ನಗುತಿಹ ಕುಂಕುಮ

ನಗುತಿಹ ಕುಂಕುಮ

ಬರಹ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.

ಆಶ್ವಯುಜ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನಗಳು ದಸರಾ ಹಬ್ಬ. ಆಗಿನ ದಿನಗಳಲ್ಲಿ ಬೆಳಗ್ಗೆ ಪೂಜೆ ಮಾಡುವಾಗ ಲಲಿತಾ ಪರಮೇಶ್ವರಿ ಮೂರ್ತಿಗೆ ಅಥವಾ ಭಾವಚಿತ್ರಕ್ಕೆ ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆ ಮಾಡಿದರೆ ಒಳ್ಳೆಯದು ಆಗುವುದು ಎಂಬ ಪ್ರತೀತಿ ಇದೆ.

ಆಗ ಮನೆಗಳಲ್ಲಿ (ಹೆಚ್ಚಿನದಾಗಿ ದಕ್ಷಿಣ ಕರ್ನಾಟಕದಲ್ಲಿ) ಗೊಂಬೆಗಳನ್ನು ಕೂರಿಸಿ ಅವುಗಳೊಡನೆ ಮುಖ್ಯವಾಗಿ ರಾಜ ರಾಣಿ ಗೊಂಬೆಗಳನ್ನಿಟ್ಟು ಜೊತೆಗೆ ಕಲಶವನ್ನಿಟ್ಟು ಪೂಜಿಸುವರು.
ಅಲ್ಲೇ ಲಲಿತಾಮಾತೆ ಅಥವಾ ದೇವಿಗೆ ಕುಂಕುಮಾರ್ಚನೆ ಮಾಡುವರು.

ಪತ್ರಗಳನ್ನು ಬರೆಯುವಾಗ ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ| ಸೌ| ಹ| ಕುಂ| ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ. ಹೆಣ್ಣುಮಕ್ಕಳಿಗೆ ಹಾರೈಸುವಾಗ ಚಿರಂಜೀವಿಯಾಗಿ ಅಂದರೆ ಸಾವೇ ಬರದಂತೆ ಇರು ಎಮ್ದೂ ಸೌಭಾಗ್ಯವತಿಯಾಗಿ ಅಂದ್ರೆ ಗಂಡನ ಪ್ರಾಣ ಉಳಿಸಿಕೊಂಡು ಅವನೊಡನೆ ಇರು ಎಂದೂ, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.

ಈ ಕುಂಕುಮ ಅನ್ನುವುದು ಏನು?

ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಅದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುವರು.

ಕುಂಕುಮವನ್ನು ಹಣೆಯ ಮಧ್ಯದಲ್ಲಿ ಇಟ್ಟುಕೊಳ್ಳುವರು. ಈ ಜಾಗ ಬುದ್ಧಿಶಕ್ತಿ, ವಿವೇಕ ಇರುವ ತಲೆಯ ಮುಂಭಾಗ. ಈ ಜಾಗದಲ್ಲಿ ಅಶಕ್ತರಾಗಿರುವವರನ್ನು ಸಮ್ಮೋಹನಗೊಳಿಸಲು ಸುಲಭ. ಈ ಜಾಗದಲ್ಲಿ ಉಷ್ಣ ಉತ್ಪಾದನೆ ಬಹಳವಾಗಿ ಆಗುವುದು. ತುಂಬಾ ಯೋಚಿಸುವವರು ತಲೆ ಬಿಸಿ ಆಗಿದೆ ಎನ್ನುವರು.
ಹಾಗೂ ಕೆಲವರು ಭ್ರೂಮಧ್ಯ ಭಾಗದಲ್ಲಿ ಇಟ್ಟುಕೊಳ್ಳುವರು. ಏಕಾಗ್ರತೆಗೆ ಇದು ತುಂಬಾ ಸಹಾಯಕಾರಿ.

ಇನ್ನೂ ಒಂದು ವಿಷಯವೆಂದರೆ, ಯೋಗಿಗಳು ಧ್ಯಾನದ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿ ಸುಪ್ತವಾದ ಕುಂಡಲಿನೀ ಶಕ್ತಿಯ ಪ್ರಚೋದನೆ ಮಾಡುವರು. ಆ ಶಕ್ತಿ ಮೇಲೆ ಮಿದುಳಿಗೆ ಏರುವುದು. ಆಗ ಭ್ರೂ ಮಧ್ಯ ಭಾಗದಿಂದ ಹೊರ ಹೋಗುವ ಸಾಧ್ಯತೆಗಳಿರುವುದು. ಅದನ್ನು ತಡೆಯಲು ಆ ಭಾಗದಲ್ಲಿರುವ ಅಜ್ಞ ಚಕ್ರವನ್ನು ಪ್ರಚೋದಿಸುವರು. ಇದನ್ನು ಪ್ರಚೋದಿಸಲನ್ವಯ ಉಂಗುರದ ಬೆರಳಿನಿಂದ ಕುಂಕುಮವನ್ನು ಆ ಭಾಗದಲ್ಲಿ ಇಡುವರು. ಕುಂಕುಮದಲ್ಲಿ ಉಷ್ಣವನ್ನು ಶಮನ ಮಾಡುವ ಶಕ್ತಿ ಇದೆ.

ಕುಂಕುಮ ಧರಿಸಿರುವ ಹೆಣ್ಣಿನ ಮುಖವನ್ನು ಯಾರಾದ್ರು ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆಯೇ ಕೇಂದ್ರೀಕೃತವಾಗುತ್ತೆ, ಅವಳ ಬೇರೆ ಯಾವ ಸೌಂದರ್ಯವನ್ನೂ ನೋಡಿ ಚಂಚಲಚಿತ್ತರಾಗಲು ಅವಕಾಶವಿರುವುದಿಲ್ಲ. ನಮ್ಮ ಪೂರ್ವಜರು ಕುಂಕುಮವಿಡಲು ಹೇಳುತ್ತಿದ್ದಕ್ಕೆ ಇದೂ ಒಂದು ಕಾರಣ.

ಹಿಂದೂ ಹೆಂಗಸಿನ ಜೀವನದಲ್ಲಿ ಅರಿಶಿನ ಕುಂಕುಮದ ಮಹತ್ವ ಪತಿ ಜೀವತ್ಯಾಗದ ನಂತರ ಇದನ್ನು ಯಾಕೆ ಧರಿಸಬಾರದು ಎಂಬ ಪ್ರಶ್ನೆ ಉದ್ಭಸುವುದು. ಕುಂಕುಮ ಪತಿಯ ಇರುವಿಕೆಯನ್ನು ಸೂಚಿಸುವ ಒಂದು ದ್ಯೋತಕವಷ್ಟೇ ಅಲ್ಲ. ಅದಕ್ಕೆ ಇನ್ನೂ ವಿಶೇಷ ಮಹತ್ವವಿದೆ.
ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು. ಆಕೆಯ ಅಂದ ಚಂದವೆಲ್ಲಾ ಕೇವಲ ತನ್ನ ಪತಿಗೆ ಮೀಸಲು. ತಾಳಿ ಸೆರಗಿನ ಒಳಗೆ ಮುಚ್ಚಿರುವುದರಿಂದ ಮದುವೆಯಾದ ಸಂಕೇತ ಸೂಚಿಸಲು ಕುಂಕುಮದ ಉಪಯೋಗ. ರಾಮಾಯಣದ ಕಥೆಯಲ್ಲಿ ಹೇಳಿರುವಂತೆ, ಸೀತಾದೇವಿ ಅಶೋಕವನದಲ್ಲಿ ಶೋಕತಪ್ತಳಾಗಿ ಕುಳಿತಿರುವಾಗ ಆಂಜನೇಯ ರಾಮನ ಮುದ್ರಿಕೆಯನ್ನು ತೆಗೆದುಕೊಂಡು ಹೋದ. ಅಲ್ಲಿ ಸೀತೆ ಯಾರೆಂದು ಗುರುತಿಸಲಾಗಲಿಲ್ಲ. ಆದರೆ ಅವನಿಗೆ ದಿವ್ಯ ದೃಷ್ಟಿ ಇದ್ದದ್ದರಿಂದ ಸೀತೆಯ ತಾಳಿ ಗೋಚರವಾಯಿತು. ಈಗ ಕಣ್ಣಿದ್ದೇ ನಮಗೆ ಕಾಣಿಸುವುದಿಲ್ಲ, ಇನ್ನು ದಿವ್ಯದೃಷ್ಟಿ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ಸೂಚ್ಯವಾಗಿ ಕುಂಕುಮ ಇಟ್ಟುಕೊಳ್ಳುವ ಸಂಪ್ರದಾಯ. ಆದರೂ ಆಗೋದು ಆಗೇ ಆಗತ್ತೆ, ತಡೆಯಲಾಗತ್ಯೇ?

ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾರನ್ನೇ ನೋಡುವಾಗ ನಮ್ಮ ಕಣ್ಣು ಮುಡಿಯಿಂದ ಅಡಿಯವರೆವಿಗೆ ಚಲಿಸುವುದು. ಮೊದಲು ಕಾಣುವುದು ಮುಖದಲ್ಲಿನ ತಲೆಗೂದಲು. ನಂತರ ಹಣೆಯಮೇಲೆ ಕಾಣಿಸುವ ಕುಂಕುಮ. ಇದರ ಬಣ್ಣ ಹಲವಾರು. ಈಗೀಗಂತು ಬಿಂದಿಗಳು ಬಂದು ತರಹಾವರಿ ಚಿತ್ರ ವೈಚಿತ್ರವಾದ ಕುಂಕುಮಗಳನ್ನು ನೋಡಬಹುದು. ಆದರೆ ಇಂದಿನ ಹೆಣ್ಣುಮಕ್ಕಳಲ್ಲಿ ಇದನ್ನು ಕಾಣುವುದು ಬಹಳ ಕಷ್ಟ. ಇದಕ್ಕೆ ಕಾರಣವೇನೆಂದರೆ ಈಗಿನ ತರಾತುರಿ ಜೀವನದಲ್ಲಿ ಪುಡಿ ಕುಂಕುಮ ಕಾಪಾಡುವುದು ಕಷ್ಟ. ಮತ್ತು ಬೆಲ್ಲದ ಜೊತೆ ಮಿಶ್ರಣ ಮಾಡಿದ ಪಾಕದಂತಹ ಕುಂಕುಮ ಮಾಡಲು ಸಮಯವಿಲ್ಲ. ಹಾಗು ಇದೆಲ್ಲ ರೇಜಿಗೆಯ ವಿಷಯ. ಅದರ ಬದಲಾಗಿ ಸುಲಭವಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ಆಕಾರಗಳಿರುವ ಬಣ್ಣ ಬಣ್ಣದ ಬಿಂದಿಗಳು ಹೆಣ್ಣುಮಕ್ಕಳನ್ನು ಆಕರ್ಷಿಸಿದೆ.

ವಿದೇಶೀಯರು ಇದನ್ನು ನೋಡಿ ಅಯ್ಯೋ ಇದೇನು ನಿನ್ನ ಹಣೆಯಲ್ಲಿ ರಕ್ತ ಎಂದು ಕೇಳಿದ ಸಂದರ್ಭವೂ ಇದೆ. ಈಗೀಗ ಅವರುಗಳೂ ಇದೊಂದು ಫ್ಯಾಷನ್ ಎಂದು ಉಪಯೋಗಿಸುತ್ತಿದ್ದಾರೆ.

ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆಯೊಂದಿಗೆ ಕುಂಕುಮವನ್ನು ಹಚ್ಚುವರು. ಇದನ್ನು ಅವರು ಸಿಂಧೂರ ಎನ್ನುವರು.

ಮೊದಲು ಬೆಲ್ಲ ಮತ್ತು ನೀರಿನೊಂದಿಗೆ ಕುಂಕುಮ ಸೇರಿಸಿ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಇದರಿಂದ ಕುಂಕುಮ ಬಿದ್ದು ಹೋಗುತ್ತಿರಲಿಲ್ಲ ಅಥವಾ ಅಳಿಸಿ ಹೋಗುತ್ತಿರಲಿಲ್ಲ. ಈಗೀಗ ಕುಂಕುಮವಿಡುವುದ ಕಡಿಮೆಯಾಗಿ ಬಿಂದಿ ಸಂಸ್ಕೃತಿ ಬಂದಿದೆ. ಹಾಗೇ ಹಿಂದೂಗಳಲ್ಲಿ ಇದೂ ಮಾಯವಾಗುತ್ತಿದೆ, ಆದರೆ ಕಿರಿಸ್ತಾನೀಯರಲ್ಲಿ ಮತ್ತು ಮುಸ್ಲಿಮರಲ್ಲಿ ಇದನ್ನು ಉಪಯೋಗಿಸುತ್ತಿರುವರು. ಕಿರಿಸ್ತಾನೀಯರಿಗೆ ವ್ಯಾಟಿಕನ್ ನಿಂದ ಬಂದಿರುವ ಆದೇಶ - ನೀವು ಎಲ್ಲಿರುವಿರೋ ಅಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅವರಲ್ಲಿ ಒಂದಾಗಿ. ಆದ್ದರಿಂದ ಭಾರತೀಯರ ಸಂಸ್ಕೃತಿಯಾದ ಕುಂಕುಮ ಇಡುವುದನ್ನು ಅವರಲ್ಲಿ ಕಾಣಬಹುದು.

ಪತಿ ವಿಯೋಗವಾದವರು - ಕಪ್ಪು ಬಣ್ಣದ ಸಾಧು ಅಥವಾ ವಿಭೂತಿಯನ್ನು ಇಡುವರು. ಇದೊಂದು ಸೂಚಕ ಅಷ್ಟೆ.

ಕುಂಕುಮದ ಮಹಿಮೆಯ ಬಗ್ಗೆ ನೃಸಿಂಹ ಸ್ತೋತ್ರದಲ್ಲೂ ಹೀಗೆ ತಿಳಿಸಿದೆ.
ಚಂದನಂ ಶಿತಲಮ್ ದಿವ್ಯಮ್ ಚಂದ್ರ ಕುಂಕುಮ ಮಿಶ್ರಿತಂ.

ಆಯುರ್ವೇದದ ಪ್ರಕಾರ ಕುಂಕುಮದಲ್ಲಿ ಅರಿಶಿನದ ಗುಣವಿರುದರಿಂದ ಅದನ್ನು ಔಷಧಿಯಾಗಿ ಉಪಯೋಗಿಸುವರು. ಇದರಲ್ಲಿ ಶಮನ ಶಕ್ತಿ ಇದೆ. ಅದಕ್ಕೋಸ್ಕರವಾಗಿಯೇ ಹುಣ್ಣುಗಳಾದಾಗ ಚಂದನೊಂದಿಗೆ ಕುಂಕುಮ ಮಿಶ್ರನ ಮಾಡಿ ಹಚ್ಚುವರು.

ಇನ್ನು ಗಂಡಸರೂ - ಕುಂಕುಮ, ಚಂದನ, ವಿಭೂತಿ ಗಳನ್ನಿಡುವ ಸಂಪ್ರದಾಯವಿದೆ. ಅದಕ್ಕೆ ಕಾರಣ ಮೇಲೆ ತಿಳಿಸಿರುವಂತೆ ಧ್ಯಾನದಿಂದ ಉಂಟಾಗುವ ಶಕ್ತಿಯನ್ನು ಉಳಿಸಿಕೊಳ್ಳುವುದೂ ಒಂದಾಗಿದೆ. ಹಾಗೇ ಪೂಜೆ ಮಾಡಿ ದೇವರಿಗೆ ಅರ್ಪಿಸಿದ ಕುಂಕುಮವನ್ನೇ ಪ್ರಸಾದವೆಂದು ಇಟ್ಟುಕೊಳ್ಳುವರು.

ಮಲ್ಲೇಶ್ವರಂ ಮತ್ತು ಗಾಂಧಿಬಜಾರಿನಲ್ಲಿ ಗ್ರಂಧಿಗೆ ಅಂಗಡಿಗಳಲ್ಲಿ ಕುಂಕುಮದ ರಾಶಿಯನ್ನು ದೊಡ್ಡ ದೊಡ್ಡ ಬೋಗುಣಿಯಲ್ಲಿ ಚೊಕ್ಕವಾಗಿ ತುಂಬಿಟ್ಟುರುವುದನ್ನು ಕಾಣುವೆವು. ಅದರಲ್ಲೂ ಹಲವಾರು ಬಣ್ಣಗಳಿರುವುವು. ಜಾಸ್ತಿಯಾಗಿ ಉಪಯೋಗಿಸುವುದು ಕೆಂಪು ಬಣ್ಣದ ಕುಂಕುಮ.

ಇನ್ನೇನು ಆಶ್ವಯುಜ ಮಾಸ ಹತ್ತಿರ ಬರುತ್ತಿದೆ. ಲಲಿತಾ ಮಾತೆಗೆ ಕುಂಕುಮಾರ್ಚನೆ ಮಾಡಿ ಹತ್ತನೆಯ ದಿನ ಕಲಶ ವಿಸರ್ಜಿಸಿದ ಮೇಲೆ ಅರ್ಚಿಸಿದ ಕುಂಕುಮವನ್ನು ಸಣ್ಣ ಪೊಟ್ಟಾಣಗಳಾಗಿ ಮಾಡಿ ಪ್ರಸಾದವೆಂದು ಇತರರಿಗೆ ಕೊಡುವ ಸಂಪ್ರದಾಯವೂ ಇದೆ. ನೀವು ಮಾಡುವಿರಾ? ನಮ್ಮ ಮನೆಯಲ್ಲಿ ಹೀಗೆ ಕುಂಕುಮಾರ್ಚನೆ ಮಾಡಿದ ಕುಂಕುಮದ ಒಂದು ದೊಡ್ಡ ಡಬ್ಬಿಯೇ ಇದೆ. ಕುಂಕುಮವನ್ನು ಚೆಲ್ಲಿದರೆ ಅಶುಭ ಅನ್ನುವ ಕಾರಣದಿಂದ ಮನೆಗಳಲ್ಲಿ ಕುಂಕುಮದ ಶೇಖರಣೆ ಜಾಸ್ತಿಯಾಗುತ್ತಲೇ ಇದೆ.

ಒಂದು ಗಮ್ಮತ್ತಿನ ವಿಷಯ ಅಂದ್ರೆ - ನನ್ನನ್ನು ಸುಲಭವಾಗಿ ಗುರುತು ಹಿಡಿಯಲು ನಾನು ಇತರರಿಗೆ ಕೊಡುವ ಸೂಚನೆ ಅಂದ್ರೆ ಇದೇ - ಕುಂಕುಮ ಹಾಕಿ ಜೋಳಿಗೆಯಂತೆ ಚೀಲ ಏರಿಸಿರುವ ಜೋಭದ್ರ ಮುಖ ಕಂಡರೆ ಅದು ಶ್ರೀನಿವಾಸನೇ ಇರಬೇಕು ಎಂದು ತಿಳಿಯಿರಿ.