ಬುದ್ಧಿವಂತರಿಗೆ ಕಾಲವಲ್ಲ, ಈ ದೇಶದಲ್ಲಿ!

ಬುದ್ಧಿವಂತರಿಗೆ ಕಾಲವಲ್ಲ, ಈ ದೇಶದಲ್ಲಿ!

ಬರಹ

(ನಗೆ ನಗಾರಿ ಸಂಶಯ-ಚೋದನಾ ಬ್ಯೂರೋ)

‘ನಮ್ಮ ಸಮಾಜದಲ್ಲಿ ಬುದ್ಧಿವಂತರು ಎಲ್ಲರಿಗಿಂತ ಶೋಷಿತರಾದ ವರ್ಗದವರು. ಶೋಷಿತರಲ್ಲೇ ಆತ್ಯಂತ ಶೋಷಿತರೂ, ಅಸಂಘಟಿತರೂ ಆಗಿರುವಂಥವರು ಇವರು. ಮೇಲಾಗಿ ಇವರು ಅಲ್ಪಸಂಖ್ಯಾತರು. ಇದಕ್ಕೆ ನಮ್ಮ ಸರಕಾರವನ್ನು ಅಭಿನಂದಿಸಬೇಕೆಂಬ ಅಂಶ ನನ್ನ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ’ ಎಂದು ಖ್ಯಾತ ಚಿಂತಕ, ದಾರ್ಶನಿಕ ಶ್ರೀಯುತ ಹಂಗ್ಯಾಕ ಹಾರುತಿಯವರು ನಮ್ಮ ವರದಿಗಾರನಿಗೆ ತಿಳಿಸಿದ್ದಾರೆ.

‘ಭಾರತದಂಥ ದೇಶ ಬುದ್ಧಿವಂತರಿಗೆ ನರಕದಂಥದ್ದು. ಇಲ್ಲಿ ಬುದ್ಧಿವಂತರು ಹುಟ್ಟಲೇಬಾರದು. ಆದರೂ ಇತಿಹಾಸದ ವಿಪರ್ಯಾಸ ನೋಡಿ, ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಇಲ್ಲೇ ಹೆಚ್ಚು ಮಂದಿ ಬುದ್ಧಿವಂತರು ಹುಟ್ಟುತ್ತಾರೆ. ಅವರ ಜನ ಸಂಖ್ಯೆ ಸ್ಫೋಟ ನಡೆಯುತ್ತಿದೆ. ಒಂದು ವೇಳೆ ಸರಕಾರವೇನಾದರೂ ಕಠಿಣವಾದ ಕಾನೂನು ರೂಪಿಸಿ ಬುದ್ಧಿವಂತರು ಇಲ್ಲಿ ಹುಟ್ಟಬಾರದು ಎಂದೇನಾದರೂ ಅಪ್ಪಣೆ ಹೊರಡಿಸಿದರೆ ದೇಶದಲ್ಲಿನ ಜನನ ಪ್ರಮಾಣ ಸೊನ್ನೆಗೆ ಕುಸಿದು ಬಿಡುತ್ತದೆ. ಭಾರತದ ನೆಲದಲ್ಲಿ ಇಷ್ಟು ಮಂದಿ ಬುದ್ಧಿವಂತರು ಕ್ಷಣ ಕ್ಷಣಕ್ಕೂ ಕಣ್ಣು ಬಿಡುತ್ತಾರೆ ಎಂದರೆ ನಂಬಲು ಸಾಧ್ಯವಾಗುತ್ತದೆಯೇ?

‘ಹೀಗೆ ಭಾರತದ ನೆಲದ ಮೇಲೆ ಹುಟ್ಟಿದ ಎಲ್ಲಾ ಬುದ್ಧಿವಂತರನ್ನು ಸರಿಯಾಗಿ ಪಾಲಿಸಿ ಪೋಷಿಸಿ ಸರಿಯಾದ ಆರೈಕೆ ಮಾಡಿಬಿಟ್ಟರೆ ಮುಂದೆ ದೇಶ ತುಂಬೆಲ್ಲಾ ಅವರೇ ತುಂಬಿಕೊಂಡು ತಮ್ಮ ಅಸ್ತಿತ್ವಕ್ಕೇ ಸಂಚಕಾರವಾಗಿಬಿಡುತ್ತಾರೆ ಎಂದು ಆಲೋಚಿಸಿದ ನಮ್ಮ ಕ್ರೂರ ಸರಕಾರಗಳು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಈ ಬುದ್ಧಿವಂತ ಜನಾಂಗವನ್ನೇ ನಾಶ ಮಾಡುವ ಕೈಂಕರ್ಯ ನಾಗರೀಕತೆಯ ಉಗಮದಲ್ಲೇ ತೊಟ್ಟಿದ್ದು ಕಂಡು ಬರುತ್ತದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರದದ್ದು. ಸರ್ಕಾರಿ ಡಾಕ್ಟರುಗಳೆಂಬ ‘ಸೇನಾಧಿಪತಿ’ಗಳನ್ನು ಕಳುಹಿಸಿದ್ದು. ಅವರು ಸರಕಾರದ ಕೆಲಸವನ್ನು ಬಹಳ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಭೂಮಿಗೆ ಬಂದ ಬಹುತೇಕ ಬುದ್ಧಿವಂತರಲ್ಲಿ ತಮ್ಮ ಕೈಲಾದಷ್ಟು ಮಂದಿಯನ್ನು ವಾಪಸ್ಸು ಬಂದ ಜಾಗಕ್ಕೇ ಕಳುಹಿಸುವ ಮೂಲಕ ನಮ್ಮ ದೇಶದ ಶಿಶುಪಾಲನಾ ವ್ಯವಸ್ಥೆ ತನ್ನ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.

‘ಇನ್ನು ನಮ್ಮ ಸಮೂಹ ಪ್ರಜ್ಞೆಯಲ್ಲಿ ಧರ್ಮ, ಧರ್ಮ ಗುರುಗಳು ಹಾಗೂ ಚಿಂತಕರು ಬಿತ್ತಿದ ಕೆಲವು ಬೀಜಗಳು ಮೊಳೆತು ಬಲಿತ ಹಣ್ಣುಗಳನ್ನು ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ‘ಗಂಡು ಮಗು ಹೆತ್ತವನಿಗೆ ಮಾತ್ರ ಮುಕ್ತಿ’ ‘ಮನೆಯ ಮಗಳು ಎಂದಿಗೂ ಗಂಡನ ಮನೆ ಸೇರುವವಳು’ ‘ವರದಕ್ಷಿಣೆ’ ಎಂಬಂಥ ಕಟ್ಟುಮಸ್ತಾದ ಬೀಜಗಳನ್ನು ಬಿತ್ತಿದ ಇವರು ಇನ್ನಷ್ಟು ಮಂದಿ ಬುದ್ಧಿವಂತರು ಈ ಭೂಮಿಯ ಮೇಲೆ ನಡೆದಾಡುವುದನ್ನು ತಪ್ಪಿಸಿದ್ದಾರೆ.

‘ಮೊಳಕೆಯಲ್ಲೇ ಇಷ್ಟೆಲ್ಲಾ ಸಂಕಷ್ಟಗಳನ್ನು, ಬಾಲ ಪೀಡೆಯನ್ನೂ ದಾಟಿ ಬರುವ ಬುದ್ಧಿವಂತರನ್ನು ವ್ಯವಸ್ಥಿತವಾಗಿ ‘ಮತಾಂತರ’ಗೊಳಿಸುವುದಕ್ಕಾಗಿಯೇ ಆಡಳಿತಗಾರರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದರು. ‘ಬುದ್ಧಿವಂತರನ್ನು ಕೊಲ್ಲಲಾಗದಿದ್ದರೆ ಅವರಲ್ಲಿನ ಬುದ್ಧಿವಂತಿಕೆಯನ್ನು ಉಸಿರುಗಟ್ಟಿಸಿ ಸಾಯಿಸಿಬಿಡು’ ಎಂಬ ಒಂದಂಶದ ಕಾರ್ಯಕ್ರಮವನ್ನು ಇಟ್ಟುಕೊಂಡ ಶಿಕ್ಷಣ ಸಂಸ್ಥೆಗಳು. ವರ್ಷಂಪ್ರತಿ ಆ ಕೆಲಸದಲ್ಲಿ ತಮ್ಮ ಸಮಸ್ತ ಪ್ರಯತ್ನವನ್ನೂ ವಿನಿಯೋಗಿಸಿ ‘ಬುದ್ಧಿವಂತಿಕೆ’ ಸತ್ತ ದೇಹಗಳನ್ನು ಸಮಾಜಕ್ಕೆ ದಾಸ್ತಾನು ಮಾಡುತ್ತಿವೆ.

‘ಎಷ್ಟೇ ದಕ್ಷ ಎಂದರೂ ಸಹ ನಮ್ಮ ಸರಕಾರಗಳ ಯೋಜನೆ, ವ್ಯವಸ್ಥೆಗಳಿಂದ ಕೆಲವು ಬುದ್ದಿವಂತರು ತಪ್ಪಿಸಿಕೊಂಡು ಬಿಡುತ್ತಾರೆ. ಅವರು ತಮ್ಮ ಮೇಲಾಗುವ ಎಲ್ಲಾ ಆಕ್ರಮಣಗಳಿಂದ ತಮ್ಮ ಬುದ್ಧಿವಂತಿಕೆಯನ್ನು ರಕ್ಷಿಸಿಕೊಂಡು ಬದುಕುಳಿಯುತ್ತಾರೆ. ಅಂಥವರನ್ನು ನೋಡಿಕೊಳ್ಳುವುದಕ್ಕಾಗಿಯೇ ನಮ್ಮ ದೇಶ ಅದ್ಭುತವಾದ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ: ಬುದ್ಧಿವಂತಿಕೆಯನ್ನು ಸಾರಾಸಗಟಾಗಿ ಅವಮಾನಿಸುವುದು. ಬುದ್ಧಿವಂತಿಕೆಗೆ ತಕ್ಕ ಸ್ಥಾನವನ್ನು ಕೊಡದೆ ಇರುವುದು. ಬುದ್ಧಿವಂತಿಕೆ ಅಭಿವ್ಯಕ್ತಿಗೊಳ್ಳಲು ಇರುವ ಅವಕಾಶಗಳ ಬಾಗಿಲುಗಳೆಲ್ಲವನ್ನೂ ಮುಚ್ಚಿಬಿಡುವುದು. ಜಾತಿಯ ಹೆಸರಿನಲ್ಲಿ ಮಣ್ಣನೆ, ಧರ್ಮದ ಹೆಸರಿನಲ್ಲಿ ಮೀಸಲಾತಿ, ಬಡತನದ ಹೆಸರಿನಲ್ಲಿ ಗೌರವ, ತಂದೆಯ ಹೆಸರಿನ ಶಕ್ತಿಯ ಮೇಲೆ ಸ್ಥಾನಮಾನ, ಮಂತ್ರಿಯ ಕೃಪಾಕಟಾಕ್ಷದ ಮಹಿಮೆಯ ಮೇಲೆ ಅವಕಾಶ ಇವಷ್ಟೇ ಅಲ್ಲದೆ ಇನ್ನೂ ಕೆಲವು ‘ರಾಸಾಯನಿಕ’ಗಳ ಸಹಾಯದಿಂದ ಬುದ್ಧಿವಂತಿಕೆಯನ್ನು ಕೊಳೆಸಲು ಶುರುಮಾಡುತ್ತದೆ.

‘ಇವೆಲ್ಲವನ್ನೂ ತಡೆದುಕೊಂಡು, ಪ್ರತಿರೋಧ ಒಡ್ಡಿಕೊಂಡು ಉಳಿದುಕೊಳ್ಳುವ ಬುದ್ಧಿವಂತರನ್ನೂ ಸಹ ಸರಕಾರ ಸಹಿಸಿಕೊಳ್ಳುವುದಿಲ್ಲ. ಅವರನ್ನು ರ್ಯಾಕೆಟ್ಟಿನಿಂದ ಚಿಮ್ಮುವ ಟೆನ್ನಿಸ್ ಬಾಲುಗಳ ಹಾಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಗುವಂತೆ ಮಾಡಿಬಿಡುತ್ತದೆ. ಬುದ್ಧಿವಂತಿಕೆ ಎಂಬುದು ದೇಶದಿಂದಲೇ ಪಲಾಯನ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಹೀಗೆ ಅತ್ಯಂತ ವ್ಯವಸ್ಥಿತಿವಾಗಿ, ಆತ್ಯಂತಿಕವಾಗಿ ಪ್ರಯತ್ನ ಪಡುವ ಸರಕಾರಗಳಿಂದಾಗಿ ನಮ್ಮ ದೇಶ ಯಾವಾಗಲೂ ‘ಬುದ್ಧಿವಂತಿಕೆ ರಹಿತ’ ದೇಶವಾಗಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಅಂಶ ನನ್ನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ’ ಎಂದಿದ್ದಾರೆ.