ಝೆನ್ ೯ : ಸೂತ್ರ ಪಠಣ

ಝೆನ್ ೯ : ಸೂತ್ರ ಪಠಣ

ಬರಹ

ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
“ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು. ಅವಳಿಗೆ ಸಿಗಬೇಕಾದ ಪುಣ್ಯವನ್ನು ಬೇರೆಯವರು ಕಿತ್ತುಕೊಂಡುಬಿಡುತ್ತಾರೆ. ಕೇವಲ ಅವಳಿಗಷ್ಟೇ ಲಾಭವಾಗುವಂಥ ಮಂತ್ರ ಹೇಳಿ” ಎಂದ ರೈತ.
“ಹಾಗಲ್ಲ, ಎಲ್ಲ ಜೀವಿಗಳಿಗೂ ಲೇಸು ಬಯಸುವುದು ಬೌದ್ಧ ಧರ್ಮದ ಉದ್ದೇಶ, ಅದಕ್ಕೇ ನಾವು ಮಂತ್ರಗಳನ್ನು ಹೇಳುತ್ತೇವೆ” ಎಂದು ಸಂನ್ಯಾಸಿ ವಿವರಿಸಿದ.
“ಉದ್ದೇಶವೇನೋ ಚೆನ್ನಾಗಿದೆ. ಆದರೆ ದಯವಿಟ್ಟು ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ. ನಮ್ಮ ಪಕ್ಕದ ಮನೆಯವನಿದ್ದಾನಲ್ಲ ಅವನು ಬಹಳ ದುಷ್ಟ, ನನಗೆ ತುಂಬ ತೊಂದರೆ ಕೊಟ್ಟಿದ್ದಾನೆ. ಅವನೊಬ್ಬನನ್ನು ಬಿಟ್ಟು ಉಳಿದ ಜೀವರಾಶಿಗಳಿಗೆಲ್ಲ ಒಳ್ಳೆಯದಾಗಲಿ ಎಂದು ಮಂತ್ರ ಹೇಳಿ” ಎಂದು ರೈತ ಕೋರಿಕೊಂಡ.