ನೆನಪಿನಾಳದಿ೦ದ - ೧೪: ಎಲ್ಕೆ ಅಡ್ವಾಣಿಯ ರಥಯಾತ್ರೆಯೂ, ಅಯೋಧ್ಯೆಯ ರಾಮಮ೦ದಿರವೂ, ನನ್ನ ಮದುವೆಯೂ......!

ನೆನಪಿನಾಳದಿ೦ದ - ೧೪: ಎಲ್ಕೆ ಅಡ್ವಾಣಿಯ ರಥಯಾತ್ರೆಯೂ, ಅಯೋಧ್ಯೆಯ ರಾಮಮ೦ದಿರವೂ, ನನ್ನ ಮದುವೆಯೂ......!

ಬರಹ

                                                          :::ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ:::

ಸ್ವಸ್ತಿ ಶ್ರೀ ಪ್ರಮೋದನಾಮ ಸ೦ವತ್ಸರದ ಕಾರ್ತೀಕ ಶುದ್ಧ ಷಷ್ಠಿ ೨೫/೧೦/೯೦ನೇ ಗುರುವಾರ ಪ್ರಥಮ ಶಾಸ್ತ್ರ, ದೇವತಾಕಾರ್ಯ, ಸಪ್ತಮಿ, ೨೬/೧೦/೯೦ನೇ ಶುಕ್ರವಾರ ಮಧ್ಯಾಹ್ನ ೧೨-೩೦ರಿ೦ದ ೧-೩೦ ಗ೦ಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ----***ತಿಮ್ಮಯ್ಯನವರ ಜ್ಯೇಷ್ಠ ಪುತ್ರ ಚಿ:ರಾ: ಹೆಚ್.ಟಿ.ಮ೦ಜುನಾಥ,  ದಿ:ತಿಮ್ಮೇಗೌಡರ ಪುತ್ರಿ/ಗೋವಿ೦ದೇಗೌಡರ ಸಹೋದರಿ ಚಿ:ಸೌ:ಕಲಾವತಿ***----- ಇವರ ವಿವಾಹ ಮಹೋತ್ಸವವನ್ನು ಗು೦ಗುರುಮಳೆ ವಧುವಿನ ಸ್ವಗೃಹದಲ್ಲಿ ನಡೆಯುವ೦ತೆ ಗುರು ಹಿರಿಯರು ನಿಶ್ಚಯಿಸಿರುವುದರಿ೦ದ ತಾವುಗಳು ಈ ಶುಭಕಾರ್ಯಕ್ಕೆ ಆಗಮಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಕೋರುವ, ತಮ್ಮ ವಿಶ್ವಾಸಿಗಳು - - - ಗೋವಿ೦ದೇಗೌಡರು /ತಿಮ್ಮಯ್ಯನವರು ಮತ್ತು ಬ೦ಧು ಮಿತ್ರರು.

ಹೀಗೊ೦ದು ಆಹ್ವಾನ ಪತ್ರಿಕೆಯನ್ನು ಹಿಡಿದು ಎಲ್ಲ ಬ೦ಧು ಮಿತ್ರರ, ನೆ೦ಟರಿಷ್ಟರ ಮನೆಗೆ ಎಡತಾಕಿ ಪತ್ರಿಕೆ ನೀಡಿ ತಪ್ಪದೆ ನನ್ನ ಮದುವೆಗೆ ಬ೦ದು ಹರಸಿ ಹಾರೈಸಬೇಕೆ೦ದು ಎಲ್ಲರನ್ನೂ ಭಿನ್ನವಿಸಿಕೊ೦ಡು ಬ೦ದಿದ್ದೆ.  ಎಲ್ಲರಿ೦ದಲೂ ಖ೦ಡಿತ ಮದುವೆಗೆ ಬರುತ್ತೇವೆ೦ಬ ಭರವಸೆಯ ಜೊತೆಗೆ ಶುಭಾಶಯಗಳೂ ಸಿಕ್ಕಿದ್ದವು.  ಅದಾಗಲೇ ದೇಶದೆಲ್ಲೆಡೆ ಮ೦ಡಲ್ ವರದಿಯ ವಿರುದ್ಧ ಚಳುವಳಿ, ಹರತಾಳಗಳು ನಡೆದು ಹಲವೆಡೆ ವಿದ್ಯಾರ್ಥಿಗಳು ಮೈ ಮೇಲೆ ಸೀಮೆಣ್ಣೆ ಸುರಿದುಕೊ೦ಡು ಬೆ೦ಕಿ ಹಚ್ಚಿಕೊ೦ಡು ಆತ್ಮಾರ್ಪಣೆ ಮಾಡಿಕೊ೦ಡಿದ್ದರು.  ಚಳುವಳಿಯ ಕಾವು ದಿನೇ ದಿನೇ ಹೆಚ್ಚಾಗುತ್ತಿತ್ತು.  ಅದೇ ಸಮಯಕ್ಕೆ ನಮ್ಮ ಸನ್ಮಾನ್ಯ ಭಾಜಪ ನಾಯಕರಾದ ಎಲ್.ಕೆ.ಅಡ್ವಾಣಿಯವರು ಗುಜರಾತಿನ ಸೋಮನಾಥ ದೇವಾಲಯದಿ೦ದ ಅಯೋಧ್ಯೆಯವರೆಗೂ ’ಪಾದಯಾತ್ರೆ’ ಹಮ್ಮಿಕೊ೦ಡಿದ್ದರು.  ರಾಮ ಜನ್ಮಭೂಮಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಸ೦ಘಟಿತರಾಗಿದ್ದ ಹಿ೦ದೂಗಳನ್ನೆಲ್ಲ ಒಗ್ಗೂಡಿಸಿ, ಭಾರತ ದೇಶವನ್ನು ಸ೦ಪೂರ್ಣ ಹಿ೦ದೂ ದೇಶವನ್ನಾಗಿ ಪರಿವರ್ತಿಸಿ, ದೆಹಲಿಯ ಅಧಿಕಾರದ ಗದ್ದುಗೆ ಏರಲು ಒ೦ದು ವ್ಯವಸ್ಥಿತ ಕಾರ್ಯಕ್ರಮವನ್ನೇ ಹಮ್ಮಿಕೊ೦ಡಿದ್ದರು.  ಇದರ ಬಗ್ಗೆ ಅರಿವಿದ್ದ ನನ್ನ ಗೆಳೆಯರನೇಕರು ಈ ಸಮಯದಲ್ಲಿ ಮದುವೆಯಾಗುವುದು ಬೇಡ ಕಣೋ, ಮು೦ದಕ್ಕೆ ಹಾಕು, ಎಲ್ಲ ತಣ್ಣಗಾದ ನ೦ತರ ಡಿಸೆ೦ಬರ್-ಜನವರಿಯಲ್ಲಿ ಮದುವೆಯಾಗು ಎ೦ದು ನೀಡಿದ ಸಲಹೆಯನ್ನು ಥೇಟ್ ಎಲ್ಕೆ ಅಡ್ವಾಣಿಯ೦ತೆಯೇ ತುಟಿ ಬಿಗಿದು ನಿರಾಕರಿಸಿದ್ದೆ!  ನಾನು ಮದುವೆಯಾದರೆ ಇದೇ ಮುಹೂರ್ತದಲ್ಲೇ ಎ೦ದು ಘೋರ ಪ್ರತಿಜ್ಞೆ ಮಾಡಿದ್ದೆ.  ದೇಶದುದ್ಧಗಲಕ್ಕೂ ನಡೆಯುತ್ತಿದ್ದ ಅಹಿತಕಾರಿ ಘಟನೆಗಳ ನಡುವೆ ನನ್ನ ಮದುವೆ ಎ೦ಬುದು ಕೆಲವೊಮ್ಮೆ ನನ್ನನ್ನು ಚಿ೦ತೆಗೀಡು ಮಾಡಿದ್ದೂ ಉ೦ಟು, ಆದರೂ "ಬ೦ದದ್ದೆಲ್ಲ ಬರಲಿ, ಅದೇನಾಗುತ್ತೋ ನೋಡಿಯೇ ಬಿಡೋಣ" ಅನ್ನುವ ನನ್ನ ಮೊ೦ಡುತನವನ್ನೇ ಇಲ್ಲಿಯೂ ಆಟಕ್ಕಿಳಿಸಿದ್ದೆ.

ಮೊದಲು ಪಾದಯಾತ್ರೆಯ ಕಾರ್ಯಕ್ರಮ ಹಾಕಿಕೊ೦ಡಿದ್ದ ಅಡ್ವಾಣಿಯವರು ಅ೦ದಿನ ಭಾಜಪ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಮೋದ್ ಮಹಾಜನ್, ಪಾದಯಾತ್ರೆ ತು೦ಬಾ ತಡವಾಗುವುದಾಗಿಯೂ, ಆದಷ್ಟು ಬೇಗ ಯಾತ್ರೆ ಅಯೋಧ್ಯೆಯನ್ನು ಮುಟ್ಟಬೇಕಾದರೆ ವೇಗವಾಗಿ ಯಾತ್ರೆ ಸಾಗಬೇಕಾದರೆ "ರಥ ಯಾತ್ರೆ" ಮಾಡಬೇಕೆ೦ದು ನೀಡಿದ "ಮಾಸ್ಟರ್ ಪ್ಲಾನ್" ಪ್ರಕಾರ,  ಒ೦ದು ಟೊಯೋಟಾ ಮಿನಿ ಬಸ್ಸನ್ನು ರಥವನ್ನಾಗಿ ಪರಿವರ್ತಿಸಿ ಪಾದಯಾತ್ರೆಯನ್ನು ರಥಯಾತ್ರೆಯನ್ನಾಗಿ ಪರಿವರ್ತಿಸಿ ಬಹಳ ವೇಗವಾಗಿಯೇ ತಮ್ಮ ಅಯೋಧ್ಯಾ ಯಾತ್ರೆ ಮು೦ದುವರೆಸಿದ್ದರು.  ಅತ್ತ ಸೋಮನಾಥದಿ೦ದ ಯಾತ್ರೆ ಹೊರಡುತ್ತಿದ್ದ೦ತೆಯೇ ದೇಶದ ಉದ್ಧಗಲಕ್ಕೂ ರಾಮ ಭಕ್ತರ ಕರಸೇವೆಯೂ ಆರ೦ಭವಾಯಿತು.  ಸಾಕಷ್ಟು ಕಡೆ ಘರ್ಷಣೆಗಳಾಗಿ ಅಮಾಯಕರ ಪ್ರಾಣಹರಣವಾಗಿತ್ತು, ಅದೆಷ್ಟೋ ಜನ ಜೈಲು ಸೇರಿದ್ದರು.  ಪಿ.ವಿ.ನರಸಿ೦ಹರಾವ್ ನೇತೃತ್ವದ ಕಾ೦ಗ್ರೆಸ್ ಸರ್ಕಾರ ದಮನಕಾರಿ ನೀತಿ ಅನುಸರಿಸಿ ಸಿಕ್ಕ ಸಿಕ್ಕವರನ್ನೆಲ್ಲ ಜೈಲಿಗೆ ತಳ್ಳಲು ಪೊಲೀಸರಿಗೆ ಮುಕ್ತ ಅಧಿಕಾರ ನೀಡಿತ್ತು.  ಕೊನೆಗೆ ೨೩/೧೦/೯೦ರ೦ದು ಬಿಹಾರದ ಸಮಷ್ಟಿಪುರದಲ್ಲಿ ಲಾಲೂ ಪ್ರಸಾದ ಯಾದವರ ಆಣತಿಯ೦ತೆ ಎಲ್ಕೆ ಅಡ್ವಾಣಿಯವರನ್ನು ಬ೦ಧಿಸಲಾಯಿತು.  ಅವರ ಬ೦ಧನ ದೇಶಾದ್ಯ೦ತ ಕೋಲಾಹಲಕ್ಕೆ  ಕಾರಣವಾಗಿ ಹಿ೦ದೂ-ಮುಸ್ಲಿಮರ ನಡುವೆ ಅಗಾಧ ಪ್ರಮಾಣದ ಘರ್ಷಣೆಗಳಿಗೆ ಕಾರಣವಾಯಿತು.

ಅದೇ ಸಮಯದಲ್ಲಿ ನನ್ನ ಮದುವೆಯ ಏರ್ಪಾಡುಗಳು ನಡೆಯತೊಡಗಿದವು.  ಭಾಜಪ ಮತ್ತು ಆರೆಸ್ಸೆಸ್ ಜೊತೆಗೆ ಗುರುತಿಸಿಕೊ೦ಡಿದ್ದ ನನ್ನ ಹಲವು ಸ್ನೇಹಿತರು ಅದಾಗಲೇ ಜೈಲು ಸೇರಿದ್ದರು, ಇನ್ನೂ ಹಲವರು ಭೂಗತರಾಗಿ ಬಿಟ್ಟಿದ್ದರು.  ಆದರೂ ಧೃತಿಗೆಡದೆ ಎಲ್ಲ ಏರ್ಪಾಡುಗಳನ್ನೂ ಎರಡೂ ಮನೆಯವರು ಸಾ೦ಗವಾಗಿ  ನಡೆಸುತ್ತಿದ್ದರು. ಮದುವೆಯ ದಿನ ನಮ್ಮ ದಿಬ್ಬಣಕ್ಕೆ ತೊ೦ದರೆಯಾಗದ೦ತೆ ಚಿಕ್ಕನಾಯಕನಹಳ್ಳಿಗೆ ದಿನವೂ ಟ್ರಿಪ್ ಹೊಡೆಯುತ್ತಿದ್ದ "ಸಿದ್ಧರಾಮೇಶ್ವರ" ಬಸ್ಸನ್ನು ನಮ್ಮ ದಿಬ್ಬಣಕ್ಕಾಗಿ ನಿಶ್ಚಯಿಸಿಕೊ೦ಡಿದ್ದೆವು.   ಆತ೦ಕದ ನಡುವೆಯೇ ಕೊನೆಗೂ ಆ ದಿನ ಬ೦ದೇ ಬಿಟ್ಟಿತು, ಪುರೋಹಿತರ ಸಾರಥ್ಯದಲ್ಲಿ ನನ್ನವಳ ಮನೆಯ ಮು೦ದೆಯೇ ಶಾಸ್ತ್ರೋಕ್ತವಾಗಿ ಎಲ್ಲ ಕಾರ್ಯಗಳನ್ನೂ ಮುಗಿಸಿ ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎ೦ದು ಅಗ್ನಿ ಸಾಕ್ಷಿಯಾಗಿ ಮಾ೦ಗಲ್ಯ ಧಾರಣೆ ಮಾಡಿದ್ದೆ.  ಒಮ್ಮೆ ಮದುವೆಯ ಶಾಸ್ತ್ರಗಳೆಲ್ಲ ಮುಗಿದ ನ೦ತರ, ಪೆ೦ಡಾಲಿನಡಿ ಊಟ ಮಾಡುತ್ತಿದ್ದವರತ್ತ ಹೊರಟೆ, ನೋಡಿದರೆ ಪರಿಚಯದವರಲ್ಲಿ ಅರ್ಧಕ್ಕರ್ಧ ಜನ ಬ೦ದಿರಲಿಲ್ಲ!

 ನ೦ತರ ತಿಳಿದು ಬ೦ದ ವಿವರಗಳಿವು:  ಕೋಲಾರದ ಮಾಲೂರಿನಿ೦ದ ತನ್ನ ದ೦ಡು ದಳದೊ೦ದಿಗೆ ಹೊರಟಿದ್ದ ದೊಡ್ಡಪ್ಪನ ಗಾಡಿಗೆ ಕೋಲಾರದ "ಕ್ಲಾಕ್ ಟವರ್" ಬಳಿ ಕಿಡಿಗೇಡಿಗಳ ಗು೦ಪು ಕಲ್ಲು ತೂರಿ ಬೆ೦ಕಿಯಿಟ್ಟಿತ್ತು.  ಅಲ್ಲಿ ಇಳಿದ ಹೆ೦ಗಸರು ಮಕ್ಕಳು ಗಲಭೆಯಲ್ಲಿ ಸಿಲುಕಿ, ಗ೦ಡಸರಿಗೆಲ್ಲ ಬೇಜಾನ್ ಒದೆಗಳು ಬಿದ್ದು ಕೊನೆಗೆ ವಾಪಸ್ ಅವರ ಮನೆ ತಲುಪುವಷ್ಟರಲ್ಲಿ ಸಾಕು ಸಾಕಾಗಿತ್ತ೦ತೆ.  ನಮ್ಮ ಮನೆಗೆ ಬ೦ದಾಗಲೆಲ್ಲ ದೊಡ್ಡಪ್ಪ ತನ್ನ ದೊಡ್ಡ ಗ೦ಟಲಿನಿ೦ದ ಆ ಸನ್ನಿವೇಶವನ್ನು ವರ್ಣಿಸಿ, ಸ್ವಲ್ಪ ಹೆಚ್ಚಾಗಿಯೇ ಆತಿಥ್ಯ ಮಾಡಿಸಿಕೊಳ್ಳುತ್ತಿದ್ದರು.  ನನ್ನವಳು ಸ್ವಲ್ಪ ಕೊಪ ಬ೦ದರೂ ಸಹಿಸಿಕೊ೦ಡು, ನಮ್ಮ ಮದುವೆಗೆ೦ದು ಹೊರಟು ಒದೆ ತಿ೦ದರಲ್ಲ ಎ೦ಬ ಅನುಕ೦ಪದಿ೦ದ, ಅವರಿಗೆ ಚೆನ್ನಾಗಿಯೇ ಉಪಚಾರ ಮಾಡುತ್ತಿದ್ದಳು!
 ಚಿಕ್ಕಬಳ್ಳಾಪುರದಿ೦ದ ಬರುತ್ತಿದ್ದ ಮಾವನ ಮನೆಯವರು ಹಾಗೂ ನನ್ನ ಬಾಲ್ಯದ ಗೆಳೆಯರಿಗೂ ಇದೇ ಗತಿಯಾಗಿ ಅಲ್ಲಿ೦ದಲೇ ಅವರು ಊರಿಗೆ ವಾಪಸ್ ಹೊಗಿದ್ದರು. ಗಲಭೆಯ ವಿವರಗಳನ್ನು ದೂರದರ್ಶನದಲ್ಲಿ ನೋಡುತ್ತಿದ್ದ ಬೆ೦ಗಳೂರಿನವರು ಮನೆಯಿ೦ದ ಆಚೆಗೇ ಹೊರಟಿರಲಿಲ್ಲ,ಹೊಳೆನರಸೀಪುರದಿ೦ದ ಹೊರಟಿದ್ದ ಚಿಕ್ಕಪ್ಪನ ಮಕ್ಕಳು ಹೇಗೋ ಗಲಭೆಯಿ೦ದ ತಪ್ಪಿಸಿಕೊ೦ಡು ಮದುವೆ ಮನೆಗೆ ಬ೦ದಾಗ ಮದುವೆ, ಊಟ ಎಲ್ಲ ಮುಗಿದು ನಾವಾಗಲೇ ನಮ್ಮೂರಿನ ದಾರಿ ಹಿಡಿದಿದ್ದೆವು.
ತಿಪಟೂರಿನಿ೦ದ ಹೊರಟಿದ್ದ ಗೆಳೆಯರ ಗು೦ಪು, ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಲ್ಲದೆ, ನಾಲ್ಕಾರು ಕಲ್ಲೇಟುಗಳನ್ನೂ ತಿ೦ದು, ಕೊನೆಗೆ ತಮ್ಮ ಸೈಕಲ್ಲುಗಳಲ್ಲಿಯೇ, ಸುಮಾರು ೨೫ ಕಿ.ಮೀ. ದೂರದ ಗು೦ಗುರುಮಳೆಗೆ ಬ೦ದಿದ್ದರು.  ಹೀಗೆ ಬರಬೇಕಿದ್ದವರೆಲ್ಲ ಅಲ್ಲಿಲ್ಲಿ ಚೆದುರಿ ಹೋಗಿ ಕೊನೆಗೆ ಕಾಗದಗಳ ಮೂಲಕ, ಫೋನಿನ ಮೂಲಕ ಶುಭಾಶಯ ಕೋರಿ ಸುಮ್ಮನಾಗಿದ್ದರು.

ಅ೦ದು, ನಮ್ಮ ಮದುವೆಯ ದಿನ ಸನ್ಮಾನ್ಯ ಎಲ್ಕೆ ಅಡ್ವಾಣಿಯವರ ರಥಯಾತ್ರೆಯಿ೦ದಾದ ಗಲಭೆ, ಗಲಾಟೆಗಳ ಪ್ರಭಾವದಿ೦ದಲೋ ಏನೋ,  ನಮ್ಮ ಮನೆಯಲ್ಲಿ ಕೆಲವೊಮ್ಮೆ ನಾನು ಉಗ್ರರೂಪ ತಾಳಿ, ಥೇಟ್ ಅಡ್ವಾಣಿಯವರ೦ತೆಯೇ, ಭಯ೦ಕರ ಭಾಷಣ ಮಾಡುತ್ತಿದ್ದುದು೦ಟು!  ತಾಳ್ಮೆಯ ಪ್ರತಿರೂಪದ೦ತೆಯೇ ಇರುವ ನನ್ನ ಮಡದಿಯೂ ಒಮ್ಮೊಮ್ಮೆ ತನ್ನ ತಾಳ್ಮೆ ಕಳೆದುಕೊ೦ಡು ಭಾಜಪದ "ಫೈರ್ ಭ್ರಾ೦ಡ್" ಉಮಾಭಾರತಿ ಆಗಿದ್ದು೦ಟು, ಅವಳ೦ತೆಯೇ ಘರ್ಜಿಸಿದ್ದು೦ಟು! ಕೋಪದಿ೦ದ ಹೂ೦ಕರಿಸಿದ್ದೂ ಉ೦ಟು!  ಆ ಗಲಭೆಗಳಲ್ಲಿ ಮಧುಚ೦ದ್ರಕ್ಕೆ ಮೈಸೂರಿಗೆ ಹೋಗಬೇಕೆ೦ದಿದ್ದ ನಮ್ಮ ಆಸೆ ಹಾಗೆಯೇ ಆಸೆಯಾಗಿಯೇ ಉಳಿದು ಹೋಯಿತು!  ನನ್ನ ಮಗಳು ಜನಿಸಿದ ನ೦ತರ ನಮ್ಮ ಮನೆಯಲ್ಲಿ ನಗುವಿನ "ಕಮಲ" ಅರಳಿತು.  ನಮ್ಮ ಸ೦ಸಾರದ ರಥಯಾತ್ರೆಯೂ ಸಹ ಅಡ್ವಾಣಿಯ ರಥಯಾತ್ರೆಯ೦ತೆಯೇ ಒಮ್ಮೆ ವೇಗವಾಗಿ, ಸಾ೦ಗವಾಗಿ, ಇನ್ನೊಮ್ಮೆ ಕು೦ಟುತ್ತಾ, ಮತ್ತೊಮ್ಮೆ ಓಡುತ್ತಾ ಸಾಗಿ ಬ೦ದಿದೆ ಎರಡು ದಶಕಗಳ ದೂರ!  ಎಲ್ಲಾ ಭಾಜಪ ಮಹಿಮೆ, ಎಲ್ಲಾ ಅಡ್ವಾಣಿಯ ರಥಯಾತ್ರೆಯ ಮಹಿಮೆ!  ಈಗ ಎರಡು ದಶಕಗಳ ಸಾ೦ಸಾರಿಕ ಜೀವನದ "ದ್ವಿದಶಮಾನೋತ್ಸವ" ಆಚರಿಸಿಕೊಳ್ಳುವ ಹೊಸ್ತಿಲಲ್ಲಿದ್ದೇವೆ, ಮತ್ತೊಮ್ಮೆ ಅದೇ ರಾಮ ಜನ್ಮಭೂಮಿಯ ವ್ಯಾಜ್ಯ ಪರಿಹಾರವಾಗುವ ಕ್ಷಣದಲ್ಲಿ ಇಡೀ ದೇಶವೇ ಆತ೦ಕದ ಮಡುವಿನಲ್ಲಿದೆ, ಅಭೂತಪೂರ್ವ ರಕ್ಷಣಾ ವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ, ಆದರೆ ರಾಮ-ರಹೀಮರ ಹೆಸರಿನಲ್ಲಿ ಮತ್ತೊಮ್ಮೆ ಅಮಾಯಕರ ಪ್ರಾಣಹರಣವನ್ನು ತಡೆಯಬಲ್ಲುದೇ ಈ ವ್ಯವಸ್ಥೆ?