೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

೨೩. ಶ್ರೀ ಲಲಿತಾ ಸಹಸ್ರನಾಮ ೫೫ರಿಂದ ೫೮ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೫೫ರಿಂದ ೫೮

Sumeru-madhya-śṛṅgasthā सुमेरु-मध्य-शृङ्गस्था (55)

೫೫. ಸುಮೇರು-ಮಧ್ಯ-ಶೃಂಗಸ್ಥಾ

       ಈ ನಾಮದಿಂದ ೬೩ನೇ ನಾಮದವರೆಗೆ ದೇವಿಯ ನಿವಾಸ ಸ್ಥಾನದ ಕುರಿತಾದ ವರ್ಣನೆಯಿದೆ.

ಸುಮೇರು ಎಂದರೆ ಮೇರು ಎನ್ನುವ ಪರ್ವತಗಳ ಮಧ್ಯದಲ್ಲಿರುವ ಎಂದರ್ಥ. ದೇವಿಯು ಮೇರು ಪರ್ವತಗಳ ನಡುವಿನಲ್ಲಿ ವಾಸಿಸುತ್ತಾಳೆ. ವಾಗ್ದೇವಿಯರು ೫೨ನೇ ನಾಮದಲ್ಲಿ ಶ್ರೀ ಲಲಿತೆಯು ಶಿವನ ಎಡತೊಡೆಯ ಮೇಲೆ ಕುಳಿತಿರುವುದಾಗಿ ಹೇಳುತ್ತಾರೆ, ಇದು ಸ್ಥಿರ ಮತ್ತು ಕ್ರಿಯಾಶೀಲ ಶಕ್ತಿಗಳ ಸಂಯೋಗವಾಗಿದೆ. ಈಗ ವಾಗ್ದೇವಿಗಳು ದೇವಿಯ ಅರಮನೆಯ ಕುರಿತಾಗಿ ಚರ್ಚಿಸುತ್ತಿದ್ದಾರೆ. ಮೇರು ಪರ್ವತಗಳ ಸಾಲಿನಲ್ಲಿ ಮೂರು ಶಿಖರಗಳಿರುತ್ತವೆ ಮತ್ತು ಅವು ಮೂರು ಸೇರುವಂತೆ ಒಂದು ಗೆರೆಯನ್ನು ಎಳೆದರೆ ಒಂದು ತ್ರಿಕೋಣದ ಆಕಾರವು ಸಿಗುತ್ತದೆ. ಈ ಮೂರು ಪರ್ವತಗಳ ಮಧ್ಯೆ ಅವೆಲ್ಲುವುಗಳಿಗಿಂತ ಉನ್ನತವಾದ ಮತ್ತೊಂದು ಶಿಖರವಿದ್ದು ಅದರಲ್ಲಿ ಲಲಿತಾಂಬಿಕೆಯು ನಿವಸಿಸುತ್ತಾಳೆ. ದೂರ್ವಾಸ ಮುನಿಯು ತನ್ನ ಮೇರು ಕೃತಿಯಾದ ಲಲಿತಾಸ್ತವರತ್ನದಲ್ಲಿ, "ನಾನು ಬ್ರಹ್ಮ, ವಿಷ್ಣು, ಶಿವ ಇವರು ವಾಸಿಸುವ ಮೂರು ಶಿಖರಗಳಿಗೆ ತಲೆಬಾಗುತ್ತೇನೆ. ಈ ಎಲ್ಲ ಶಿಖರಗಳ ಮಧ್ಯೆ ಈ ಮೂರು ಶಿಖರಗಳಿಗಿಂತ ಎತ್ತರವಾದ ಶಿಖರವಿದೆ; ಆ ಶಿಖರವನ್ನು ಬಂಗಾರದ ಕಿರಣಗಳು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತಿವೆ ಅದನ್ನು ನಾನು ಪೂಜಿಸುತ್ತೇನೆ" ಎನ್ನುತ್ತಾನೆ.

       ಬಹುಶಃ ಇದು ಶ್ರೀ ಚಕ್ರದ ವರ್ಣನೆಯಿರಬೇಕು. ಶ್ರೀ ಚಕ್ರದ ಮಧ್ಯದಲ್ಲಿ ಒಂದು ತ್ರಿಕೋಣವಿದ್ದು ಆ ತ್ರಿಕೋಣದ ಮಧ್ಯೆ ಬಿಂದುವೆಂದು ಕರೆಯಲ್ಪಡುವ ಒಂದು ಚುಕ್ಕೆಯಿದೆ, ಅದರಲ್ಲಿ ಶ್ರೀ ಲಲಿತೆಯು ತನ್ನ ಸಂಗಾತಿಯಾದ ಮಹಾ ಕಾಮೇಶ್ವರನೊಟ್ಟಿಗೆ ವಾಸಿಸುತ್ತಾಳೆ. ೫೨ನೇ ನಾಮಾವಳಿಯು ಈ ಬಿಂದುವಿನ ಮೇಲೆ ಧ್ಯಾನ ಮಾಡುವಂತೆ ತಿಳಿಸುತ್ತದೆ.

Śrīman-nagara-nāyikā श्रीमन्-नगर-नायिका (56)

೫೬. ಶ್ರೀಮನ್-ನಗರ-ನಾಯಿಕಾ

        ದೇವಿಯು ಮಂಗಳಕರವಾದ ಮತ್ತು ಸಂಪನ್ನವಾದ ಶ್ರೀನಗರವೆಂಬ ಪಟ್ಟಣದ ಒಡತಿ. ಈ ಶ್ರೀನಗರದ ಕುರಿತಾಗಿ ಎರಡು ರೀತಿಯ ಅಭಿಪ್ರಾಯಗಳಿವೆ. ಒಂದು ದೂರ್ವಾಸನ ಲಲಿತಾಸ್ತವರತ್ನದಲ್ಲಿ ಸಿಗುತ್ತದೆ ಮತ್ತೊಂದು ’ರುದ್ರ ಯಾಮಲ’ (ಶಿವನಿಂದ ಪಾರ್ವತಿಗೆ ಹೇಳಲ್ಪಟ್ಟದ್ದು) ಕೃತಿಯಲ್ಲಿದೆ. ಮೊದಲನೆಯ ಕೃತಿಯು ಶ್ರೀ ನಗರವು ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟಿತೆಂದು ಹೇಳುತ್ತದೆ. ರುದ್ರ ಯಾಮಲವು ಶ್ರೀ ನಗರವು ಪಾಲ್ಗಡಲ ನಡುವೆ ಇರುವ ರತ್ನ ದ್ವೀಪದಲ್ಲಿ (ರತ್ನಗಳಿಂದ ಮಾಡಲ್ಪಟ್ಟ ದ್ವೀಪದಲ್ಲಿ) ಇದೆ ಎನ್ನುತ್ತದೆ. ಈ ಶ್ರೀನಗರದ ಮಧ್ಯದಲ್ಲಿ ಮತ್ತೊಂದು ಪಟ್ಟಣವಿದ್ದು ಅದನ್ನು ಶ್ರೀ ವಿದ್ಯಾ ಎನ್ನುತ್ತಾರೆ ಮತ್ತು ಅದಕ್ಕೆ ೨೫ ಗೋಡೆಗಳಿವೆ; ಒಂದೊಂದು ಗೋಡೆಯು ಒಂದೊಂದು ತತ್ವವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ಶ್ರೀ ಲಲಿತೆಯು ಅಂತಹ ಸ್ಥಳದ ರಾಣಿಯಾಗಿದ್ದು, ಅಲ್ಲಿಂದ ಆಕೆಯು ತನ್ನ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಕೈಗೊಳ್ಳುತ್ತಾಳೆ.

Cintāmaṇi-gṛuhāntasthā चिन्तामणि- गॄहान्तस्था (57)

೫೭. ಚಿಂತಾಮಣಿ-ಗೃಹಾಂತಸ್ಥಾ

       ದೇವಿಯು ಚಿಂತಾಮಣಿಯೆಂಬ ಅನರ್ಘ್ಯ ರತ್ನಗಳಿಂದ ಕಟ್ಟಲ್ಪಟ್ಟ ಅರಮನೆಯಲ್ಲಿ ವಾಸಿಸುತ್ತಾಳೆ. ಈ ರತ್ನವು ನಾವು ಬಯಸಿದ್ದೆಲ್ಲವನ್ನೂ ಕೊಡುತ್ತದಂತೆ. ಈ ಅರಮನೆಯು ಶ್ರೀನಗರದ ಉತ್ತರ ದಿಕ್ಕಿನಲ್ಲಿದೆ. ಎಲ್ಲಾ ದೇವಾನುದೇವತೆಗಳು ಈ ಸ್ಥಳಕ್ಕೆ ಅವಳನ್ನು ಪೂಜಿಸಲು ಹೋಗುತ್ತಾರೆ. ಈ ಸ್ಥಳವು ಎಲ್ಲಾ ಮಂತ್ರಗಳ ಉಗಮಸ್ಥಾನವೆಂದು ತಿಳಿಯಲಾಗಿದೆ. ಈ ಸ್ಥಳವನ್ನು ಪೂಜಿಸುವುದರಿಂದ ಅದು ಎಲ್ಲಾ ವಿಧವಾದ ಮಾನಸಿಕ ಖಾಯಿಲೆ ಅಥವಾ ದೋಷಗಳನ್ನು ಪರಿಹರಿಸುತ್ತದೆ.

Pañca-brahmāsana-sthitā पञ्च-ब्रह्मासन-स्थिता (58)

೫೮. ಪಂಚ-ಬ್ರಹ್ಮಾಸನ-ಸ್ಥಿತಾ

       ದೇವಿಯು ಐವರು ಬ್ರಹ್ಮರಿಂದ ಮಾಡಲ್ಪಟ್ಟ ಸಿಂಹಾಸನದ ಮೇಲೆ ಆಸೀನಳಾಗಿದ್ದಾಳೆ. ಈ ಐವರು ಬ್ರಹ್ಮರೆಂದರೆ, ಬ್ರಹ್ಮ, ವಿಷ್ಣು, ರುದ್ರ, ಈಶಾನ ಮತ್ತು ಸದಾಶಿವ (ಕೆಲವರು ಬ್ರಹ್ಮ, ವಿಷ್ಣು, ಶಿವ, ಮಹಾದೇವ ಮತ್ತು ಸದಾಶಿವ ಎಂದು ಹೇಳುತ್ತಾರೆ). ಶಿವ, ಮಹಾದೇವ, ಸದಾಶಿವ, ಕಾಮೇಶ್ವರ ಇವು ಶಿವನ ವಿವಿಧ ರೂಪಗಳು ಮತ್ತು ಪ್ರತಿಯೊಂದು ರೂಪವು ಬೇರೆ ಬೇರೆ ಕ್ರಿಯೆಗಳನ್ನು ಸೂಚಿಸುತ್ತವೆ. ಸೌಂದರ್ಯಲಹರಿಯ ೯೨ನೇ ಶ್ಲೋಕವು, "ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಇವುರುಗಳು ನಿನ್ನ ಸಿಂಹಾಸನದ ಕಾಲುಗಳಾಗಿದ್ದರೆ, ಸದಾಶಿವನು ನಿನ್ನ ಸಿಂಹಾಸನದ ಆಸನವಾಗಿದ್ದಾನೆ" ಎನ್ನುತ್ತದೆ. ಈ ನಾಮವು ಅವಳು ಈ ಬ್ರಹ್ಮಾಂಡದ ಪರಮ ಅಧಿಕಾರಿಣಿ ಎಂದು ಸಾರುತ್ತದೆ. ಖಂಡಿತವಾಗಿಯೂ ವಾಗ್ದೇವಿಗಳು ಬ್ರಹ್ಮ, ವಿಷ್ಣು ಮೊದಲಾದವರು ಅವಳ ಸಿಂಹಾಸನದ ಕಾಲುಗಳಾಗಿ ಸದಾಶಿವನು ಅವಳು ಕುಳಿತುಕೊಳ್ಳುವ ಆಸನವಾಗಿದ್ದಾನೆಂದು ಹೇಳಿರಲಾರರು. ಆದ್ದರಿಂದ ಈ ಪಂಚಬ್ರಹ್ಮದ ಕುರಿತಾಗಿ ಮತ್ತೊಂದು ವ್ಯಾಖ್ಯಾನವು ಇದೆ. ಅದರ ಪ್ರಕಾರ ಇವುಗಳು ಪಂಚಮಹಾಭೂತಗಳಾಗಿವೆ. ನಮ್ಮಲ್ಲಿ ಮೂಲಾಧಾರದಿಂದ ಹಿಡಿದು ವಿಶುದ್ಧಿಯವರೆಗೆ ಐದು ಚಕ್ರಗಳಿದ್ದು ಅವು ಒಂದೊಂದು ಒಂದು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ. ಮೂಲಾಧಾರವು ಭೂಮಿಯಾದರೆ, ಸ್ವಾಧಿಷ್ಠಾನವು ನೀರಾಗಿದೆ, ಮಣಿಪೂರಕವು ಅಗ್ನಿಯನ್ನು ಪ್ರತಿನಿಧಿಸುತ್ತದೆ, ಅನಾಹತವು ವಾಯುವಾಗಿದ್ದರೆ, ವಿಶುದ್ಧವು ಆಕಾಶ ಅಥವಾ ಮೂಲಧಾತುವಾಗಿದೆ. ಲಲಿತಾಂಬಿಕೆಯು ಈ ಐದು ಮೂಲಧಾತುಗಳ ಮೇಲೆ ಕುಳಿತಿದ್ದಾಳೆ ಮತ್ತು ಪಂಚಭೂತಗಳಲ್ಲಿ ನಾಲ್ಕು ಅವಳ ಸಿಂಹಾಸನದ ಕಾಲುಗಳಾಗಿದ್ದರೆ ಐದನೆಯದು ಅವಳು ಕೂರುವ ಆಸನವಾಗಿದೆ. ಈ ವಿವರಣೆಯು ಹೆಚ್ಚು ಸಮಂಜಸವೆನಿಸುತ್ತದೆ; ಏಕೆಂದರೆ ದೇವಿಯು ಸೃಷ್ಟಿಕಾರಕಳಾಗಿದ್ದು, ಸೃಷ್ಟಿಯು ಈ ಐದು ಮೂಲಧಾತುಗಳು ಒಳಗೊಳ್ಳುವುದರಿಂದ ಮಾತ್ರವೇ ಸಾಧ್ಯವಾಗುತ್ತದೆ. ಈ ಐದು ಚಕ್ರಗಳನ್ನು ದಾಟಿದ ನಂತರ ಸಾಧಕನು ಆಜ್ಞಾ ಚಕ್ರಕ್ಕೆ ಹೋಗುತ್ತಾನೆ; ಇಲ್ಲಿ ಮನಸ್ಸನ್ನು ನಿಗ್ರಹಿಸಿಕೊಂಡು ಅವನು ಸಹಸ್ರಾರಕ್ಕೆ ಮುಂದುವರೆಯುತ್ತಾನೆ; ಅಲ್ಲಿ ಶಿವ ಮತ್ತು ಶಕ್ತಿಯರ ಸಂಯೋಗವು ಉಂಟಾಗುತ್ತದೆ. ಈ ವಿವರಣೆಯು ಈ ಸಹಸ್ರನಾಮದ ಇತರೇ ಕೆಲವು ನಾಮಗಳ ವಿಶ್ಲೇಷಣೆಗೆ ಪೂರಕವಾಗಿದೆ. ೨೪೯ ಮತ್ತು ೯೪೭ನೇ ನಾಮಗಳು ಕೂಡಾ ಇದೇ ತತ್ವದ ಕುರಿತಾಗಿ ಹೇಳುತ್ತವೆ.

******

        ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 55-58 http://www.manblunder.com/2009/07/lalitha-sahasranamam-55-58.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)