ಚಾಂದ್ರಾಯಣ ವ್ರತ

ಚಾಂದ್ರಾಯಣ ವ್ರತ

ಬರಹ

ಚಾಂದ್ರಾಯಣ ಎಂಬ ಪದವು ಚಂದ್ರನ ಚಲನೆಯ ಹಾದಿ ಎಂಬರ್ಥ ಕೊಡುತ್ತದೆ. ಇದೊಂದು ವ್ರತ.

ಕೂರ್ಮ ಪುರಾಣದ ಹರಿ ಭಕ್ತಿ ವಿಲಾಸ ೮.೧೫೮,೧೫೯ರಲ್ಲಿ ವಿವರಿಸಿರುವಂತೆ, ದ್ವಿಜರು (ಎರಡು ಬಾರಿ ಜನ್ಮ ತಳೆದವರು - ಅಂದರೆ ಪಕ್ಷಿಗಳು ಮತ್ತು ಬ್ರಾಹ್ಮಣರು ಎಂಬರ್ಥ) ಅಣಬೆ, ಬಾಳೆಯ ಎಲೆ, ಸೂರ್ಯಕಾಂತಿಯ ಎಲೆ, ಈರುಳ್ಳಿ, ಬೆಳ್ಳುಳ್ಳಿ, ಮರದ ರಸ, ನೆಲದ ಕೆಳಗೆ ಬೆಳೆಯುವ ಪದಾರ್ಥಗಳು ಮತ್ತು ಬಿಳಿ ಕುಂಬಳಕಾಯಿಯನ್ನು ತಿನ್ನಬಾರದು. ಇದನ್ನು ತಿಂದರೆ ಅವರು ಅಧಮರಾಗುವರು. ಮನು ಸಂಹಿತೆಯೂ ಇದನ್ನೇ ಹೇಳುತ್ತದೆ. ಹಾಗೆ ಮಾಡಿದವರಿಗೆ ಪ್ರಾಯಶ್ಚಿತ್ತವನ್ನು ಪದ್ಮ ಪುರಾಣದ ಬ್ರಹ್ಮ ಕಾಂಡದಲ್ಲಿ ತಿಳಿಸಿದೆ.

ಪದ್ಮ ಪುರಾಣದ ಪ್ರಕಾರ ಚಾಂದ್ರಾಯಣ ವ್ರತವನ್ನು ಆಚರಿಸಬೇಕು. ಈ ವ್ರತದಂತೆ ಅಮಾವಾಸ್ಯೆಯ ದಿನ ಉಪವಾಸವನ್ನು ಮಾಡಬೇಕು. ನಂತರ ಚಂದ್ರನ ಪ್ರಗತಿಯಂತೆ ದಿನಕ್ಕೊಂದು ತುತ್ತಿನಂತೆ ಆಹಾರವನ್ನು ಹೆಚ್ಚಿಸುತ್ತಾ ಹೋಗಬೇಕು. ಅಂದರೆ ಪಾಡ್ಯದ ದಿನ ಒಂದು ತುತ್ತನ್ನೂ, ಬಿದಿಗೆಯ ದಿನ ಎರಡು ತುತ್ತನ್ನೂ, ತದಿಗೆಯ ದಿನ ಮೂರು ತುತ್ತು ಆಹಾರವನ್ನೂ ಸೇವಿಸಬೇಕು. ಅಂತೆಯೇ ಹುಣ್ಣಿಮೆಯ ದಿನ ೧೫ ತುತ್ತುಗಳ ಆಹಾರ ಸೇವನೆ ಮಾಡಬೇಕು.

ಮತ್ತೆ ಕೃಷ್ಣ ಪಕ್ಷ ಪ್ರಾರಂಭವಾಗಲು ಆಹಾರ ಸೇವನೆಯನ್ನು ಕಡಿಮೆ ಮಾಡುತ್ತಾ ಹೋಗಬೇಕು. ಇದರಂತೆ ಹುಣ್ಣಿಮೆಯ ಮಾರನೆಯದಿನ ೧೪ ತುತ್ತು, ಅದರ ನಂತರದ ದಿನ ೧೩ ತುತ್ತುಗಳ ಆಹಾರ ಸೇವನೆ. ಹೀಗೆ ಮುಂದೆ
ಅಮಾವಾಸ್ಯೆಯ ದಿನ ಒಂದು ತುತ್ತೂ ಅನ್ನಾಹಾರ ಸೇವಿಸದೇ ಉಪವಾಸ ಮಾಡಬೇಕು. ಆಗ ಪ್ರಾಯಶ್ಚಿತ್ತವಾದಂತೆ.

ಈ ವ್ರತ ಈಗಿನ ಕಾಲಕ್ಕೆ ಅರ್ಥವಿಲ್ಲದಂತೆ ತೋರಿದರೂ, ಆರೋಗ್ಯ ದೃಷ್ಟಿಯಿಂದ ಸಮಂಜಸವೆಂದು ತೋರುತ್ತದೆ ಅಲ್ಲವೇ? ಡಯಟಿಂಗ್ ಮಾಡುವ ಜನರು ಒಮ್ಮೆ ಚಾಂದ್ರಾಯಣ ವ್ರತ ಪಾಲಿಸಿ ನೋಡಿ, ನಂತರ ಎಷ್ಟು ತೂಕ ಕಡಿಮೆಯಾಗಿದೆಯೆಂದು ಪರೀಕ್ಷಿಸಿ ನೋಡಿ.