ವೇದ ಎಂದರೇನು ?

ವೇದ ಎಂದರೇನು ?

ಬರಹ

(ಈ ಲೇಖನ ವನ್ನು ಮೊದಲೇ ಪ್ರಕಟಿಸಿದ್ದೆ  ಆದರೇ ಅವು ಕಳೆದು ಹೋದದ್ದರಿಂದ ಈಗ ಮತ್ತೇ ಅವಗಳನ್ನು  ಮತ್ತೊಮ್ಮೆ  ಹಾಕುತ್ತಿದ್ದೇನೆ )

ವೇದ ಎಂದರೇನು ?
ವೇದಗಳು ಹಿಂದೂಗಳಿಗೆ ಮಾತ್ರ ಅಲ್ಲ ,ಸತ್ಯ ಅರಸುವ ವಿಶ್ವದ ಯಾವುದೇ ದೇಶದ ಯಾವುದೇ ವ್ಯಕ್ತಿಗೂ ಅತ್ಯಂತ ಪವಿತ್ರ ಗ್ರಂಥಗಳ ಸಂಕಲನ. ಹಿಂದೂಗಳು ತಮ್ಮ ಸಾಂಸ್ಕೃತಿಕ ಸಂಪತ್ತಿನ ತವರು ಮನೆಯೆಂದು ವೇದಗಳನ್ನು ಆದರಿಸುತ್ತಾರೆ .ಮಾನವೀಯತೆಯ ಮೇರುಕೃತಿಗಳು ವೇದಗಳು ,ಅದು ನಮ್ಮ ಸನಾತನ ಧರ್ಮದ ಆಧಾರ.

ವೇದಗಳು ತತ್ತ್ವಶಾಸ್ತ್ರದ ತವರು .ಧರ್ಮ ಸಂಸ್ಕೃತಿಗಳ ನೆಲೆ .ಅರ್ಥ ಶಾಸ್ತ್ರ ,ವೈದ್ಯಶಾಸ್ತ್ರ ,ನೀತಿಶಾಸ್ತ್ರ ,ಕಾಮಶಾಸ್ತ್ರ ಹಾಗೂ ಜ್ಞಾನ ವಿಜ್ಞಾನಗಳ ಆಕರ.ಮೌಲಿಕ ಬದುಕಿಗೆ ,ಸೂಕ್ಸ್ಮ ಸಂವೇದನೆಗೆ ಆಳವಾದ ಚಿಂತನೆಗೆ ಭಾವುಕತೆಯ ಸ್ಪಂದನಗಳಿಗೆ ಸ್ಪೂರ್ಥಿ ನೀಡುವ ಜ್ಞಾನಸಾಗರ.

ಹೀಗೆ ವೇದವು ಎಲ್ಲ ವಿದ್ಯೆಗಳ ಆಗರವೆಂಬುದು ಎಷ್ಟು ದಿಟವೋ ಅದಕ್ಕಿಂತ ಹೆಚ್ಚಿನ ಮಹತ್ವದ ಇನ್ನೊಂದು ಮುಖ ವೇದಕ್ಕಿದೆ.ಮಾನವನ ಪವಿತ್ರವಾದ ಬದುಕಿಗೆ ಚಾಲನೆ ನೀಡಿ ,ಅನಂತ ಸದ್ಗುಣಗಳ ಶಾಶ್ವತ ಧಾಮನಾದ ಪರಮಾತ್ಮನ ಅರಿವು ನೀಡಿ ,ಸಾಧಕನನ್ನು ಕತ್ತಲೆಯಿಂದ ಬೆಳಕಿನೆಡೆಗೆ ,ಅರಿವಿನಿಂದ ಅಮೃತತ್ತ್ವದೆಡೆಗೆ ಕೊಂಡೋಯ್ಯುವ ,ಇಹ ಪರಗಳ ಬಂಧು -ವೇದವಾಗಿರುತ್ತದೆ .

ವೇದವೆಂದರೇನು ಎನ್ನುವದನ್ನ ಸಂಕ್ಷಿಪ್ತ ವಾಗಿ ನೋಡುವ .

ವಿದ್ ಎಂಬ ಧಾತುವಿನಿಂದ ವೇದ ಎಂಬ ಪದ ಬಂದಿದೆ - ವಿದ್ ಇದರ ಅರ್ಥ ಜ್ಞಾನ ,ತಿಳುವಳಿಕೆ ಎಂದು ಅರ್ಥಕೊಡಲಾಗಿದೆ.

೧) "ವೇದೇನ ವೈ ದೇವಾ ಅಸುರಾಣಂ ವಿತ್ತಂ ವೇದ್ಯಮವಿಂದತ"

ಕಾಠಕ ,ಮೈತ್ರಾಯಣೀಯ , ತೈತ್ತರೀಯ ಸಂಹಿತೆಗಳು "ವೇದ " ಶಬ್ದದ ನಿರ್ವಚನವನ್ನು ಹೇಗೆ ಮಾಡುತ್ತವೆ ----- " ಅಸುರರ ಸಿರಿ , ಪರಮಾತ್ಮನ ಕೃಪೆ ,ದೊರಕಿಸಲು ಕಾರಣವಾದುದರಿಂದ ಅಪೌರಷೆಯ ವಾದ ಶಬ್ದರಾಶಿಯು ವೇದವೆನಿಸಿದೆ "

೨.---"ವೇದಿರ್ದೆವೆಭ್ಯೋ ನಿಲಾಯತ /ತಾಂ ವೇದೇನಾನ್ವಾವಿಂದನ್ ವೇದೇನ ವೇದಂ ವಿವಿದು: ಪ್ರಥಿವೀಯಂ "

ವೇದಗಳನ್ನ ಅಧ್ಯಯನ ಮಾಡಿದ ದೇವತೆಗಳು , ಅದರಿಂದ ಪರಮ ಪುರುಷನಾದ ಪರಮಾತ್ಮನನ್ನು ಹಾಗು ಎಲ್ಲ ಬಗೆಯ ಸಿರಿಯನ್ನೂ ಹೊಂದಿದರು .

೩.... "ನೆಂದ್ರಿಯಾಣಿ ನಾನುಮಾನಂ ವೇದಾ ಹ್ಯೇವೈನಂ ವೇದಯಂತಿ " ಇತಿ ಪಿಪ್ಪಲಾದ ಶ್ರುತಿ:

" ಕಣ್ಣು ,ಕಿವಿ ,ಮನಸ್ಸು ಮೊದಲಾದ ಇಂದ್ರಿಯಗಳು ಪರಮಾತ್ಮನನ್ನು ಕಾಣಿಸಲಾರವು ,ಜಟಿಲವಾದ ತರ್ಕಶಾಸ್ತ್ರವೂ ಕೂಡ ಪರಮಾತ್ಮನ ಅರಿವು ಮಾಡಿಸದು .ಕೇವಲ ವೇದಗಳು ಮಾತ್ರವೇ ಪರಮಾತ್ಮನನ್ನು ತಿಳಿಸಬಲ್ಲವು .ಆದ್ದರಿಂದಲೇ ಅವು ವೇದವೆನಿಸಿವೆ ".

೪.....ಕಪರ್ದಿಸ್ವಾಮಿಯು " ಜೀವಾತ್ಮನಿಗೆ ,ಸಂಸಾರದ ಕಡಲಿನಿಂದ ಶಾಶ್ವತವಾದ ಬಿಡುಗಡೆ ದೊರಕಿಸುವ ಸತ್ಕರ್ಮ ಗಳನ್ನು ನಿರೂಪಿಸುವ ಗ್ರಂಥವೇ ವೇದ".

೫...ಹರದತ್ತ ........" ಪರತತ್ತ್ವವನ್ನು ಯಥಾವತ್ತಾಗಿ ತಿಳಿಸುವ ಶಬ್ದರಾಶಿ ವೇದ ".

೬.....ಮನು " ಪ್ರತ್ಯಕ್ಷಾನುಮಾನಗಳು ಯಾವ ಪರವಸ್ತುವನ್ನು ತಿಳಿಸಲಾರವೋ ಅಂತಹ ಪರತತ್ತ್ವದ ಅರಿವು ನೀಡುವ ಕಾರಣದಿಂದ ವೇದವು ಅಪೌರುಷೆಯ ವಾದ ಶಬ್ದ ರಾಶಿ ವೇದವೆನಿಸಿದೆ .

೭....ಹೇಮಚಂದ್ರ -........."ಧರ್ಮ ಹಾಗೂ ಪರತತ್ತ್ವ ದ ಅರಿವು ನೀಡುವದರಿಂದ ಈ ಶಬ್ದರಾಶಿ ವೇದವೆನಿಸಿದೆ "

ಮೇಲೆ ಹೇಳಿದ ಅರ್ಥಗಳನ್ನು ವಿಮರ್ಸಿಸಿದರೆ ವೇದಗಳೆಂದರೆ ಸಂಪೂರ್ಣ ಲೌಕಿಕ ಬದುಕನ್ನು ಸಾರ್ಥಕಗೊಳಿಸಿ ,ಅತೀಂದ್ರಿಯ ವಾದ ಧರ್ಮ , ಸ್ವರ್ಗ ,ಪರತತ್ತ್ವವಾದ ಪರಮಾತ್ಮನ ಬೋಧನೆಯೇ ವೇದದ ಪ್ರಮುಖ ಗುರಿಯೆಂದು ಸ್ಪಷ್ಟ ವಾಗಿ ತಿಳಿದುಬರುತ್ತದೆ .

" ವೇದದ ಪ್ರತಿಯೊಂದು ಸ್ವರಗಳು, ವರ್ಣಗಳು ಪರಮಾತ್ಮನ ಪಾರಮ್ಯವನ್ನು ಬಣ್ಣಿಸುತ್ತವೆ .ಇಷ್ಟೇ ಏಕೆ ? ಸಮುದ್ರದ ಭೋರ್ಗರೆತ ,ಮೋಡಗಳ ಗುಡುಗು ,ಪಕ್ಷಿಗಳ ಕಲರವ ಮೊದಲಾದ ಎಲ್ಲ ದ್ವಾನ್ಯಾತ್ಮಕ ಶಬ್ದಗಳು ಪರಮಾತ್ಮನ ಹಿರಿಮೆಯನ್ನು ವರ್ಣಿಸುತ್ತವೆ ,ಇದು ವೇದದ ಮುಖ್ಯವಾದ ಸಂದೇಶ "

ಹೀಗೆ ವೇದದ ಯಥಾರ್ಥವಾದ ಉದ್ದೇಶವನ್ನು ಅರಿತು ಅದನ್ನು ಪಠಿಸಿದಾಗ ಮಾತ್ರವೇ ,ಅದು ಸಾರ್ಥಕ . ಕೇವಲ ಮೂಲಾಧಾರದ ವಲಯದಲ್ಲೇ ಸುತ್ತುವವರಿಗೆ ಆ ಅನಾಹತ ನಾದದ ಅರಿವು ಆಗುವದಿಲ್ಲ . ಇಲ್ಲವಾದಲ್ಲಿ " ಯಾಸ್ಕ " ರ ಅನಿಸಿಕೆಯಂತೆ " ಅರ್ಥ ಸ್ಮ್ರುತಿಯಿಲ್ಲದ ವೇದದ ನಿರಂತರ ಪಠಣ ,ಅಧ್ಯಾಪನ ,ಎಲ್ಲವೂ ಒಂದು ದೊಡ್ಡ ಹೊರೆ ಮಾತ್ರ "
..............................

.........

" ವೇದ " ಎನ್ನೋ ಶಬ್ದವು ಜ್ಞಾನಾರ್ಥಕವಾದ "ವಿದ್ " ಧಾತುವಿನಿಂದ ನಿಷ್ಪನ್ನವಾಗಿದೆ . ಪ್ರತಿಯೊಬ್ಬ ಮನುಷ್ಯನಿಗೂ ಸೌಖ್ಯವನ್ನು ಪಡೆಯಬೇಕೆಂದು ಇಚ್ಛೆಯೂ ಹಾಗೆಯೇ ದುಃಖಗಳನ್ನು ಪರಿಹರಿಸಿಕೊಳ್ಳಬೇಕೆಂದು ಆಸೆಯೂ ಇರುತ್ತದೆ .ಅಂದರೆ ಪ್ರತಿಯೊಬ್ಬ ಮಾನವನಿಗೂ ಸುಖಾದಿಗಳು ಇಷ್ಟವಾಗಿಯೂ ದುಃಖಾದಿಗಳು ಇಷ್ಟವಲ್ಲದೆ ಅನಿಷ್ಟವಾಗಿಯೂ ಇರುತ್ತದೆ .ಈ ರೀತಿಯಾಗಿ ಇಷ್ಟವಾದ ಸುಖಾದಿಗಳನ್ನ ಪಡೆಯಲು ಮತ್ತು ದುಃಖಾದಿ ಅನಿಷ್ಟಗಳನ್ನು ಪರಿಹರಿಸಿಕೊಳ್ಳಲು ಪ್ರತ್ಯಕ್ಷ ,ಅನುಮಾನಗಳಿಗಿಂತ ಭಿನ್ನವಾದ ಅಲೌಕಿಕ ವಾದ ಉಪಾಯವನ್ನು ಯಾವ ಗ್ರಂಥವು ತಿಳಿಸುತ್ತದೆಯೋ ಆ ಜ್ಞಾನ ರೂಪವಾದ ಗ್ರಂಥಗಳೇ "ವೇದ" ಎಂದು ಕರೆಯುತ್ತಾರೆ .

ವೇದಗಳನ್ನು ನಿತ್ಯ ಆಗಮ ಎಂಬುದಾಗಿ ನಮ್ಮ ಪರಂಪರೆ ಅಂಗೀಕರಿಸಿದೆ .ಶ್ರುತಿ , ತ್ರಯೀ , ಅಮ್ನಾಯ ,ಅನುಪೂರ್ವಿ ,ಅನಂತಪಾರ ,ಅನುವಚನ ಮೊದಲಾದ ಇತರ ಅನೇಕ ಹೆಸರುಗಳಿಂದ ಇವು ಪ್ರಸಿದ್ಧವಾಗಿವೆ .

  • ಸದಾ ಇರುವದರಿಂದ "ವೇದ "
  • ಶ್ರವಣ ದಿಂದಲೇ ಅದರ ಅಧ್ಯೇತ್ರಗಳು ಅವುಗಳನ್ನು ತಿಳಿದು ಅಧ್ಯಯನ ಮಾಡುವದರಿಂದ "ಶ್ರುತಿ "
  • ಅರ್ಥತ: ಮಾತ್ರವಲ್ಲದೆ ಶಬ್ದತ : ಸಹ ಅವುಗಳಲ್ಲಿ ನಿತ್ಯತ್ವ ಇರುವದರಿಂದ "ಆಮ್ನಾಯ "
  • ಆನುಪೂರ್ವಿಯಲ್ಲಿ ಯಾವುದೇ ವ್ಯತ್ಯಾಸ ಎಂದೂ ಇಲ್ಲದಿರುವದರಿಂದ "ಆನುಪೂರ್ವಿ "
  • ವಿನಾಶ ಹಾಗೂ ಪರಿಮಿತಿ ಗಳಿಂದ ರಹಿತವೆಂದು "ಅನಂತಾಪಾರ"

ಗಳೆಂದು ಆಯಾ ಹೆಸರುಗಳಿಗೆ ಅನ್ವರ್ಥಕ ವಾಗಿರುವದನ್ನು ಕಾಣಬಹುದು . ಬಹುತೇಕ ಆಧುನಿಕ ವಿದ್ವಾಂಸರು ಸಹ ಇವುಗಳನ್ನು ಮನುಕುಲದ ಅತೀ ಪ್ರಾಚೀನ ಕೃತಿ ಗಳೆಂದು ಅಂಗೀಕರಿಸಿರುವರು.

ವೇದಗಳು ಸೃಷ್ಟಿಯ ಆದಿಯಲ್ಲಿ ಪರಮಾತ್ಮನಿಂದ ಉದ್ಭಾಸಿತ ವಾದ ಯಾವ ವ್ಯಕ್ತಿಗತ ಇತಿಹಾಸಗಳಿಗೂ ಎಡೆಯಿಲ್ಲದ ಶಾಸ್ತ್ರಗಳು ಎಂಬ ಭಾವನೆಗೆಯೇ ಕುಠಾರಾಘಾತ ವಾಗಿದೆ .
ಹೀಗಾಗಿ ಮ್ಯಾಕ್ಸ ಮುಲ್ಲರ್ ,ಗ್ರಿಫಿತ್ ,ವುಲ್ಹರ್ ಮೊದಲಾದ ಪಾಶ್ಚ್ಯಾತ್ಯ ವಿದ್ವಾಂಸರು (?) ಅವರ ಮಾನಸಿಕ ಪುತ್ರರಾದ ಭಾರತೀಯ ವಿದ್ವಾಂಸರು (?) ತಮ್ಮ ಅರೆಬೆಂದ ಜ್ಞಾನವನ್ನ ವೇದಗಳಲ್ಲಿ ತುರುಕಿ ,ತಮ್ಮ ಮೂಗಿನ ನೇರಕ್ಕೆ ವೇದಗಳನ್ನು ಎಳೆದು .ತಮ್ಮ ತಮ್ಮ ಜ್ಞಾನದ ಮಟ್ಟಕ್ಕೆ ವೇದಗಳನ್ನು ಇಳಿಸಿ ,ವೇದಗಳು ಕಾಡಾಡಿಗಳ ಹಾಡುಗಳು ,ಅದೊಂದು ಜನಪದ ಸಾಹಿತ್ಯ ,ಗೊಲ್ಲರ ಗೀತೆಗಳು ಎಂದು ಬೊಗಳೆ ಬಿಟ್ಟು ತಮ್ಮ ಅಜ್ಞಾನ ಪ್ರದರ್ಶನ ಮಾಡಿ ,ಏನೋ ಸಾಧಿಸಿದವರಂತೆ ಬೀಗುವದರಿಂದ ನಿಜವಾದ ವೇದಕ್ಕಾಗಲಿ ಅದರ ಅರ್ಥಕ್ಕಾಗಲಿ ಅದರ ಮಹತ್ವಕ್ಕಾಗಲಿ ಕುಂದು ಬರದು.
.................................................................

ವೇದಗಳೆಷ್ಟು ?

  • ಋಕ್ ,ಯಜುಸ್ ,ಸಾಮ ಎಂಬುದಾಗಿ ವೇದಗಳು ಮೂರು ಬಗೆ ಯಾಗಿರುತ್ತದೆ .
  • ಶಾಖೆ ಯ ದೃಷ್ಟಿಯಿಂದ ನೋಡಿದಾಗ ವೇದಗಳು ನಾಲ್ಕು

1) ಋಕ್ ಶಾಖೆ ೨) ಯಜು :ಶಾಖೆ ೩) ಸಾಮ ಶಾಖೆ ೪) ಅಥರ್ವ ಶಾಖೆ

  • ವಾಸ್ತವವಾಗಿ ಗ್ರಾಂಥಿಕ ಅಸ್ತಿತ್ವದ ಮೂಲಕ ನೋಡಿದಲ್ಲಿ ವೇದಗಳು ಎರಡೇ ಆಗಿವೆ .

1) ಪದ್ಯಮಯ ವಾದ (ಛಂದೋಬದ್ಧವಾದ ) ಅಪೌರುಷೆಯ ಶಬ್ದರಾಶಿಯು "ಋಗ್ವೇದ " ಎನಿಸಿದೆ .
೨) ಗಧ್ಯಮಯವಾದ ಶಬ್ದರಾಶಿಯು "ಯಜುರ್ವೇದ " ವೆನಿಸಿದೆ .

  • ಈ ಎರಡು ವಿಧವಾದ ಮಂತ್ರಗಳಿಗೆ ಗಾನ ಸೇರಿದಾಗ ಅದು "ಸಾಮ " ವೆನಿಸುತ್ತದೆ . ಸಾಮವೇದದಲ್ಲಿ ಯಜುರ್ವೇದ ಮಂತ್ರಗಳು ಅತ್ಯಂತ ಕಡಿಮೆ ಇದ್ದು ಋಗ್ವೇದ ಮಂತ್ರಗಳೇ ಹೆಚ್ಚಾಗಿರುತ್ತವೆ . ಆದ್ದರಿಂದಲೇ ಋಗ್ವೇದದ ಮತ್ತೊಂದು ಗಾನದ ಮುಖ "ಸಾಮ " ವೆಂಬ ಪ್ರತಿಪಾದನೆ ಛಾಂದೋಗ್ಯದಲ್ಲಿ ದೊರಕುತ್ತದೆ . ( ಋಚ್ಯ ಭೂಡಂ ಸಾಮ 1.೬.1).
  • ಮೂಲತಹ ವೇದಗಳು ಮೂರೇ ತರ ,ಅದಕ್ಕೆಂದೇ ಅದಕ್ಕೆ "ತ್ರಯೀ "ಎಂದು ಹೆಸರು ,ಇಲ್ಲಿ ತ್ರಯೀ ಮೂರು ಎಂದರ್ಥ .ಯಾವುದು ಮೂರು ಎಂದರೆ . ಪದ್ಯರೂಪವಾದ ವೇದ , ಗದ್ಯರೂಪವಾದ ವೇದ ಮತ್ತು ಗಾನ ರೂಪವಾದ ವೇದ .
  • ಇದರಂತೆ ಅಥರ್ವೆದಕ್ಕೂ ಋಕ್ ,ಯಜುರ್ಮಂತ್ರ ಗಳಿಂದ ಹೊರತು ಪಡಿಸಿದ ಗ್ರಾಂಥಿಕ ಹಿನ್ನಲೆ ಇರುವದಿಲ್ಲ . ಋಗ್ವೇದ ಹಾಗೂ ಯಜುರ್ವೇದ ದಲ್ಲಿ ಇರದ ,ಇಂದು ದೊರಕುವ ಅಥರ್ವೇದದ ಮಂತ್ರಗಳು ಕೂಡಾ ಉಪಲಬ್ಧವಿಲ್ಲದ ಋಕ್ ಯಜು :ಶಾಕೆಗೆ ಸಂಬಂದಿಸಿದ್ದಾಗಿವೆ . ಆಧ್ಯಾತ್ಮಿಕ ಜೀವನದ ಜೊತೆಗೆ ಐಹಿಕವಾದ ಬಾಳುವೆಯನ್ನು ಸುಖಮಯವಾಗಿಸಲು ರೂಪುತಳೆದ ಋಕ್ ಹಾಗೂ ಯಜುಸ್ಸಿನ ಮಂತ್ರಗಳ ಕ್ರಮಬದ್ಧವಾದ ಸಂಕಲನವೇ "ಅಥರ್ವೇದ "ವಾಗಿರುತ್ತದೆ .
  • ಹೀಗೆ ವೇದಗಳು ಒಂದೋ ಪದ್ಯಮಯ ಒಂದೋ ಗದ್ಯಮಯ ಅಥವಾ ಇವುಗಳಿಗೆ ಗಾನ ಸೇರಿದಾಗ ಸಾಮವೆನಿಸುವದು.
  • ಕೃತಯುಗದಲ್ಲಿ ಆರ್ಷ ವಾಙ್ಮಯ ಏಕಮುಖವಾಗಿತ್ತು ,ಪರಮ ಪುರುಷನಾದ ಪರಮಾತ್ಮನ ಬೋಧನೆಯೇ ಅದರ ಮುಖ್ಯ ಗುರಿಯಾಗಿತ್ತು .ಅಂದಿನ ಸಾಧಕರಿಗೆಲ್ಲ ಸಮಗ್ರ ವೇದದಲ್ಲಿ ಪರಮಾತ್ಮನನ್ನು ಗುರುತಿಸುವ ಜಾಣ್ಮೆ ಇತ್ತು . ಅಂದು ಋಕ್ ,ಯಜುಸ್ ,ಸಾಮ ವೆಂಬ ಪ್ರಭೇದ ವಿರಲಿಲ್ಲ . ಎಲ್ಲ ಅವಿಭಕ್ತವಾದ ಆರ್ಷ ವಾಙ್ಮಯ ವನ್ನು ಅಂದು "ಮೂಲವೇದ " ಎಂದು ಕರೆಯುತ್ತಿದ್ದರು .
  • ಯುಗಧರ್ಮಕ್ಕೆ ಅನುಸಾರವಾಗಿ ಉಂಟಾಗುವ ಬುದ್ಧಿ ಶೈಥಿಲ್ಯವನ್ನು ಗಮನಿಸಿದ ಬಾದರಾಯಣರು ವೇದ ವಿಭಾಗ ಮಾಡಿದರು .

....................................................

ವಸ್ತುತಃ ಮೂಲಭೂತವಾಗಿ ವೇದ ವಾಙ್ಮಯ ಎರಡೇ ತರ: ಗದ್ಯ ಮತ್ತು ಪದ್ಯ .ಗದ್ಯಕ್ಕೋ ಪದ್ಯಕ್ಕೋ ಗಾನ ಸೇರಿದರೆ ಅದು ಸಾಮವಾಗುತ್ತದೆ .ಈ ಮೂರು ಬಿಟ್ಟರೆ ವಾಙ್ಮಯ ದಲ್ಲಿ ಇನ್ನೊಂದು ಬಗೆ ಇಲ್ಲ .

ಈ ಮೂರು ಮುಖವನ್ನೇ ಓಂಕಾರದ ಮೂರು ಅಕ್ಷರ ಹೇಳುತ್ತವೆ : ಅ +ಉ +ಮ್ .

ಮೊದಲು ಬೀಜರೂಪವಾದ ಓಂಕಾರ ವಿತ್ತು .ಒಂಕಾರವೇ ಚಿಗುರೊಡೆದು ಮೂರು ವ್ಯಾಹೃತಿ ಗಳಾದವು : ಭೂ , ಭುವ :, ಸುವ :
ವ್ಯಾಹೃತಿ ಯ ಮೂರು ಪದಗಳು ಟಿಸಿಲೊಡೆದು ಗಾಯತ್ರಿಯ ಮೂರು ಪಾದ ಗಳಾದವು .ಟಿಸಿಲು ಟೊಂಗೆ ಯಾಗಿ ಬೆಳೆದು ಪುರುಷ ಸೂಕ್ತದ ಮೂರು ವರ್ಗಗಳಾದವು .

ಇವೆ ವಿಸ್ತಾರ ವಾಗಿ ಬೆಳೆದು ಹೆಮ್ಮರವಾಗಿ ಮೂರು ವೇದಗಳಾದವು . ಇದು ಪ್ರಾಚೀನರು ವೇದ ಕಲ್ಪವೃಕ್ಷದ ಬೆಳೆವನಿಗೆಯನ್ನು ಕಂಡ ಬಗೆ .

ಬೆಳೆದು ನಿಂತ ಮರದ ಎಲ್ಲ ಸತ್ವ ಸಾರವೂ ಸೂಕ್ಷ್ಮ ರೂಪದಲ್ಲಿ ಬೀಜದಲ್ಲಿದೆ .

ಋಗ್ವೇದ ಸಾರವೇ "ಅ "
ಯಜುರ್ವೇದದ ಸಾರವೇ "ಉ "
ಸಾಮವೇದದ ಸಾರವೇ "ಮ"

ಮೂರು ಸಾರಾಕ್ಷರಗಳು ಸೇರಿ ಓಂಕಾರ ವಾಯಿತು ,ಮೂರು ಅಕ್ಷರಗಳು ಬಿತ್ತರಗೊಂದು ವೇದಗಳು ಮೂರಾದವು .

ಈಗೊಂದು ವಿವರಣೆ .....

ಋಗ್ವೇದ ಅಕ್ಷರ "ಅ" ಕಾರವೇ ಏಕಾಗಬೇಕು ?

" ಉ " ಕಾರವೇ ಯಜುರ್ವೇದದ ಅಕ್ಷರ ಏಕಾಗಬೇಕು ?

"ಮ " ಮಕಾರವೇ ಏಕೆ ಸಾಮವೇದದ ಅಕ್ಷರ ?

ಎಲ್ಲ ಅಕ್ಷರಗಳು ಎಲ್ಲ ವೇದಗಳಲ್ಲಿ ಬರುತ್ತವೆ . ಈ ಮೂರು ಅಕ್ಷರಗಳಲ್ಲಿ ಏನಂಥ ವಿಶೇಷ ?

ಈ ಮೂರು ಅಕ್ಷರಗಳ ಆಯ್ಕೆಗೆ ಅಧಾರಭೂತವಾದ ಸುಳಿವು ಮೂಲತಹ : ವೇದಗಳಲ್ಲೇ ಸಿಗುತ್ತವೆ .

ಋಗ್ವೇದದ ಅಕ್ಷರ "ಅ " ಕಾರ ಅದಕ್ಕೆಂದೇ ಋಕ್ ಸಂಹಿತೆ ಅಕಾರದಿಂದಲೇ ಮೊದಲಾಗುತ್ತದೆ :

ಅಗ್ನಿ ಮೀ ಳೇ ಪುರೋಹಿತಮ್........(1.1.1)
ಅಕಾರದಿಂದ ಪ್ರಾರಂಭವಾಗಿ ಇಕಾರದಲ್ಲಿ ಕೊನೆಗೊಳ್ಳುತ್ತದೆ :
...

...........ಯಥಾ ವ : ಸುಸಹಾಸತಿ (೧೦.೧೯1.೪)


" ಅ " ಕಾರದಿಂದ "ಇ "ಕಾರದ ತನಕ ಋಗ್ವೇದ ದ ಪಯಣ .ಇದು ಋಕ್ ಸಂಹಿತೆಯ "ಅಥ " ಮತ್ತು "ಇತಿ ".

ಋಕ್ ಸಂಹಿತೆಯ ಕೊನೆಯ ಅಕ್ಷರ "ಇ " ಕಾರದಿಂದಲೇ ಯಜು :ಸಂಹಿತೆ ಪ್ರಾರಂಭ ವಾಗುತ್ತದೆ :

ಇಷೇ ತ್ವೋರ್ಜೆ ತ್ವಾ .................(1.1.1)
"ಇ "ಕಾರದಿಂದ ಪ್ರಾರಂಭವಾಗಿ "ಉ " ಕಾರದಲ್ಲಿ ಕೊನೆಗೊಳ್ಳುತ್ತದೆ .

........ಸಮುದ್ರೋ ಬಂಧು : (೭.೫.೨೫ )

"ಅ" ಕಾರದಿಂದ "ಇ " ತನಕ ಋಗ್ವೇದ "ಇ " ಕಾರದಿಂದ "ಉ " ಕಾರದ ತನಕ ಯಜುರ್ವೇದ.
ಅನಂತರ ಅಕ್ಷರ "ಮ "ಕಾರ .ಆದರೆ ಸಾಮ ಸಂಹಿತೆ ಮಕಾರದಿಂದ ಪ್ರಾರಂಭ ವಾಗುವದೂ ಇಲ್ಲ ಮುಗಿಯುವದೂ ಇಲ್ಲ .

ಸಾಮ ವೇದ ಪ್ರಾರಂಭವಾಗುವದು "ಅ" ಕಾರದಿಂದಲೇ
ಸಾಮವೇದ ಮುಗಿಯುವುದು "ಉ" ಕಾರದಿಂದಲೇ .
ಅನಂತರದ ಅಕ್ಷರ "ಮ " ಆದರೆ ಸಾಮ ಸಂಹಿತೆ " ಮ "ಕಾರದಿಂದ ಪ್ರಾರಂಭ ವಾಗುವದೂ ಇಲ್ಲ ಮುಗಿಯುವದೂ ಇಲ್ಲ .

ಸಾಮ ವೇದ ಪ್ರಾರಂಭವಾಗುವದು "ಅ" ಕಾರದಿಂದಲೇ

ಅಗ್ನ ಆ ಯಾಹಿ ..................(1)


ಸಾಮವೇದ ಮುಗಿಯುವುದು "ಉ" ಕಾರದಿಂದಲೇ

..................ಬ್ರ್ಹಸ್ಪತಿರ್ದಧಾತು .(೧೮೭೫)

ಋಗ್ವೇದ ಮತ್ತು ಯಜುರ್ವೇದ ಮಂತ್ರಗಳೇ ಬರುವದರಿಂದ ಆದ್ಯಂತ ದಲ್ಲಿ "ಅ" ಕ್ಕರ "ಉ" ಕಾರ ಬರುವದು ಸಹಜ .

ಹಾಗಾದರೆ "ಮ " ಏಕೆ ಸಾಮವೇದ ಅಕ್ಷರ ?

"ಮ್ ss" ಎನ್ನುವದು ಸಂಗೀತದ ನಾದದ ಅನುಕೃತಿ .ಅದಕ್ಕೆಂದೇ ಅದು ಸಾಮವೇದ ಸಂಕೇತ .

ಅದರಿಂದ" ಅ " ಕಾರದಿಂದ "ಇ " ಕಾರದ ವರೆಗೆ ಋಗ್ವೇದ
"ಇ " ಕಾರದಿಂದ "ಉ " ಕಾರದ ವರೆಗೆ ಯಜುರ್ವೇದ .

ಈ "ಅ "ಕಾರ -"ಉ "ಕಾರ ಗಳಿಗೆ ಸಾಮ ಸೇರಿದಾಗ ಅರ್ಥಾತ ಗಾನ ಸೇರಿದಾಗ ಅದು ಸಾಮವೇದ ವಾಗುತ್ತದೆ .

(ಅಧಾರ : ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ ಪ್ರವಚನ ಮತ್ತು ಬರಹಗಳು )

ಮುಂದುವರೆಯುವದು .......