ಅರಬ್ಬರ ನಾಡಿನಲ್ಲಿ....೫.... ದುಬೈನಲ್ಲಿ ಪಾಕಿಸ್ತಾನೀಯರು!

ಅರಬ್ಬರ ನಾಡಿನಲ್ಲಿ....೫.... ದುಬೈನಲ್ಲಿ ಪಾಕಿಸ್ತಾನೀಯರು!

ಬರಹ

ಭಾರತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ’ಪಾಕಿಸ್ತಾನ" ಎಂದರೆ ಕಿವಿ ನಿಮಿರುತ್ತದೆ, ಕೆಲವರಿಗೆ ರಕ್ತ ಕುದಿಯುತ್ತದೆ, ರಾಜಕಾರಣಿಗಳ ಭಾಷಣದಲ್ಲಿ ಭಾವಾವೇಶ ಹೆಚ್ಚಾಗುತ್ತದೆ.  ಹಿರಿ, ಕಿರಿ, ಮರಿ ಪುಢಾರಿಗಳೆಲ್ಲ ದೊಡ್ಡ ಹೀರೋಗಳಂತೆ ಫೋಸು ಕೊಡುತ್ತಾ ಆ ದೇಶದ ವಿರುದ್ಧ ಮಾತಾಡುತ್ತಾರೆ.  ಅಕ್ಷರಧಾಮ, ಪಾರ್ಲಿಮೆಂಟ್ ಮೇಲಿನ ದಾಳಿ, ಮುಂಬೈ ಹತ್ಯಾಕಾಂಡ ಮನದಲ್ಲಿ ಸುಳಿದು ಹೋಗುತ್ತವೆ, ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ನರಮೇಧದಿಂದ ನೊಂದ ಮನ ಅವರಿಗೆ ತಕ್ಕ ಪಾಠ ಕಲಿಸಬೇಕು ಅನ್ನುತ್ತದೆ.  ಆದರೆ "ಭಯೋತ್ಪಾದಕ ರಾಷ್ಟ್ರ" ಎಂದು ಬಿಂಬಿತವಾಗಿರುವ  ಅದೇ ಪಾಕಿಸ್ತಾನದ ಜನತೆ ಸಂಯುಕ್ತ ಅರಬ್ ರಾಷ್ಟ್ರದಂತಹ ವಿದೇಶಿ ಕೆಲಸಗಾರರನ್ನೇ ಹೆಚ್ಚಾಗಿ ಅವಲಂಬಿಸಿರುವ ದೇಶಗಳಲ್ಲಿ ಇತರೆ ರಾಷ್ಟ್ರಗಳ ಜನತೆಯೊಂದಿಗೆ ಹೇಗೆ ಬಾಳುತ್ತಾರೆ ಎನ್ನುವುದು ಕುತೂಹಲಕಾರಿ ವಿಷಯ.

ನಾನಿರುವ ಸಂಯುಕ್ತ ಅರಬ್ ರಾಷ್ಟ್ರದ ಉದ್ಧಗಲಕ್ಕೂ ಸಂಚರಿಸುವ ಕೆಲಸ ನನ್ನದು, ಹಾಗೆ ಕಾರ್ಯನಿಮಿತ್ತ ಸಂಚರಿಸುವಾಗ ಬಗೆಬಗೆಯ ಜನರನ್ನು ಭೇಟಿಯಾಗುವ, ಅವರೊಡನೆ ಮುಕ್ತವಾಗಿ ಬೆರೆಯುವ ಅವಕಾಶ ನನಗೆ ಸಿಕ್ಕಿದೆ.  ಇದರಿಂದ ನನಗೆ ತಿಳಿಯದ ಅದೆಷ್ಟೋ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ.  ಸುಮಾರು ೭೫ ವಿವಿಧ ರಾಷ್ಟ್ರಗಳ ಜನತೆ ಇಂದು ಸಂಯುಕ್ತ ಅರಬ್ ರಾಷ್ಟ್ರದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಹು ಮುಖ್ಯ ಕಂಪನಿಗಳಿಗೆಲ್ಲ ಭದ್ರತೆ ಒದಗಿಸುತ್ತಿರುವ ನಮ್ಮ ಸಂಸ್ಥೆಯ ಸುಮಾರು ೪ ಸಾವಿರ ಕೆಲಸಗಾರರಲ್ಲಿ  ೫೦೦ಕ್ಕಿಂತ ಹೆಚ್ಚು ಜನ ಪಾಕಿಸ್ತಾನೀಯರು!  ಶಿಸ್ತು, ಸಂಯಮದ ವಿಚಾರಕ್ಕೆ ಬಂದರೆ ಅಪ್ಪಟ ಸೈನಿಕನಂತೆ, ಕೆಲಸದ ವಿಚಾರಕ್ಕೆ ಬಂದರೆ ಇವರು ಕಷ್ಟ ಸಹಿಷ್ಣುಗಳು, ಎಷ್ಟೇ ಕಷ್ಟವಾದರೂ ತಮಗೆ ವಹಿಸಿದ ಕೆಲಸವನ್ನು ಮಾಡಿ ಮುಗಿಸಿಯೇ ತೀರುತ್ತಾರೆ, ಅರ್ಧಕ್ಕೆ ಎಂದೂ ಕೈ ಬಿಡುವುದಿಲ್ಲ.  ಇವರ ಆಂಗ್ಲ ಭಾಷಾ ಪ್ರಾವೀಣ್ಯತೆ ಎಂಥವರನ್ನೂ ಬೆರಗುಗೊಳಿಸುತ್ತದೆ, ಮದರಸಾಗಳಲ್ಲಿ ಇವರು ಓದಿದ ಅರಬ್ಬಿ ಭಾಷೆಯನ್ನೇ ಇಲ್ಲಿನ ಆಡುಭಾಷೆಯ ಜೊತೆ ಸೇರಿಸಿ ಸಾಕಷ್ಟು ಸರಾಗವಾಗಿ ಅರಬ್ಬಿ ಮಾತಾಡುತ್ತಾರೆ.  

ಇಲ್ಲಿನ ಸುಂದರ ಹವಾನಿಯಂತ್ರಿತ ಟ್ಯಾಕ್ಸಿಗಳ ಚಾಲಕರಲ್ಲಿ ಬಹುತೇಕರು ಪಾಕಿಸ್ತಾನೀಯರು.  ತಮ್ಮ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿರುವವನು ಭಾರತೀಯನೆಂದು ಅರಿವಾದರೆ ಅವರೇ ಮಾತಿಗೆ ಎಳೆಯುತ್ತಾರೆ, ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿಯವರ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಾರೆ.  ಕ್ರಿಕೆಟ್ಟನ್ನು ನಮ್ಮಷ್ಟೇ ಪ್ರೀತಿಸುವ ಇವರಿಗೆ ನಮ್ಮ ಸಚಿನ್ ಆರಾಧ್ಯ ದೈವ!!  ನಮಗೆ ಕಿಶೋರ್ ಕುಮಾರನ ಯಾವ ಹಾಡು ಇಷ್ಟವೆಂದು ಕೇಳಿ ಅದನ್ನೇ ಚಾಲೂ ಮಾಡುತ್ತಾರೆ.  ಜಿಯಾ ಉಲ್ ಹಕ್, ಬೇನಜೀರ್ ಭುಟ್ಟೋ, ಪರ್ವೇಜ್ ಮುಶ್ರಫ್ ಮುಂತಾದ ನಾಯಕರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಪಾಕಿಸ್ತಾನ ಸೊರಗಿತು, ಭಾರತದ ವಿರೋಧಿಯಾಯಿತು ಎನ್ನುತ್ತಾರೆ, ದೊಡ್ಡಣ್ಣ ಅಮೇರಿಕಾವನ್ನು ಕಡುವಾಗಿ ಟೀಕಿಸುತ್ತಾರೆ.  ತಣ್ನಗಿನ ನೀರು ಅಥವಾ ತಂಪು ಪಾನೀಯ ಕುಡಿಯುವಿರಾ ಎಂದು ಉಪಚರಿಸುತ್ತಾರೆ.  ನಮಗೆ ಗೊತ್ತಿಲ್ಲದ ನಗರದ ಸೊಂದಿ ಗೊಂದಿಗಳಲ್ಲಿರುವ ವಿಳಾಸಕ್ಕೆ ಯಾವುದೇ ತೊಂದರೆಯಿಲ್ಲದೆ ಕ್ಷೇಮವಾಗಿ ತಲುಪಿಸುತ್ತಾರೆ.  ಅವರ ಪ್ರತಿಯೊಂದು ನಡೆ ನುಡಿಯಲ್ಲಿ "ತಾನು ಭಾರತ ವಿರೋಧಿಯಲ್ಲ, ಬದಲಾಗಿ ಸ್ನೇಹಿತ" ಎಂದು ತೋರಿಸುವ ತುಡಿತ ಎದ್ದು ಕಾಣುತ್ತಿರುತ್ತದೆ.  

ಒಬ್ಬ ಸಾಮಾನ್ಯ ಪಾಕಿಸ್ತಾನಿ ಇಲ್ಲಿನ ಭಾರತೀಯರ ಜೊತೆ ಸ್ನೇಹಿತನಾಗಿರಲು ಅನವರತ ಯತ್ನಿಸುತ್ತಾನೆ.  ನಮ್ಮಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ರಜಕ್ಕೆಂದು ಊರಿಗೆ ಹೋಗಿ ಬರುವಾಗ ಅಲ್ಲಿಂದ ಏನಾದರೊಂದನ್ನು ತಂದು ಎಲ್ಲರೊಡನೆ ಹಂಚಿಕೊಂಡು ತಿನ್ನುತ್ತಾರೆ.  ಸಾಕಷ್ಟು ಬಾರಿ ಪಾಕಿಸ್ತಾನದ ಸಿಹಿ ತಿಂಡಿಗಳನ್ನು ತಿನ್ನುವ ಅವಕಾಶ ನನಗೂ ಸಿಕ್ಕಿದೆ.  ಒಬ್ಬ ಪಾಕಿಸ್ತಾನಿ ಹುಡುಗನಂತೂ ಎಷ್ಟು ಬೇಡವೆಂದರೂ ಬಿಡದೆ ಲಾಹೋರಿನಿಂದ ನನಗಾಗಿ ಒಂದು ಜೊತೆ ಶೂಗಳನ್ನು ಕೊಂಡು ತಂದು ಅವನ್ನು ಧರಿಸುವವರೆಗೂ ಬಿಡಲಿಲ್ಲ!  ಇಷ್ಟೆಲ್ಲ ಪ್ರೀತಿ, ಸ್ನೇಹ ತೋರುವ ಇವರ ಮುಂದೆ ಭಯೋತ್ಪಾದನೆಯ ವಿಚಾರ ಬಂದಾಗ ವಿಷಣ್ಣವದನರಾಗುತ್ತಾರೆ, ತಲೆ ತಗ್ಗಿಸಿ ತಪ್ಪಿತಸ್ಥ ಭಾವನೆಯಿಂದ ನಿಲ್ಲುತ್ತಾರೆ.  ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ಸಾರ್, ಇದೆಲ್ಲ ನಮ್ಮ ಆಡಳಿತಗಾರರು ಮಾಡುತ್ತಿರುವ ಷಡ್ಯಂತ್ರ ಅನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋರುತ್ತಾರೆ.  ದುಬೈನ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಒಂದು ಆಶ್ಚರ್ಯಕರ ಸಂಗತಿ ನೋಡಲು ಸಿಕ್ಕಿತು, ಅದೇನೆಂದರೆ ಜೆ.ಎಸ್.ಎಸ್.ಶಾಲೆಯ ಶಿಕ್ಷಕರಾದ ಈರಣ್ಣ ಮೂಲಿಮನಿಯವರು ರಚಿಸಿದ ಕನ್ನಡ ನಾಡ ಗೀತೆಗಳು ಹಾಗೂ ಇತರ ಕನ್ನಡ ಗೀತೆಗಳಿಗೆ ತಬಲಾದ ಜೊತೆ ಹಾರ್ಮೋನಿಯಂ ಸಾಥ್ ನೀಡಿದವನು ಒಬ್ಬ ಪಾಕಿಸ್ತಾನಿ ಯುವಕ.  ಕನ್ನಡ ಬರದ ಪಾಕಿಸ್ತಾನಿಯಾದರೂ ಪ್ರತಿ ದಿನ ಇವರ ಜೊತೆಯಲ್ಲಿ ತಾಲೀಮು ನಡೆಸಿ ಕನ್ನಡ ಗೀತೆಗಳಿಗೆ ಹಾರ್ಮೋನಿಯಂ ನುಡಿಸಿದ್ದ ಅವನನ್ನು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ತುಂಬು ಹೃದಯದಿಂದ ಶ್ಲಾಘಿಸಿದ್ದರು.

ಸದಾ ಸ್ನೇಹಿತರಾಗಿರಲು ಬಯಸುವ ಇವರದು ಒಂದು ರೀತಿಯ ಕಥೆಯಾದರೆ ಮತ್ತೊಂದು ರೀತಿಯ ಜನರೂ ಇಲ್ಲಿದ್ದಾರೆ.  ಕರಾಚಿ, ಲಾಹೋರ್, ಇಸ್ಲಾಮಾಬಾದ್ ಹಾಗೂ ಪಂಜಾಬ್ ಪ್ರಾಂತಗಳ ಜನರು ಸ್ನೇಹಮಯಿಗಳು ಹಾಗೂ ಭಾರತೀಯರ ಜೊತೆ ಸ್ನೇಹ ಬೆಳೆಸಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಬಯಸುತ್ತಾರೆ.  ಆದರೆ ಉತ್ತರ ಪಾಕಿಸ್ತಾನದ ವಾಜಿರಿಸ್ತಾನ ಹಾಗೂ ಆಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಠಾಣ್ ಹಾಗೂ ಪಶ್ತೂನ್ ಪಂಗಡಗಳ ಜನರು ಸ್ವಲ್ಪ ಒರಟರಂತೆ ವರ್ತಿಸುತ್ತಾರೆ, ಇವರು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ,  ಉದ್ಧನೆಯ ಗಡ್ಡ ಬಿಟ್ಟು ತೀಕ್ಷ್ಣವಾದ ನೋಟದಿಂದ ಎಲ್ಲರನ್ನೂ ಕಣ್ಣಲ್ಲೇ ತಿವಿಯುವಂತೆ ನೋಡುವ ಇವರು ತಮ್ಮ ವಿಚಿತ್ರ ನಡವಳಿಕೆಯಿಂದಲೇ ನಿಜಕ್ಕೂ ಆತಂಕವಾದಿಗಳೇ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಾರೆ.  ಇವರ ವಿದ್ಯಾಭ್ಯಾಸದ ಮಟ್ಟ ತೀರಾ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಅನ್ನಬಹುದು, ಭಾರ ಎತ್ತುವ, ಬಹು ದೊಡ್ಡ ಟ್ರಕ್ ಮತ್ತಿತರ ವಾಹನಗಳನ್ನು ಓಡಿಸುವ ಇವರು ಅಶಿಸ್ತು, ಅಡ್ಡಾದಿಡ್ಡಿ ಚಾಲನೆಗೆ ಹೆಸರಾಗಿದ್ದಾರೆ,  ಇಲ್ಲಿನ ರಸ್ತೆಗಳಲ್ಲಿ ನಡೆಯುವ ಬಹುತೇಕ ಮಾರಣಾಂತಿಕ ಅಪಘಾತಗಳಲ್ಲಿ ಇವರ ಪಾತ್ರ ಬಹು ದೊಡ್ಡದು.  ಆದರೆ ತಾವಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ.

ಒಬ್ಬ ಸಾಮಾನ್ಯ ಪಾಕಿಸ್ತಾನಿ ನಾಗರಿಕನಿಗೆ ಭಾರತದೊಡನೆ ಯಾವುದೇ ಗೊಡವೆ ಬೇಕಿಲ್ಲ, ಬದಲಾಗಿ ಅವರು ಭಾರತೀಯರ ಜೊತೆ ಸ್ನೇಹವನ್ನು, ಉತ್ತಮ ಬಾಂಧವ್ಯವನ್ನು ಬಯಸುತ್ತಾರೆ.  ಇದನ್ನು ಅಲ್ಲಿನ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಿದೆ, ಕುಮ್ಮಕ್ಕು ಕೊಟ್ಟು ತೆರೆಮರೆಯಲ್ಲಿದ್ದುಕೊಂಡೆ ಆಟ ಆಡಿಸುತ್ತಿರುವ ದೊಡ್ಡಣ್ಣ ಅಮೇರಿಕಾ ತನ್ನ ಕುಟಿಲ ಕಾರ್ಯತಂತ್ರವನ್ನು ನಿಲ್ಲಿಸಬೇಕಿದೆ.  ಭಾರತ ಉಪಖಂಡದಲ್ಲಿ ಶಾಂತಿ ನೆಲೆಸುವಲ್ಲಿ ಇದು ಅತ್ಯಂತ ಜರೂರಾಗಿ ಆಗಬೇಕಿದೆ.  ಆದರೆ ಒಬಾಮಾಗೆ ಇದು ಅರ್ಥವಾಗುವುದೇ?  ಇದು ಯಕ್ಷ ಪ್ರಶ್ನೆ.