ಅವಮಾನಕ್ಕೆ ಅಂಜಬೇಡಿ...

ಅವಮಾನಕ್ಕೆ ಅಂಜಬೇಡಿ...

ಬರಹ

’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ. ಅವಮಾನದ ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಮುಂದೊಂದು ದಿನ ಸಾಧನೆಯ ಪ್ರತೀಕವೆಂಬಂತೆ ಈ ಜಗತ್ತಿನ ಬಹುದೊಡ್ಡ ವಿಜ್ಞಾನಿಯಾಗಿಬಿಡುತ್ತಾನೆ. ಆತ ಬೇರಾರೂ ಅಲ್ಲ, "ಥಾಮಸ್ ಅಲ್ವಾ ಎಡಿಸನ್"!.

ಅಷ್ಟೇ ಯಾಕೆ, ಮೋಹನದಾಸ ಕರಮಚಂದ ಅನ್ನೋ ಗುಬ್ಬಿ ಗಾತ್ರದ ದೇಹದವನಿಗೆ ಬಿಳಿಯರು ಮಾಡಿದ ಅವಮಾನವು ಆತನನ್ನು ಮಹಾನ್ ಹೋರಾಟಗಾರ "ಗಾಂಧಿ"ಯನ್ನಾಗಿಸುತ್ತದೆ. ಅಸ್ಪೃಶ್ಯ ಎಂಬ ಭಾರತೀಯ ಸಮಾಜದ ಕ್ರೂರ ಅವಮಾನವೊಂದು ಭೀಮರಾವ್ ರಾಮ್‌ಜಿ ಸಕ್ಪಾಲ್ ಎಂಬಾತನಿಂದ ಭಾರತದ ’ಸಂವಿಧಾನ’ವನ್ನೇ ಬರೆಸಿಬಿಡುತ್ತದೆ. ಸ್ವಾತಂತ್ರ ಪೂರ್ವದ ದಿನಗಳಲ್ಲಿ ಬಿಳೀಯರು ಮಾಡುತ್ತಿದ್ದ ಎಷ್ಟೋ ಅವಮಾನಗಳನ್ನು ತಮ್ಮೊಳಗೆ ಅವಡುಗಚ್ಚಿಕೊಂಡೇ, ಭಗತ್‌ಸಿಂಗ್, ಸುಭಾಷ್‌ಚಂದ್ರ ಭೋಸ್, ವೀರ ಸಾವರ್ಕರ್‍ ರಂತಹವರು ಮಹಾನ್ ಹೋರಾಟಗಾರರಾಗಿ ರೂಪುಗೊಂಡು ಇತಿಹಾಸವಾಗಿದ್ದಾರೆ. ಇಷ್ಟೆಲ್ಲ ಕೆಚ್ಚೆದೆಯ ನಾಯಕರುಗಳು ಹುಟ್ಟಿಕೊಂಡಿದ್ದು ’ಅವಮಾನ’ ಅನ್ನೋ ’ಕಿಡಿ’ ಹೊತ್ತಿದ ನಂತರವೇ ಅಲ್ಲವೇ?

ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಜಗತ್ತನ್ನು ನಗಿಸಿದವನು ಚಾರ್ಲಿ ಚಾಪ್ಲಿನ್. ಇನ್ನೂ ಒಂದು ಸೋಜಿಗವೆಂದರೆ ಅವಮಾನಗಳ ನಡುವೆಯೇ ಹುಟ್ಟಿಕೊಂಡವನು ’ಚಾಣಕ್ಯ’!.

ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಹೆತ್ತ ಸಾಧನೆಯ ಪ್ರತೀಕಗಳೇ ಈ ಮೇರು ವ್ಯಕ್ತಿತ್ವಗಳು. ಆದರೆ ನೆನಪಿರಲಿ, ಅಂತಹ ಹೆರಬಲ್ಲಂತಹ ತಾಖತ್ತು ನಿಮ್ಮ ದೇಹಕ್ಕಿರಬೇಕಷ್ಟೆ. ಒಂದು ವೇಳೆ ಆ ತಾಖತ್ತು ನಿಮ್ಮಲ್ಲಿರದೇ ಹೋದಲ್ಲಿ, ಒಂದು ನೆಗ್ಲಿಜಿಬಲ್ ಅನ್ನುವಂತಹ ಸಣ್ಣ ಅವಮಾನ ಕೂಡ ನಿಮ್ಮಲ್ಲಿನ ಅಂತಃಶಕ್ತಿಯನ್ನು ಕೊಂದು ಹಾಕಿ ನಾಮರ್ಧನನ್ನಾಗಿಸಿಬಿಡುತ್ತದೆ.

ಅವಮಾನಗಳು ಬಹಳಷ್ಟು ಪಾಲು ಅನಿರೀಕ್ಷಿತವಾಗಿಯೇ ಆಗೋದು. ನಾಳಿನ ಅವಮಾನವನ್ನು ಎದುರಿಸಲು ಸಜ್ಜಾಗಿದ್ದೇನೆ ಎಂಬ ಮಾನಸಿಕ ಸಿದ್ಧತೆಗೆ ಅದು ಯಾವತ್ತಿಗೂ ಅವಕಾಶ ಮಾಡಿಕೊಡಲಾರದು. ಆದಾಗ್ಯೂ ಅವಮಾನ ಮಾಡುವವರೂ ಕೂಡ ಗೊತ್ತಿಲ್ಲದಂತೆಯೇ, ಅನಿರೀಕ್ಷಿತವಾಗಿ, ಕೆಲವೊಮ್ಮೆ ಅವರ ಗಮನಕ್ಕೆ ಬಾರದಂತೆಯೇ ಮಾಡಿಬಿಡುತ್ತಾರೆ. ಆದರೆ ಆ ಒಂದು ಅವಮಾನ ಇಡೀ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕು ಮತ್ತು ಅಲ್ಲಿಂದಲೇ ನಮ್ಮ ಸಾಧನೆಯೆಂಬ ಗೆಲುವಿನ ಮಹಾ ಜೈತ್ರ ಯಾತ್ರೆ ಪ್ರಾರಂಭಿಸಬೇಕು.

ಒಂದು ವೇಳೆ ಅವಮಾನವನ್ನೇನಾದರೂ ಮರೆತಿರೋ ಅಥವಾ ’ಇದ್ಯಾತರದ್ದು’ ಎಂದು ಕಡೆಗಾಣಿಸಿದಿರೋ, ನೀವು ಲಜ್ಜೆಗೆಟ್ಟವರಾಗಿಬಿಡುತ್ತೀರಿ. ಮತ್ತು ನಿಮಗೆ ಅವಮಾನ ಮಾಡಿದವರನ್ನು ಪರೋಕ್ಷವಾಗಿ ಪುಸಲಾಯಿಸಲು ನೀವೇ ಕಾರಣರಾಗಿಬಿಡುತ್ತೀರಿ. ಆದ ಅವಮಾನವು ನಿಮ್ಮನ್ನು ತುಳಿದು ಹಾಕಿದರಂತೂ ನೀವು ಹೇಡಿಗಳಂತಾಗಿಬಿಡುತ್ತೀರಿ. ಅವಮಾನಕ್ಕಂಜಿ ಅಳುತ್ತ ಕುಳಿತರಂತೂ ಜೀವಮಾನವಿಡೀ ನಿಮ್ಮ ಮನಸು ಅಳುಬುರುಕಿಯಾಗಿಬಿಡುತ್ತದೆ.

ಅವಮಾನವು ಹುಟ್ಟಿಸುವ ಛಲವನ್ನೇ ನೀವು ಗರ್ಭೀಕರಿಸಿಕೊಳ್ಳಬೇಕು, ಆ ಗರ್ಭದಿಂದ ಸಾಧನೆಯ ಮಗು ಹೆರಬೇಕು, ಆ ತಾಕತ್ತು ನಿಮ್ಮಲ್ಲಿದೆಯೆಂಬುದನ್ನು ಈ ಜಗತ್ತಿಗೆ ನೀವು ತೋರಿಸಿಕೊಡಬೇಕು ಮತ್ತು ಆ ಮೂಲಕ ಅವಮಾನಿಸಿದವರಿಗೆ ಮುಖಭಂಗ ಮಾಡಿಬಿಡಬೇಕು. ಖಂಡಿತವಾಗ್ಯೂ ಅಂತಹದ್ದೊಂದು ಸಾಧ್ಯತೆ ನಿಮ್ಮಲ್ಲಿನ ಛಲಕ್ಕೆ ಇದ್ದೇ ಇರುತ್ತದೆ. ಹಾಗೆಯೇ ಅದನ್ನು ಹುಟ್ಟಿಸುವ ಅವಮಾನಕ್ಕೂ ಕೂಡ. ಮುಂದೆಂದಾದರೂ ಅವಮಾನವಾಯಿತೆಂದರೆ, ಮುಸುಮುಸು ಅಳದೆ, ಛಲತೊಟ್ಟು ಗೆಲುವಿನೆಡೆಗೆ ಜೈತ್ರಯಾತ್ರೆ ಪ್ರಾರಂಭಿಸಿ.

ಪ್ರೇಮ್....