋಗವನ್ನು ಪತ್ತೆ ಮಾಡುವುದರಲ್ಲೇ ತಪ್ಪಿರಬಹುದು ಎಂಬ ಅಭಿಪ್ರಾಯ ಸಹಜವಾಗೇ ಮೂಡುತ್ತದೆ. ಒಮ್ಮೆ ಹಾಗೆ ನಾವು ತಪ್ಪಿದಲ್ಲಿ ಆಗ ಚಿಕಿತ್ಸಾವಿಧಾನವನ್ನು ಬದಲಿಸಿಕೊಳ್ಳಬೇಕು. ರೋಗಿಯ ಜೀವದ ಕುರಿತು ಕಾಳಜಿ ಇರುವವರು ಹೀಗೂ ಯೋಚಿಸುತ್ತಾರೆ. ಇಂಥದೊಂದು ಸಂದರ್ಭದಲ್ಲಿ ಹೀಗೊಂದಿಷ್ಟು ಜನರು ಈ ಚಿಕಿತ್ಸೆಯನ್ನು ಬದಲಿಸಬೇಕೆಂಬ ಸಲಹೆ ನೀಡುತ್ತಾರೆ ಅಂತಿಟ್ಟುಕೊಳ್ಳಿ. ರೋಗಿಯ ಬಂಧುಗಳಿಗೆ ಅದು ಅಪಾಯಕಾರಿಯಾದ ಸಲಹೆಯಾಗಿ ಕಾಣಿಸಬಹುದು. ಆ ಚಿಕಿತ್ಸೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯರ ವರ್ಗಕ್ಕಂತೂ ಇಂಥ ವಿಚಾರಗಳು ಪಥ್ಯವಾಗಲು ಕಾರಣವೇ ಇಲ್ಲ. ಬಹುಶಃ ಸೆಕ್ಯುಲರಿಸಂ ಸಂದರ್ಭದಲ್ಲೂ ಹೆಚ್ಚು ಕಡಿಮೆ ಇದೇ ರೀತಿಯಾಗಿದೆ. ಈಗ ಇಪ್ಪತ್ತು ವರ್ಷದ ಹಿಂದೆ ಎಡಪಂಥೀಯರಿಂದಲೇ ಪ್ರಭಾವಿತವಾಗಿದ್ದ ಕಟ್ಟರ್ ಸೆಕ್ಯುಲರ್ ಪಂಥವು ದೇವರು ಧರ್ಮ ಮುಂತಾದವುಗಳ ಕುರಿತು ಮರುಚಿಂತನೆ ನಡೆಸಿದವರನ್ನೂ ಪ್ರಚ್ಛನ್ನ ಕೋಮುವಾದಿಗಳೆಂದೇ ಪರಿಗಣಿಸಿತ್ತು. ಏಕೆಂದರೆ ಈ ಸೆಕ್ಯುಲರಿಸಂನ ಹಡಪದಲ್ಲಿ ಕೋಮು ಸೌಹಾರ್ದವೊಂದೇ ಇರುವುದಿಲ್ಲ, ಅದಕ್ಕೂ ಪ್ರಭಾವಿಯಾದ, ಸೌಹಾರ್ದದ ಕಾರ್ಯಕ್ರಮವನ್ನೇ ಹಾಳುಗೆಡವಬಲ್ಲ ಇತರ ಪೂರ್ವಗ್ರಹೀತಗಳೂ, ಪೂರ್ವಾಗ್ರಹಗಳೂ ಇವೆ. ಏಕೆಂದರೆ ಸೆಕ್ಯುಲರಿಸಂ ಮೂಲತಃ ಪ್ರಭುತ್ವದ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಹುಟ್ಟಿಕೊಂಡಿದ್ದೇ ಹೊರತೂ ಸೌಹಾರ್ದತೆಯನ್ನು ಬೋಧಿಸಲಿಕ್ಕಲ್ಲ . ಆದರೆ ಈಗ ಭಾರತೀಯ ಸಂದರ್ಭದಲ್ಲಿ ಅದರ ಲಕ್ಷ್ಯ ಬದಲಾಗಿದೆ.   ಅನೇಕರು ಇಂಥ ಮಿತಿಗಳನ್ನು ಅರಿತುಕೊಂಡು ವಿಚಾರಗಳನ್ನು ಬದಲಿಸಿಕೊಂಡಿದ್ದಾರೆ. ಅವರ ಕಳಕಳಿಯ ಕುರಿತು ಎರಡು ಮಾತಿಲ್ಲ. ಆದರೆ ಚಿಕಿತ್ಸೆಯನ್ನು ಎಷ್ಟೇ ಸುಧಾರಿಸಿದರೂ ಪ್ರಯೋಜನ ಕಾಣುತ್ತಿಲ್ಲ. ಅಂದರೆ ರೋಗವೇ ಬೇರೆಯ ರೀತಿಯದಾಗಿದೆಯೆ? ಕೆಲವೊಮ್ಮೆ ಔಷಧಿಯೇ ರೋಗವನ್ನು ಸೃಷ್ಟಿಸುವ ಸಂಭವವೂ ಇರುತ್ತದೆ."   

Rating
No votes yet

Comments