ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೮)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೮)

ಬರಹ

*****ಭಾಗ ೧೮

ಕಾರಾಗೃಹದ ದಾರಿ ಕಲ್ಲು ಬಂಡೆಗಳ ಮೇಲೆ ಹಾಯ್ದು ಹೋಗುತ್ತಿತ್ತು. ಒಂದು ತಿರುವಿನಲ್ಲಿ ಎತ್ತರದ ಕಡಿದಾದ ಬಂಡೆಗಳು; ಬಂಡೆಗಳ ಮೇಲೆ ಒಂದು ಕಟ್ಟಡ ಕಾಣಿಸಿತು. ಕಟ್ಟಡಲ್ಲಿ ಕೆಲವೊಂದು ಬೆಳಕಿಂಡಿಗಳು ಕಾಣಿಸುತ್ತಿದ್ದವು. ಅವೇ ಕಾರಾಗೃಹ ಹಿಂಭಾಗದಲ್ಲಿರುವ ಸೆರೆ ಕೋಣೆಗಳಿರಬೇಕೆಂದು ಊಹಿಸಿದೆ. ಕಾರಾಗೃಹದ ಮುಂದೆ ಕೋಟೆಯಂತಹ ಭದ್ರತೆ. ಒಳಗೆ ಸೇರಿಸಿ ಬಾಗಿಲನ್ನು ಮುಚ್ಚಿದರೆ ಸೊಳ್ಳೆಯೂ ಹೊರ ಹೋಗಲಾರದು! ಈ ದುರ್ಗದಂತಹ ಕಾರಾಗೃಹಕ್ಕೆ ನನ್ನನ್ನು ಕರೆದೊಯ್ದರು. ಕುದುರೆಯಿಂದ ಕೆಳಗಿಳಿಸಿ ಮೊಗಸಾಲೆಗಳಲ್ಲಿ ಎಳೆದುಕೊಂಡು ಹೋದರು. ಮೊಗಸಾಲೆಯ ಕೊನೆಯಲ್ಲಿ ಆಕಾಶ-ತಾರೆಗಳು ಕಾಣಿಸುತ್ತಿದ್ದವು; ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ಮೊಗಸಾಲೆಯ ಒಂದು ಬದಿಯಲ್ಲಿ ಒಂದೆರಡು ಮುಚ್ಚಿದ್ದ ಬಾಗಿಲುಗಳನ್ನು ಹಾಯ್ದು ಹೋಗಿ, ಒಂದು ತೆರೆದಿದ್ದ ಬಾಗಿಲಲ್ಲಿ ನನ್ನನ್ನು ತಳ್ಳಿ ಬಾಗಿಲು ಮುಚ್ಚಿದರು.

ನಾನು ಈ ಸೆರೆಮನೆಯಿಂದಾಚೆ ಹೋಗಲು ಒಂದೇ ಸಾಧ್ಯತೆ ಎಂದು ತಿಳಿದಿದ್ದೆ - ಅಲ್ಲಿಂದ ತಪ್ಪಿಸಿಕೊಳ್ಳುವುದು. ನಾನು ಆ ಸೆರೆಮನೆ ಸೇರಿದ ಕೂಡಲೇ ನನ್ನ ಕೋಣೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದೆ. ನೀರು ಹರಿಯುತ್ತಿದ್ದ ಶಬ್ಧ ಕೇಳಿಸುತ್ತಿತ್ತು. ನಾನು ಬಂದ ಬಾಗಿಲನ್ನು ಬಿಟ್ಟರೆ ಒಂದು ಬೆಳಕಿಂಡಿ. ಬೆಳಕಿಂಡಿಯ ಕಂಬಿಗಳನ್ನು ಹಿಡಿದು ಹತ್ತಿ ಆಚೆ ನೋಡಿದೆ. ಆಚೆ ಬರುತ್ತ ನೋಡಿದ್ದ ಕಡಿದಾದ ಬಂಡೆಗಳು ಕೆಳಗೆ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಮಾಯವಾಗುತ್ತಿದ್ದವು. ನಾನಿದ್ದ ಕೋಣೆಗೆ ಊರ್ಧ್ವವಾಗಿ ಒಂದು ಸಣ್ಣ ಅಂಗಳ ಕಾಣಿಸುತ್ತಿತ್ತು. ಅಂಗಳದ ಸುತ್ತ ಮೋಟು ಗೋಡೆ. ಮೋಟುಗೋಡೆಯಿಂದಾಚೆ ಪುನಃ ಕಡಿದಾದ ಬಂಡೆಗಳು; ಕೆಳಗೆ ಭೊರ್ಗಡೆಯುತ್ತಿದ್ದ ಗಂಗಾನದಿ.

ಆ ಬೆಳಕಿಂಡಿಯಿಂದ ಬರುತ್ತಿದ್ದ ಬೆಳಕಿನಿಂದ ಒಂದು ಮೂಲೆಯಲ್ಲಿ ಮತ್ತೊಂದು ಸಣ್ಣ ಬಾಗಿಲು ಕಾಣಿಸಿತು. ಆ ಬಾಗಿಲ ಬಳಿ ಹೋಗಿ ಮೆಲ್ಲನೆ ತಟ್ಟಿದೆ. ಆಚೆಯಿಂದ ಯಾರೋ ಉತ್ತರವಾಗಿ ತಟ್ಟಿದರು. ಸದ್ದಿಲ್ಲದೆ ನಾನು ಒದೆಗೊರಡನ್ನು ನಿಧಾನವಾಗೆ ತೆಗೆದು ಆ ಬಾಗಿಲನ್ನು ತಳ್ಳಿದೆ. ಬಾಗಿಲು ಕದಲಲಿಲ್ಲ. ಆಚೆಯಿಂದಲೂ ಒದೆಗೊರಡು ನಿಧಾನವಾಗಿ ತೆಗೆದ ಧ್ವನಿ. ಪುನಃ ತಳ್ಳಿದೆ ಬಾಗಿಲು ಕದಲಲಿಲ್ಲ. ಒಂದು ಕ್ಷಣ ಯೋಚಿಸಲು ಪಕ್ಕಕ್ಕೆ ಸರಿದು ನಿಂತೆ. ಯಾರೋ ಆ ಬಾಗಿಲನ್ನು ಬಲವಾಗಿ ಒದ್ದ ಹಾಗೆನಿಸಿತು.

"ಏನಾಯಿತು" ಆಚೆ ಕಾವಲು ನಿಂತಿದ್ದ ಭಟನಿರಬೇಕು, ಕೂಗಿದ. ಯಾರಾದರೂ ಬಂದರೆ ಎಂದು ಹೆದರಿ ನಾನು ಮೂಲೆಯಲ್ಲಿಯೇ ಮಲಗಿ, ನಿದ್ರೆ ಮಾಡಿರುವ ನಟನೆ ಮಾಡಿದೆ. ಆದರೆ ಯಾರೂ ಒಳಗೆ ಬರಲಿಲ್ಲ. ಸಣ್ಣ ಬಾಗಿಲಿನಾಚೆಯಿಂದ ಯಾರೋ ನಿದ್ದೆಗಣ್ಣಿನಲ್ಲಿ ಏನೋ ಗೊಣಗಿದ ಹಾಗಾಯಿತು. ಭಟನು ಆ ಸದ್ದಿನಿಂದ ತೃಪ್ತನಾದಂತೆ ಕಾಣಿಸಿತು. ಎಲ್ಲವೂ ಮತ್ತೆ ಶಾಂತವಾಯಿತು.

ಕೆಲವು ಕ್ಷಣಗಳ ಮೌನದ ಬಳಿಕ ಆ ಸಣ್ಣ ಬಾಗಿಲು ನಿಧಾನವಾಗಿ ತೆರೆದ ಶಬ್ದ ಕೇಳಿಸಿತು. ಒಬ್ಬ ವ್ಯಕ್ತಿ ಒಳಗೆ ಬಂದು ಬೆಳಕಿಂಡಿಯಿಂದ ಬರುತ್ತಿದ್ದ ಬೆಳಕಿನಲ್ಲಿ ನಿಂತನು. ಆಶ್ಚರ್ಯ! ಈತ ರಾಜನ ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ! ಇವನನ್ನೂ ದೇಶದ್ರೋಹಿ ಎಂದು ಪರಿಗಣಿಸಿ ಈ ಕಾರಾಗೃಹಕ್ಕೆ ತಳ್ಳಿರಬೇಕು ಎಂದು ಊಹಿಸಿದೆ.

"ಓಹ್! ನೀನು! ಹರ್ಷರಾಜನ ಹತ್ಯೆ ಮಾಡಲು ಪ್ರಯತ್ನಿಸಿದವ! ನೀನೂ ಇಲ್ಲಿಯೇ ಇರುವೆಯಾ" ಎಂದು ಉದ್ಗಾರ ತೆಗೆದೆ

"ಕಣ್ಣಿಗೆ ಕಾಣಿಸುವುದೆಲ್ಲ ಸತ್ಯವಲ್ಲ. ಮಹಾರಾಜನನ್ನು ಕೊಲ್ಲಲು ನಾನು ಹೊರಟಿರಲಿಲ್ಲ" ಅವನು ಉತ್ತರಿಸಿದ.

"ಹಾಗಾದರೆ...? ನೀನು ಯಾರು? ನಿನ್ನ ಹೆಸರೇನು? ಕೊಲ್ಲುವ ಇಚ್ಛೆಯಿಲ್ಲದಿದ್ದರೆ ಏಕೆ ಕತ್ತಿ ಎತ್ತಿ ಹರ್ಷರಾಜನನ್ನು ಆಕ್ರಮಿಸಿದೆ?" ಎಂದು ನಾನು ಪ್ರಶ್ನೆಗಳ ಸುರಿಮಳೆಯೇ ಮಾಡಿದೆ.

"ನನ್ನ ಹೆಸರು ತ್ರಿವಿಕ್ರಮ. ನಾನೊಬ್ಬ ಕ್ಷತ್ರಿಯ - ಹರ್ಷರಾಜನ ಸೈನ್ಯದಲ್ಲಿದ್ದೆ. ದೇಶವನ್ನು ಕಂಡರೆ ಭಕ್ತಿ, ರಾಜನನ್ನು ಕಂಡರೆ ಗೌರವ. ನನ್ನ ನೆರೆಹೊರೆಯಲ್ಲಿ ಹೆಚ್ಚಾಗಿ ಬ್ರಾಹ್ಮಣರಿದ್ದರು. ಅವರೊಂದಿಗೆ ಕೂಡಿ ಧರ್ಮಾಚರಣೆಗಳನ್ನು ನಡೆಸುತ್ತಿದ್ದೆ." ಎಂದು ತನ್ನ ಕತೆ ಆರಂಭಿಸಿದ

ಮುಂದುವರೆಸುತ್ತ "ಹೀಗೊಮ್ಮೆ ಬೌದ್ಧ ಶ್ರಮಣರು ಸೈನ್ಯದವರನ್ನು ಬೌದ್ಧ ಧರ್ಮಕ್ಕೆ ಧರ್ಮಬದಲಾವಣೆ ಮಾಡಲು ಯತ್ನಿಸಿದಾಗ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಇದು ಆ ಬೌದ್ಧರಿಗೆ ಸರಿ ಬರಲಿಲ್ಲ. ನಾನಾ ರೀತಿಗಳಲ್ಲಿ ಒತ್ತಾಯ ಪಡಿಸಿದರು - ಹೊನ್ನು, ಪದವಿ, ಇತ್ಯಾದಿಗಳಿಂದ. ನನ್ನ ಧಾರ್ಮಿಕ ನೆಲೆ ಭದ್ರವಾಗಿದ್ದರಿಂದ ನಾನು ಓಸರಿಸಲಿಲ್ಲ. ಹಾಗಾಗಿ ಅವರಿಗೆ ನನ್ನ ಮೇಲೆ ಸಾಕಷ್ಟು ಕೋಪವಿತ್ತು" ಎಂದು ಹೇಳಿದ.

"ಧಾರ್ಮಿಕ ಸಮಾವೇಷದಲ್ಲಿ ಹರ್ಷರಾಜನು ಬ್ರಾಹ್ಮಣರಿಗೆ ಕೊಡುತ್ತಿದ್ದ ಪ್ರಾಮುಖ್ಯತೆಯಿಂದ ಈರ್ಷ್ಯಪಟ್ಟು ಬ್ರಾಹ್ಮಣರಿಗೆ ಅವಮಾನ ಮಾಡಿ, ಹರ್ಷ ರಾಜನನ್ನೂ ರಾಜಕುಮಾರಿ ರಾಜ್ಯಶ್ರೀಯಂತೆ ಬೌದ್ಧ ಧರ್ಮ್ಮಕ್ಕೆ ಸೆಳೆದುಕೊಳ್ಳುವ ಆಶಯದಿಂದ ಒಂದು ಸಂಚು ಹೂಡಿದರು" ಎಂದು ಹೇಳಿ ಉಸಿರೆಳೆದ

"ಹೀಗೇಕೆ? ಏನು ಸಂಚು? ಇದಕ್ಕೆ ನೀನು ರಾಜನ ಪ್ರಾಣದ ಮೇಲೆ ಮಾಡಿದ ಪ್ರಯತ್ನಕ್ಕೆ ಏನು ಸಂಬಂಧ?" ಪುನಃ ಪ್ರಶ್ನೆ ಕೇಳಿದೆ.

"ನನಗೆ ಆರ್ಥಿಕ ಹಾಗು ಸಾಂಸಾರಿಕ ತೊಂದರೆಗಳಿದ್ದವು. ನನಗೆ ಎನೇನೋ ಬೆದರಿಕೆಗಳನ್ನು ಹಾಕಿ ಮಹಾರಾಜನ ಪ್ರಾಣಾಪಹರಣದ ಪ್ರಯತ್ನ ಮಾಡಲು ಒಪ್ಪಿಸಿದರು. ಆದರೆ ಅದು ನಿಜವಾದ ಪ್ರಯತ್ನವಲ್ಲ - ಅಂದರೆ ರಾಜನನ್ನು ನಿಜವಾಗಿಯೂ ಕೊಲ್ಲುವುದಿರಲಿಲ್ಲ. ಕೇವಲ ಪ್ರಯತ್ನವನ್ನು ಮಾಡಿ ಸಿಕ್ಕಿಕೊಳ್ಳಬೇಕು, ಸಿಕ್ಕಿಕೊಳ್ಳದಿದರೆ ನನ್ನ ಇತರ ತೊಂದರೆಗಳು ನನ್ನ ಕುಟುಂಬದ ಮೇಲೆ ಬರುವ ಹಾಗೆ ಮಾಡುವುದಾಗಿ ಬೆದರಿಸಿದರು" ಎಂದು ತನ್ನ ಸಮಸ್ಯಾತ್ಮಕ ಕತೆ ಮುಂದುವರೆಸಿದ.

"ಸಿಕ್ಕಿಕೊಂಡಮೇಲೆ...?"

"ಸಿಕ್ಕಿಕೊಂಡ ಮೇಲೆ ನನ್ನನ್ನು ಬ್ರಾಹ್ಮಣ ವರ್ಗದವರು ರಾಜನನ್ನು ಕೊಲ್ಲಲು ಕಳುಹಿಸಿದರೆಂದು ನಾನು ಹೇಳಬೇಕಿತ್ತು. ಇದರಿಂದ ಹರ್ಷರಾಜ ಕೋಪಗೊಂಡು ಬ್ರಾಹ್ಮಣರನ್ನು ದೇಶಬ್ರಷ್ಟರಾಗಿಸಿ, ಬೌದ್ಧರಿಗೆ ಮತ್ತೂ ಹೆಚ್ಚು ಒಲಿಯುವನು ಎಂದು ಅವರ ಅಭಿಪ್ರಾಯ. ನಂತರ ಹರ್ಷರಾಜನನ್ನು ಬೌದ್ಧಧರ್ಮಕ್ಕೆ ಬದಲಾಯಿಸಿಕೊಂಡು ಅನಂತ ಸೌಕರ್ಯಗಳನ್ನು ಹೊಂದಬಹುದೆಂಬುದೇ ಅವರ ಸಂಚು" ಎಂದು ತನ್ನ ಕತೆಯನ್ನು ಮುಗಿಸಿದ.

"ನೀನು ಸಿಕ್ಕಿಕೊಂಡಮೇಲೆ ಏನಾಯಿತು? ಇಷ್ಟು ಹೊತ್ತಿಗೆ ನಿನಗೆ ಶಿಕ್ಷೆ ಕೊಟ್ಟಿರಬಹುದೆಂದುಕೊಂಡಿದ್ದೆ" ನಾನು ಹೇಳಿದೆ.

"ಸಿಕ್ಕಿಕೊಂಡಮೇಲೆ ವಿಚಾರಣೆ ನಡೆಸಿದರು. ಬ್ರಾಹ್ಮಣವರ್ಗದ ನನ್ನ ಮಿತ್ರರನ್ನು ರಾಜನ ಕೋಪದಿಂದ ಕಾಪಾಡುವ ಯತ್ನ ಮಾಡಿದೆ. ವಿಚಾರಣೆಅಲ್ಲಿ ನಾನು ದಬ್ಬಾಳಿಕೆಯಲ್ಲಿ ಬಂದು ಹೀಗೆ ಮಾಡಿದ್ದು, ಹಾಗು ಹೇಳಿಕೆ ಕೊಟ್ಟಿದ್ದು ಎಂದು ಅವರಿಗೆ ಅರ್ಥವಾಗುವಹಾಗೆ ನಡೆದುಕೊಂಡೆ. ಹಾಗಾಗಿ ಮತ್ತೆ 'ನಿಜ ಹೇಳು; ಯಾರು ನಿನ್ನನ್ನು ಕಳುಹಿಸಿದ್ದು' ಎಂದು ಕೇಳಿದರು" ತ್ರಿವಿಕ್ರಮ ಹೇಳಿದ.

"ಮತ್ತೆ ನೀನೇನು ಹೇಳಿದೆ?" ನಾನು ಕೇಳಿದೆ

"ನನಗೆ ಆ ಬೌದ್ಧರನ್ನು ಸಿಕ್ಕಿಹಾಕಿಸಲೂ ಇಷ್ಟವಿರಲಿಲ್ಲ. ಅವರು ನನ್ನನ್ನಾಗಲೇ ಬೆದರಿಸಿದ್ದರು. ಬೇರಾವ ದಾರಿಯೂ ಕಾಣದೆ ನನ್ನನ್ನು ಹೊರದೇಶದ ಗೂಢಚಾರರು ಈ ಕಾರ್ಯಕ್ಕೆ ಬೆದರಿಕೆಗಳಿಂದ ಒತ್ತಾಯಿಸಿದ್ದರೆಂದು, ಆದರೆ ಮಹಾರಾಜನನ್ನು ಕೊಲ್ಲಲಿಚ್ಛಿಸದೆ ನಾನು ಬೇಕೆಂದೇ ಅವನಿಗೆ ಪೆಟ್ಟು ಬೀಳದ ಹಾಗೆ ಕತ್ತಿ ಪ್ರಯೋಗಿಸಿದೆನೆಂದೂ ಹೇಳಿದೆ" ಕಳೆದದ್ದನ್ನೆಲ್ಲಾ ಹೇಳಿದ.

ನನಗೀಗ ಎಲ್ಲವೂ ಅರ್ಥವಾಯಿತು!