ಹೇಳದೆ ಕಾರಣ ಹೋದೆಯಾ...

ಹೇಳದೆ ಕಾರಣ ಹೋದೆಯಾ...

ಮತ್ತೆ ಮುಂಗಾರು...ಕನ್ನಡದ ಹೊಸಬರ ಚಿತ್ರವಿದು. ಮುಂಗಾರು ಮಳೆಯಂತಹ ಚಿತ್ರಕೊಟ್ಟ ಅದೇ ಇ.ಕೃಷ್ಣಪ್ಪ ಕನ್ನಡಿಗರಿಗೆ ಮತ್ತೆ ಮುಂಗಾರು ಮಳೆಯ ಸಿಂಚನ ಕೊಡಲಿದ್ದಾರೆ. ಆದ್ರೆ, ಈ ಚಿತ್ರದಲ್ಲಿಯ ಮಳೆ ಎಲ್ಲಿ ಬೇಕೊ ಅಲ್ಲಿ ಮಾತ್ರವಿರುತ್ತದೆ.ಆರಂಭದಿಂದ ಹಿಡಿದು ಅಂತ್ಯದವರೆಗೂ ಮಳೆಯ ತಣ್ಣನೆಯ ಅನುಭವ  ಆಗ್ತಾನೆ ಇರುತ್ತದೆ. ಆದ್ರೂ, ಮಳೆಯ ಕಾನ್ಸೆಪ್ಟ್ ನ  ಈ ಚಿತ್ರದಲ್ಲಿ ಕೆಲವು ಗಂಭೀರ ವಿಷಯಗಳೂ ಇವೆ.ಅವುಗಳೇನು ಅನ್ನೊದು ಇನ್ನಷ್ಟೆ ಗೊತ್ತಾಗಬೇಕಿದೆ.


ಸದ್ಯ ವಿಷಯ ಇದಲ್ಲ.ಚಿತ್ರದ ಹಾಡಿನದ್ದು.ಸುಮಾರು ಆರು ಹಾಡುಗಳು ಮತ್ತೆ ಮುಂಗಾರು ಚಿತ್ರದಲ್ಲಿವೆ. ಒಂದು ಪ್ಯಾತೋ ಸಾಂಗ್ ಸಹ ಇದೆ. ಹಿಂದಿಯ ಗಾಯಕಿ ಆಶಾ ಭೋಂಸ್ಲೆ ಇದಕ್ಕೆ ಧ್ವನಿಯಾಗಿದ್ದಾರೆ. ಕನ್ನಡವೇ ಬರದಿರುವ ಆಶಾ ದ್ವಾರ್ಕಿ ರಾಘವ್ ಬರೆದ ಹಾಡಿಗೆ ಭಾವ ತುಂಬಿದ್ದಾರೆ. ಮಳೆಯ ಜೊತೆ..ಜೊತೆಗೆ ಈ ಹಾಡು ಮನದಲ್ಲಿ ವಿರಹದ ನೋವು ಬಿಡುತ್ತದೆ.ಮಳೆ ಬಂದು ಹೋದ ಮೇಲೂ ಹಾಡು ಆಗಾಗ ಕಾಡುವಂತಿದೆ. ಹೀಗಂತ ಚಿತ್ರ ತಂಡವೇ ಸಿದ್ಧಗೊಳಿಸಿದ್ದ 20 ನಿಮಿಷದ ಪ್ರಮೋಷ್ ನ ದೃಶ್ಯಗಳು ಇಂತಹ ಒಂದು ಪುಟ್ಟ ಸೆಳೆತವನ್ನ ಕಟ್ಟಿಕೊಡುತ್ತವೆ.ಇಲ್ಲಿ ಆಶಾ ಹಾಡಿದ ಗೀತೆ ಮತ್ತೆ..ಮತ್ತೆ ಕಾಡುತ್ತದೆ ಬಿಟ್ಟು ಹೋದ ಕಾರಣವ ಕೇಳುತ್ತದೆ...


ಹೇಳದೆ ಕಾರಣ ಹೋದೆಯಾ...ಬಹುದೂರ....



ಈ ರೀತಿಯ ಪಲ್ಲವಿಯ ಹಾಡು ರವಿಬೆಳೆಗೆರೆ ಬರೆದ "ಹೇಳಿ ಹೋಗು ಕಾರಣ' ಕಾದಂಬರಿಯನ್ನ ನೆನಪಿಸುತ್ತದೆ. ಬಿ.ಆರ್.ಲಕ್ಷ್ಮಣ ರಾವ್ ರಚಿಸಿದ ಹೇಳಿ ಹೋಗು ಕಾರಣ ಕವಿತೆ ನೆನಪಿಗೆ ಬರುತ್ತದೆ.ಇದೇ ಗೀತೆಗೆನೇ ಸಂಗೀತ ನೀಡಿ ತಾವೇ ಹಾಡಿದ್ದ ಸಿ.ಅಶ್ವಥ್  ಅವರ ಧ್ವನಿಯೂ ಪದೇ ಪದೇ ಕೇಳಬೇಕೆನಿಸುತ್ತದೆ.


ಹೇಳಿ ಹೋಗು ಕಾರಣ ಹೋಗುವಾ ಮೊದಲು
ನನ್ನ ಬಾಳಿನಿಂದ ದೂರವಾಗುವ ಮೊದಲು..


ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ..


ಇನ್ನಷ್ಟು ಸಾಲುಗಳು ಈ ರಚನೆಯಲ್ಲಿವೆ. ಆದ್ರೆ, ಡೈರೆಕ್ಟರ್  ರಾಘವ್ ಅವರ ಮೊದಲ ಸಾಲಿಗೆ ಯಾರ ಬರಹ ಪ್ರೇರಣೆಯಾಗಿದೆಯೋ.ಇದಂತು ಗೊತ್ತಿಲ್ಲ. ಮತ್ತೆ ಮುಂಗಾರು ಚಿತ್ರದ ಗೀತೆಗಳು ಬಹುತೇಕ ಕೇಳುವಂತಿವೆ.ಚಿತ್ರದ ಆಡಿಯೋಗಳು ಇನ್ನು ರಿಲೀಜ್ ಆಗಿಲ್ಲ. ಆದರೆ,ಈಗಾಗಲೇ ನಮಗೆ ತೋರಿದ ಹಾಡಿನ ತುಣುಕುಗಳನ್ನ ಆಧಾರಿಸಿ ಹಾಡುಗಳು ಚೆನ್ನಾಗಿವೆ ಅಂತ ಹೇಳಬಹುದು. ಕೇವಲ ಆಶಾ ಭೋಂಸ್ಲೆ ಅಲ್ಲ, ಹರಿಹರನ್, ಶ್ರೇಯಾ ಘೋಷಾಲ್, ಕನ್ನಡದ ವಿಜಯ್ ಪ್ರಕಾಶ್ ಸಹ ಮತ್ತೆ ಮುಂಗಾರು ಚಿತ್ರದಲ್ಲಿಯ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇವುಗಳಲ್ಲಿ ಡಾಕ್ಟರ್ ನಾಗೇಂದ್ರ ಪ್ರಸಾದ್ ಬರೆದ ಗೀತೆ ತುಂಬಾನೆ ಚೆನ್ನಾಗಿದೆ.


ಕಾರಣ ಹೇಳದೆ ಕಾಡುವ ಹಾಡುಗಳು ಮತ್ತೊಂದು ಹಾಡು ಗುಂಗು ಹಿಡಿಸುವವರೆಗೂ ಇರುತ್ತವೆ. ಸದ್ಯ ಹೇಳದೆ ಕಾರಣ ಹೋದೆಯಾ ಹಾಡು ನನ್ನ ಕಾಡುತ್ತಿದೆ..


ರೇವನ್ ಪಿ.ಜೇವೂರ್

Rating
No votes yet

Comments