ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

ಬರಹ

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ್ರು ಅಂತಾರೆ. ಗುಣ ಒಂದೇ ಇದ್ರೆ ಸಾಲ್ದು, ಸ್ವಲ್ಪ ಹಣ ಸಹ ಬೇಕು ಮರ್ಯಾದೆ ಗಿಟ್ಟಿಸಿಕೊಳ್ಳೋಕೆ. ಹಣ, ಐಶ್ವರ್ಯ ಇದ್ದವನೇ ದೊಡ್ಡವನು, ಇಲ್ಲದಿದ್ರೆ ದೇವರೇ ಗತಿ." ಇಷ್ಟೆಲ್ಲಾ ಉದ್ದುದ್ದಾದ ಅರ್ಥ ಬಿಡಿಬಿಡಿಸಿ ಹೇಳೊ ಬದಲು,

"ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ
ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ"

ಅಂದ್ರೆ ಎಷ್ಟು ಚನ್ನ? [ಒದರಿ = ಕೂಗಿ]. ಇದೇ ಗಾದೆ(Proverb)ಗಿರುವ ಶಕ್ತಿ.  "ಮಾಡಿದ್ದುಣ್ಣೊ ಮಹರಾಯ", "ಹಾಸಿಗೆ ಇದ್ದಷ್ಟು ಕಾಲು ಚಾಚು", "ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ", "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ", ಎಂಬ ಅನೇಕ ಗಾದೆಗಳು ಜೀವನಾನುಭವವನ್ನು, ಅತ್ಯಂತ ಸಂಕ್ಷಿಪ್ತವಾಗಿ, ವಿವೇಕಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಬಲ್ಲವು.  "ಗಾದೆಗಳು ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುವು." ಯಾವುದೇ ಜನಾಂಗದ ಆತ್ಮಚರಿತ್ರೆ, ತಕ್ಕಮಟ್ಟಿಗೆ ಬಾಹ್ಯಚರಿತ್ರೆ ಕೂಡ ಆ ಜನಾಂಗದ ಗಾದೆಗಳಲ್ಲಿ ಗೋಚರಿಸುತ್ತದೆ. ಉಪ್ಪು ಊಟಕ್ಕೆ ಹೇಗೆ ಅಗತ್ಯವೋ ಹಾಗೆ ಗಾದೆ ಮಾತಿಗೆ ಅವಶ್ಯಕ. ಗಾದೆಗಳಿಲ್ಲದ ದೇಶವಿಲ್ಲ, ಗಾದೆಗಳಿಂದ ದೂರವಾದ ಭಾಷೆಯಿಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ.

"ಗಾದೆಗಳು ಯಾವುದೇ ವಿದ್ವಾಂಸನೊಬ್ಬನ ಪರಿಶ್ರಮದ ಫಲವಲ್ಲ. ಅದು ಬೀದಿಯಲ್ಲಿ ಸಿಕ್ಕುವ ಜ್ಞಾನ. ಅಂದಂದಿನ ಅನುಭವಕ್ಕೆ ಅಲ್ಲಲ್ಲೇ ರೂಪುತಾಳಿ, ಬಾಯಿಂದ ಬಾಯಿಗೆ ಚಲಾವಣೆಯಾಗುತ್ತಾ ಅಂದಂದಿನ ಸಂಧರ್ಭಕ್ಕೆ ಒದಗುವ ಕಾರಣದಿಂದ, ಗಾದೆಗಳು ಹುಟ್ಟಿ ಬೆಳೇದದ್ದು ಬೀದಿಯಲ್ಲೇ [ಜಿ.ಎಸ್.ಶಿವರುದ್ರಪ್ಪ]." ಗಾದೆ ಹಲವರ ಜ್ಞಾನ ಒಬ್ಬನ ವಿವೇಕ - The wisdom of many and the wit of one. ಗಾದೆ ಪ್ರಜ್ಞಾಪೂರ್ವಕವಾಗಿ ರಚಿಸಿದ ಸಾಹಿತ್ಯ ಪ್ರಕಾರವಲ್ಲ; ಸಹಜವಾಗಿ ಮಾತಿನ ಓಘದಲ್ಲಿ ಸೃಷ್ಟಿಯಾಗಿ, ಪ್ರವಹಿಸುತ್ತದೆ.

ಸಾಹಿತ್ಯ ಹಾಗೂ ಭಾಷಿಕ ವೈಲಕ್ಷಣಗಳ ಸಮ್ಮಿಲನ ಗಾದೆ. ಅಂದರೆ ಇದು ಪೂರ್ಣ ಸಾಹಿತ್ಯವೂ ಅಲ್ಲ, ಪೂರ್ಣ ಭಾಷಿಕವೂ ಅಲ್ಲ. ವೇದಗಳಾದರೋ ವಿದ್ವಾಂಸರೊಬ್ಬರು ಸಾಮಾಜಿಕ ಜೀವನದ ಅನುಭವಗಳನ್ನು, ನ್ಯಾಯ ನೀತಿಗಳನ್ನು ಕ್ಲಿಷ್ಟವಾದ ಭಾಷೆಯಲ್ಲಿ ಹಿಡಿದಿಟ್ಟ ಕೆಲಸಗಳು. ಆದರೆ ಗಾದೆಗಳು ಜನಸಾಮಾನ್ಯರು ತಮ್ಮ ದೈನಂದಿನ ಬದುಕಿನಲ್ಲಿ ಅನುಭವಿಸಿದ್ದನ್ನೆಲ್ಲಾ ಕ್ಷಣಾರ್ಧದಲ್ಲಿ ಹಿಡಿದಿಟ್ಟ ಕಿವಿಮಾತುಗಳು. "ಗಾದೆ ವೇದಕ್ಕೆ ಸಮಾನ ಎಂಬುದು ಗಾದೆಯನ್ನೇ ಕುರಿತು ಒಂದು ಗಾದೆ. ವೇದದಂತೆ ಗಾದೆಯೂ ಅಜ್ಞಾತಕತೃವಾಗಿ ವಾಕ್ ಪರಂಪರೆಯಲ್ಲಿ ಸಾಗಿ ಬಂದದ್ದು, ಪ್ರಾಚೀನ ತಮವಾದದ್ದು, ಅಧ್ಯಾತ್ಮ ಭೂಮಿಕೆಯಲ್ಲಿ ವೇದ ಹೇಗೋ ಲೌಕಿಕ ಭೂಮಿಕೆಯಲ್ಲಿ ಗಾದೆ ಹಾಗೆ...ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆಯೂ ಇದೆ. ಈ ಹೊತ್ತು ವೇದಗಳ ಪ್ರಾಮಾಣ್ಯ ಹಿಂದೆ ಬಿದ್ದಿದೆ; ಆದರೆ ಗಾದೆಗಳು ಅಪ್ರತಿಹತವಾದಿಯೇ ಉಳಿದಿವೆ." ಗಾದೆಗೆ ಜನಭಾಷೆಯಲ್ಲಿ ಮಾತ್ರ ಅಸ್ತಿತ್ವ ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲಿರುವ ಸುಭಾಷಿತ, ಲೋಕೋಕ್ತಿ, ನ್ಯಾಯ ಮುಂತಾದುವುಗಳು ಗಾದೆಗಳಿಗೆ ಸಂಪೂರ್ಣ ಸಂವಾದಿಯಾಗಲಾರವು.
ವಿದ್ವಾಂಸರೊಬ್ಬರು, "ಒಂದು ದೇಶದ ಗಾದೆಗಳೇ ಸಾಕು, ಆ ದೇಶವನ್ನು ಅರ್ಥಮಾಡಿಕೊಳ್ಳಲು" ಎಂದಿದ್ದರಂತೆ.  "ಒಂದು ದೇಶದ ನಿಜವಾದ ಬಣ್ಣ, ಬದುಕು ಅಲ್ಲಿನ ಗಾದೆಗಳ ಮೂಲಕ ಬಯಲಾಗುತ್ತದೆ. ಜನತೆಯ ಕಳೆದ ದಿನಗಳ ರೋಷ, ಕೆಚ್ಚು, ಮೌಢ್ಯ, ಮನಸಿಕ ವಿಕಾಸ, ನಗೆ, ನೋವು, ನ್ಯಾಯ, ಅನ್ಯಾಯ - ಮೊದಲಾದ ಎಲ್ಲ ಸಂಗತಿಗಳ ಮಡು ಈ ಗಾದೆಗಳು [ಕಾಳೇಗೌಡ ನಾಗವಾರ]". ಗಾದೆಗಳಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂದಿಸಿದ ಘಟನೆಗಳು, ಜನಸಾಮಾನ್ಯರ ಜೀವನದಲ್ಲಿನ ಅನೇಕ ನಂಬಿಕೆಗಳು, ಜಾತಿ ಪದ್ಧತಿಗಳನ್ನು ಕುರಿತ ವಿಡಂಬನೆಗಳು, ಮಾನವೀಯ ಮೌಲ್ಯಗಳು, ಒಂದು ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ, ಪೌರಾಣಿಕ ಅಂಶಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಆಹಾರ ಪದಾರ್ಥಗಳ ಬಗೆಗಿನ ರುಚಿ, ಅಭಿರುಚಿಗಳ ವೈವಿಧ್ಯವೂ, ಬೇಸಾಯಕ್ಕೆ, ಪಶುಪಾಲನಗೆ ಸಂಭಂದಿಸಿದ, ಸಂಸಾರಕ್ಕೆ ಸಂಭಂದಿಸಿದ ಕಿವಿಮಾತುಗಳೂ ಸಹ ಗಾದೆಗಳಲ್ಲಿ ಕಾಣಬಹುದು. ಒಂದು ದೇಶದ/ಪ್ರದೇಶದ ಗಾದೆಗಳು ಗೊತ್ತಿದ್ದರೆ, ಆ ದೇಶ/ಪ್ರದೇಶ-ವನ್ನು ಅರ್ಥಮಾಡಿಕೊಂಡ ಹಾಗೆ ಎನ್ನಬಹುದು. "ಚೀನಾದ ಜನನಾಯಕ ಮವೋ ತ್ಸೆ-ತುಂಗ್ (Mao Tse-Tung) ಸಾಂಸ್ಕೃತಿಕ ಕ್ರಾಂತಿಯ ಹರಿಕಾರರಾದ ತನ್ನ ಒಡನಾಡಿಗಳ ನಡುವಣ ಸಂವಾದದಲ್ಲಿ ಆ ದೇಶದ ಗಾದೆ, ಗೀತೆ, ಜನಪದಕತೆ, ಐತಿಹ್ಯಗಳನ್ನು ಸಂಧರ್ಭೋಚಿತವಾಗಿ ಬಳಸಿ ವಿಶ್ಲೇಸಿಸುತ್ತಾ ಅವರ ಮನಸ್ಸಿನಾಳದಲ್ಲಿ ಇಳಿಯುವ ರೀತಿಯು ಅತ್ಯಂತ ವಿಶಿಷ್ಟವಾದುದು."

ಗಾದೆಗಳು ನಮ್ಮ ಸಂಸ್ಕೃತಿ ಸಂಪ್ರದಾಯಗಳಿಗೆ ಹಿಡಿದ ಕೈಗನ್ನಡಿಗಳು. ಮಹಾನಗರಗಳಲ್ಲೇ ಬೆಳೆದ ಸಹಸ್ರಾರು ಮಿತ್ರರಿಗೆ ಅರ್ಥವಾಗದೇ ಉಳಿಯಬಹುದಾದ ಹಲವಾರು ಗಾದೆಗಳಿವೆ. ನಮ್ಮ ನೆಲದ ಬಗ್ಗೆ, ಸಂಸ್ಕೃತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಾಬೇಕೆಂಬ ಯಾವ ವ್ಯಕ್ತಿಯೇ ಆಗಲಿ, ಗಾದೆಗಳನ್ನು ಅವುಗಳ ಒಂದು ಸಾಮಾಜಿಕ ಚೌಕಟ್ಟಿನಲ್ಲಿ(social context) ಅರ್ಥಮಾಡಿಕೊಂಡರೆ ಸಾಕು, ನಮ್ಮ ಹಿಂದಿರುವ ಸಂಪ್ರದಾಯ ಸಂಸ್ಕೃತಿಗಳನ್ನು ಅರ್ಥಮಾಡಿಕೊಂಡ ಹಾಗೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಗಾದೆಗಳು ಸಾಂಸ್ಕೃತಿಕ ಅಧ್ಯನಕ್ಕೆ ಅಪೂರ್ವ ಸಾಮಾಗ್ರಿಗಳಾಗಬಲ್ಲವು. ಕನ್ನಡದಲ್ಲೇ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಶುದ್ಧ ಜಾನಪದ ಗಾದೆಗಳಿವೆ. ಜಗತ್ತಿನ ಎಷ್ಟೋ ಭಾಷೆಗಳಲ್ಲಿ ಗಾದೆಗಳ ಶಾಸ್ತ್ರೀಯ ಅಧ್ಯಯನ ನಡೆದಿದೆಯಂತೆ. ಕನ್ನಡದಲ್ಲೂ ಗಾದೆಗಳ ಸಂಗ್ರಹ ಕಾರ್ಯ ನಡೆದಿದೆ. ಸಾವಿರಾರು ಗಾದೆಗಳನ್ನು ಒಂದೇ ಪುಸ್ತಕದಲ್ಲಿ ಓದಬಹುದಾಗಿದೆ. ಪ್ರೊ. ರಾಮೆಗೌಡರ "ನಮ್ಮ ಗಾದೆಗಳು", ಪ್ರೊ. ಕಾಳೆಗೌಡ ನಾಗವಾರರ "ಬೀದಿ ಮಕ್ಕಳು ಬೆಳೆದೊ" ಪುಸ್ತಕಗಳಲ್ಲಿ ಸಹಸ್ರಾರು ಗಾದೆಗಳ ಸಂಗ್ರಹವಿದೆ. ಆದರೆ ನಮಗೆ ಸಿಕ್ಕಿರುವ ಗಾದೆಗಳನ್ನು ಅದರ ಸಾಮಜಿಕ ಪರಿಸರ/ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಕಾರ್ಯವೊಂದು ನಡೆಯಬೇಕಾಗಿದೆ ಎನಿಸುತ್ತದೆ. ಎಲ್ಲಾ ಗಾದೆಗಳ ಸಮಗ್ರ ವ್ಯಾಖ್ಯಾನಗಳುಳ್ಳ ಗ್ರಂಥಗಳು ಇವೆಯೋ ಇಲ್ಲವೋ ಗೊತ್ತಿಲ್ಲ, ನನಗಂತೂ ಸಿಕ್ಕಿಲ್ಲ. ವಿಚಾರಿಸಿದರೆ, "ಅಂಥ ಪುಸ್ತಕಗಳು ಕನ್ನಡದಲ್ಲಿ ಇನ್ನೂ ಬಂದಿಲ್ಲ ಸರ್" ಎನ್ನುವ ಉತ್ತರ ಸಿಕ್ಕಿದ್ದೂ ಉಂಟು. ಪ್ರಾಧ್ಯಾಪಕರು, ವಿಧ್ಯಾರ್ಥಿಗಳು, ಮುಖ್ಯವಾಗಿ, ವಿಶ್ವವಿದ್ಯಾಲಯಗಳು ಗಾದೆಗಳ ಸಮಗ್ರ ವ್ಯಾಖ್ಯಾನದ ಕಾರ್ಯಕ್ಕೆ ಕೈಹಾಕಿದರೆ ಜನಸಾಮಾನ್ಯರಿಗಾಗುವ ಉಪಕಾರ ಅಷ್ಟಿಷ್ಟಲ್ಲ. ಅಂತಹ ವ್ಯಾಖ್ಯಾನದ ಕಾರ್ಯ ಕನ್ನಡ ಸಮಗ್ರ ಜಾನಪದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗುತ್ತದೆ. ನಮ್ಮ ಜಾನಪದ ಪರಂಪರೆಯನ್ನು ಉಳಿಸುವುದಕ್ಕೆ ಮತ್ತೊಂದು ದಾರಿಯ ಸೃಷ್ಟಿಯಾಗುತ್ತದೆ.

ಹೆಚ್ಚಿನ ಓದಿಗಾಗಿ:

  1. "ಬೀದಿ ಮಕ್ಕಳು ಬೆಳೇದೊ - ಗಾದೆಗಳ ಸಂಕಲನ" - ಪ್ರೊ. ಕಾಳೇಗೌಡ ನಾಗವಾರ, ಸಪ್ನಾ ಬುಕ್ ಹೌಸ್ ಬೆಂಗಳೂರು.
  2. "ನಮ್ಮ ಗಾದೆಗಳು" - ಪ್ರೊ. ರಾಮೇಗೌಡ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.
  3. "ಜಾನಪದ ಸ್ವರೂಪ" - ಹಾ. ಮಾ. ನಾಯಕ.
  4. "ಜಾನಪದ: ಸ್ವರೂಪ ಮತ್ತು ಸಾಹಿತ್ಯ" - ಪ್ರೊ. ಡಿ ಲಿಂಗಯ್ಯ ಮತ್ತು ಡಾ. ಕೆ. ಆರ್. ಸಂಧ್ಯಾರೆಡ್ಡಿ - ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಕನ್ನಡದ ಕೆಲವು ಜನಪ್ರಿಯ ಗಾದೆಗಳು [ಗ್ರಂಥಋಣ: "ಜಾನಪದ: ಸ್ವರೂಪ ಮತ್ತು ಸಾಹಿತ್ಯ"]

೧. ಸರಳವಾದ ಗಾದೆಗಳು

  • ಹಾಸಿಗೆ ಇದ್ದಷ್ಟು ಕಾಲು ಚಾಚು.
  • ಮನಸ್ಸಿದ್ದರೆ ಮಾರ್ಗ.
  • ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.
  • ಕೂತು ತಿಂದರೆ ಕುಡಿಕೆ ಹೊನ್ನು ಸಾಲದು.

೨. ಪೌರಾಣಿಕ ಗಾದೆಗಳು

  • ರಾಮರಾಜ್ಯ ಬಂದರೂ ರಾಗಿ ಬೀಸೋದು ತಪ್ಪಿತೆ?
  • ರಾತ್ರಿಯೆಲ್ಲಾ ರಮಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಭಂಧ ಅಂತ ಕೇಳಿದಂಗೆ.
  • ಜಗಳದಿಂದ ಕೌರವರು ಕೆಟ್ಟರು, ಹೆಣ್ಣಿನಿಂದ ರಾವಣ ಕೆಟ್ಟ.

೩. ಐತಿಹ್ಯ ಗಾದೆಗಳು

  • ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡಲಿಲ್ಲ.
  • ತಿರುಪತಿ ಕ್ಷೌರಿಕರು ತಲೆ ಬೋಳಿಸಿದಂತೆ!
  • ಕಾಲವಲ್ಲದ ಕಾಲದಲ್ಲಿ ಕಾಗೆ ರಾಗಿ ತಿಂದಿತು.
  • ಮಣ್ಣೇ ನೋಡದ ತಾಯಿ ನೀನು ಮಾಗಡಿ ನೋಡೋದು ದಿಟವ?

೪. ಸಾಮಾಜಿಕ ಗಾದೆಗಳು

  • ಮುಖ ನೋಡಿ ಮಣೆ ಹಾಕು.
  • ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.
  • ಇಲ್ಲಿಗೂ ಬಂದೆಯಾ ಜಡೆಶಂಕರ?
  • ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
  • ಮನೆಗೆ ಮಾರಿ, ಪರರಿಗೆ ಉಪಕಾರಿ.
  • ತಿರ್ಕೊಂಡ್ ಬಂದ್ರು ಕರ್ಕೊಂಡ್ ಉಣ್ಣು.
  • ಅನ್ಯಾಯದ ಗಳಿಕೆ ಅಡವೀ ಪಾಲು

೫. ನೀತಿ ಗಾದೆಗಳು

  • ಅಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರದು.
  • ಕಿಡಿ ಸಣ್ಣಾದಾದ್ರು ಕಾಡು ಸುಡಬಲ್ಲದು.
  • ಕುಲ ಬಿಟ್ಟರೂ ಛಲ ಬಿಡಬಾರದು.
  • ಕೊಟ್ಟು ಕುದಿಬಾರ್ದು ಇಟ್ಟು ಹಂಗಿಸಬಾರ್ದು.
  • ಜಾತಿ ಬಿಟ್ಟರೂ ನೀತಿ ಬಿಡಬಾರದು.
  • ಜ್ಯೋತಿ ಇಲ್ಲದ ಮನೇಲಿ ನೀತಿ ಇಲ್ಲ.

೬. ಕೌಟುಂಬಿಕ ಗಾದೆಗಳು

  • ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ.
  • ಅಳಿಯಾ ಮನೆ ತೊಳಿಯಾ!
  • ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.
  • ಅಳಿಯನ ಅರಮನೆಗಿಂತ ಮಗನ ಕಿರಿಮನೆ ಲೇಸು.
  • ಅತ್ತೆ ಇಲ್ಲದ ಮನೇಲಿ ಸೊಸೆ ಬಿತ್ತಾರಿ!
  • ತುಂಬಿದ ಕೆರೇನೂ, ತುಂಬಿದ ಮನೇನೂ ಒಡಿಬಾರದು.

೭ ಸಾಹಿತ್ತಿಕ ಗಾದೆಗಳು

  • ಒಲಿದರೆ ನಾರಿ, ಮುನಿದರೆ ಮಾರಿ.
  • ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
  • ಎಳಿಲಾರದ ಎತ್ತು, ಮೆಳೇ ಮೇಲೆ ಬಿತ್ತು.

ನಿಮಗೆ ಮತ್ತಷ್ಟು ಗಾದೆಗಳು ಗೊತ್ತಿದ್ದರೆ commentsನಲ್ಲಿ ಸೇರಿಸಿ, ಇಲ್ಲಿರುವ ಗಾದೆಗಳ ಪಟ್ಟಿಯನ್ನು ವಿಸ್ತರಿಸಿ!