ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅನ್ನುವ ಹಾಗೆ, ಈಗ recession ನೆವ ಆಗಿಟ್ಟುಕೊಂಡು ಎಲ್ಲರೂ ಐಟಿ ಕ್ಷೇತ್ರದತ್ತ ಬೆರಳು ತೋರಿಸ್ತಾ ಇದ್ದಾರೆ. ಆರ್ಥಿಕ ಹಿಂಜರಿತ ಅನ್ನೋ ಕಾರಣಕ್ಕೆ ಐಟಿ ಕ್ಷೇತ್ರ ಜ್ಞಾಪಕ ಬಂದಿದೆ. ನಮ್ಮ ದೇಶದ ಮಾರುಕಟ್ಟೆಯನ್ನು ವಿದೇಶೀಯರಿಗೆ ಮುಕ್ತವಾಗಿ ತೆರೆದಿಟ್ಟು, ಅವರೆಲ್ಲ ಎಲ್ಲೆಲ್ಲಿಂದಲೋ ಬಂದು ನಮ್ಮ ಹಣದಿಂದ ಅವರ ಜೇಬನ್ನ ತುಂಬಿಸಿಕೊಳ್ಳುತ್ತಿರುವಾಗ, ನಾವು ಸ್ವಲ್ಪ ಅವರ ಹಣವನ್ನು ನಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪು ಕಾಣಿಸ್ತಾ ಇದೆ! ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆಯ ಕ್ಷೇತ್ರ ಇಂದು ದುರಹಂಕಾರದ ಗೂಡಿನಂತೆ ಕಾಣುತ್ತಿದೆ. ಸಮಸ್ಯೆಯೊಂದು ರೂಪುಗೊಳ್ಳಲು ಎಲ್ಲರೂ ಜೊತೆಗಿದ್ದರು. ಅದರ ಪರಿಣಾಮವನ್ನೆದುರಿಸುವಾಗ ಹೊಣೆಗೇಡಿತನ. ಸರ್ವಜ್ಞ ಸರಿಯಾಗೇ ಹೇಳಿದಾನೆ

ಮಾಡಿದುದ ಒಪ್ಪದನ | ಮೂಡನಾಗಿಪ್ಪವನ |

ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ |

ನೋಡಿದರೆ ತೊಲಗು ಸರ್ವಜ್ಞ |

ಇಂದು ಐಟಿ ಕ್ಷೇತ್ರದ ವೃತ್ತಿ ಪರತೆ ಮತ್ತದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ, ಬೇರೆ ಯಾವ ಕ್ಷೇತ್ರಗಳಿಗೂ ಇವು ಅನ್ವಯಿಸುವುದಿಲ್ಲದಂತೆ??! ಇಂದು ಮಾಧ್ಯಮದವರೆಂದರೆ ಯಾವ ಚಿತ್ರ ಕಣ್ಣಿಗೆ ಬರುತ್ತದೆ? ಅವರ ಸಾಮಾಜಿಕ ಜವಾಬ್ದಾರಿ ಏನು? ಕಂಡದ್ದು ಕಾಣದ್ದು ಎಲ್ಲದಕ್ಕೂ ಮಸಾಲೆ ಸೇರಿಸಿ, ಜನರಿಗೆ ಬೇಕೋ ಬೇಡವೋ, ದೇಶದ, ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದ್ದೋ, ಕೇವಲ ತಮ್ಮ TRP ಗಳಿಗಾಗಿ, circulation ಗಳಿಗಾಗಿ ವರದಿ ಮಾಡುವ ವ್ಯಕ್ತಿಗಳೆಂದೇ? ಇಂದು ವೈದ್ಯ ವೃತ್ತಿ ಎತ್ತ ಸಾಗುತ್ತಿದೆ? ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಸಾಮಾಜಿಕ ಜವಾಬ್ದಾರಿಯೆನ್ನುವುದು ಒಂದು ವೃತ್ತಿಗೆ ಮೀಸಲೇ? ಇಂದು ಸಾಮಾಜಿಕ ವೃತ್ತಿಯಲ್ಲಿರುವವರಿಗೇ (ಆರಕ್ಷಕರು, ಮಾಧ್ಯಮಗಳು ಇತ್ಯಾದಿ) ಅವುಗಳ ಬಗ್ಗೆ ಅರಿವಿಲ್ಲದಿರುವಾಗ ಸಾಮಾನ್ಯ ’Salary Oriented’ ಗುಂಪಿನಿಂದ ಅದರ ನಿರೀಕ್ಷಣೆ ಎಷ್ಟು ಸರಿ. ಹಾಗೆಂದ ಮಾತ್ರಕ್ಕೆ ಅವರಿಗೆ ಇಲ್ಲವೆಂದಲ್ಲ. ತಪ್ಪುಗಳನ್ನೇನು ಯಾರು ಬೇಕಾದರೂ ಎತ್ತಾಡಬಹುದು. ಆದರೆ, ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಅದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಬೇಕಾದಲ್ಲಿ ಇರಬೇಕಾದ ಪರಿಶ್ರಮ, ಸಾಧನೆ, ಚಾಕಚಕ್ಯತೆ ಬಗ್ಗೆ ಅರಿಯದ ಅಜ್ಞಾನಿಗಳು ಮಾತ್ರ ಹೀಗೆ ಮೂಗೆಳೆಯಲು ಸಾಧ್ಯ. ಇನ್ನೊಮ್ಮೆ ಈ ಸಂಸ್ಥೆಗಳಿಂದ ಎಷ್ಟು ಶಾಲೆಗಳು ಎಷ್ಟು ಹಳ್ಳಿಗಳು ದತ್ತು ತೆಗೆದು ಕೊಳ್ಳಲ್ಪಟ್ಟಿವೆ, ಎಷ್ಟು ವಿದ್ಯಾರ್ಥಿಗಳು ಫಲ ಪಡೆದುಕೊಳ್ಳುತ್ತಿದ್ದಾರೆ, ಎಷ್ಟು ಜನ ಉದ್ಯೋಗಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲದರ ವಿವರಗಳನ್ನು ತಿಳಿದುಕೊಳ್ಳಿ. ಇಂದು ಒಂದು ಕಂಪನಿ ಲಾಭ-ನಷ್ಟಗಳು ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ಅದೇ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಗೊತ್ತಾಗುವುದಿಲ್ಲ. ಕಾರಣ ಅವುಗಳನ್ನು ಪ್ರಚಾರದ ದೃಷ್ಟಿಯಿಂದ ಮಾಡಿರುವುದಿಲ್ಲ, ಜವಾಬ್ದಾರಿ ದೃಷ್ಟಿಯಿಂದ ಮಾಡಲಾಗಿರುತ್ತದೆ. ವಿಪರ್ಯಾಸವೆಂದರೆ, ಇಂದು ಸೇವೆಯೆ ವೃತ್ತಿಯಾಗಿರುವ ವೈದ್ಯವೃತ್ತಿಯಲ್ಲೇ ಗ್ರಾಮ ಸೇವೆಯನ್ನು ಕಡ್ಡಾಯಗೊಳಿಸಬೇಕಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯವನ್ನೂ, ಇಂದಿನ ಪರಿಸ್ಥಿತಿಯನ್ನೂ ಮತ್ತು ಐಟಿ ಉದ್ಯೋಗಿಗಳನ್ನು ಹೋಲಿಸುತ್ತಿದ್ದೀರಿ. ಆದರೆ ಯಾವ ಅರ್ಥದಲ್ಲಿ ಎಂಬುದೇ ಅರ್ಥವಗಲಿಲ್ಲವಷ್ಟೆ. ಬೇರೆ ಯಾವುದಾದರೂ ಕ್ಷೇತ್ರದ ಉದಾಹರಣೆಯನ್ನು ಈ ನಿಟ್ಟಿನಲ್ಲಿ ತೋರಿಸಿದರೆ, ಅರಿತುಕೊಳ್ಳಬಹುದು. ಬೇರಾವ ಉದ್ಯಮ ಕ್ಷೇತ್ರದಿಂದ ’Social Empowerment’ ಆಗಿದೆ? ಎಷ್ಟು ಆಗಿದೆ?

ಇಂದು ಎಲ್ಲ ವ್ಯವಹಾರಗಳೂ ಕೂತಲ್ಲೇ ಆಗಬೇಕು, ಅದೂ ತಕ್ಷಣ. ಯಾರಿಗೂ ಎಲ್ಲಿಯೂ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಎಲ್ಲಕ್ಕೂ ಧಾವಂತ. ಇಂತದೊಂದು ಜೀವನದಲ್ಲಿ ಐಟಿ ಎನ್ನುವುದು ಹಾಸು ಹೊಕ್ಕಾಗಿದೆ. ಎಲ್ಲೋ ಕುಳಿತುಕೊಂಡು ಕಾಫಿ ಹೀರುತ್ತಾ, ಒಬಾಮ ನ ಭಾಷಣ ಕೇಳಿ, ಮಾರ್ಟಿನ್ ಲೂಥರ್ ಕಿಂಗ್ ಮಾತನಾಡಿದಂತೆ ಆಯಿತು ಎಂದು ಲೇಖನ ಬರಿಯುವಾಗ ಐಟಿ ಇತ್ತು. ಭಾರತದ ಮೂಲೆಯಲ್ಲಿರುವ ರೋಗಿಯೊಬ್ಬನಿಗೆ ಆಸ್ಟ್ರೇಲಿಯಾದ ವೈದ್ಯನೊಬ್ಬನ ನೆರವು ಸಿಗೋವಾಗ್ಲು ಐಟಿ ಇದೆ. ಸುಮ್ನೆ ಹೋಗೋ Long Drive ನಲ್ಲು ಐಟಿ ಇದೆ. Late ಅಗತ್ತೆ, Traffic ನಲ್ಲಿ ಸಿಕ್ಕಿ ಹಾಕೊಂಡಿದಿನಿ, ಅಂತ ಅಮ್ಮನಿಗೆ ಸಮಾಧಾನ ಹೇಳೋ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಸುಮ್ನೆ ಯಾರಿಂದಲೋ ತಪ್ಪಿಸ್ಕೊಳ್ಳೊಕೆ ಊರಲ್ಲಿಲ್ಲ ಅಂತ ಸುಳ್ಳು ಹೇಳೊ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಮೊದಲು ಐಟಿ ಕ್ಷೇತ್ರದ ಆಳ ವಿಸ್ತಾರಗಳನ್ನ ತಿಳಿದುಕೊಳ್ಳಿ. ನಂತರ ಜನ ಸಾಮಾನ್ಯರಿಗೆ ತಿಳಿಸಿ. ಒಂದು ಸಾಮಾಜಿಕ ಸ್ಥಾನದಲ್ಲಿರೊ ನಿಮ್ಮಂತವರಿಗೇ ಅದು ತಿಳಿದಿಲ್ಲವಾದಲ್ಲಿ, ಜನ ಸಾಮಾನ್ಯರಿಗೆ ತಿಳಿಯದೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಂದು ಹಾಲುಮಾರುವವನ, Corporation ಕಸ ಗುಡಿಸುವವನ, ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ, ಆ ನಿಮ್ಮ 'Welfare Oriented' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ, ವಿದ್ಯೆ, ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ. ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ. ಯಾವ ಒಂದು ಹಂತದಲ್ಲೂ ಇನ್ನೊಂದು ದೃಷ್ಟಿಯಿಂದ ನೋಡಲಾಗಿಲ್ಲ. ಎಲ್ಲೆಡೆಯೂ ಎಲ್ಲವೂ ಸರಿಯಿರುವುದಿಲ್ಲ. ಸತ್ಯಮ್ ಎಂದು ಹೆಸರಿಟ್ಟುಕೊಂಡು ಮಾಡಿದ ದ್ರೋಹ ಕಣ್ಣಮುಂದಿದೆ. ಆದರೆ ಹುಳುಕುಗಳನ್ನು ಹೇಳುವುದರ ಜೊತೆಗೆ ಹೂವುಗಳನ್ನು ತೋರಿಸಬೇಕು. ಸಮಸ್ಯೆಯಿದೆ ಎಂದು ಹೇಳುವಾಗ ಪರಿಹಾರ ಕಂಡು ಕೊಳ್ಳುವ ಆಸಕ್ತಿ, ಚಿಂತನೆಯಿರಬೇಕು. ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಲೇಖನದಲ್ಲಿ ಹೇಳಿರುವುದು ಬಹುಪಾಲು ಮಂದಿಗೆ. ನೀವೇಕೆ Personal ಆಗಿ ತಗೋಳ್ತೀರಿ ಎಂದು ನುಣುಚಿಕೊಳ್ಳಬಹುದು. ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಡಿ ನೀವು ಬರೆಯುವುದು ನಗ್ನ ಸತ್ಯವೆಂದು ನಂಬುವವರಿದ್ದಾರೆ. ಅನ್ನವಾಗಿದೆಯೇ ಎಂದು ಒಂದು ಅಗಳು ನೋಡಿದರೆ ಸಾಕು ಎನ್ನುವ ಅತಿ ’ವಿವೇಚನೆ’ಯಿಂದ, ಯಾವ ಅಭಿಪ್ರಾಯ ಇಲ್ಲದವರೂ ನಿಮ್ಮ ಅಭಿಪ್ರಾಯವನ್ನೇ ರೂಪಿಸಿಕೊಳ್ಳುವ ಸಾಧ್ಯತೆ ಇದೆ. Cooling Glass ಹಾಕಿಕೊಂಡು ನೋಡಿ ಹಗಲನ್ನೇ ಕತ್ತಲೆಂದು ಬರೆಯುವುದು ನಗ್ನ ಸತ್ಯವಾಗುವುದಿಲ್ಲ. ಸರಿ ತಪ್ಪುಗಳ ಪೂರ್ಣ ವಿಮರ್ಶೆಯಿರಬೇಕಲ್ಲವೇ? ವೃತ್ತಿಯೊಂದರ ಬಗ್ಗೆ ಬರೆಯುವಾಗ, ’ಬಹುಪಾಲು’ ಅನ್ನುವುದನ್ನು ಸಮರ್ಥಿಸುವಂತೆ, ಎಲ್ಲ ಮಜಲುಗಳನ್ನು ವಿಮರ್ಶಿಸಿ. ಮನೆಯೊಂದು ಹತ್ತಿ ಉರಿಯುವಾಗ ಅದರಲ್ಲಿ ಬೀಡಿ ಹೊತ್ತಿಸಿಕೊಳ್ಳುವ ಕಾಯಕ ಬಿಡಿ. ನಾಳೆ ಅದು ನಿಮ್ಮ ಮನೆಯೇ ಆಗಬಹುದು ಎಚ್ಚರವಿರಲಿ. ನಿಮಗೆ ಆರಿಸಲು ಸಾಧ್ಯವಾಗದಿದ್ದಲ್ಲಿ ಸುಮ್ಮನಿರಿ. ತುಪ್ಪ ಸುರಿಯದಿರಿ.

Rating
No votes yet

Comments