ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೨

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೨

ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ. ಅವನು ಅಂದು ಮಾಡಿದ ಒಳ್ಳೆಯ ಕೆಲಸ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ. ಏಕೆ ಗೊತ್ತೇ? ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ. ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್ಟ್ರಾ ಇನ್ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲು ಅನುಕೂಲವಾಯಿತು.

ಗಣೇಶ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಓದಿದವನಾಗಿದ್ದು ಬಿ.ಕಾಂ ಪರೀಕ್ಷೆಯಲ್ಲಿ ೫ನೇ ರ್‍ಯಾಂಕ್ ಪಡೆದವನಾಗಿದ್ದ. ಇಲ್ಲಿ ಸೇರುವ ಮೊದಲು ಕರ್ನಾಟಕ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದ. ಇಲ್ಲಿಗೆ ಸೇರುವ ಹೊತ್ತಿಗಾಗಲೇ ಸಿ.ಏ.ಐ.ಐ.ಬಿ ಪರೀಕ್ಷೆಯ ಮೊದಲನೆಯ ಪಾರ್ಟ್ ಆಗಲೇ ಪಾಸು ಮಾಡಿದ್ದ. ಈಗ ಗಣೇಶ ಐತಾಳ ನನ್ನೊಂದಿಗೇ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವನು.

ಇನ್ನೊಬ್ಬ ಸ್ನೇಹಿತ ಮುನಿಸ್ವಾಮಿ ಎಂ.ಬಿ.ಎ. ಮಾಡಿದವನಾಗಿದ್ದ. ಸ್ವಲ್ಪ ಕಾಲ ನಮ್ಮೊಡನಿದ್ದು ನಂತರ ಕರ್ನಾಟಕ ಸರ್ಕಾರದ ಕೆಲಸಕ್ಕೆ ಸೇರಿದ್ದ. ಹಾಗೆಯೇ ಜಯಶೀಲ ಸ್ವಲ್ಪ ಕಾಲದ ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿದ್ದ. ಅಂದು ನನ್ನೊಡನೆ ಬ್ಯಾಂಕು ಸೇರಿದ ಬಹಳಷ್ಟು ಜನ ಸ್ನೇಹಿತರು ಈಗ ಆಫೀಸರುಗಳಾಗಿದ್ದಾರೆ.

ಟ್ರೈನಿಂಗಿನಲ್ಲಿ ಪ್ರತಿಯೊಂದು ವಿಭಾಗಗಳ ಕೆಲಸ ಕಾರ್ಯಗಳ ರೂಪುರೇಷೆಯನ್ನು ತಿಳಿಸಿಕೊಟ್ಟಿದ್ದರು. ಹಾಗೆಯೇ ನಮಗೆ ಬಹಳ ಮುಖ್ಯವಾಗಿ ತಿಳಿಯಬೇಕಿದ್ದ ಸಂಬಳ, ಭತ್ಯೆ ಇನ್ನಿತರೇ ಸವಲತ್ತುಗಳ ವಿಷಯಗಳನ್ನೂ ತಿಳಿಸಿಕೊಟ್ಟಿದ್ದರು. ಕಡೆಯ ದಿನ ಎಲ್ಲರೂ ಸೇರಿ ಒಂದು ಫೋಟೋವನ್ನು ಕೂಡಾ ತೆಗೆಸಿಕೊಂಡಿದ್ದೆವು.

ಟ್ರೈನಿಂಗ್‍ನ ಕೊನೆಯ ದಿನದಂದು ಬೀಳ್ಕೊಡುವ ಸಮಾರಂಭವನ್ನು ಇಟ್ಟುಕೊಂಡಿದ್ದೆವು. ಆಗ ಬೋರ್ಡ್ ಮೇಲೆ ಮ್ಯಾನೇಜರ್ ಆಗಿದ್ದ ಎಸ್ ಎನ್ ಬಗಾಯಿ ಅವರಿಗೆ ಸ್ವಾಗತವೆಂದು ಬರೆದಿದ್ದೆ. ಬಗಾಯಿ ಅವರದ್ದು ಯಾವಾಗಲು ಮುಖ ಗಂಟಿಕ್ಕಿರುವ ಸ್ವರೂಪ. ಅವರು ಬಂದ ಕೂಡಲೇ ಯಾರಿದು ಬರೆದವರು ಎಂದು ಕೇಳಿದ್ದರು - ಒಂದು ನಿಮಿಷ ಯಾರಿಂದಲೂ ಉತ್ತರ ಬಾರದೇ ಮೌನ. ಏನೋ ತಪ್ಪಾಗಿದೆ ಎಂದು ನಾನು ಹೆದರಿಬಿಟ್ಟಿದ್ದೆ. ಚೆನ್ನಾಗಿ ಬರೆದಿದ್ದೀರಿ - ಯಾರು ಬರೆದದ್ದು ಎಂದು ಕೇಳಿದ ಮೇಲೆ ನನ್ನ ಪಕ್ಕದಲ್ಲಿದ್ದ ನರೇಂದ್ರ - ಇವನೇ ಸಾರ್, ಎಂದು ನನ್ನ ಕಡೆಗೆ ಬೆರಳು ತೋರಿದ್ದ. ಬರವಣಿಗೆ ಚೆನ್ನಾಗಿದೆ ಎಂದು ಅವರು ನನ್ನನ್ನು ಪ್ರಶಂಸಿಸಿದ್ದರು. ಹೆದರಿದ್ದ ನಾನು ಸ್ವಲ್ಪ ಬೆವತಿದ್ದೆ ಕೂಡ. ಟ್ರೈನಿಂಗ್‍ನ ಕಡೆಯಲ್ಲಿ ತರಬೇತಿ ಕೊಟ್ಟವರು, ಅಂದರೆ ಶ್ರೀಯುತ ಪ್ರಭುಗಳು ಮತ್ತು ರಾಜೇಶ್ವರಿಯವರು ಎಲ್ಲರಿಗೂ ಒಳ್ಳೆಯದಾಗಲೆಂದು ಹರಸಿದರು. ಆಗ ನಾವೆಲ್ಲರೂ ಬ್ಯಾಂಕಿನ ಬಗ್ಗೆ ಕೂಲಂಕಷವಾಗಿ ಬಹಳ ಕಡಿಮೆ ಸಮಯದಲ್ಲಿ ತಿಳಿಸಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. ನಮ್ಮಲ್ಲಿ ಒಬ್ಬರಂತೂ ಅವರಿಗೆ ಅಡ್ಡಬಿದ್ದು ಸಾಷ್ಟಾಂಗ ವಂದಿಸಿದರು.

ಟ್ರೈನಿಂಗ್ ಪ್ರಾರಂಭವಾದ ಮೊದಲನೆಯ ದಿನದಿಂದಲೇ ದೂರದೂರುಗಳಿಂದ ಬಂದವರುಗಳು ವಾಸಕ್ಕಾಗಿ ಮನೆ ಅಥವಾ ಕೊಠಡಿಗಳನ್ನು ಹುಡುಕುತ್ತಿದ್ದರು. ಬೆಂಗಳೂರಿನವರುಗಳಿಗೆ ಸ್ವಂತ ಮನೆ ಇದ್ದಿತ್ತು. ನಾನೊಬ್ಬನೇ ಹಾಸ್ಟೆಲ್‍ನಲ್ಲಿದ್ದು, ಕೆಲಸ ಸಿಕ್ಕಿದ್ದುದರಿಂದ ಅಲ್ಲಿಂದ ಹೊರ ಬರಬೇಕಾಗಿತ್ತು. ಇದರ ಬಗ್ಗೆ ಒಂದೆರಡು ಮಾತುಗಳು.

ನಾನು ಇದ್ದದ್ದು ಶಂಕರಮಠದ ವಿದ್ಯಾರ್ಥಿ ಗೃಹ. ಬಿ.ಕಾಂ ಓದುವಾಗ ನಾನು ಅಲ್ಲಿಗೆ ಸೇರಿದ್ದೆ. ಅಲ್ಲಿ ಎಲ್ಲರಿಗೂ ಸೇರಲು ಮುಕ್ತ ಅವಕಾಶವಿರಲಿಲ್ಲ. ವೇದಾಭ್ಯಾಸ ಮಾಡುವವರಿಗೆ ಮಾತ್ರ ಇರಲು ಅವಕಾಶ. ವಸತಿ ಪುಕ್ಕಟೆಯಾಗಿತ್ತು. ಆದರೆ ಊಟ ತಿಂಡಿಗೆ ತಗಲುವ ವೆಚ್ಚವನ್ನು ನಾವೇ ಭರಿಸಬೇಕಿತ್ತು. ಅದಕ್ಕೊಬ್ಬರು ವಾರ್ಡನ್ ಮತ್ತು ಅಲ್ಲೇ ವಾಸವಾಗಿದ್ದ ಕೇರ್ ಟೇಕರ್ ಇದ್ದರು. ೩ ಕೊಠಡಿಗಳಲ್ಲಿ ಒಟ್ಟು ೯ ಜನ ಹುಡುಗರಿದ್ದು, ಹೆಚ್ಚಿನ ಒಂದು ರೂಮನ್ನು ಸಂಧ್ಯಾವಂದನೆಗೆಂದೂ, ಒಂದನ್ನು ಕೇರ್ ಟೇಕರಿಗೆಂದೂ, ಪ್ರವಚನಗಳಿಗಾಗಿ ಒಂದು ದೊಡ್ಡ ಹಾಲನ್ನೂ ಮತ್ತು ವೇದಾಭ್ಯಾಸಕ್ಕೆ ಒಂದು ಕೊಠಡಿಯನ್ನೂ ಪ್ರತ್ಯೇಕವಾಗಿರಿಸಿದ್ದರು. ನಾನು ಬಿ.ಕಾಂ ಮುಗಿದ ಕೂಡಲೇ ಒಂದು ಖಾಸಗೀ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆಗ ಹಾಸ್ಟಲ್ ಬಿಡುವ ಸಂದರ್ಭ ಬಂದಿತ್ತು. ಆಗ ಐ.ಸಿ.ಡಬ್ಲ್ಯು.ಏ ಪರೀಕ್ಷೆಗಾಗಿ ಓದು ಪ್ರಾರಂಭಿಸಿದ್ದೆ. ಹಾಸ್ಟಲ್‍ನ ಆಡಳಿತದಲ್ಲಿ ಸ್ವಲ್ಪ ತೊಂದರೆ ಬಂದಿದ್ದು, ನನ್ನನ್ನು ಆಗ ಅಸಿಸ್ಟೆಂಟ್ ವಾರ್ಡನ್ ಮಾಡಿದ್ದರು. ಬ್ಯಾಂಕಿನಲ್ಲಿ ಕೆಲಸ ಸಿಕ್ಕ ಮೇಲೇ ನನಗೇ ಅಲ್ಲಿರಲು ಮನಸ್ಸಾಗಲಿಲ್ಲ. ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಹುಡುಕಲು ಪ್ರಾರಂಭಿಸಿದೆ.

ಬ್ಯಾಂಕಿನಲ್ಲಿ ನನ್ನೊಡನಿದ್ದ ಸ್ನೇಹಿತರುಗಳಿಗೂ ಕೊಠಡಿಗಳು ಬೇಕಿದ್ದು ಮತ್ತು ಅವರುಗಳು ಬೆಂಗಳೂರಿಗೆ ಹೊಸಬರಾಗಿದ್ದುದರಿಂದ ನಾನೇ ಊರಿನ ಗಲ್ಲಿ ಗಲ್ಲಿಗಳಲ್ಲಿ ಕೊಠಡಿ ಹುಡುಕಲು ಅವರಿಗೆ ಸಹಾಯಿಸುತ್ತಿದ್ದೆ. ಟ್ರೈನಿಂಗ್ ಮುಗಿಯುವ ಮೊದಲೇ ನನ್ನ ಇನ್ನೊಬ್ಬ ಸ್ನೇಹಿತ ಲಕ್ಷ್ಮೀನಾರಾಯಣನಿಂದ ನನಗಾಗ ಮಲ್ಲೇಶ್ವರದ ೧೮ನೇ ಕ್ರಾಸಿನಲ್ಲಿದ್ದ ಗಣೇಶ ಭವನದಲ್ಲಿ ಒಂದು ಕೊಠಡಿ ದೊರಕಿತ್ತು. ಅದಕ್ಕೆ ಬಾಡಿಗೆಯಾಗಿ ರೂ. ೮೦ ಕೊಡುತ್ತಿದ್ದೆ. ಅಲ್ಲಿ ಅಡುಗೆ ಮಾಡಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿಯವರು ನಿರ್ದೇಶಿಸಿದ್ದರೂ ಅಲ್ಲಿನ ಇತರೇ ವಾಸಿಗಳು ಅಡುಗೆ ಮಾಡುತ್ತಿದ್ದರು. ನಾನೂ ಅವರಂತೆಯೇ ಪ್ರತಿನಿತ್ಯವೂ ರಾತ್ರಿಯ ಹೊತ್ತು ಅಡುಗೆ ಮಾಡುತ್ತಿದ್ದೆ. ಆ ಕೊಠಡಿಯಲ್ಲಿ ಒಂದು ಮೇಜು, ಖುರ್ಚಿ ಮತ್ತು ಮಂಚವಿತ್ತು. ಸ್ನಾನ ಮಾಡಲು ಬಿಸಿನೀರಿನ ಸೌಲಭ್ಯವಿದ್ದಿತ್ತು.

ಲಕ್ಷ್ಮೀನಾರಾಯಣನ ಬಗ್ಗೆ ಒಂದು ಮಾತು. ಅವನು ನನಗಿಂತ ೧೦ ವರುಷಗಳಷ್ಟು ದೊಡ್ಡವನು. ಇದಕ್ಕೆ ಮುಂಚೆ ಸೆಂಟ್ರಲ್ ಎಕ್ಸೈಸ್ ನಲ್ಲಿ ಕೆಲಸ ಮಾಡುತ್ತಿದ್ದನು. ಕಾಲು ಸ್ವಲ್ಪ ಊನವಾಗಿದ್ದರೂ ಬಹಳ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡುತ್ತಿದ್ದನು. ಬ್ಯಾಂಕ್ ಸೇರಿದ ಮೊದಲ ದಿನದಿಂದಲೇ ಬ್ಯಾಂಕಿನಲ್ಲಿ ಛಾಂಪಿಯನ್ ಆಗಿದ್ದನು. ಹಾಗೆಯೇ ಇಂಟರ್ ಬ್ಯಾಂಕ್ ಟೂರ್ನಮೆಂಟಿನಲ್ಲಿ ಕೂಡಾ ಅವನು ಛಾಂಪಿಯನ್ ಆಗಿದ್ದನು. ಈಗಲೂ ಅವನು ಹಿರಿಯರ ವರ್ಗದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಗಳಲ್ಲಿ ಗೆದ್ದು ಪತ್ರಿಕೆಯಲ್ಲಿ ಸುದ್ದಿಯಾಗುತ್ತಿರುತ್ತಾನೆ.

ಮುಂದಿನ ಭಾಗಕ್ಕೆ ನಿರೀಕ್ಷಿಸಿ ...

Rating
No votes yet