ಪರೀಕ್ಷೆ

ಪರೀಕ್ಷೆ

ಸಖೀ,
ರಾಮಾಯಣದಲಿ,
ವನವಾಸ ಮಾಡಬೇಕಾಗಿ
ಬಂದುದು ಸಾಧ್ವಿ ಸೀತೆಗೆ;
ಕ್ರೂರಿ ಮಂಥರೆಗೂ ಅಲ್ಲ,
ದುಷ್ಟೆ ಕೈಕಯಿಗೂ ಅಲ್ಲ.

ಮಹಾಭಾರತದಲಿ ಕಷ್ಟವನುಂಡವರು,
ಕೃಷ್ಣನ ಸಖರಾದ ಪಾಂಡವರು;
ಧರ್ಮ ಭ್ರಷ್ಟರಾದ ಕೌರವರಲ್ಲ.

ಅಂದು ಸತ್ಯವಾದಿ ಹರಿಶ್ಚಂದ್ರನಿಗೂ
ಬಂದಿತ್ತು ಕೇಡುಗಾಲ,
ಆಗಿದ್ದ, ಆತನೂ
ಸ್ಮಶಾನದಲಿ ದ್ವಾರಪಾಲ.

ರಾಮನ ಪಾದ ಸ್ಪರ್ಶಕ್ಕಾಗಿ
ಕಲ್ಲಾಗಿ ಕಾದಿರಲಿಲ್ಲವೇ ಅಹಲ್ಯೆ?
ಒಮ್ಮೆ ಯೋಚಿಸಿ ನೋಡು,
ನಿಜವಾಗಿ ನೀನಿದನೆಲ್ಲ ಬಲ್ಲೆ.

ಜೀವನದಲಿ ಕಷ್ಟವನು
ಅನುಭವಿಸ ಬೇಕಾದವರು,
ಆ ದೇವನಿಗೆ ಪ್ರಿಯರಾದ,
ಸದ್ಗುಣಿಗಳು ಸಖೀ.

ದುರ್ಗುಣಿಗಳು ಎಂತಿದ್ದರೆ
ಅವನಿಗೆ ಏನಂತೆ?
ತನಗೆ ಪ್ರಿಯರಾದವರ
ಪರೀಕ್ಷೆ ನಿತ್ಯ ನಡೆಸ
ಬೇಕಾಗಿದೆಯಂತೆ

ಚಿನಿವಾರನ ಪೆಟ್ಟಿಂದಲೇ
ಚಿನ್ನಕ್ಕೆ ಶೋಭೆ ಬರುವಂತೆ
ಈ ನಿತ್ಯ ಪರೀಕ್ಷೆಗಳಿಂದಲೇ
ನಾವೂ ಪರಿಶುದ್ಧರಾಗಬೇಕಂತೆ

ಅದಕಾಗಿ ಜೀವನದಲಿ
ಸದಾ ಎಚ್ಚರವಿರಬೇಕು
ಯಾವುದೇ ಅನಾಚಾರ
ಆಗದಂತೆ ದೃಢ ಚಿತ್ತರಾಗಿರಬೇಕು

ಕಷ್ಟ-ಕಾರ್ಪಣ್ಯಗಳನು ನಾವು,
ಅಂದು ಕಲ್ಲಾಗಿದ್ದ ಅಹಲ್ಯೆಯಂತಿದ್ದು
ಸಹಿಸಬೇಕು, ಜಯಿಸಬೇಕು
ಜಲಧಾರೆಗೆ ಎದುರಾಗಿ
ಈಜಿ ದಡವ ಸೇರುವಂತೆ
ಎಲ್ಲವನೂ ದಾಟಿ ಈ ಆತ್ಮವನು,
ಆ ಪರಮಾತ್ಮನಲಿ ಲೀನವಾಗಿಸಬೇಕು!
*-*-*-*-*-*-*-*-*-*

Rating
No votes yet

Comments