ಬಸವಣ್ಣನವರ ವಚನಗಳು ಭಾಗ ೧
ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ?
ನಮ್ಮ ಕೂಡಲ ಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು ||೧||
ಹಾಲ ತೊಱೆಗೆ ಬೆಲ್ಲದ ಕೆಸಱು, ಸಕ್ಕರೆಯ ಮಳಲು,
ತವರಾಜನ ನೊರೆ ತೆರೆಯಂತೆ,
ಆದ್ಯರ ವಚನವಿರಲು,
ಬೇಱೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲ ಸಂಗಮದೇವಾ ||೨||
ಎನ್ನಿಂದ ಕಿಱಿಯರಿಲ್ಲ; ಶಿವಭಕ್ತರಿಂದ ಹಿರಿಯರಿಲ್ಲಾ
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ,
ಕೂಡಲ ಸಂಗಮದೇವಾ, ಎನಗಿದೇ ದಿಬ್ಯ ||೩||
ಮರನನೇಱಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತಲಿದೆ,
ಬೆಂದ ಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ ಹೋಗಲೀಯದಯ್ಯಾ! ||೪||
ಅಂದಣವನೇಱಿದ ಸೊಣಗನಂತೆ-
ಕಂಡೊಡೆ ಬಿಡದು ಮುನ್ನಿನ ಸ್ವಭಾವವನು;
ಸುಡು! ಸುಡು!! ಮನವಿದು ವಿಷಯಕ್ಕೆ ಹರಿವುದು;
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲ ಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆಱಗೊಡ್ಡಿ ಬೇಡುವೆ, ನಿಮ್ಮ ಧರ್ಮ! ||೫||
ಬೆಳೆಯ ಭೂಮಿಯೊಳೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚಱಲೀಯದು!
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ;
ಸುಳಿದೆಗೆದು ಬೆಳೆವೆನು, ಕೂಡಲಸಂಗಮದೇವಾ ||೬||