ರಜತ ಪರದೆಯ ಹಿಂದೆ

ರಜತ ಪರದೆಯ ಹಿಂದೆ

ಬರಹ

******ಏನು ?? ....ಏನು ??..... ಏನು ??.....********
(ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ )
ನಾನು ಬರೆದ ಲೇಖನ ನೀವು ಓದುವುದಿಲ್ಲವಾ ??
ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು .....

ಗಾಬರಿಗೊಳ್ಳಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ .

ಕಲ್ಯಾಣರೇಖೆ ,ಕಂಕಣಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ .......
" ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ .

ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ .

1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ.
2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ.
3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ .
4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ.
5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಹಿಯ ಹೆಸರು ಬರುತ್ತದೆ .

ಸುಮತಿ ,ಸುಕನ್ಯ , ಲಕ್ಷ್ಮಿ ,ಕಾದಂಬರಿ ,ಪಾರ್ವತಿ, ಇದ್ದ ಹುಡುಗಿಯರೆಲ್ಲರ ಹೆಸರಿನ ಧಾರವಾಹಿ . ಅದಕ್ಕೆ ನಿಮ್ಮ ಮನೆ ಮಗಳು,ಸೊಸೆ ,ತಂಗಿ ,ನಾದಿನಿ ಎಂದು tag line ಗಳು . ಇನ್ನು ಪೌರಾಣಿಕ ಧಾರಾವಾಹಿಗಳು ಕೃಷ್ಣ ,ರಾಮ ,ಈಶ್ವರ ,ಗಣಪತಿ ,ಹನುಮಂತ ಇವರು most happening ದೇವರುಗಳು . ಆಮೇಲೆ ನಾರದ, ಕರ್ಣ , ಕುಂತಿ , ಅರ್ಜುನ ಕೆಲವು ಚಾನೆಲ್ ಗಳಲ್ಲಿ . ಇನ್ನು next Generation ಧಾರಾವಾಹಿಗಳು ಹೀಗಿರಬಹುದು
1) ಗಣೇಶ (ನಿಮ್ಮ ಮನೆ ಅಳಿಯ )
2)ಮಹಾಬಲಿ ಶಿಖಂಡಿ .
3)ಬೊಬ್ಬರ್ಯ ಮಹಾಪುರಾಣ .

ಮತ್ತೆ ಕಥೆಗಳೋ ಕೇಳಬೇಡಿ . ವ್ಯಾಸಮಹರ್ಷಿಗಳು ಧರೆಗಿಳಿದು ಬಂದರೆ ಅವಾಕ್ಕಾದಾರು . ಸ್ವತಂತ್ರ ಭಾರತದಲ್ಲಿ 250 ಮಂದಿ ವ್ಯಾಸರು , ವಾಲ್ಮೀಕಿಗಳು ಹುಟ್ಟಿದ್ದಾರೆ. ಅವನ ಜೀವನದಲ್ಲಿ ಅವನಿಗೆ ಗೊತ್ತಿರದ ವಿಷಯಗಳನ್ನು ಧಾರಾವಾಹಿಯಲ್ಲಿ ನೋಡಿ ಕೃಷ್ಣ ತುಂಬಾ tension ತೆಗೊಂಡಿರಬಹುದು . ಕಳೆದ 8 ವಾರಗಳಿಂದ ಕೃಷ್ಣ ಕುಂಟಾಬಿಲ್ಲೆ ಆಡುವುದು ,ಮೊಸರಿಗೆ ಕಲ್ಲು ಹೊಡೆಯುವುದು ಬಿಟ್ಟರೆ ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ . ಬಾಲಕೃಷ್ಣನ ತುಂಟಾಟಕ್ಕಿಂತ ಅವನ ಅಪ್ಪನ ನಖರಾಗಳೇ ಹೆಚ್ಚು . ಮೊನ್ನೆ ಒಂದು ಪೌರಾಣಿಕ ಧಾರಾವಾಹಿ ನೋಡುತ್ತಿದ್ದೆ . "ಮಚ್ಚಾ .. ಕರ್ಣ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾನೆ ಎಂದು ಹೇಳಿದೆ " . ಎಲ್ಲರೂ ನಗಲು ಶುರುಮಾಡಿದರು . ನಡೆಯುತ್ತಿದ್ದದ್ದು ರಾಮಾಯಣ ಅವನು ಹನುಮಂತ , ಕರ್ಣ ಅಲ್ಲ ಎಂದು ನನಗೆ ಆಮೇಲೆ ತಿಳಿಯಿತು.ಮರುದಿನ ಆ ಧಾರಾವಾಹಿ ಮತ್ತೆ ನೋಡಿದೆ . ಅಯ್ಯೋ ದೇವರೇ ...... ಒಂದೂವರೆ ಅಡಿ ಉದ್ದದ ಬಾಲ ಬಿಟ್ಟರೆ ಹನುಮಂತನಿಗೂ ಆ ನಟನಿಗೂ ಯಾವ ಹೋಲಿಕೆ ಇರಲಿಲ್ಲ . ವಜ್ರಕಾಯದ ಹನುಮಂತ Dieting ಶುರು ಮಾಡಿರಬೇಕು. ತುಂಬ ಸ್ಲಿಮ್ ಆಗಿದ್ದ .ಮತ್ತು ಮುಖದ Plastic surgery ಮಾಡಿಸಿಕೊಂಡಿರಬೇಕು Full Dude ಆಗಿದ್ದ .

ಆಲಿಗೆ ಉಳಿ ಇಂಡುವುದನ್ನು ಕೇಳಿದ್ದೀರಾ ?? ಕನ್ನಡ ಧಾರಾವಾಹಿಗಳಲ್ಲಿ ಮಾಡುತ್ತಾರೆ . ವಿಕ್ರಮಾದಿತ್ಯ ಎಂಬ ಹೆಸರಿನ ವ್ಯಕ್ತಿಯನ್ನು ವಿಕ್ಕಿ ,ಆದಿ ,ವಿಕ್ರಮ್ ಎಂದು ಕರೆಯುವುದು ಕೇಳಿರಬಹುದು ಆದರೆ ಇಲ್ಲಿ ಅವನನ್ನು ವಿಕ್ಸ್ ಎಂದು ಕರೆಯುವಾಗ ನಾವು ಅಮೃತಾಂಜನ್ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ದೆವ್ವದ ಧಾರಾವಾಹಿಗಳನ್ನು ನೋಡಿ ಚಿಕ್ಕ ಮಕ್ಕಳೂ ಹೆದರುವುದಿಲ್ಲ . 3cm ತ್ರಿಜ್ಯದ ಕುಂಕುಮ ಮತ್ತು ಬಿಳಿ ಸೀರೆ ಉಡುವುದು ಬಿಟ್ಟರೆ ಬೇರೆ ಯಾವ ತಂತ್ರಗಳೂ ಇವರಿಗೆ ಗೊತ್ತೇ ಇಲ್ಲ . ನಾಯಕನಿಗೆ ನಾಯಕಿ ಕುಂಕುಮದ ತಟ್ಟೆ ತೆಗೆದುಕೊಂಡು ಬರುತ್ತಿದಬೇಕಾದರೆ ಕಣ್ಣು ನೆತ್ತಿ ಮೇಲೆ ಶಿಫ್ಟ್ ಆಗುತ್ತದೆ . 3 ಎಪಿಸೋಡ್ ನಷ್ಟು ಸಮಯ ನಾಯಕ ನಾಯಕಿಗೆ ಢಿಕ್ಕಿ ಹೊಡೆದು ನಾಯಕಿಯ ಮೇಲೆ ಬೀಳುತ್ತಾನೆ .

ಲಕ್ಷಾಂತರ ರುಪಾಯಿ ಹಾಕಿ ಧಾರಾವಾಹಿ ತೆಗೆಯುವ ನಿರ್ಮಾಪಕರಿಗೆ ನಾಯಕಿಯ ಶಾಲಿಗೆ ಒಂದು safety pin ಕೊಡಲಿಕ್ಕೆ ಆಗುವುದಿಲ್ಲವೇ ?? ಜೋರಾಗಿ ಗಾಳಿ ಬೀಸಿ ಆಕೆಯ ಶಾಲು ಗೋಳಿಮರದ ತುದಿಯಲ್ಲಿ ಸಿಕ್ಕಿ ಬೀಳುತ್ತದೆ ಮತ್ತು ನಾಯಕ 4 ಎಪಿಸೋಡ್ ಕಾಲ ಮರ ಹತ್ತಿ ಶಾಲು ತೆಗೆದುಕೊಂಡು ಬರುತ್ತಾನೆ. ಆಗ ಹಿನ್ನೆಲೆಯಲ್ಲಿ ದೇವಾನಂದ್ ಕಾಲದ ಒಂದು ಹಾಡು ಗುನುಗುತ್ತಿರುತ್ತದೆ . ಮುಂದೆ ನಾಯಕ ನಾಯಕಿಗೆ ಮನಸ್ತಾಪ ಬಂದಾಗ ಈ ದೃಶ್ಯ photo negetive ಥರ 25 ಬಾರಿ repeat ಆಗುತ್ತದೆ . ಮತ್ತೆ ಅಪ್ಪಿ ತಪ್ಪಿ ಎಲ್ಲಾದರೂ ನಾಯಕಿ ಸತ್ತರೆ tension ತೆಗೆದುಕೊಳ್ಳಬೇಡಿ . ಅವಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಳಿ ಬರುತ್ತಾಳೆ. ಇನ್ನು ಕೋರ್ಟಿನ ದೃಶ್ಯ. ವಕೀಲರ ಖತರ್ನಾಕ್ Law Point ಗಳನ್ನು ಕೇಳಿದರೆ ಅಂಬೇಡ್ಕರ್ ನಾಚಿ ನೀರಾದಾನು.

ಇದು ರಜತ ಪರದೆಯ ಕಥೆಯಾದರೆ ದೊಡ್ಡ ಪರದೆಯ ಕಥೆಯೇ ಬೇರೆ . ಬೆಂಗಳೂರಿನ ಪ್ರತಿ ಗಲ್ಲಿಯಲ್ಲಿ ಒಬ್ಬ ಒಬ್ಬ ನಾಯಕ ಅಥವಾ ನಾಯಕಿ ಸಿಗುತ್ತಾರೆ . ಕನ್ನಡ ಚಲನಚಿತ್ರ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ .
1) ನಾಯಕ ನಾಯಕಿಯನ್ನೇ ಮದುವೆಯಾಗುತ್ತಾನೆ .
2)ಸಾಹಸ ದೃಶ್ಯ ಗಳಲ್ಲಿ ನಾಯಕನೇ ಗೆಲ್ಲುತ್ತಾನೆ .ಗೂಂಡಾಗಳೋ ಒಮ್ಮೆಲೇ ಮುಗಿಬೀಳುವುದಿಲ್ಲ, ಶಿಸ್ತಿನ ಸಿಪಾಯಿಗಳಂತೆ ಸರದಿಯಲ್ಲಿ ಬರುತ್ತಾರೆ . .ಒಬ್ಬ ಪೆಟ್ಟು ತಿನ್ನುತ್ತಿರಬೇಕಾದರೆ ಇನ್ನೊಬ್ಬ shirt ನ ಕಾಲರ್ ಸರಿ ಮಾಡಿಕೊಳ್ಳುವುದನ್ನು ನೋಡಿದ್ದೇನೆ . ನಾಯಕ ಮುಟ್ಟಿದರೆ ಸಾಕು ಹಾ sss ಫ್ ...ಹಾ sss ಫ್ ...ಹಾ sss ಫ್ , ಯೀ ... ಯೀ ...ಯೀ ಎಂದು matrix effect ನೊಂದಿಗೆ ಮೂರು ಪಲ್ಟಿ ಹೊಡೆದು ಬೀಳುತ್ತಾರೆ . ನಾಯಕನಿಗೆ ರಕ್ತದ outlet port ಹಣೆಯಲ್ಲಿ ಮಾತ್ರ ಇದೆ ಬೆನ್ನು ಭುಜ ಕಾಲು ಸೊಂಟ ಎಲ್ಲಿ ಪೆಟ್ಟು ಬಿದ್ದರೂ ರಕ್ತ ಹಣೆಯಿಂದ ಮಾತ್ರ ಬರುತ್ತದೆ ಆಗ ನಾಯಕಿ ಓಡಿ ಬಂದು ತನ್ನ ಕಾಂಜೀವರಂ ಸೀರೆ ಹರಿದು ಅವನ ಹಣೆಗೆ ಪಟ್ಟಿ ಕಟ್ಟುತ್ತಾಳೆ.
3)ನಾಯಕ ಮತ್ತು ನಾಯಕಿ ಸಮುದ್ರಕ್ಕೆ ಹಾರಿದರೂ ಅಲ್ಲಿ ಸೊಂಟಕ್ಕಿಂತ ಹೆಚ್ಚು ಆಳದ ನೀರು ಇರುವುದಿಲ್ಲ .
4)ನಾಯಕ ನಾಯಕಿಯರ ನಡುವೆ ಪ್ರೇಮಾಂಕುರವಾಗುವಾಗ ಒಂದು ಹಾಡು ಇರುತ್ತದೆ .
5)ಚಿತ್ರದ ಕೊನೆಯಲ್ಲಿ ಖಳನಾಯಕ ನಾಯಕನಿಗೆ ಹೊಡೆದ ಗುಂಡಿಗೆ ಖಳನಾಯಕನ ತಾಯಿ ಅಡ್ಡ ಬರುತ್ತಾಳೆ ಮತ್ತು ಖಳನಾಯಕನಿಗೆ ಜ್ಞಾನೋದಯವಾಗುತ್ತದೆ .

ನಮ್ಮ ವೈದ್ಯಕೀಯ ವಿಜ್ಞಾನ ಎಷ್ಟು ಮುಂದೆ ಹೋದರೆ ಏನಂತೆ ??ಒಬ್ಬಳು ನಾಯಕಿಯ ,ನಾನು ನೋಡಿದ 8 ಚಲನಚಿತ್ರಗಳಲ್ಲಿ ಎಂಟೂ ಚಿತ್ರಗಳಲ್ಲಿ ಅವಳು ಗರ್ಭಿಣಿ ಆಗಿದ್ದಾಳೆ ಆದರೆ ಒಂದರಲ್ಲೂ ಸಸೂತ್ರ ಬಾಣಂತನ ಆಗಿದ್ದಿಲ್ಲ . ಇನ್ನು ಹಾಸ್ಯ ನಟರೋ .... ಅವರನ್ನು ನೋಡಿ ನಗಬೇಕೆ ವಿನಃ ಅವರ ಹಾಸ್ಯಕ್ಕೆ ಅಳು ಬರುತ್ತದೆ . ಆದರೆ ಏನೇ ಹೇಳಿ theatre ಗಳಲ್ಲಿ ಒಂದೂ ದಿನ ಓಡದ ಚಿತ್ರ 2 ತಿಂಗಳ ನಂತರ " ಮೊತ್ತ ಮೊದಲ ಬಾರಿಗೆ ಸೂಪರ್ ಹಿಟ್ " ಚಲನಚಿತ್ರವಾಗಿ ದೂರದರ್ಶನದಲ್ಲಿ ಬರುತ್ತದೆ . ಟಾಕೀಸಿನಲ್ಲಿ ನೋಡಿದ್ದರೂ ಮತ್ತೆ ಅದನ್ನು ದೂರದರ್ಶನದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಜಾಹೀರಾತನ್ನೂ ಬಿಡದೆ ನೋಡುತ್ತಾನೆ. ನಾನೂ ಅಷ್ಟೆ . ಒಹ್ ... 8:30 .....ನನ್ನ ಧಾರಾವಾಹಿ ಶುರುವಾಯಿತು .... ಮತ್ತೆ ಸಿಗೋಣ .. ಸರೀನಾ ??

********************************************ವಿಕಟಕವಿ ******************