೨೯. ಶ್ರೀ ಲಲಿತಾ ಸಹಸ್ರನಾಮ ೭೦ನೇ ನಾಮದ ವಿವರಣೆ

೨೯. ಶ್ರೀ ಲಲಿತಾ ಸಹಸ್ರನಾಮ ೭೦ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೭೦

Kiricakra-rathārūḍha-daṇḍa-nāthā-puraskṛtā किरिचक्र-रथारूढ-दण्ड-नाथा-पुरस्कृता (70)

೭೦. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ

        ಕಿರಿಚಕ್ರವೆನ್ನುವುದು ವಾರಾಹೀ ದೇವಿ ಎಂದು ಕರೆಯಲ್ಪಡುವ ದಂಡನಾಥಾ ದೇವಿಯ ರಥವಾಗಿದೆ. ಈ ದೇವಿಯು ಬಹಳ ಶಕ್ತಿಯುಳ್ಳವಳಾಗಿದ್ದು ಈ ಕುರಿತಾಗಿ ೧೧ನೇ ನಾಮದಲ್ಲಿ ಚರ್ಚಿಸಲಾಗಿದೆ. ಕಿರಿ ಎಂದರೆ ವರಾಹ ಅಥವಾ ಹಂದಿ. ದೇವಿಯ ಮುಖವು ಹಂದಿಯ ರೂಪದಲ್ಲಿದ್ದು ಅವಳ ರಥವೂ ಕೂಡಾ ಹಂದಿಯ ಆಕಾರದಲ್ಲಿರುತ್ತದೆ. ಅವಳು ಯಾವಾಗಲೂ ಕೈಯ್ಯಲ್ಲಿ ದಂಡವನ್ನು ಧರಿಸಿರುವುದರಿಂದ ಅವಳನ್ನು ದಂಡನಾಥಾ ದೇವಿ ಎಂದು ಕರೆದಿದ್ದಾರೆ. ಕಿರಿ ಎಂದರೆ ಕಿರಣಗಳು ಎನ್ನುವ ಅರ್ಥವೂ ಇದೆ; ಇಲ್ಲಿ ಬೆಳಕೆಂದರೆ ಸೃಷ್ಟಿ. ಬಹುಶಃ ಇದು ಬೆಳಕು ಸೃಷ್ಟಿಯ ಪ್ರಾರಂಭವೆನ್ನುವುದನ್ನು ತಿಳಿಸುತ್ತದೆ. (ಬೆಳಕು ಮೂಡುವುದರೊಂದಿಗೆ ಜಗತ್ತಿನ ಸಮಸ್ತ ಚಟುವಟಿಕೆಗಳು ಪ್ರಾರಂಭವಾಗುತ್ತಾದೆ ಆದ್ದರಿಂದ ಕಿರಣಗಳನ್ನು ಸೃಷ್ಟಿಯ ಪ್ರಾರಂಭವನ್ನು ಸೂಚಿಸಲು ಸಾಂಕೇತಿಕವಾಗಿ ಬಳಸಿದ್ದಾರೆ). ಪವಿತ್ರ ಬೈಬಲ್ಲಿನಲ್ಲಿ (ಜೆನೆಸಿಸ್ ೧.೩) ಹೀಗೆ ಹೇಳಲ್ಪಟ್ಟಿದೆ; "ಮತ್ತು ದೇವರು ಹೇಳಿದ ಬೆಳಕು ಉಂಟಾಗಲಿ ಎಂದು, ಅಗ ಬೆಳಕು ಉಂಟಾಯಿತು", ಚಕ್ರವೆಂದರೆ ಸೃಷ್ಟಿ, ಸ್ಥಿತಿ, ಮತ್ತು ಲಯಗಳ ಚಕ್ರ. ಯೋಗಿಯೊಬ್ಬನು ಕಿರಿ ಚಕ್ರದ ಮೇಲೆ ಕುಳಿತಿದ್ದಾನೆಂದೆರೆ ಅದರ ಅರ್ಥ ಅವನು ಸೃಷ್ಟಿ, ಸ್ಥಿತಿ ಮತ್ತು ಪ್ರಳಯ ಕ್ರಿಯೆಗಳ ಮೂಲಕ ಹಾದು ಹೋಗುತ್ತಿದ್ದಾನೆಂದು ಅರ್ಥ. ಆದರೆ ಒಮ್ಮೆ ಇದು ಅವನಿಗೆ ಅರಿವಾದರೆ ಅವನಿಗೆ ಮರಣದ ಭಯವು ಉಂಟಾಗುವುದಿಲ್ಲ. ಅದು ಹೇಗೆ ಒಬ್ಬನು  ಮರಣವನ್ನು ಮೀರಿದವನಾಗುತ್ತಾನೆ? ಮರಣವೆಂದರೆ ಈ ಭೌತಿಕ ಕಾಯದ ನಾಶವೇ ಹೊರತು ಆತ್ಮದ ವಿನಾಶವಲ್ಲ. ಯೋಗಿಯು ತನ್ನ ಭೌತಿಕ ಕಾಯದ ಬಗ್ಗೆ ಆಲೋಚಿಸುವುದಿಲ್ಲ. ಅವನೇಕೆ ತನ್ನ ದೇಹದ ಬಗ್ಗೆ ಆಲೋಚಿಸುವುದಿಲ್ಲ? ಇದಕ್ಕೆ ಉತ್ತರವನ್ನು ಸ್ವತಃ ಶಿವನೇ, ಶಿವ ಸೂತ್ರದಲ್ಲಿ ಹೇಳಿದ್ದಾನೆ; ಏಕೆಂದರೆ ಯೋಗಿಯು ಸಂತೋಷ ಮತ್ತು ದುಃಖಗಳು ಬಾಹ್ಯವಾಗಿದ್ದು ಅದು ತನ್ನ ಆತ್ಮಕ್ಕೆ ಸಂಭಂದಿಸಿದ್ದಲ್ಲ ಎಂದು ಭಾವಿಸುವುದರಿಂದ. ಒಬ್ಬನು ತನ್ನ ಅಂತಃಕರಣದೊಂದಿಗೆ (ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳೊಂದಿಗೆ) ಸಂಭಂದ ಹೊಂದಿದ್ದರೆ ಮಾತ್ರ ಅವನಿಗೆ ತನ್ನ ದೇಹದಲ್ಲಿ ನೋವುಂಟಾಗುತ್ತದೆ. ಅವನಿಗೆ ತನ್ನ ಭೌತಿಕ ದೇಹವು ಮಹತ್ವ ಕೊಡಬೇಕಾಗಿರುವ ವಸ್ತುವೇ ಅಲ್ಲ. ಅವನು ಕೇವಲ ಪರಬ್ರಹ್ಮದೊಂದಿಗೆ ಮಾತ್ರ ಸಂಭಂದವಿದ್ದವನೆಂದು ತಿಳಿಯುತ್ತಾನೆ ಆದ್ದರಿಂದ ಅವನು ದೇಹದ ಆಗು ಹೋಗುಗಳ ಬಗ್ಗೆ ವಿಚಲಿತನಾಗದೇ ಇರುತ್ತಾನೆ. ಇದು ಏಕೆ ಸಾಧ್ಯವಾಗುತ್ತಂದೆಂದರೆ ಅವನು ತನ್ನ ಪ್ರಜ್ಞೆಯನ್ನು ಪರಮಚೈತ್ಯನ್ಯದೊಂದಿಗೆ ಏಕೀಭವಿಸುವುದರಿಂದ; ಇದನ್ನೇ ಒಂದಾಗುವಿಕೆ ಅಥವಾ ಐಕ್ಯವಾಗುವುದು ಎನ್ನುತ್ತಾರೆ (ಶಕ್ತಿಯು ಶಿವನೊಂದಿಗೆ ಒಂದಾದ ಹಾಗೆ). ವಾರಾಹೀ ದೇವಿಯು ನಮ್ಮ ಅಂತಃಚಕ್ರದಲ್ಲಿರುವುದಾಗಿ ಭಾವಿಸಲಾಗಿದೆ. ಈ ನಾಮವು ನಮ್ಮ ಅಂತರಾತ್ಮದ ಮಹತ್ವವನ್ನು ತಿಳಿಸುತ್ತಾ ನಮ್ಮ ಭೌತಿಕ ದೇಹದಿಂದ ಆತ್ಮಕ್ಕೆ ಒದಗಬಹುದಂತಹದ್ದೇನೂ ಏನೂ ಇಲ್ಲವೆಂದು ತಿಳಿಸುತ್ತದೆ. ಕರ್ಮದಿಂದಾಗಿ ನಮ್ಮ ಭೌತಿಕ ಕಾಯವು ಎಲ್ಲಾ ವಿಧವಾದ ಯಾತನೆಗಳನ್ನು ಅನುಭವಿಸಿದರೂ ಕೂಡಾ ಆತ್ಮವು ನಿತ್ಯ ಶುದ್ಧವಾಗಿದೆ ಮತ್ತು ಆತ್ಮ ಚೈತನ್ಯವು ಆ ಪರಮ ಚೈತನ್ಯದೊಂದಿಗೆ ಏಕವಾದಾಗ ಮುಕ್ತಿಯ ಹಂತಕ್ಕೆ ತಲುಪುತ್ತೇವೆ ಈ ಹಂತದಲ್ಲಿ ಜನನ ಮತ್ತು ಮರಣಗಳಿರುವುದಿಲ್ಲ. 

          ೬೮, ೬೯ ಮತ್ತು ೭೦ನೇ ನಾಮಗಳು ಲಲಿತಾಂಬಿಕೆ, ಮಂತ್ರಿಣೀ (ಶ್ಯಾಮಲಾ ದೇವಿ) ಮತ್ತು ವಾರಾಹೀ ದೇವಿಯರ ಚಕ್ರಗಳ ಕುರಿತಾಗಿ ಹೇಳುತ್ತವೆ. ಮಂತ್ರಿಣೀ ಮತ್ತು ವಾರಾಹೀ ದೇವಿಯರು ಲಲಿತಾಂಬಿಕೆಯ ನಂತರದ ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಇವರಿಬ್ಬರನ್ನೂ ಪೂಜಿಸದ ಹೊರತು ಮತ್ತು ಇವರಿಬ್ಬರ ಅಪ್ಪಣೆಯಿಲ್ಲದೆ ಯಾರೊಬ್ಬರೂ ಲಲಿತಾ ದೇವಿಯ ಸನಿಹಕ್ಕೆ ಹೋಗಲು ಸಾಧ್ಯವಿಲ್ಲ. ಮಂತ್ರಿಣೀ ದೇವಿಯು ಅವಳ ಮಂತ್ರಿಗಳಲ್ಲಿ ಮುಖ್ಯವಾದವಳು. ಈ ಜಗತ್ತಿನ ಸಮಸ್ತ ಆಡಳಿತವು ಮಂತ್ರಿಣೀ ದೇವಿಯ ನಿಯಂತ್ರಣದಲ್ಲಿದೆ, ಇದನ್ನು ’ಮಂತ್ರಿಣೀ-‍ನ್ಯಸ್ತ-ರಾಜ್ಯಧೂಃ’ ಎನ್ನುವ ೭೮೬ನೇ ನಾಮವು ದೃಢಪಡಿಸುತ್ತದೆ. ವಾರಾಹೀ ದೇವಿಯು ಲಲಿತಾಂಬಿಕೆಯ ಸೇನಾ ಮುಖ್ಯಸ್ಥಳು. ವಾರಾಹೀ ದೇವಿಗೆ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಸಾಮರ್ಥ್ಯವಿದೆ. ವಾರಾಹಿಯನ್ನು ಆಷಾಡ ಮಾಸದ ೧೮ನೇ ದಿನದಂದು ಪೂಜಿಸಿದರೆ ಯಾರಿಗೆ ಮದುವೆಯಾಗುವ ವಿಷಯದಲ್ಲಿ ವಿಘ್ನಗಳು ಉಂಟಾಗುತ್ತಿರುತ್ತವೆಯೋ ಅವರಿಗೆ ಮದುವೆಯ ಯೋಗವುಂಟಾಗುತ್ತದೆನ್ನುವ ನಂಬಿಕೆಯಿದೆ. ಈ ಮೂರೂ ರಥಗಳು ಯಾವಾಗಲೂ ಒಂದಕ್ಕೊಂದು ಬಹಳ ಸಮೀಪದಲ್ಲಿರುತ್ತವೆ. ಈ ಮುಂಚೆಯೇ ಚರ್ಚಿಸಿದಂತೆ ರಥಗಳೆಂದರೆ ನಮ್ಮ ಮನಸ್ಸನ್ನು; ಬಹುಶಃ ನಮ್ಮ ಮನಸ್ಸಿನ ವಿವಿಧ ಹಂತಗಳನ್ನು ಪ್ರತಿನಿಧಿಸುತ್ತವೆ. 

*******

         ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 70 http://www.manblunder.com/2009/08/lalitha-sahasranamam-70.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)