೨೮. ಶ್ರೀ ಲಲಿತಾ ಸಹಸ್ರನಾಮ ೬೮ ಮತ್ತು ೬೯ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೮, ೬೯
Cakrarāja-rathārūḍha-sarvāyudha-pariṣkṛtā चक्रराज-रथारूढ-सर्वायुध-परिष्कृता (68)
೬೮. ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ
ಚಕ್ರರಾಜವೆಂದರೆ ಲಲಿತಾಂಬಿಕೆಯ ರಥವಾಗಿದ್ದು ಅದರಲ್ಲಿ ಅವಳು ಎಲ್ಲಾ ವಿಧವಾದ ಆಯುಧಗಳನ್ನಿಟ್ಟುಕೊಂದು ಪ್ರಯಾಣಗೈಯ್ಯುತ್ತಾಳೆ. ಇಲ್ಲಿ ಆಯುಧಗಳೆಂದರೆ ಶುದ್ಧವಿದ್ಯಾ ಅಥವಾ ಅಪ್ಪಟವಾದ ಜ್ಞಾನವೆನ್ನುವುದೇ ಸಾಮಾನ್ಯವಾಗಿ ಕರೆಯಲ್ಪಡುವ ಪರಬ್ರಹ್ಮನನ್ನು ಅರಿಯುವ ಜ್ಞಾನ. ಈ ರಥಕ್ಕೆ ಒಂಭತ್ತು ಅಂತಸ್ತುಗಳಿವೆ (ಮಜಲುಗಳಿವೆ). ಈ ಚಕ್ರರಾಜದೊಂದಿಗೆ ಇನ್ನೂ ಎರಡು ರಥಗಳು ಅದರೊಂದಿಗೆ ಸಾಗುತ್ತವೆ ಅವುಗಳ ಕುರಿತಾದ ಚರ್ಚೆಯನ್ನು ಮುಂದಿನ ಎರಡು ನಾಮಗಳಲ್ಲಿ ನೋಡೋಣ. ಇಲ್ಲಿ ಚಕ್ರರಾಜವೆಂದರೆ ಲಲಿತಾಂಬಿಕೆಯ ಆವಾಸ ಸ್ಥಾನವಾಗಿರುವ ಶ್ರೀಚಕ್ರ. ಪರಿಷ್ಕೃತಾ ಎಂದರೆ ಅಲಂಕರಿಸಿಲ್ಪಟ್ಟ ಎಂದು ಅರ್ಥ.
ಶ್ರೀ ಚಕ್ರದ ಕುರಿತಾದ ಸಂಕ್ಷಿಪ್ತ ಜ್ಞಾನವು ಈ ನಾಮವನ್ನು ಅರ್ಥಮಾಡಿಕೊಳ್ಳಲು ಅವಶ್ಯಕವಾಗಿದೆ. ಶ್ರೀ ಚಕ್ರವು ಒಂಭತ್ತು ಭಾಗಗಳನ್ನು ಅಥವಾ ತ್ರಿಕೋಣಗಳನ್ನು ಹೊಂದಿದೆ ಅವುಗಳಲ್ಲಿ ಐದನ್ನು ಶಕ್ತಿ ಚಕ್ರಗಳೆಂದೂ ಮತ್ತು ನಾಲ್ಕನ್ನು ಶಿವ ಚಕ್ರಗಳೆಂದೂ ವಿಭಾಗಿಸಲಾಗಿದೆ. ಮೇಲ್ಮುಖವಾಗಿರುವ ತ್ರಿಭುಜಗಳನ್ನು ಶಿವ ಚಕ್ರಗಳೆಂದು ಮತ್ತು ಕೆಳಮುಖವಾಗಿರುವ ತ್ರಿಭುಜಗಳನ್ನು ಶಕ್ತಿ ಚಕ್ರಗಳೆಂದೂ ತಿಳಿಯಬೇಕು. ಈ ಒಂಭತ್ತು ತ್ರಿಕೋಣಗಳು ಪರಸ್ಪರ ಸಂಧಿಸುವುದರಿಂದ ಅವುಗಳಿಂದ ೪೪ ತ್ರಿಕೋಣಗಳು ಉಂಟಾಗುತ್ತವೆ ಮತ್ತು ಅವುಗಳಲ್ಲಿ ಶ್ರೀ ಲಲಿತೆ ಮತ್ತು ಇತರ ದೇವಿಯರು ಸೇರಿ ೪೪ ದೇವಿಯರು ಹಾಗೂ ೭೯ ಯೋಗಿನಿಯರು ಅಥವಾ ಉಪದೇವರುಗಳು ವಾಸಿಸುತ್ತಾರೆ. ಈ ಶ್ರೀ ಚಕ್ರದಲ್ಲಿ ಎಲ್ಲಾ ದೇವಾನುದೇವತೆಗಳು ನಿವಸಿಸುವುದರಿಂದ ಶ್ರೀ ಚಕ್ರದಲ್ಲಿ ಯಾವುದೇ ದೇವ-ದೇವಿಯರ ಪೂಜೆಯನ್ನು ಮಾಡಬಹುದೆಂದು ಹೇಳಲಾಗಿದೆ. ೯೯೬ನೇ ನಾಮಾವಳಿಯಾದ ಶ್ರೀ ಚಕ್ರರಾಜ ನಿಲಯಾ ಎನ್ನುವುದು ಶ್ರೀ ಲಲಿತೆಯ ನಿವಾಸ ಸ್ಥಾನವು ಶ್ರೀ ಚಕ್ರವೆನ್ನುವುದನ್ನು ಖಚಿತ ಪಡಿಸುತ್ತದೆ.
ಚಕ್ರರಾಜವೆಂದರೆ ಮೂಲಾಧಾರದಿಂದ ಆಜ್ಞಾ ಚಕ್ರದವರೆಗಿನ ಆರು ಚಕ್ರಗಳೆಂದೂ ಅರ್ಥೈಸಬಹುದು. ರಥವೆಂದರೆ ಬುನಾದಿ ಎನ್ನುವ ಅರ್ಥವೂ ಇದೆ. ಆರೂಢ ಎಂದರೆ ನಿಯಂತ್ರಣ ಮತ್ತು ಸರ್ವಾಯುಧವೆಂದರೆ ಅಪ್ಪಟವಾದ ಜ್ಞಾನ ಅದನ್ನೇ ಶುದ್ಧವಿಧ್ಯಾ ಎಂದು ಕರೆಯುತ್ತಾರೆ. ಈ ಆರು ಚಕ್ರಗಳು ಶುದ್ಧ ಜ್ಞಾನವನ್ನು ಪಡೆಯಲು ಬುನಾದಿಯಾಗಿದ್ದು ಆ ಜ್ಞಾನದ ಮೂಲಕ ಆರನೇ ಚಕ್ರದಲ್ಲಿ ಮನಸ್ಸನ್ನು ನಿಯಂತ್ರಿಸಬಹುದು. ಐದು ಅತೀಂದ್ರಿಯ ಚಕ್ರಗಳು ಅಥವಾ ಮನೋಚಕ್ರಗಳು, ಪಂಚೇಂದ್ರಿಯಗಳೆಂದು ಕರೆಯಲ್ಪಡುವ ಐದು ಕರ್ಮೇಂದ್ರಿಯಗಳನ್ನು ಪ್ರತಿನಿಧಿಸುತ್ತವೆ. ಮತ್ತು ಅರನೆಯದಾದ ಆಜ್ಞಾ ಚಕ್ರವು ಮನಸ್ಸನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಪಂಚೇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಯಂತ್ರಿಸಲು ಶುದ್ಧವಾದ ಜ್ಞಾನವು ಅವಶ್ಯಕ. ಯಾವಾಗ ಈ ಚಕ್ರಗಳು ನಿಯಂತ್ರಣದಲ್ಲಿರುತ್ತವೋ ಆಗ ಸಿದ್ಧಿಗಳು ನಮಗೆ ಲಭ್ಯವಾಗುತ್ತವೆ. ಯಾವಾಗ ನಾವು ಶುದ್ಧ ವಿದ್ಯೆಯ ಬಗ್ಗೆ ಚರ್ಚಿಸುತ್ತೆವೆಯೋ ಈ ಸಂದರ್ಭದಲ್ಲಿ ಸ್ವಲ್ಪ ಶಿವ ಸೂತ್ರದ ೧.೨೧ ಶ್ಲೋಕವು ಏನು ಹೇಳುತ್ತದೆ ಎನ್ನುವುದನ್ನು ನೋಡೋಣ. ಅದು, "ಶುದ್ಧವಿದ್ಯೋದಯಾಚ್ಚಕ್ರೇಶತ್ವ ಸಿದ್ಧಿಃ" ಎಂದು ಹೇಳುತ್ತದೆ; ಇದರರ್ಥ ಶುದ್ಧವಿದ್ಯೆಯ (ಜ್ಞಾನದ) ಮೂಲಕವಷ್ಟೇ ನಾವು ಶಕ್ತಿಯ ಮೇಲೆ ಪ್ರಭುತ್ವವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಇಲ್ಲಿ ಶಕ್ತಿ ಎಂದರೆ ಚಕ್ರಗಳು. ಒಬ್ಬನು ಚಕ್ರಗಳ ಮೇಲೆ ಜ್ಞಾನದ ಮೂಲಕ ಹಿಡಿತವನ್ನು ಸಾಧಿಸಿದರೆ ಅವನು ಶಿವನ ಸ್ಥಿತಿಯನ್ನು ಹೊಂದುತ್ತಾನೆ. ಶಿವನ ಸ್ಥಿತಿ ಎಂದರೆ ಶಿವನೊಂದಿಗೆ ತಾದಾತ್ಮ್ಯವನ್ನು ಹೊಂದುವುದು. ಈ ಹಂತದಲ್ಲಿ ಶಿವನಲ್ಲದೆ ಮತ್ತೇನೂ ಇರದು. ಬಹುಶಃ ಇದರರ್ಥ ಈ ಸ್ಥಿತಿಯಲ್ಲಿ ಎಲ್ಲದರಲ್ಲಿಯೂ ಮತ್ತು ಎಲ್ಲರಲ್ಲಿಯೂ ಒಬ್ಬನು ಶಿವನನ್ನು ಕಾಣುತ್ತಾನೆ. ಈ ಹಂತವನ್ನು ಬ್ರಹ್ಮಾಂಡ ಚೈತನ್ಯದೊಂದಿಗೆ ಒಂದಾಗುವುದೆಂದು ಕರೆಯುತ್ತಾರೆ. ಮಾಯೆಯನ್ನು ಇಲ್ಲವಾಗಿಸಿಕೊಂಡರಷ್ಟೇ ನಮಗೆ ಶುದ್ಧವಿದ್ಯೆಯು ಲಭ್ಯವಾಗುತ್ತದೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, "ಎಲ್ಲಾ ವಿಧವಾದ ಕರ್ಮ ತ್ಯಾಗವು ಸರ್ವವ್ಯಾಪಿಯಾದ ಜ್ಞಾನದಲ್ಲಿ ಅಂತ್ಯವಾಗುತ್ತದೆ". ಇಲ್ಲಿ ಸರ್ವವ್ಯಾಪ್ತತೆಯೆಂದರೆ ಪರಮಾತ್ಮನ ಬಗೆಗಿನ ಜ್ಞಾನ. ಒಟ್ಟಾರೆ ಅರ್ಥವೇನೆಂದರೆ ಯಾವಾಗ ಚಕ್ರಗಳ ಮೇಲೆ ಮತ್ತು ಮನಸ್ಸಿನ ಮೇಲೆ ಹತೋಟಿಯನ್ನು ಹೊಂದುತ್ತೇವೆಯೋ ಆಗ ಒಬ್ಬನು ಮತ್ತ್ಯಾವುದರ ಅವಶ್ಯಕತೆ ಇರದೆ ಕೇವಲ ಬ್ರಹ್ಮದೊಂದಿಗೆ ನಿರಂತರವಾಗಿ ಇರುತ್ತಾನೆ.
ಈ ವಾಗ್ದೇವಿಯವರ ಜ್ಞಾನವನ್ನು ಒಬ್ಬರು ಮೆಚ್ಚಿಕೊಳ್ಳಲೇ ಬೇಕು ಏಕೆಂದರೆ ಅವರು ಆತ್ಮಸಾಕ್ಷಾತ್ಕಾರದ ರಹಸ್ಯಗಳನ್ನು ಅಷ್ಟು ಸೂಕ್ಷ್ಮವಾಗಿ ಪ್ರಚುರಪಡಿಸಿದ್ದಾರೆ.
Geyacakra-rathārūḍha-mantriṇī-गेयचक्र-रथारूढ-मन्त्रिणी-परिसेविता (69)
೬೯. ಗೇಯಚಕ್ರ-ರಥಾರೂಢ-ಮಂತ್ರಿಣೀ-ಪರಿಸೇವಿತಾ
ಹಿಂದಿನ ನಾಮದಲ್ಲಿ ಚಕ್ರರಾಜ ರಥದ ಜೊತೆಯಲ್ಲಿ ಯಾವಾಗಲೂ ಎರಡು ರಥಗಳಿರುತ್ತವೆ ಎನ್ನುವುದನ್ನು ನೋಡಿದ್ದೇವೆ. ಈ ಎರಡರಲ್ಲಿ ಮೊದಲನೆಯದಾದ ಗೇಯಚಕ್ರ ರಥವನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಇದು ಮಂತ್ರಿಣೀ ದೇವಿ ಅಥವಾ ಶ್ಯಾಮಲಾ ದೇವಿಯ ರಥವಾಗಿದ್ದು ಇದರ ಬಗ್ಗೆ ೧೦ ನಾಮದಲ್ಲಿ ಚರ್ಚಿಸಲಾಗಿದೆ. ಮಂತ್ರಿಣೀ ದೇವಿಯು ಗೇಯಚಕ್ರದ ಒಡತಿಯಾಗಿದ್ದು ಶ್ರೀ ಲಲಿತೆಯನ್ನು ಶಬ್ದಶಃ ಅರ್ಥದಲ್ಲಿ ಪೂಜಿಸುತ್ತಾಳೆ. ಮಂತ್ರಿಣೀ ದೇವಿಯು ಲಲಿತಾಂಬಿಕೆಯ ಮಂತ್ರಿವರ್ಗದಲ್ಲಿ ಒಬ್ಬ ಸಲಹಾದಾರಳಾಗಿದ್ದು; ಆಕೆಯು ಶ್ರೀ ಲಲಿತೆಯನ್ನು ಅತ್ಯುನ್ನತ ಸ್ಥಾನದಲ್ಲಿರಿಸಿ ಅವಳನ್ನು ಪೂಜಿಸಲು (ಆರಾಧಿಸಲು) ಬಯಸುತ್ತಾಳೆ. ಆರಾಧಿಸುವುದು ಬೇರೆ ಗೌರವಿಸುವುದು ಬೇರೆ ಎನ್ನುವುದನ್ನು ಗಮನಿಸಿ.
ನಾವು ಇದುವರೆಗೆ ನೋಡಿದಂತೆ ೭೯ಯೋಗಿನಿಯರು ‘ಶ್ರೀ ಚಕ್ರ’ದಲ್ಲಿ ನೆಲೆಸಿರುತ್ತಾರೆ. ಯೋಗಿನಿಯರೆಂದರೆ ಲಲಿತಾಂಬಿಕೆಯ ಮಹಾನ್ ಪೂಜಕರು. ಈ ಯೋಗಿನಿಯರನ್ನು ಮಂತ್ರಿಣಿಯರೆಂದೂ ಕರೆಯುತ್ತಾರೆ (ಈ ಮಂತ್ರಿಣಿಯರು ಮಂತ್ರಿಣೀ ದೇವಿ ಅಥವಾ ಶ್ಯಾಮಲಾ ದೇವಿಗಿಂತ ಭಿನ್ನವಾದವರೆಂದು ಗಮನದಲ್ಲಿಡಿ). ಈ ಯೋಗಿನಿಯರು ಶ್ರೀ ವಿದ್ಯಾ ಉಪಾಸನೆಯ ವಿಧಿವಿಧಾನಗಳಲ್ಲಿ ನುರಿತವರು. (ಯೋಗಿನಿಯರ ಕುರಿತು ಹೆಚ್ಚಿನ ಮಾಹಿತಿಯನ್ನು ನಾಮ ೪೭೫ರ ಚರ್ಚೆಯನ್ನು ಕೈಗತ್ತಿಕೊಳ್ಳುವ ಮುಂಚೆ ನೋಡೋಣ. ಏಕೆಂದರೆ ನಾಮ ೪೭೫ರಿಂದ ಹಿಡಿದು ಮುಂದಿನ ೬೦ನಾಮಗಳವರೆಗೆ ಶ್ರೀ ಚಕ್ರದಲ್ಲಿ ವಾಸಿಸುವ ಯೋಗಿನಿಯರ ಕುರಿತಾದ ಉಲ್ಲೇಖವು ಈ ಸಹಸ್ರನಾಮದಲ್ಲಿ ಬರುತ್ತದೆ). ಈ ನಾಮವು ಬಹುಶಃ ಆ ಯೋಗಿನಿಯರ ’ಶ್ರೀ ವಿದ್ಯಾ’ ಪೂಜೆಯ ಕುರಿತಾಗಿ ಇರಬಹುದು. ಗೇಯವೆಂದರೆ ಮಹತ್ವವಾದದ್ದು. ಗೇಯಚಕ್ರವೆಂದರೆ ಮುಖ್ಯವಾದ ಚಕ್ರ ಅಂದರೆ ’ಶ್ರೀ ಚಕ್ರ’. ಯಾರು ಲಲಿತಾಂಬಿಕೆಯನ್ನು ಶ್ರೀ ಚಕ್ರದಲ್ಲಿ ಧ್ಯಾನಿಸುತ್ತಾರೆಯೋ ಅವರಿಗೆ ಸುಲಭವಾಗಿ ಮಂತ್ರ ಸಿದ್ಧಿಯುಂಟಾಗುತ್ತದೆ. ಈ ರೀತಿಯಾಗಿ ಮಂತ್ರ ಸಿದ್ಧಿಯನ್ನು ಪಡೆದವರನ್ನು ಮಂತ್ರಿಣೀ ಎನ್ನುತ್ತಾರೆ. ಲಲಿತಾಂಬಿಕೆಯ ಎರಡು ಮಂತ್ರಗಳಾದ ಪಂಚದಶೀ ಅಥವಾ ಷೋಡಶೀ ಮಂತ್ರದ ಸಿದ್ಧಿಯನ್ನು ಪಡೆದವರು ಅವಳನ್ನು ಪೂಜಿಸುತ್ತಾರೆ. ಇಲ್ಲಿ ಶ್ರೀ ಚಕ್ರವನ್ನು ಪೂಜಿಸುವುದರ ಮಹತ್ವವನ್ನು ತಿಳಿಸಲಾಗಿದೆ. ಮಾನವ ಶರೀರವನ್ನು ಹಲವಾರು ಶಾಸ್ತ್ರ ಗ್ರಂಥಗಳಲ್ಲಿ ಶ್ರೀ ಚಕ್ರಕ್ಕೆ ಹೋಲಿಸಲಾಗಿದೆ. ಶ್ರೀ ಚಕ್ರದ ಒಂಭತ್ತು ಭಾಗಗಳನ್ನು ನಮ್ಮ ಶರೀರದ ಒಂಭತ್ತು ಭಾಗಗಳಿಗೆ ಹೋಲಿಸಲಾಗಿದೆ - ಬ್ರಹ್ಮರಂಧ್ರವಿರುವ ಸಹಸ್ರಾರ ಚಕ್ರವು ತಲೆ, ಆಜ್ಞಾ ಚಕ್ರವು ಹಣೆಯ ಭಾಗವಾಗಿದೆ, ವಿಶುದ್ಧಿ ಚಕ್ರವು ಕುತ್ತಿಗೆಯ ಭಾಗವಾಗಿದ್ದರೆ, ಅನಾಹತ ಚಕ್ರವು ಹೃದಯವಾಗಿದೆ, ಮಣಿಪೂರಕವು ಹೊಕ್ಕಳಿನ (ನಾಭಿಯ) ಭಾಗವಾಗಿದ್ದರೆ, ಸೊಂಟದ ಭಾಗ, ತೊಡೆಗಳು ಮತ್ತು ಪಾದಗಳು ಬಹುಶಃ ಸ್ವಾಧಿಷ್ಟಾನ ಮತ್ತು ಮೂಲಾಧಾರ ಚಕ್ರಗಳನ್ನೊಳಗೊಳ್ಳುತ್ತವೆ. ಇಲ್ಲಿ ಒಂದು ಅಂಶವನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದು ಸೂಕ್ತವಾಗಿದೆ, ಅದೇನೆಂದರೆ ಸಹಸ್ರಾರದಲ್ಲಿರುವ ಬ್ರಹ್ಮರಂಧ್ರದ ಮೂಲಕ ದಿವ್ಯ ಶಕ್ತಿಯು ನಮ್ಮ ಶರೀರವನ್ನು ಪ್ರವೇಶಿಸುತ್ತದೆ ಮತ್ತು ಅಧಿಕವಾದ ಅಂದರೆ ದೇಹವು ಭರಿಸಲಾಗದಷ್ಟು ಶಕ್ತಿಯು ಒಂದು ವೇಳೆ ದೇಹದೊಳಗೆ ಸೇರಿದರೆ ಅದು ಪಾದಗಳ ಮೂಲಕ ಭೂಮಿಗತವಾಗುತ್ತದೆ. ಶಿವಸೂತ್ರದ ೨.೧೩ನೇ ಶ್ಲೋಕವು ಮಂತ್ರಗಳ ರಹಸ್ಯವನ್ನು ಕುರಿತಾಗಿ ಹೇಳುತ್ತದೆ. ಪ್ರಕಾಶಮಾನವಾದ ಆತ್ಮ ಪ್ರಜ್ಞೆಯು ವಿವಿಧ ಮಂತ್ರಗಳಲ್ಲಿ ಅತ್ಯಂತ ಅವಶ್ಯಕ ಭಾಗವಾಗಿರುತ್ತದೆ (ಅದು ಪಂಚದಶೀ ಅಥವಾ ಷೋಡಶೀ ಆಗಿರಬಹುದು); ಮತ್ತು ಅದರ ಸಾರವು ಬ್ರಹ್ಮಸಾಕ್ಷಾತ್ಕಾರವನ್ನು ಹೊಂದುವುದಾಗಿದ್ದು ಅದುವೇ ಎಲ್ಲಾ ಮಂತ್ರಗಳ ರಹಸ್ಯವಾಗಿದೆ. ಆದ್ದರಿಂದ ಮಂತ್ರಗಳೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ ಆದರೆ ಅದು ಶಕ್ತಿ ದೇವಿಯ ಸ್ವರೂಪವೇ ಆಗಿದೆ. ಆದ್ದರಿಂದ ಈ ಅಕ್ಷರಗಳನ್ನು ಮಾತೃಕೆಗಳೆಂದು ಕರೆದಿದ್ದಾರೆ. (ಮಾತೃಕೆಯೆಂದೆರೆ ತಾಯಿಯಿಂದ ಹೊಮ್ಮಿದ ಅಥವಾ ತಾಯಿಗೆ ಸಂಭಂದಿಸಿದ್ದು ಎನ್ನುವ ಅರ್ಥಗಳನ್ನು ಕೊಡುತ್ತದೆ. ಸಹಸ್ರನಾಮದ ಮೊದಲನೇ ನಾಮವಾದ ಶ್ರೀ ಮಾತಾ, ಪರಮೋನ್ನತ ಮಾತೆಯನ್ನು ನೋಡಿ). ಆಧ್ಯಾತ್ಮಿಕ ಸಾಧನೆಯ ಪ್ರಾರಂಭಿಕ ಹಂತಗಳಲ್ಲಿ ಮಂತ್ರೋಚ್ಛಾರಣೆಯನ್ನು ಬಹಳ ಅವಶ್ಯಕವೆಂದು ಪರಿಗಣಿಸಲಾಗಿದೆ.
ಈ ನಾಮದಲ್ಲಿ ಮಂತ್ರದ ಮಹತ್ವ ಮತ್ತು ನಮ್ಮ ಶರೀರವನ್ನು ಶ್ರೀ ಚಕ್ರದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಕ್ಕೆ ಒತ್ತುಕೊಡಲಾಗಿದೆ. ನಮ್ಮ ದೇಹವು ಶ್ರೀ ಚಕ್ರಕ್ಕಿಂತ ಬೇರೆಯಲ್ಲ ಎನ್ನುವುದನ್ನು ಅರಿಯುವುದರ ಮೂಲಕ ಶ್ರೀ ಲಲಿತೆ ಮತ್ತು ನಾವು ಬೇರೆಯಲ್ಲ ಎನ್ನುವುದು ಅರ್ಥವಾಗುತ್ತದೆ; ಆತ್ಮ ಸಾಕ್ಷಾತ್ಕಾರದ ಮುಖ್ಯ ತತ್ವವೇ ಇದಾಗಿದೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM-68, 69 http://www.manblunder.com/2009/08/lalitha-sahasranamam-6869.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.