ಏನಂತೀರಾ?

ಏನಂತೀರಾ?

ಬರಹ

 ಖಾಲಿ ಮತ್ತು ಪೂರ್ಣ :

 ಅಕ್ಕನ ಜೊತೆ ಹೀಗೇ ಮಾತಾಡ್ತಾ ಕೂತಿದ್ದೆ. ಟೀಪಾಯ್ ಮೇಲೆ ಒಂದು ಲಗ್ನಪತ್ರಿಕೆಕವರ್ ಕಣ್ಣಿಗೆ ಬಿತ್ತು. ಅಕ್ಕ ಕವರ್ ತೆರೆದರೆ ಒಳಗೆ ಖಾಲಿ. -" ಇದೇನೋ ಖಾಲಿ ಇದೆಯಲ್ಲಾ?..ಅಕ್ಕ ಕೇಳಿದ್ರು. -ಯಾವ್ದು ಖಾಲಿ? ಯಾವುದು ತುಂಬಿದೆ? ..ನನಗರಿವಿಲ್ಲದೆ ನನ್ನ ಮನಸ್ಸು ಏನೇನೋ ಹುಡುಕ್ತಾ ಇದೆ, ಖಾಲಿ ಇದೆ ಎಂಬುದು ಹೌದಾದರೆ ನನ್ನೊಳಗೆ ಪ್ರೀತಿ-ಪ್ರೇಮ-ಮಮಕಾರ-ಕರುಣೆ ಇಂತಾ ಸದ್ಗುಣಗಳಿಲ್ಲದೆ ಖಾಲಿಯಾಗಿದೆ ಎಂದು ಭಾವಿಸಲೇ? ಅಥವಾ ಪೂರ್ಣವಿದೆ ಎಂದರೆ ಕಾಮ,ಕ್ರೋಧ,ಲೋಭ,ಮೋಹ, ಮದ, ಮತ್ಸರ -ಎಂಬ ಅರಿಷಡ್ವರ್ಗಗಳಿಂದ ತುಂಬಿದ್ದೇನೆ ಎಂದೇ? ಮನಸ್ಸು ಏನೇನೋ ಚಿಂತಿಸಿತು. ಮನುಷ್ಯ ಯಾವುದನ್ನು ಖಾಲಿ ಮಾಡಬೇಕೋ ಅದನ್ನು ತುಂಬಿಕೊಂಡಿರ್ತಾನೆ, ಯಾವುದನ್ನು ತುಂಬಿಕೊಂಡಿರಬೇಕೋ ಅದನ್ನು ತುಂಬದೆ ಖಾಲಿಯಾಗಿರ್ತಾನೆ! ಆಲ್ವಾ? ಯೋಚನೆ ಮಾಡಿ, ಯಾವುದನ್ನು ತುಂಬಿಕೊಳ್ಳಬೇಕು? ಯಾವುದನ್ನು ಖಾಲಿ ಮಾಡಬೇಕೂ ಅನ್ನೋದನ್ನು ಸ್ವಲ್ಪ ಯೋಚಿಸಿ, ತನ್ನ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಂಡರೆ ಒಳ್ಳೇದು ಅಲ್ವೇ?

 ಚಿನ್ನದಂತಾ ಮಕ್ಕಳು:

ಒಬ್ಬರು ಹಿರಿಯ ಸಮಾಜ ಸೇವಕರು ಬೆಂಗಳೂರಿನಲ್ಲಿ ಒಂದು ಮನೆಗೆ ಹೋಗಿದ್ದರು. ರಾತ್ರಿ ಅವರ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಎದ್ದು ಮಾಮೂಲಿನಂತೆ ಬೆಳಗಿನ ವಾಕ್ ಹೊರಟು ೮.೩೦ ಕ್ಕೆ ಮನೆಗೆ ಹಿಂದಿರುಗುತ್ತಾರೆ. ಮನೆಯಮುಂದೆ ಸಾರಿಸಿ ರಂಗವಲ್ಲಿ ಇಟ್ಟಿದೆ. ಮನೆಯೊಳಗೆ ಕಾಲಿಡುತ್ತಾರೆ. ಮನೆಯೆಲ್ಲಾ ಅಚ್ಚುಕಟ್ಟಾಗಿದೆ. ಇವರಿಗೆ ಆಶ್ಚರ್ಯ! ಅಲ್ಲಾ, ಮನೆಯಲ್ಲಿ ಇಬ್ಬರು ಅನಾರೋಗ್ಯ ಪೀಡಿತ ಪತಿ ಪತ್ನಿಯರು. ಇಬ್ಬರೂ ಹಾಸಿಗಿ ಹಿಡಿದು ಮಲಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಮನೆ ಮಾತ್ರ ಅಚ್ಚುಕಟ್ಟಾಗಿದೆ. ಈ ಮಹನೀಯರು ಮನೆಯೊಡತಿಯನ್ನು ಕೇಳುತ್ತಾರೆ. "ಅಮ್ಮಾ ಕೆಲಸದವರು ಬಂದು ಕೆಲಸ ಮಾಡಿ ಹೊಗಿಯಾಯ್ತಾ? -" ಇಲ್ಲಾ, ನಮ್ಮ ಮನೆಯಲ್ಲಿ ಕೆಲಸದವರೇ ಇಲ್ಲ." - ಹಾಗಾದರೆ ಮನೆ ಕೆಲಸಗಳನ್ನೆಲ್ಲಾ ಮಾಡುವವರು ಯಾರು? ನಿಮ್ಮ ಇಬ್ಬರು ಗಂಡುಮಕ್ಕಳು ಬಿ ಇ . ಓದುತ್ತಾ ಇದ್ದಾರೆ ಅಲ್ವೇ! -ಇಬ್ಬರೂ ಬಿ ಇ ಓದುತ್ತಾ ಇದ್ದಾರೆ ನಿಜ. ಆದರೆ ಮನೆಯ ಕೆಲಸಗಳನ್ನೆಲ್ಲಾ ಅವರೇ ಮಾಡ್ತಾರೆ. ದೊಡ್ಡೋನು [ರಾಮು] ಅವರಪ್ಪನಿಗೆ ಸ್ನಾನ ಮಾಡಿಸಿ ಅವರನ್ನು ಮಲಗಿಸಿ ಅಡಿಗೆ ಕೆಲಸ ನೋಡಿಕೊಳ್ತಾನೆ. ಚಿಕ್ಕೋನು [ಕಿಟ್ಟಿ] ನನಗೆ ಸ್ನಾನ ಮಾಡಿಸಿ,ನನ್ನ ಸೇವೆ ಎಲ್ಲಾ ಮಾಡಿ ಬಟ್ಟೆ ಎಲ್ಲಾ ಒಗೆದು , ಮನೆಯನ್ನು ಓರಣ ಮಾಡ್ತಾನೆ. ಅಡಿಗೆ ಎಲ್ಲಾ ಮಾಡಿಟ್ಟು ತಮ್ಮ ಊಟ ಬಾಕ್ಸ್ ಗೆ ಹಾಕಿಕೊಂಡು , ನಮಗೆ ನಮ್ಮ ಮಂಚದ ಹತ್ತಿರವೇ ಊಟ ಇಟ್ಟು , ಆದಷ್ಟೂ ಸೇವೆ ಮಾಡಿ ಕಾಲೇಜಿಗೆ ಹೋಗ್ತಾರೆ. ದೊಡ್ಡೋನುದ್ದು ಈ ವರ್ಷ ಫೈನಲ್ ಇಯರ್, ಯಾವುದೋ ಕಂಪನಿಗೆ ಸೆಲೆಕ್ಟ್ ಆಗಿದ್ದಾನಂತೆ. ನಮ್ಮ್ ಅದೃಷ್ಟಕ್ಕೆ ಬೆಂಗಳೂರಿನಲ್ಲೇ ಕೆಲಸ ಸಿಕ್ಕಿದೆ. ಇನ್ನೊಂದು ಆರು ತಿಂಗಳು ಅವನು ಕಷ್ಟ ಪಟ್ಟರೆ ಆಯ್ತು, ಆಮೇಲೆ ಹೇಗಾದರೂ ಮಾಡಿ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬೇಕು. ಮಕ್ಕಳಿಗೆ ಎಷ್ಟೂ ಅಂತ ಕಷ್ಟ ಕೊಡೋದು! ಮಾತು ಮುಗಿಯುವಾಗ ಇಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಯಜಮಾನರು ಹೇಳಿದ್ರು " ಭಗವಂತ ನಮಗೆ ಅನಾರೋಗ್ಯ ಕೊಟ್ಟರೂ ಒಳ್ಳೆ ಮಕ್ಕಳು ಕೊಟ್ಟ. ಕಳೆದವಾರ ಹಾಸನವಾಣಿಯ ಭಾನುವಾರದ ಸಂಚಿಕೆಯಲ್ಲಿ ಮಿತ್ರ ಬೇಲೂರು ನವಾಬ್ ಇದೆ ವಿಚಾರದಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ. ಸಾಮಾನ್ಯವಾಗಿ ಮಕ್ಕಳು ದೊಡ್ದೊರಾಗಿ ಒಂದು ಸ್ಥಾನಕ್ಕೆ ಬಂದಾಗ ಅವರಿಗೆ ಅಪ್ಪ-ಅಮ್ಮ ಮರೆತೆ ಹೋಗಿರುತ್ತೆ. ಅನೇಕ ವೇಳೆ ವೃದ್ಧಾಶ್ರಮವೇ ಅವರಿಗೆ ಗತಿ ಯಾಗಿರುತ್ತೆ. ಇಂತಾ ದಿನಗಳಲ್ಲಿ ನಮ್ಮ ರಾಮು-ಕಿಟ್ಟಿಯನ್ತೋರು ಕೂಡ ಇದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತೆ ಆಲ್ವಾ? ರಾಮು-ಕಿಟ್ಟಿಯನ್ತೋರ ಸಂಖ್ಯೆ ಜಾಸ್ತಿಯಾಗಲೀ ಅಂತಾ ಭಗವಂತನಲ್ಲಿ ಪ್ರಾರ್ಥಿಸೋಣ ಅಲ್ವೇ? ನಿಮಗೇನು ಅನ್ನಿಸುತ್ತೆ ತಿಳಿಸ್ತೀರಾ? ಹರಿಹರಪುರಶ್ರೀಧರ್