ಸವಿ ಸವಿ ನೆನಪು-೨

ಸವಿ ಸವಿ ನೆನಪು-೨

ಸವಿ ಸವಿ ನೆನಪು-೨

ನಾನು ಚಿಕ್ಕವಳಾಗಿದ್ದಾಗ ರೇಡಿಯೊ ಒಂದೇ ನಮಗೆ ಮನರಂಜನೆ ಒದಗಿಸುವ ಸಾಧನವಾಗಿತ್ತು. ಮಧ್ಯಮ ವರ್ಗದವರಾದ ನಮ್ಮ ಮನೆಯಲ್ಲಿ ಈಗಿನಂತೆ ಟೇಪ್ ರೆಕಾರ್ಡರ್ ಇರಲಿಲ್ಲ, ಟಿವಿ ಆಗಿನ್ನು ಬಂದಿರಲಿಲ್ಲ. ಶಾಲೆಗೆ ಹೊರಡುವ ಮುಂಚೆ, ಶಾಲೆಯಿಂದ ಬಂದ ನಂತರ ರೇಡಿಯೊಗೆ ಕಿವಿಹಚ್ಚಿ ಕೂರುವುದು ನನ್ನ ನೆಚ್ಚಿನ ಹವ್ಯಾಸವಾಗಿತ್ತು.ಬೆಂಗಳೂರು ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಎಂ.ಎಸ್.ಸುಬ್ಬಲಕ್ಷಿಯವರ ಇಂಪಾದ ಸುಪ್ರಭಾತದೊಂದಿಗೆ ನನಗೆ ಬೆಳಗಾಗುತ್ತಿತ್ತು. "ವಂದೇ ಮಾತರಂ"ನೊಂದಿಗೇ ಬೆಳಗಾಗುತ್ತಿದ್ದ ದಿನಗಳೂ ಇದ್ದವು. ಚಿಂತನ, ಬಾಲಜಗತ್,ಚಿತ್ರಗೀತೆಗಳ ಕಾರ್ಯಕ್ರಮಗಳು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿದ್ದವು. ಚಿಂತನದಲ್ಲಿ ಬಿತ್ತರವಾಗುತ್ತಿದ್ದ ಪ್ರಸಿದ್ಧ ಕವಿಗಳ ನುಡಿಮುತ್ತುಗಳ ಬರಹ ಈಗಲೂ ನನ್ನ ಬಳಿ ಇದೆ. ರೇಡಿಯೋ ಅಂದ ಮೇಲೆ ಎ.ಎಸ್,ಮೂರ್ತಿಯವರನ್ನ ನೆನಪಿಸಿಕೊಳ್ಳದಿದ್ದರೆ ನನ್ನ ಈ ಬರಹ ಅಪೂರ್ಣ ಅಂತ ನನಗನ್ನಿಸುತ್ತೆ.  ಎ.ಎಸ್,ಮೂರ್ತಿಯವರು ಆಕಾಶವಾಣಿಯಲ್ಲಿ ನೆಡೆಸಿಕೊಡುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ಅದರಲ್ಲೂ ’ರೇಡಿಯೊ ಈರಣ್ಣ’ನ ಮಾತಿನ ಮೋಡಿಗೆ ಮನಸೋತವಳಲ್ಲಿ ನಾನೂ ಒಬ್ಬಳಾಗಿದ್ದೆ.’ನಾವು-ನಮ್ಮವರು’ - ಕೇಳುಗರ ಪತ್ರಗಳಿಗೆ ಉತ್ತರ- ವಿಭಾಗಕ್ಕೆ ಪತ್ರ ಬರೆಯುವುದು, ಅದನ್ನು  ಎ.ಎಸ್,ಮೂರ್ತಿಯವರು ಓದಿದರೆ ಸಾಕು ಸಂತಸದಿಂದ ಕುಣಿದಾಡುತ್ತಿದ್ದ ದಿನಗಳವು.

" ಓ ನೆನಪೆ, ನೀನೆಷ್ಟು ಮಧುರ
  ಓ ಬಾಲ್ಯವೆ, ನೀನೆಷ್ಟು ಸುಂದರ" 

ಅಂದಿನ ದಿನಗಳಲ್ಲಿ ಚಿಕ್ಕಚಿಕ್ಕ ವಿಷಯಗಳೂ ತರುತ್ತಿದ್ದ ತೃಪ್ತಿ- ಸಂತಸಗಳು ಇಂದಿನ ದಿನಗಳಲ್ಲಿ ನಮ್ಮಲ್ಲಾಗಲಿ ಅಥವ ನಮ್ಮ ಮಕ್ಕಳಲ್ಲಾಗಲಿ ಏಕಿಲ್ಲ ? ಇದು ನನ್ನನ್ನು ಇತ್ತೀಚಿನ ದಿನಗಳಲ್ಲಿ ಕಾಡುವ ಪ್ರಶ್ನೆ. ನಿಮಗೂ ಹೀಗನ್ನಿಸುತ್ತಿದೆಯೆ ?

Rating
No votes yet

Comments