ಬಸ್ಸಿನಲ್ಲಿ ಸೀಟು ಸಿಕ್ಕಾಗ......

ಬಸ್ಸಿನಲ್ಲಿ ಸೀಟು ಸಿಕ್ಕಾಗ......

ನಮ್ಕಡೆ ಹಾಗೆನೇ.ಡ್ರೈವರ್ಗಳು ಬಸ್ ನಿಲ್ಸೋದು ಬಸ್ ಸ್ಟಾಂಡ್ಗಿಂತ ಹತ್ತು ಮೀಟರ್ ಮೊದಲು ಅಥವಾ ಹತ್ತು ಮೀಟರ್ ದೂರದಲ್ಲಿ. ಉದ್ಧೇಶವೇನೆಂದರೆ ಬಸ್ ಸದಾ ರಷ್ ಆಗಿರುವುದರಿಂದ ಜನ ಹತ್ತುವವರು ಕಡಿಮೆ ಆಗಲಿ ಎಂದು.ಬಸ್ ಸ್ಟಾಂಡ್ನಿಂದ ಓಡಿ ಬರುವಷ್ಟರಲ್ಲಿ ಬಸ್ ಹೊರಟಿರುತ್ತದೆ.ಇದರಿಂದ ಮುದುಕರನ್ನು ಹಾಗೂ ಹೆಂಗಸರನ್ನು ತಡೆಯಬಹುದೇ ಹೊರತು ಕಾಲೇಜಿಗೆ ಹೋಗುವ ನಮ್ಮಂತವರನ್ನಲ್ಲ..ನಾವು ಮೊದಲೇ ಸಿದ್ಧವಾಗಿರುತ್ತಿದ್ದೆವು.ಹೀಗಾಗಿ ಆವತ್ತು ಓಡಿ ಹೋಗಿ ಬಸ್ಸನ್ನು ಹಿಡಿದು ಒಂದು ಕಾಲನ್ನು ಬಾಗಿಲಿಲ್ಲದ ಬಸ್ಸಿನ ಮೆಟ್ಟಿಲಿನ ಮೇಲಿಡಲು ಸಫಲನಾದೆ.

ಭಾರತದ ಜನಸಂಖ್ಯಾಸಮಸ್ಯೆ ನಿಜವಾಗಿ ಅರಿವಿಗೆ ಬಂದಿದ್ದು ಆಗಲೇ.ಎಲ್ಲಿಂದ ಬರ್ತಾರೋ ಎಲ್ಲಿಗೆ ಹೋಗ್ತಾರೋ..ಇಲ್ರೀ ಬಸ್ಸಿನ ಬಾಗಿಲ ಮೇಲೆ ಇದನ್ನೆಲ್ಲ ಆಲೋಚನೆ ಮಾಡಕಾಗ್ತಾ ಇಲ್ಲ..ನಾನೀಗ ಒಂದು ಕಾಲಿನ ಮೇಲೆ ಬ್ಯಾಲೆನ್ಸ್ ಮಾಡಲು ಪ್ರತ್ನ ಮಾಡುವುದರ ಜೊತೆಗೆ ಜನ ವ್ಯೂಹವನ್ನು ಬೇಧಿಸಿ ಒಳ ಪ್ರವೇಶ ಮಾಡಬೇಕಾಗಿದೆ.ಬಸ್ಸು ಘಟ್ಟದಲ್ಲಿ ನಿಧಾನವಾಗಿ ಹೋಗುತ್ತಿತ್ತು. ಇದೇ ಸಮಯದಲ್ಲಿ ಆ ಕಂಡಕ್ಟರ್ ಕೂಡಾ ಮುಂದಿನ ಬಾಗಿಲಿನಿಂದ ಇಳಿದು ಹಿಂದಿನ ಬಾಗಿಲಿನಲ್ಲಿ ನನ್ನನ್ನು ದೂಡಿಕೊಂಡು ಹತ್ತೇ ಬಿಟ್ಟ.ಸಾಮಾನ್ಯವಾಗಿ ಬಸ್ ರಷ್ ಆದರೆ ಕಂಡಕ್ಟರ್ ಆಗಿರುವವರಿಗೆ ಇದೇ ಸಮಸ್ಯೆ.ಆಕಡೆ ಒಮ್ಮೆ ..ಈಕಡೆ ಒಮ್ಮೆ ..ಹೀಗಾಗಿ ಮಧ್ಯದಲ್ಲಿ ಇರುವವರಿಗೆ ಟಿಕೆಟ್ ಸಿಗುವ ಸಂಭವನೀಯತೆ ಬಹಳ ಕಡಿಮೆ..ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಕೆಲ ಭಂಡರು ಕಂಡಕ್ಟರ್ ಬರುವ ಮೊದಲೇ ಮಧ್ಯ ನುಸುಳಿಕೊಳ್ಳಲು ಹೊಂಚು ಹಾಕುತ್ತಿರುತ್ತಾರೆ....

ಅಂತೂ ಇಂತೂ ಒಳ ಬಂದೆ.ಆದ್ರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಮೇಲೆ ದಬ್ಬಿದ ಕಂಡಕ್ಟ್ರಿಗೆ ಧನ್ಯವಾದ ಸಮರ್ಪಿಸಲು ಮನಸ್ಸೇ ಬರುತ್ತಿಲ್ಲ.ಅಲ್ಲೇ ಎಷ್ಟೋ ವಾಸಿ...ಉಸಿರಾಡಲು ಆಮ್ಲಜನಕದ ಪೂರೈಕೆಯಾದರೂ ಇತ್ತು.ಸೃಷ್ಠಿಯ ಎಲ್ಲಾ ಕಡೆ ಕಾಣಸಿಗುವ ಪಂಚಭೂತಗಳಲ್ಲಿ ಕೇವಲ ಸೆಕೆಯ ಉರಿಬೆಂಕಿ..ಜನರ ಶಬ್ದ...ಸುರಿಯುತ್ತಿದ್ದ ಬೆವರಿನ ನೀರು..ಬಿಟ್ಟರೆ ಉಸಿರಾಟದ ಗಾಳಿ ಹಾಗೂ ನಿಲ್ಲಲು ಜಾಗದ ಸುಳಿವೂ ಇರಲಿಲ್ಲ.... ಅಪ್ಪ ಹೇಳುತ್ತಿದ್ದರು.."ಸ್ವಂತ ಕಾಲಮೇಲೆ ನಿಲ್ಲಬೇಕು..ಸ್ವಸಾಮರ್ಥ್ಯದಿಂದ ಮೇಲೆ ಬರಬೇಕು..." ಎರಡನೆಯದಂತೂ ಆಗಲಿಲ್ಲ..ಕಂಡಕ್ಟರ್ ದೂಡಿದಾಗ ಮೇಲೆ ಬಂದವ ನಾನು..ಆದರೆ ಇಲ್ಲಿ ನೋಡಿದರೆ ಸ್ವಂತಕಾಲ ಮೇಲೆ ನಿಲ್ಲಲೂ ಸಾಧ್ಯವಿಲ್ಲ ಎಂದು ಕಾಣುತ್ತದೆ...

ನಾನು ಆಶಾವಾದಿ..ಇಂತ ರಷ್ನಲ್ಲೂ ಸೀಟು ಸಿಗುತ್ತೆ ಎಂದೇ ಭಾವಿಸುತ್ತೇನೆ.ನಿಜ ಮುಂದಿನ ಸ್ಟಾಪ್ನಲ್ಲಿ ಇಳಿಯುವವರೊಬ್ಬರಿದ್ದರು.ನನ್ನ ಪರಿಚಯದವರೆ..ಹೀಗಾಗಿ ನನಗೆ ಗೊತ್ತು ಅವರು ಮುಂದಿನ ಸ್ಟಾಪ್ನಲ್ಲಿ ಇಳಿಯುತ್ತಾರೆ ಎಂದು..ಈ ಸಂದರ್ಭದಲ್ಲಿ ದೇವರಿಗೆ ನನ್ನ ಕೋರಿಕೆಯೇನೆಂದರೆ ಇನ್ಯಾರಿಗೂ ಈ ವಿಷಯದ ಬಗ್ಗೆ ತಿಳಿಯದಿರಲಿ ಎಂದು..ಮತ್ತು ನನ್ನ ಮುಂದಿನ ಗುರಿ ಆ ಸೀಟು...ಹೀಗೆ ಹಾಗೆ ಮಾಡಿಕೊಂಡು ಹೇಗೋ ಅವರು ಏಳುವ ಸಮಯಕ್ಕೆ ಸರಿಯಾಗಿ ಸೀಟಿನ ಹತ್ತಿರ ನಾ ತಲುಪಿದೆ.. ಅವರು ಏಳುವುದೇ ತಡ ಬಸ್ಸಿನ ಜನ ನನ್ನ ಕಡೆ ಪ್ಲಾಸ್ಟಿಕ್ ಕವರ್ ಗಳನ್ನೂ.. ಕರ್ಚೀಫ್ ಗಳನ್ನೂ..ಎಸೆಯತೊಡಗಿದರು..ಇದೇನಪ್ಪಾ ರಾಜಕಾರಣಿಗಳು ಓಟು ಹಾಕಿದ ಜನರನ್ನು ಮರೆತು ಸೀಟಿಗಾಗಿ ಓಡುತ್ತಿರುವಾಗ ಹಿಂದಿನಿಂದ ರೊಚ್ಚಿಗೆದ್ದ ಜನ ಕಲ್ಲೆಸೆಯುವಂತೆ..ನನಗೆ ಯಾಕ್ ಹೀಗೆ ಮಾಡ್ತಿದಾರೆ ಎಂದು ಯೋಚಿಸುವಷ್ಟರಲ್ಲೇ ನನ್ನ ಕಾಲ ಮೇಲೇ ಯಾರೋ ಒಬ್ಬ ಬಂದು ಕುಳಿತಿದ್ದೂ ಆಯಿತು.."ಏಳ್ರೀ ಮೇಲೆ... ಅಯ್ಯೋ ನನ್ನ ಕಾಲು.." ಕಿರುಚಿಕೊಂಡೆ.ಎಲ್ಲರೂ ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು ಏನೋ ತಪ್ಪು ಮಾಡಿದಂತೆ..ಆದರೆ ಒಬ್ಬಳನ್ನು ಬಿಟ್ಟು ..ನನ್ನ ಪಕ್ಕದಲ್ಲೇ ಇದ್ದಳು...

ಯಾರಂತ ನನಗೆ ಗೊತ್ತಿಲ್ಲ...ಯಾರಂತ ನನಗೇ ಗೊತ್ತಿಲ್ಲ..ದಿನಾ ಕಾಲೇಜಿಗೆ ತಪ್ಪದೇ ಹೋಗುತ್ತೇನೆ ಆದರೂ ಇವಳು ನನ್ನ ಕಣ್ಣಿಗೆ ಬಿದ್ದಿಲ್ಲವಲ್ಲ.. ಯಾರಿರಬಹುದು...ಮಾತಾಡಿಸಲಾ .."ಪ್ಲೀಸ್ ಮಗು ಹಿಡ್ಕೊಳ್ರೀ....ತುಂಬಾ ರಷ್ ಇದೆ...ನಿಲ್ಲಕಾಗ್ತಾ ಇಲ್ಲ.. ಹೊನ್ನಾವರದವರೆಗೆ ಮಾತ್ರ..." ಹೆಂಗಸೊಬ್ಬಳ ದನಿ. "ನೋ ಪ್ರಾಬ್ಲಮ್.." ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡೆ..ನಿಜ ಹೇಳ್ಬೇಕು ಅಂದ್ರೆ ಅವರಿಗೆ ಸಹಾಯ ಮಾಡುವುದಕ್ಕಿಂತ ಪಕ್ಕದಲ್ಲಿದ್ದವರ ಇಂಪ್ರೆಶನ್ ಪಡೆಯುವದೇ ಮುಖ್ಯವಾಗಿತ್ತು..ಇಲ್ಲದಿದ್ದರೆ "ನೋ ಪ್ರಾಬ್ಲಮ್.." ಎಂದು ನಮ್ಮ ಹಳ್ಳಿಯಲ್ಲೇಕೆ ಇಂಗ್ಲಿಷ್ ಪ್ರಯೋಗಿಸಬೇಕಿತ್ತು ಹೇಳಿ...ಇದೆಲ್ಲಾ ವಯಸ್ಸಿಗೆ ಸಹಜವಾಗಿ ತನ್ನಿಂದ ತಾನೆ ಬಂದುಬಿಡುತ್ತವೆ.. ಏನಂತೀರಾ?...

ಮಗು ಸುಂದರವಾಗಿಯೆು ಇತ್ತು....ಮೂರು ವರ್ಷವಿರಬೇಕು..ಆದರೆ ಪಕ್ಕದಲ್ಲಿದ್ದವಳು ನನ್ನದೇ ವಯಸ್ಸಿನವಳು.ಅವಳ ಮುಖ ಸರಿಯಾಗಿ ಕಾಣ್ತಾ ಇಲ್ಲಾರೀ..ಆ ಕೆಟ್ಟ ಕಿಡಕಿಯ ಕಡೆ ಮುಖ ಮಾಡಿ ಏನ್ ನೋಡ್ತಾ ಇದಾಳೋ ಏನೋ..ಒಮ್ಮೆ ತಿರುಗಬಾರದೇ..ಇರಲಿ ಹೊನ್ನಾವರ ತಲುಪುವ ವರೆಗೆ ಒಮ್ಮೆಯಾದರೂ ತಿರುಗೇ ತಿರುಗುತ್ತಾಳೇ..ಅಲ್ಲಿ ಬಸ್ಸಿನಿಂದ ಕೆಳಗಿಳಿಯಲೇ ಬೇಕು ತಾನೆ?..ಬಸ್ಸು ಇನ್ನೊಂದು ಘಟ್ಟದ ಆರಂಭದಲ್ಲಿತ್ತು..ಹೊರಗಡೆ ಬೋರ್ಡ್ ನೋಡಿದೆ 'ಹೊನ್ನಾವರ 3 ಕಿ.ಮೀ'.

ಇದ್ದಕ್ಕಿದ್ದಂತೆ ಕಿರುಚತೊಡಗಿತು.....ಮಗು ಅಳದೆ ಇನ್ನೇನ್ ಮಾಡುತ್ತೆ?..ಪಾಪ ಇಷ್ಟೊಂದು ಜನರನ್ನು ಮೊದಲ ಬಾರಿಗೆ ನೋಡಿರಬೇಕು..ಪಕ್ಕದಲ್ಲಿ ಅಮ್ಮನೂ ಇಲ್ಲ..ನಾನಾದರೋ ಪಕ್ಕದಲ್ಲಿದ್ದವರಿಗೆ ಹೆಚ್ಚು ಗಮನ ಕೊಡುತ್ತಿದ್ದೇನೆ.. ಮಗು ಅಳದೆ ಇನ್ನೇನ್ ಮಾಡುತ್ತೆ?..ಈಗ ಈ ರಷ್ನಲ್ಲಿ ಎಳೆ ಮಗುವಿನ ಸಮೇತ ಹತ್ತಿ ಕುಳಿತಿದ್ದವರೊಬ್ಬರಿಗೆ ಹಸ್ತಾಂತರಿಸಿದ ಆ ಮಹಾತಾಯಿಯ ಅನ್ವೇಷಣೆಯಲ್ಲಿದ್ದಾನೆ.. ಈ ಆಂಜನೇಯ..ಇಲ್ಲ ಕಾಣ್ತಾ ಇಲ್ಲ....ಆಗಲೇ ಅವಳು ಮುಖ ಈ ಕಡೆ ತಿರುಗಿಸಿದಳು..

ಇದ್ದಕ್ಕಿದ್ದಂತೆ ಸುಮ್ಮನಾಯಿತು...ಮಗು ಸುಮ್ಮನಾಗದೆ ಇನ್ನೇನ್ ಮಾಡುತ್ತೆ?..ಅಂಥ ಸುಂದರ ಮುಖವನ್ನು ಮೊದಲ ಬಾರಿಗೆ ನೋಡಿರಬೇಕು..ಮಗುವೇನು ನಾನು ನೋಡಿರುವುದು ಇದೇ ಮೊದಲು..ಈಗ ಮೊದಲ ಬಾರಿಗೆ ಜೋಗ್ ಜಲಪಾತ ನೋಡಿದಾಗಲೂ ಹೀಗೇ.. ಮಾತೇ ಹೊರಡುವುದಿಲ್ಲ...ಯಾರ್ರೀ ಅವಳು..? ನಮ್ಮೂರಿನಲ್ಲಿ..ಅದೂ ನಂಗೆ ಗೊತ್ತಿಲ್ಲದೆ...ಛಾನ್ಸೇ ಇಲ್ಲ ನಮ್ಮೂರಿನವಳಲ್ಲ ಇವಳು.....ಯೋಚಿಸ್ತಾ ಇದ್ದೆ.ಒಮ್ಮೆ ಅಷ್ಟೇ..ಮತ್ತೆ ಅದೇ ಕಿಡಕಿ ನೋಡುತ್ತಾ ನನ್ನನ್ನು ಜೋಗದ ಗುಂಡಿಯಲ್ಲಿ ನೂಕಿದಳು..ನಾನು ಬಹಳ ಒಳ್ಳೆಯವನ್ರೀ..ಮಗುವನ್ನು ಚಿವುಟಿ ಮತ್ತೆ ಈ ಕಡೆ ತಿರುಗುವಂತೆ ಮಾಡಲಿಲ್ಲ...ಈಗ ಸ್ಪಷ್ಟವಾಗಿ ಕಾಣುತ್ತಿದ್ದ ಕಣ್ಣೇ ಸಾಕಾಗಿತ್ತು... ಮಾತಾಡಲು...

ಬಸ್ಸು ಹೋಗ್ತಾ ಇತ್ತು..ನಾನ್ ನೋಡ್ತಾ ಇದ್ದೆ..ಮಗು ಸುಮ್ಮನಿತ್ತು..ಕಾಲೇಜು ಬಂತು..ಅವಳು ಇಳಿದಳು.... "ನಿಲ್ಸ್ರೀ.. ನಾನೂ ಇಲ್ಲೇ ಇಳಿಯೋದು..." ಕೂಗ್ತಾ ಇದೀನಿ..ಬಸ್ಸು ಹೊರಟೇ ಬಿಡ್ತು..."ಬಸ್ ನಿಲ್ಸಿದಾಗ ಎಲ್ ನೋಡ್ತಾ ಇತರ್ಿಯಾ..?ಮುಂದಿನ ಸ್ಟಾಪ್ನಲ್ಲಿ ಇಳ್ಕೊ...." ಕಂಡಕ್ಟರ್ ದಬಾಯಿಸಿದ.ಬೇರೆಲ್ಲೋ ನೋಡ್ತಿದ್ದವ ನಾನೇ..ಹೀಗಾಗಿ ಸುಮ್ಮನಾದೆ.ಎಷ್ಟಂದರೂ ಮುಂದಿನ ಸ್ಟಾಪ್ ತಾನೇ..ಕಾಮತರ ಹೊಟೆಲ್ ಹಿಂದುಗಡೆಯಿಂದ ಕಾಲೇಜಿಗೆ ಹೋದರಾಯಿತು..ಅದ್ಸರಿ ಈ ಮಹಾತಾಯಿ ಎಲ್ಲಿ? ಹುಡುಕಿದೆ....ಏನಿದು..ಮಗುವನ್ನು ಬಿಟ್ಟೂ ಇಳಿದುಬಿಟ್ಟಳಾ ಹೇಗೆ..ನನಗೆ ಮರೆತೇ ಹೋಗಿತ್ತು...ಕಂಡಕ್ಟರ್ಗೆ ಹೇಳಿದೆ..ಅವನಂದ ಅವಳು 'ಕವಲಕ್ಕಿ'ಯಲ್ಲೇ ಇಳಿದಳು ಎಂದು..

ಅಯ್ಯುಯ್ಯೋ ಇದೇನು ಗ್ರಹಚಾರ...ಯಾರದ್ದೀ ಮಗು..ನನ್ನ ಕೈಲೇಕೆ ಬಿಟ್ಟು ಇಳಿದಳು...ಈಗ ನಾನೇನ್ ಮಾಡ್ಲಿ...ಅಪ್ಪನಿಗೆ ಫೋನ್ ಮಾಡಿದೆ. "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ......." ನೆನಪಾಯಿತು.. ಅಪ್ಪನ ಕಾಲೆಜಿನ ಸ್ಟಾಫ್ರೂಮಿನಲ್ಲಿ ನೆಟ್ವಕರ್್ ಇರುವುದಿಲ್ಲ..ಅಮ್ಮನ ಹತ್ತಿರ ಮೊಬೈಲ್ ಇಲ್ಲ...ಹಾಂ, ಹೈವೇ ಹೊಟೆಲ್ ಕಾಮತರೇ ಸರಿ..

ಹೋದೆ..ಕಾಮತರ ಮಗ ಇದ್ದ ಹೊಟೆಲಲ್ಲಿ..ಕೇಳ್ದ.."ಏನ್ ತಮಾ..ಇವತ್ತು ಕಾಲೇಜಿಲ್ವಾ..?"..ಅವನಿಗೆ ಕಥೆ ಹೇಳಿ ಅರ್ಥ ಮಾಡುವಷ್ಟರಲ್ಲಿ.. ಮಗು ಮತ್ತೆ ಅಳತೊಡಗಿತ್ತು...ಏನ್ ಮಾಡ್ಲಿ ಈಗ...ಕಾಮತರ ಮಗ ಖಂಜೂಸು..ನಾನೇ ಕೇಳ್ದೆ "ಮಗೂಗೆ ಹಸಿವಾಗಿದೆ ಅನಿಸ್ತಿದೆ..ಒಂದ್ ಪ್ಲೇಟ್ ಇಡ್ಲಿ ತರೋದಕ್ಕೇಳಿ.." ಆ ಸಮಯದಲ್ಲಿ ಮಗು ಇಡ್ಲಿ ತಿನ್ನುತ್ತೋ ಇಲ್ಲವೋ...ಆಲೋಚನೆ ಮಾಡಲೇ ಇಲ್ಲ.ಅವರ ಹೋಟ್ಲಲ್ಲಿ ತಿಂದರೆ ಜೀರ್ಣವಾಗುವ ಪದಾರ್ಥ ಅಂದರೆ ಇಡ್ಲಿಯೊಂದೇ...ಮಗು ಸ್ವಲ್ಪ ಹಾಲು ಕುಡಿಯಿತು ಅಷ್ಟೇ..ಇಡ್ಲಿಯನ್ನು ಕೈಯಲ್ಲಿ ಹಿಡಿದು ನೆಲಕ್ಕೆ ಬೀಳಿಸಿತು...ಈ ಕಾಮತರ ಮಗನಿಗೆ ನನ್ನ ಕಥೆ(ವ್ಯಥೆ)ಗಿಂತ ಇಡ್ಲಿ ಬಿದ್ದ ಜಾಗವನ್ನು ತೊಳೆಸುವುದೇ ಮುಖ್ಯವಾಗಿತ್ತು...

ಇದೇ ಒಳ್ಳೆ ಐಡಿಯಾ.. 'ಹೊನ್ನಾವರ ಆರಕ್ಷಕ ಠಾಣೆ' ಬೋಡರ್್ ನೋಡಿದಾಗ ಅನಿಸಿದ್ದು.ಆದರೆ ನಾನು ಪೋಲಿಸ್ ಸ್ಟೇಶನ್ಗಾ? ಏನ್ರೀ ತಪ್ಪು....ನಾನೇನು ತಪ್ಪು ಮಾಡಿ ಹೋಗುತ್ತಿಲ್ಲವಲ್ಲ? ಅಪ್ಪ-ಅಮ್ಮ ಏನೂ ಹೇಳುವುದಿಲ್ಲ ..ಆದ್ರೆ ಆಯಿದೇ ಭಯ..ಸಂಪ್ರದಾಯ..ಕರ್ತವ್ಯ-ಧರ್ಮ....ಮಡಿ....ಸ್ವಲ್ಪ ಜಾಸ್ತಿ ನೋಡಿ ಅದಕ್ಕೆ. ಹಾಗಂತ ಮಗೂನ ಮನೆಗೆ ಕರ್ಕೊಂಡ್ ಹೋದ್ರೆ ಸುಮ್ಮನಿರುತ್ತಾರೆ ಅಂತಲ್ಲ..ಇರ್ಲಿ.....ಏನ್ ಮಾಡಕ್ಕಾಗಲ್ಲ...ಒಳಗ್ ಹೋದೆ..

ಸಿನೆಮಾದಲ್ಲಿ ತೋರಿಸೋ ಹಾಗೆಲ್ಲಾ ಇರಲಿಲ್ಲ ಪೋಲಿಸ್ ಸ್ಟೇಶನ್..ಆದರೆ ಇನ್ಸ್ಪೆಕ್ಟರ್ ಖಳನಾಯಕನ ಹಾಗೇ ಇದ್ದ..ಮೀಸೆ..ಬಾಯಲ್ಲಿ ಸಿಗರೇಟು...ಬರೆದಿತ್ತು ಟೇಬಲ್ ಮೇಲೆ 'ಪಿ.ಶಂಕರಗೌಡ ಪಾಟೀಲ್' ಸುಮ್ಮನೆ ಅವರ ಮುಂದೆ ಹೋಗಿ ನಿಂತೆ..ಹದಿನೈದು ನಿಮಿಷವಾದ ಮೇಲೆ ಮಾತು ಪ್ರಾರಂಭಿಸಿದ್ದು ಅವರು...."ಏನ್ ಕೇಸು?".."ಸರ್..ಈ ಮಗು.." ತೊದಲಿದೆ.. "ಯಾರದ್ದು..?" "ಗೊತ್ತಿಲ್ಲ ಸರ್.." ಎಲ್ಲಾ ಕಥೆ ಹೇಳಿಬಿಟ್ಟೆ..ಇನ್ಸ್ಪೆಕ್ಟರ್ಗೆ ಮಾತಾಡಲು ಅವಕಾಶವೇ ಇಲ್ಲದಂತೆ ಬಡಬಡನೆ ..ಎಲ್ಲವನ್ನೂ ..ಆ ಹುಡುಗಿಯನ್ನು ಬಿಟ್ಟು...ಎಲ್ಲವನ್ನೂ. ಇನ್ಸ್ಪೆಕ್ಟರ್ ಒಮ್ಮೆ ಹೀಗೆ ನೋಡಿದ..ನಿಧಾನವಾಗಿ ಹತ್ತಿರ ಬಂದ.."ಬೋ....ಮಗನೆ..ನನ್ಗೇ ಕಥೆ ಹೇಳ್ತೀಯಾ" ಅಂದ ..ನನಗೆ ಶಾಕ್...ಹತ್ತಿರ ಬರುತ್ತಾ ಬರುತ್ತಾ ಬೆಲ್ಟ್ ಬಿಚ್ಚ ತೊಡಗಿದ..ಇನ್ನೇನು ಹೊಡೆದೇ ಬಿಡಬೇಕು...ಡಬ್ ಎಂದು ಶಬ್ದವಾಯಿತು..

ಮಂಚದಿಂದ ಕೆಳಗೆ ಬಿದ್ದಿದ್ದೆ.."ಕಾಲೇಜಿಗೆ ಹೋಗುವ ಹೊತ್ತಾದರೂ ಇನ್ನೂ ಮಲಗೇ ಇದ್ದೀಯಲ್ಲೋ..ಈಗಿನ ಕಾಲದ ಹುಡುಗರೇ ಹೀಗೆ..ಕನಸ್ಕಾಣ್ತಾ ಇರ್ತಾರೆ ....ನಮ್ ಕಾಲ್ದಲ್ಲಿ..."ಏನೇನೋ ಹೇಳುತ್ತಾ ಅಮ್ಮ ಮನೆ ಗುಡಿಸುತ್ತಿದ್ದರು. ಇದೆಲ್ಲಾ ಕನಸಾ.......??? ಹೀಗೂ ಕನಸು ಬಿಳುತ್ತಾ.....ಗಂಟೆ ನೋಡಿದೆ..ಏಳು ಕಾಲು...ಇವತ್ತು ಬಸ್ ಮಿಸ್ಸಾಗುವುದು ಗ್ಯಾರಂಟಿ ಎಂದುಕೊಳ್ಳುತ್ತಾ ಹಲ್ಲುಜ್ಜುವ ಬ್ರಷ್ ಹುಡುಕತೊಡಗಿದೆ...ಆದರೂ ಪಕ್ಕದ ಸೀಟಿನಲ್ಲಿದ್ದ ಹುಡುಗಿ ಚೆನ್ನಾಗಿದ್ದಳು...ಯಾವೂರಿನವಳೋ...ನನ್ನನ್ನು ನೋಡಿಯೂ ನೋಡದಂತ ನೋಟ ಕೊಟ್ಟಳಲ್ಲ...ಯಾಕಿರಬಹುದು...? ಇನ್ನೂ ಉತ್ತರ ಸಿಕ್ಕಿಲ್ಲ ಕಣ್ರೀ...ಹುಡುಕ್ತಾ ಇದ್ದೇನೆ...ದಿನಾ ಬಸ್ಸಿನಲ್ಲಿ...ಉತ್ತರವನ್ನೂ.... ಅವಳನ್ನೂ....

Rating
No votes yet

Comments