ಉರಿಯ ಉಯ್ಯಾಲೆಯಲಿ......

ಉರಿಯ ಉಯ್ಯಾಲೆಯಲಿ......

ಬರಹ

ಚರಿತ್ರೆಯ ಹಾಳೆಗಳನ್ನೆಲ್ಲ ತಿರುವಿ

ಉಳಿದ ಭಗ್ನಾವಶೇಷಗಳ ನಡುವೆ-

 

ಮದೋನ್ಮತ್ತ  ರಾಜ ದರಬಾರುಗಳು

ಸಿಂಹಾಸನಕ್ಕಂಟಿನಿಂತ ಸಾಲಭಂಜಿಕೆಯರು

ಮಾಯೆ ಮುಸುಕಿನ ನೃತ್ಯಾಂಗನೆಯರು

 

ಹಗಲ ಬೆಳಕಲ್ಲೂ ದೀಪ ಹಿಡಿದರಷ್ಟೇ

ಅರಿವೆಗೆ ಬರುವ ಸತ್ಯ, ನ್ಯಾಯದ ಮಸಕು ನೆರಳುಗಳು.

ಯುದ್ಧದ ಜ್ವಾಲೆಗೆ ಹೆದರಿ, ಬೆವರಿದಾಗೆಲ್ಲ-

ಕಪ್ಪ, ಕಾಣಿಕೆ, ಹೊಸ ಹೊಸ ಸಂಬಂಧಗಳು

 

ತುಕ್ಕು ಹಿಡಿದ ಕತ್ತಿ, ಬಾಣ, ಭರ್ಜಿಗಳಿಗೆಲ್ಲ

ಮತ್ತೆ, ಮತ್ತೆ ಹರಿತವಾಗುವವಕಾಶಗಳು

ಚೆಲ್ಲಾಪಿಲ್ಲಿ ಚದುರಿ ಹೋಗುವ ರಾಜ ಮನೆತನದ ಕೊಂಡಿಗಳು

 

ಹೆಣ್ಣು,ಹೊನ್ನು, ಮಣ್ಣುಗಳ ಕಾರಣಕ್ಕನವರತ

ಬದಲಾಗುತ್ತಲೇ ಇರುವ ಮನುಷ್ಯ ವಾಸನೆಗಳು

ರಣಾಂಗಣದರಿವಿರದ ಉತ್ತರರ ಬಡಾಯಿಗಳು

ಶರಶಯ್ಯೆಯಲಿ ದಿನಗಳೆಣಿಸುತ್ತಿರುವ ಪ್ರತಿಜ್ಞೆಗಳು

 

ಒಡೆದದ್ದನ್ನೆಲ್ಲ ಒಂದುಗೂಡಿಸುವ ಕುರುಡು ವಿಶ್ವಾಸಗಳು 

ಮಣ್ಣ ಕಣ್ಣಿನಲಿ, ಎದ್ದ ಧೂಳಿನಲಿ ರೆಕ್ಕೆ ಝಾಡಿಸುವ ಹಿಟ್ಟು ಹುಂಜಗಳು

ಗುಹೇಶ್ವರನ ಜೊತೆ ಜೊತೆಗೇ ಮಲ್ಲಿಕಾರ್ಜುನನ ಹೆಜ್ಜೆಗಳು

 

ವಿಷದ ಬಟ್ಟಲಲಿ ಪ್ರತ್ಯಕ್ಷವಾಗುವ ಮೂಗು ನತ್ತುಗಳು

ಒಂದರ ಮೇಲೊಂದು ಅಡಿಕಿರಿದ ಪ್ರತಿಮೆ. ರೂಪಕಗಳು

ಅಂತಃಪುರದಲ್ಲುಳಿದರೆ; ಬರಿಯ ಅಂಗಸುಖ

ಬಯಲಿಗಿಳಿಯುವುದೆಂತು?: ಮೋಹಿತನೀ ಆತ್ಮಸಖ

 

ಸಿದ್ಧ ಉತ್ತರದ ಪ್ರಮೇಯಗಳ ಬಿಡಿಸುವುದಕ್ಕೆ

ಬಳಸುತ್ತಲೇ ಇರುವ ಮತ್ತದೇ ಹಳೆಯ ಸೂತ್ರ

ಎಷ್ಟು ಸುತ್ತಿದರೂ ಸವೆಯದೇ ತಿರುಗುತ್ತಿರುವ ಕಾಲ ಚಕ್ರ!

 

ಆದರೂ ಈ ಇದೇ ಚಕ್ರತೀರ್ಥದ ಮಡುಗಳಲ್ಲೇ ಸಿಲುಕಿ,

ನಡೆಯುತ್ತಲೇ ಇದೆ ಜನಮೇಜಯರ ಮೋಜು, ಮೇಜವಾನಿ ಸಾಲು.

ಗಾಳಿ ಕಡೆಯುವುದಕ್ಕೇಕೆ ಬೆಳ್ಳಿ ಮಂತಿನ ಗೊಡವೆ?

ಮನಸನುದ್ದೀಪಸಲು ವಿಫಲ ಜಡವೆ? 

 

ಚರಿತ್ರೆಯ ಚಹರೆಗಳಿರದ ಕನಸ ನೇಯುವೆನೆನಲು

ಉರಿಯ ಉಯ್ಯಾಲೆಯಲಿ ಕುಳಿತೇ ಭವವನ್ನು ಅರಿಯಬೇಕು,

ಯುದ್ಧ ಸೋತ ಭರತರಿಗೇ ಪಟ್ಟ ಬಿಟ್ಟುಕೊಡಬೇಕು!

 

ಹುಲಿಯಂಕೆ ಗಡಿಯಾರಗಳೆಲ್ಲ ನಿಂತಲ್ಲೇ ನಿಂತರೆ

ಚೌಕಟ್ಟಿನೊಳಗಿಟ್ಟ ಚಿತ್ರಗಳಿಗೂ ಸಿಗಬಹುದು ಬಿಡುಗಡೆ!?

(’ಪ್ರಜಾವಾಣಿ’ ದೀಪಾವಳಿ ಕವನ ಸ್ಪರ್ಧೆ ೨೦೦೮ರ ಪ್ರೋತ್ಸಾಹಕ ಬಹುಮಾನ ಪಡೆದ ಕವಿತೆ)