ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೭)
*****ಭಾಗ ೭
ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಹರ್ಷ ರಾಜನ ಗುಪ್ತಚಾರರ ಪಡೆಯಲ್ಲಿದ್ದ ನಮ್ಮವರು ಆ ಸುದ್ಧಿಗಳನ್ನು ನಮಗೆ ತಂದು ಕೊಡುತ್ತಿದ್ದರು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು, ದೌರ್ಬಲ್ಯಗಳು, ಹಾಗು ಸೈನ್ಯಕ್ಕೆ ಸಂಬಂಧಿಸಿದ ಇತರ ವಾರ್ತೆಗಳನ್ನೂ ಕಳುಹಿಸಿದೆ.
ನಮ್ಮವರೂ ಅಷ್ಟು ಹೊತ್ತಿಗೆ ಸಾಕಷ್ಟು ಸಿದ್ದತೆಗಳನ್ನು ನಡೆಸಿದ್ದಿರಬೇಕು. ನೋಡುತ್ತಿದ್ದಂತೆಯೇ, ಕೆಲವೇ ದಿನಗಳಲ್ಲಿ ಎರಡೂ ಸೈನ್ಯಗಳು ನರ್ಮದೆಯ ತೀರದಲ್ಲಿ ಬಂದು ಎದುರಿಸಿ ನಿಂತವು. ದಕ್ಷಿಣ ತೀರದಲ್ಲಿ ಪುಲಿಕೇಶಿ ಅರಸನ ಸಮರ್ಥ ಧನುರ್ಧರರಿಂದ ಕೂಡಿದ ಅಪಾರ ಆನೆಯ ಸೈನ್ಯ, ಉತ್ತರ ತೀರದಲ್ಲಿ ಸಮರ್ಥ ಕುಂತಲಧರರಿಂದ ಕೂಡಿದ ಪ್ರಬಲ ರಥಗಳ ಸೈನ್ಯ. ಪುಲಿಕೇಶಿ ಅರಸ ಹಾಗು ಹರ್ಷರಾಜರಿಬ್ಬರೂ ಯುದ್ಧಭೂಮಿಗೆ ತಮ್ಮ ತಮ್ಮ ಸೈನ್ಯಗಳನ್ನು ನಿರ್ದೇಶಿಸಲು ಬಂದು ನಿಂತರು. ಇಬ್ಬರು ಘಟಾನುಘಟಿಗಳು ಒಬ್ಬರನ್ನೊಬ್ಬರು ದಿಟ್ಟಿಸಿ ಎದುರು-ಬದುರು ನೆಲೆಸಿದರು. ಬೇರ್ಪಡಿಸುತ್ತಿದ್ದದ್ದು ಕೇವಲ ಮಧ್ಯೆ ಹರಿಯುತ್ತಿದ್ದ ನರ್ಮದೆಯೊಂದೇ. ಘೋರ ಯುದ್ಧ ಖಚಿತವಾಯಿತು.
ಇದು ಈ ಯುದ್ಧದ ಕತೆಯಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ವಿವರಗಳು ಹೇಳಲಾರೆ. ಆದರೂ ಇದರ ಮುಖ್ಯ ಘಟನೆಗಳನ್ನು ಹೇಳುವುದು ಇಲ್ಲಿ ಸೂಕ್ತವಾಗಿದೆ. ಯುದ್ಧ ಆರಂಭವಾಯಿತು. ಹರ್ಷರಾಜನ ಕಡೆಯವರು ಕದನಕ್ಕೆ ನಾಂದಿ ಹಾಡುತ್ತ ನಮ್ಮನ್ನು ಕುಂತಲಗಳಿಂದ ಹಾಗು ದೊಡ್ಡ ದೊಡ್ಡ ಶಿಲೆಗಳನ್ನು ಎಸೆಯುವ ಆಯುಧಗಳಿಂದ ಆಕ್ರಮಣ ಮಾಡಿದರು. ಪುಲಿಕೇಶೀ ರಾಜನ ಧ್ಯೇಯ ನದಿಯನ್ನು ದಾಟಿ ಸ್ವತಃ ಆಕ್ರಮಣ ಮಾಡುವುದಾಗಿತ್ತು. ಆದರೆ ವೈರಿಗಳು ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಸೈನಿಕರು ನೀರಿಗಿಳಿದಂತೆ ಅವರು ಶಿಲೆಗಳನ್ನು ಎಸೆದು ನಮ್ಮವರನ್ನು ಕೊಲ್ಲುತ್ತಿದ್ದರು ಇಲ್ಲವಾದರೆ ಗಾಯಗೊಳಿಸುತ್ತಿದ್ದರು. ಹಲವಾರು ದಿನ ಹೀಗೆಯೇ ನಡೆಯಿತು. ನಮ್ಮ ಸೈನ್ಯದ ಉತ್ಸಾಹ ಕಿಂಚಿತ್ತು ಕುಂದ ತೊಡಗಿತು.
ಬೇಸತ್ತು, ವಿಧಿಯೇ ಇಲ್ಲವೆಂದು ಅರಿತು, ನಮ್ಮ ಕಡೆಯ ಸೇನಾಪತಿಗಳು ನಮ್ಮ ಬಳಿ ಇದ್ದ ವಿಶಿಷ್ಟ ದರ್ಪಣಾಸ್ತ್ರವನ್ನು ಪ್ರಯೋಗಿಸುವ ನಿರ್ಣಯ ಮಾಡಿದರು. ಅಂತೆಯೇ ಮಾರನೆಯ ದಿನ ಸೂರ್ಯನು ನೆತ್ತಿಗೇರಿದಾಗ ನಮ್ಮ ಸೈನಿಕರು ನದಿಯಬಳಿ ಹೋಗಿ ನಿಂತರು. ಅವಕಾಶ ಸಿಕ್ಕಿದ ಕೂಡಲೆ ಅವರು ನದಿಯನ್ನು ದಾಟಿ ಆಕ್ರಮಣಮಾಡುವುದಾಗಿತ್ತು. ಅವಕಾಶ ದೊರಕಿಸುವುದು ದರ್ಪಣಾಸ್ತ್ರದ ಗುರಿಯಾಗಿತ್ತು. ದರ್ಪಣಾಸ್ತ್ರ ಪ್ರಯೋಗ ಮಾಡುವವರು ತೀರದಲ್ಲಿ ದೊಡ್ಡ ದೊಡ್ಡ ದರ್ಪಣಗಳನ್ನು ಹಿಡಿದು ನಿಂತರು. ಸೇನಾಧಿಪತಿಯಿಂದ ಅಪ್ಪಣೆ ಬರುತ್ತಲೇ ಈ ರಾಕ್ಷಸಗಾತ್ರದ ದರ್ಪಣಗಳನ್ನು ನೆಟ್ಟಗೆ ನಿಲ್ಲಿಸಿ ಸೂರ್ಯನ ಕಿರಣಗಳು ಅವುಗಳಿಂದ ಪ್ರತಿಬಿಂಬಿಸಿ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲಾಯಿತು. ಆ ಕೋಲಹಲದಲ್ಲಿ ನಮ್ಮ ಸೈನಿಕರು ನದಿಯೊಳಗೆ ಧುಮುಕಿ, ನದಿಯನ್ನು ದಾಟಿ ಶತ್ರುಗಳೊಡನೆ ಹೋರಾಡಲು ಆರಂಭಿಸಿದರು. ಸ್ವಲ್ಪವೇ ಕಾಲದಲ್ಲಿ ನಮ್ಮ ವೀರ ಸೈನಿಕರು ಹರ್ಷರಾಜನ ಸೈನ್ಯವು ದಿಕ್ಕಾಪಾಲಾಗಿ ಓಡುವಂತೆ ಮಾಡಿದರು.
ಕಂಗೆಟ್ಟ ಹರ್ಷರಾಜನ ಸೈನ್ಯ ಪಲಾಯನ ಮಾಡಿದ ಮೇಲೆ ನಮ್ಮವರು ನಮ್ಮ ತೀರಕ್ಕೆ ಹಿಂತಿರುಗಿದರು. ನದಿಯ ಆ ತೀರದಲ್ಲಿರುವುದು ಸೂಕ್ತವಾಗಿರಲಿಲ್ಲ. ವೈರಿ ಯಾವಾಗಲಾದರೂ ಹಿಂತಿರುಗುವ ಸಂಭವವಿತ್ತು. ಯುದ್ಧದ ಈ ಪಾದದಲ್ಲಿ ಹರ್ಷರಾಜನ ಸೈನ್ಯವು ಬಹಳಷ್ಟು ನಷ್ಟ ಹೊರಬೇಕಾಯಿತು. ನಮ್ಮಲ್ಲಿಯೂ ಸಾಕಷ್ಟು ಭಟರು ಹತರಾಗಿ ಮತ್ತಷ್ಟು ಜನ ಗಾಯಗೊಂಡಿದ್ದರೂ, ಯುದ್ಧದ ಈ ಹಂತ ನಮ್ಮದೆನಿಸಿತು ನಮಗೆ. ಆದರೆ ಹರ್ಷರಾಜನು ಇನ್ನೂ ಸೋಲನ್ನೊಪ್ಪಿಲ್ಲವೆನ್ನುವುದನ್ನು ನಾವೆಲ್ಲ ಅರಿತಿದ್ದೆವು. ವೈರಿ ಸೈನ್ಯದ ಮುಂದಿನ ಸಂಚನ್ನು ಕಾಯ್ದು ನಮ್ಮ ತೀರದಲ್ಲಿಯೇ ಬಿಡಾರ ಮುನ್ನಡೆಸಿದೆವು. ಸ್ವಲ್ಪವೇ ಕಾಲದಲ್ಲಿ ಸ್ವತಃ ಹರ್ಷರಾಜನೇ ಮುಂದಾಳತ್ವ ವಹಿಸಿಕೊಂಡು ವಿಶಾಲ ಕುಂಜರ ಸೈನ್ಯದೊಡನೆ ಯುದ್ಧಭೂಮಿಗೆ ಬರುತ್ತಿರುವ ಸುದ್ಧಿ ಗೂಢಚಾರರಿಂದ ತಿಳಿಯಿತು. ನಮ್ಮ ಸೈನ್ಯವು ಅವನ್ನು ಕಾಯ್ದು ನದಿಯ ನಮ್ಮ ತೀರದಲ್ಲಿಯೇ ತಂಗಿತು.
ಮಾರನೆಯ ದಿನ ಮತ್ತೆ ಯುದ್ಧ ಪ್ರಾರಂಭವಾಯಿತು. ಮತ್ತೆ ಮೊದಲಿನಂತೆ ತುಲದ ಎರಡೂ ಕಡೆ ಒಂದೇ ಭಾರದಂತೆ ಯಾವ ಸೈನ್ಯಕ್ಕೂ ಏನೂ ಸಾಧಿಸಲಾಗಲಿಲ್ಲ. ಈ ಕಗ್ಗಂಟು ಬಹಳ ದಿನಗಳ ಕಾಲ ಸಾಗಿತು. ದರ್ಪಣಾಸ್ತ್ರದ ನವ್ಯತೆ ಮುಗಿದುಹೋಗಿ ಈಗ ಅವರು ಆ ಅಸ್ತ್ರ ಪ್ರಯೋಗಕ್ಕೆ ಸಿದ್ಧರಾಗಿದ್ದರು. ಸಂತುಲನವನ್ನು ಮುರಿಯಲು ಹಾಗು ವೈರಿಯ ಮೇಲೆ ಜಯ ಸಾಧಿಸಲು ಪುಲಿಕೇಶಿ ಅರಸನು ನಮ್ಮ ಮತ್ತೊಂದು ವಿಶೇಶ ಅಸ್ತ್ರವಾದ ಅಗ್ನಿಯಸ್ತ್ರವನ್ನು ಪ್ರಯೋಗ ಮಾಡುವ ನಿಶ್ಚಯ ಮಾಡಿದನು.
ರಾತ್ರಿ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ಆಗ ಸದ್ದಿಲ್ಲದೆ ನಮ್ಮ ಧನುರ್ಧರರನ್ನು ಸಾಲಾಗಿ ನದಿಯ ನಮ್ಮ ಕಡೆಯ ತೀರದಲ್ಲಿ ನಿಲ್ಲಿಸಿದೆವು. ಅಗ್ನಿ ಶರಗಳನ್ನು ಸಿದ್ಧಗೊಳಿಸಿ ಧನುರ್ಧರರಿಗೆ ಒದಗಿಸುವವರೂ ಸಿದ್ಧರಾದರು. ಈ ಶರಗಳ ವಿಶಿಷ್ಟತೆ ಏನೆಂದರೆ ಇವು ಸಾಮಾನ್ಯ ಶರಗಳಿಗಿಂತ ಹೆಚ್ಚು ಉದ್ದವಾಗಿದ್ದು ಇವುಗಳಿಗೆ ತೈಲದಲ್ಲಿ ಹಾಗು ಕೀಲೆಣ್ಣೆಯಲ್ಲಿ ಅದ್ದಿ ಸಿದ್ಧಪಡಿಸಿದ ಉದ್ದವಾದ ವಸ್ತ್ರಗಳು ಸುತ್ತಲ್ಪಟ್ಟಿದ್ದವು. ಕೊನೆಗೆ ನಮ್ಮ ಅಗ್ನಿಯಸ್ತ್ರಗಳಿಗೆ ಅಗ್ನಿಯನ್ನಿ ಕೊಡುವ ಭಟರೂ ಸಿದ್ಧರಾಗಿ ನಿಂತರು. ಸೇನಾದಿಪತಿಯ ಆಜ್ಞೆ ಬಂದಂತೆ ಧನುರ್ಧರರು ಶರಗಳನ್ನು ಧನುಸ್ಸಿಗೆ ಏರಿಸಿ ದೊರಕವನ್ನು ಕಿವಿಗೆಳೆದರು, ಅಗ್ನಿ ಕೊಡುವ ಭಟರು ಶರಗಳಿಗೆ ಅಗ್ನಿ ತಗುಲಿಸಿದರು, ಧನುರ್ಧರರು ಆ ಶರಗಳ ಪ್ರಯೋಗ ಮಾಡಿದರು. ಅಷ್ಟು ಹೊತ್ತಿಗೆ ಶರ ಒದಗಿಸುವವರು ಹೊಸ ಶರಗಳನ್ನು ಸಂಯೋಜಿಸುತ್ತಿದ್ದರು.
ಆಗ್ನೇಯಸ್ತ್ರಗಳು ಹರ್ಷರಾಜನ ಸೈನ್ಯದ ಬಿಡಾರದ ಮೇಲೆ ಬಿದ್ದಂತೆ ಎಲ್ಲೆಡೆ ಕೋಲಾಹಲ ಕಳವಳಗಳು. ವೈರಿಯ ಆನೆಗಳು ನಿಶೀತದಲ್ಲಿ ಬಂದು ಬೀಳುತ್ತಿದ್ದ ಅಗ್ನಿ ಜ್ವಾಲಗಳನ್ನು ಕಂಡು ಬೆದರಿ ತಮ್ಮ ಸೈನ್ಯದವರನ್ನೇ ತುಳಿದು ಓಡತೊಡಗಿದವು. ಎಲ್ಲೆಡೆ ಬೆಂಕಿ, ಶಿಬಿರಗಳೆಲ್ಲ ಧೂಮವಾಗಿ ಹೋದವು. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಎದುರು ತೀರವನ್ನು ನೋಡಿದಾಗ ಅಲ್ಲಿ ಕಂಡದ್ದು ಕೇವಲ ಹತವಾದ ಕುಂಜರಗಳು, ಭಟರು. ನನಗಾದರೋ ಆ ದೃಶ್ಯ ನೋಡಲು ಅಸಾಧ್ಯವಾಯಿತು, ಆದರೆ ಯುದ್ಧವು ಮುಗಿದಿತ್ತು.
ಮತ್ತೂ ಕೆಲ ದಿನಗಳ ಕಾಲ ನಮ್ಮ ಸೈನ್ಯ ನರ್ಮದೆಯ ತೀರದಲ್ಲೇ ಬಿಡಾರ ಹೂಡಿತ್ತು. ಹರ್ಷರಾಜನನಿಗೀಗ ತಾನು ದಕ್ಷಿಣಾಪಥವನ್ನು ಜಯಿಸುವುದು ಅಸಾಧ್ಯವೆಂದು ಮನದಟ್ಟಾಗಿತ್ತು. ಪುಲಿಕೇಶಿ ಅರಸನು ಯುದ್ಧದಲ್ಲಿ ಜಯ ಹೊಂದಿದರೂ ಹರ್ಷರಾಜನ ಶಕ್ತಿ ಹಾಗು ಪ್ರಾಬಲ್ಯತೆ ಅರಿತಿದ್ದನು. ಉತ್ತರಾಪಥವನ್ನು ತನ್ನದಾಗಿಸಿಕೊಳ್ಳುವುದು ಸುಲಭಾಕಾರ್ಯವಲ್ಲವೆಂಬುದೂ ಅರಿತಿದ್ದನು. ಕೆಲವು ದಿನಗಳ ನಂತರ ವೈರಿ ಪಡೆಯ ಒಬ್ಬ ದೂತನು ಹರ್ಷರಾಜನ ಓಲೆಯೊಂದನ್ನು ತೆಗೆದುಕೊಂಡು ಬಂದನು.
ದೂತನನ್ನು ಪುಲಿಕೇಶಿಯ ರಾಜ್ಯ ಸಭೆಗೆ ಕರೆಸಲಾಯಿತು. ದೂತನು ಪುಲಿಕೇಶಿ ಅರಸನಿಗೆ ತಲೆಬಾಗಿ ಕಾಣಿಕೆ ಸಲ್ಲಿಸಿ, ನಂತರ "ಮಹಾರಾಜ ಪುಲಿಕೇಶಿಗೆ ಜಯವಾಗಲಿ. ನನ್ನ ಒಡೆಯನಾದ ಹರ್ಶವರ್ಧನ ಮಹಾರಾಜನ ಕಡೆಯಿಂದ ಓಲೆಯೊಂದನ್ನು ತಂದಿರುವೆ. ಅದನ್ನು ಓದಿ ಹೇಳುವ ಅಪ್ಪಣೆ ಬೇಡುವೆ" ಎಂದು ಹೇಳಿದನು.
"ಅಪ್ಪಣೆ ಇದೆ" ಅರಸ ಉತ್ತರಿಸಿದನು.
"ಹರ್ಷವರ್ಧನ ಚಕ್ರವರ್ತಿ ಚಾಳುಕ್ಯರ ಕಡೆ ಸಂಧಾನದ ಕೈ ಬೆಳೆಸಲು ಸಿದ್ಧರಾಗಿರುತ್ತಾರೆ. ಅವರು ಪುಲಿಕೇಶಿ ಮಹಾರಾಜರೊಡನೆ ಕೂಡಿ ಸಂಧಾನದ ವಿವರಗಳನ್ನು ಚರ್ಚಿಸುವ ಅನುಮತಿಯನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪುಲಿಕೇಶಿ ಮಹಾರಾಜರು ಹರ್ಷ ಚಕ್ರವರ್ತಿಯ ಆತಿಥ್ಯವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಹೊಂದಿರುತ್ತಾರೆ. ಪುಲಿಕೇಶಿ ಮಹಾರಾಜರು ದೂತರ ಮೂಲಕ ಉತ್ತರ ಕಳುಹಿಸಲೆಂದು ಕೋರುತ್ತಾರೆ" ಎಂದು ದೂತನು ಓಲೆಯನ್ನೋದಿದನು.
"ನಮ್ಮ ಮಂತ್ರಿಗಳ ಜೊತೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಉತ್ತರ ಕೊಡುವೆವು. ಅಲ್ಲಿಯವರೆಗು ಈ ದೂತನನ್ನು ನಮ್ಮ ಅತಿಥಿಯಾಗಿ ಕಾಣುವುದು" ಎಂದು ಹೇಳಿ ಪುಲಿಕೇಶಿ ಅರಸ ಸಭೆಯನ್ನು ಅಂತ್ಯ ಗೊಳಿಸಿದನು.
ಕಾಲ ಕ್ರಮೇಣವಾಗಿ ಸಂಧಾನ ಧೃಡವಾಯಿತು. ಅದರ ಪ್ರಕಾರ ಪುಲಿಕೇಶಿ- ಹರ್ಷವರ್ಧನರ ಸಾಮ್ರಾಜ್ಯಗಳ ಸೀಮೆ ನರ್ಮದಾ ನದಿಯೆಂದು ನಿಶ್ಚಯ ಮಾಡಲಾಯಿತು. ಯಾರೊಬ್ಬರೂ ಇನೂಬ್ಬರ ಮೇಲೆ ಯುದ್ಧ ಆರಂಭಿಸಬಾರದೆಂಬ ವ್ಯವಸ್ಥೆಯೂ ಆಯಿತು. ಇದರ ಬದಲಾಗಿ ಪುಲಿಕೇಶಿ ಅರಸನಿಗೆ ಹರ್ಷರಾಜನು ಐದು ಸಹಸ್ರ ಆನೆಗಳು ಹಾಗು ನೂರು ಮಣ ಬಂಗಾರ, ರತ್ನ ವಜ್ರ ವೈಡೂರ್ಯಗಳನ್ನು ಕಾಣಿಕೆಯಾಗಿ ಕೊಟ್ಟು, ದಕ್ಷಿಣಾಪಥೇಶ್ವರನೆಂಬ ಬಿರುದನಿತ್ತು ಸನ್ಮಾನಿಸಿದನು.