ಕರ್ನಾಟಕದ ಮುಕುಟಕ್ಕೆ ಪ್ರವಾಸ

ಕರ್ನಾಟಕದ ಮುಕುಟಕ್ಕೆ ಪ್ರವಾಸ

ಬರಹ

ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ, ಸುತ್ತಾಡುವ ಅವಕಾಶ ಇರಲಿಲ್ಲ. ಬೀದರಂತೂ ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲ. ಪ್ರಜಾವಾಣಿ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಗುಲ್ಬರ್ಗ ಹಾಗೂ ಬೀದರ್ ಬಗ್ಗೆ ಬಂದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು, ಭೇಟಿ ನೀಡುವ ಅವಕಾಶವನ್ನು ಕಾಯುತ್ತಾ ಇದ್ದೆ. ಕಳೆದ ಮೇ ತಿಂಗಳಂದು ಮಂಗಳೂರಿನ ಗೆಳೆಯರಿಬ್ಬರು, ಮೂರ್ನಾಲ್ಕು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರ್‍ಓಣ ಎಂದಾಗ ಗುಲ್ಬರ್ಗ, ಬೀದರ್ ಹಾಗೂ ಬಸವಕಲ್ಯಾಣ ಸುತ್ತಾಡಿಕೊಂಡು ಬರ್‍ಓಣವೆಂದು ನಿರ್ಧರಿಸಿದೆವು. ನನ್ನ ಬಳಿಯಿದ್ದ ಲೇಖನಗಳೆಲ್ಲವನ್ನೂ ಹಲವಾರು ಸಲ ಓದಿ, ಅಂತರ್ಜಾಲವನ್ನು ಜಾಲಾಡಿ, ನನ್ನ ಆತ್ಮೀಯ 'ಜೋಳದ ರೊಟ್ಟಿ' ಗೆಳೆಯರೊಂದಿಗೆ ಸಮಾಲೋಚಿಸಿ ನೋಡಬೇಕಾದ ಎಲ್ಲಾ ಸ್ಥಳಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ. ಶುಕ್ರವಾರ ಜೂನ್ ೨ರ ಅಪರಾಹ್ನ ಹೊರಟು, ಮಂಗಳವಾರ ಜೂನ್ ೬ರಂದು ಹಿಂತಿರುಗುವಂತೆ ಒಂದು ನೀಲಿನಕ್ಷೆ ಹೊರಡುವ ಒಂದು ವಾರದ ಮುಂಚೆ ತಯಾರಾಯಿತು ಹಾಗೇನೆ ಗೆಳೆಯರಿಬ್ಬರೂ ಒಪ್ಪಿಗೆ ಸೂಚಿಸಿದರು. ಆದರೆ ಹೊರದುವ ಮುನ್ನಾ ದಿನ ರಾತ್ರಿ ಗೆಳೆಯರಿಬ್ಬರೂ ಕ್ಷುಲ್ಲಕ ಸಬೂಬುಗಳನ್ನು ಹೇಳಿ ಹಿಂದೆ ಸರಿದರು. ಬಹಳ ದಿನಗಳ ಆಸೆ ಈಡೇರುವಂತಿರುವಾಗ, ನಾನು ಒಬ್ಬನೇ ಹೋಗುವ ನಿರ್ಧಾರ ಮಾಡಿದೆ.

 

ಜೂನ್ ೨ರಂದು ಅಪರಾಹ್ನ ೧.೩೦ಕ್ಕೆ ಉಡುಪಿ - ಗುಲ್ಬರ್ಗ, ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಉದುಪಿಯಿಂದ ಹೊರಟೆ. ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟ, ಸಿರ್ಸಿ, ಮುಂಡಗೋಡ, ಹುಬ್ಬಳ್ಳಿ, ಧಾರವಾಡ, ಲೋಕಾಪುರ, ಸೌಂದತ್ತಿ, ರಾಮದುರ್ಗ, ಮುಧೋಳ, ಜಮಖಂಡಿ, ಬಿಜಾಪುರ, ದೇವರ ಹಿಪ್ಪರಗಿ, ಸಿಂದಗಿ, ಅಲಮೇಲ ಮತ್ತು ಅಫ಼ಜಲಪುರ ಇವಿಷ್ಟು ಊರುಗಳ ದರ್ಶನ ಮಾಡಿಸಿ ಬಸ್ಸು ಶನಿವಾರ ಜೂನ್ ೩ರ ಮುಂಜಾನೆ ೯ ಗಂಟೆಗೆ ಗುಲ್ಬರ್ಗ ತಲುಪಿತು. ವಸತಿ ಗೃಹವೊಂದಕ್ಕೆ ನುಗ್ಗಿ, ೧೦ ಗಂಟೆಗೆ ಅಲ್ಲಿಂದ ಹೊರಬಿದ್ದೆ. ರಿಕ್ಷಾವೊಂದರಲ್ಲಿ ಕುಳಿತು ಗುಲ್ಬರ್ಗ ಕೋಟೆಗೆ ಹೋಗುವಂತೆ ಹೇಳಿದರೆ, ಆತ ಗುಲ್ಬರ್ಗ ಕೋರ್ಟಿಗೆ ಹೋಗುವುದೆ? ಆ ಸಂದರ್ಭದಲ್ಲಿ ನನ್ನ ಹಾಗೂ ರಿಕ್ಷಾ ಚಾಲಕನ ಸಂಭಾಷಣೆ ಈ ಕೆಳಗಿನಂತಿತ್ತು.
ನಾನು: ಇಲ್ಲಿಗ್ ಯಾಕ್ ತಗೊಂಡ್ ಬಂದ್ಯಪ್ಪಾ?
ಆತ: ನೀವೇ ಹೇಳಿದ್ರಲ್ಲಿ ಸರ, ಕೋರ್ಟಿಗ್ ಹೋಗ್ಬೆಕ್ ಅಂತಾ
ನಾನು: ಅಲ್ಲಪ್ಪಾ ತಮ್ಮಾ, ನಾನ್ ಅಂದಿದ್ದು ಕೋಟೆ, ಕೋರ್ಟ್ ಅಂತ ಅಂದಿಲ್ ನಾನು
ಆತ: ಏ ಇಲ್ಲ್ ಬಿಡ್ರಿ. ನೀವಂದಂಗೆ ನೀವ್ ಹೇಳಿದ್ ಜಾಗಕೇ ತಂದೀನಿ
ನಾನು: ನಿನ್ಗೆ ಕೋಟೆ ಅಂದ್ರೆ ಗೊತ್ತಿಲ್ಲ ಅನ್ಸುತ್ತೆ. ರಾಜ ಮಹಾರಾಜ್ರು ಮತ್ತೆ ಸುಲ್ತಾನ್ರು ಕಟ್ಟ್ಸಿದ್ದು ಉದ್ದ್ಕೆ ಗ್ವಾಡಿ ಹಂಗ್ ಇರುತ್ತಲ್ಲಾ, ಅದ್ಕೆ ಕೋಟೆ ಅಂತಾರ.
ಆತ: ಅದ್ಕೆ ಕೋಟೆ ಅಂತಾರೆ ಅಂತ ನಿಮ್ಗ್ ಯಾರ್ ಹೇಳಿದ್ರೀ ಸರ?
ನಾನು: ಮತ್ತೇನಂತಾರ?
ಆತ: ಅದ್ಕೆ 'ಕಿಲಾ' ಅಂತಾರ್ರೀ ಸರ, 'ಕಿಲಾ'.
ನಾನು: (ನನ್ನಷ್ಟಕ್ಕೆ ನಕ್ಕು) ಓ ಹಂಗೇನ? ಸರೀಪ್ಪಾ, ನಡೀ ಮತ್ತ, ಕಿಲಾಗ್ ಹೋಗೋಣು.

ಗುಲ್ಬರ್ಗ ಕೋಟೆಯನ್ನು ವಾರಂಗಲ್-ನ ರಾಜಾ ಗುಲ್-ಚಂದ್ ಕಟ್ಟಿಸಿದ್ದ. ದೆಹಲಿಯ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ದಂಡೆತ್ತಿ ಬಂದು ಗುಲ್ಬರ್ಗವನ್ನು ವಶಪಡಿಸಿ, ಅದರ ಮೇಲ್ವಿಚಾರಣೆಯನ್ನು ತನ್ನ ಸೇನಾಧಿಪತಿಯಾದ ಅಲ್ಲಾವುದ್ದೀನ್ ಬಹ್ಮನ್ ಶಾ, ಇವನಿಗೆ ಒಪ್ಪಿಸಿದನು. ಅತ್ತ ದೆಹಲಿಯಲ್ಲಿ ತುಘಲಕ್ ದುರ್ಬಲನಾಗುತ್ತಿದ್ದಂತೆ, ಇತ್ತ ಅಲ್ಲಾವುದ್ದೀನ್ ಬಹ್ಮನ್ ಶಾ, ಗುಲ್ಬರ್ಗವನ್ನು ತುಘಲಕ್ ಸಾಮ್ರಾಜ್ಯದಿಂದ ಬೇರ್ಪದಿಸಿ ತನ್ನನ್ನು ತಾನೇ ಅಧಿಪತಿಯೆಂದು ಘೋಷಿಸಿ ಬಹಮನಿ ಸಾಮ್ರಾಜ್ಯವನ್ನು ೧೩೪೭ರಲ್ಲಿ ಸ್ಠಾಪಿಸಿ, ಕೋಟೆಯನ್ನು ೨೬ ಬುರುಜು ಹಾಗೂ ೧೫ ತುಪಾಕಿಗಳೊಂದಿಗೆ ಮತ್ತಷ್ತು ಬಲಿಷ್ಠಗೊಳಿಸಿದನು. ಗುಲ್ಬರ್ಗ ಕೋಟೆಯನ್ನು ಪ್ರವೇಶಿಸಿದಂತೆ ಮೊದಲಿಗೆ ಕಾಣುವುದು ರಂಗ ಮಹಲ್. ಸುಮಾರು ಎಂಬತ್ತು ಅಡಿಯಷ್ಟು ಎತ್ತರವಿರುವ ಈ ಚೌಕಾಕಾರದ ಕಟ್ಟಡದ ಮೇಲೆ ಮೂರು ತುಪಾಕಿಗಳು ಮೂರು ದಿಕ್ಕಿಗೆ ಮುಖ ಮಾಡಿಕೊಂಡು ನಿಂತಿವೆ. ರಂಗ ಮಹಲ್ ಎಂಬ ಹೆಸರು ಯಾಕೆ ಇಟ್ಟರು ಎನ್ನುವುದು ತಿಳಿಯಲಿಲ್ಲ. ರಂಗ ಮಹಲಿನಿಂದ ಅನತಿ ದೂರದಲ್ಲಿರುವುದೇ ಭವ್ಯವಾದ ಜಾಮಿಯ ಮಸೀದಿ.

ಎರಡನೆ ಬಹಮನಿ ಸುಲ್ತಾನ ಒಂದನೆ ಮಹಮೂದ್ ಶಾ (೧೩೫೮ - ೧೩೭೫), ಈ ವಿಶಾಲವಾದ ೩೮೦೧೬ ಚ ಅ ವಿಸ್ತೀರ್ಣವಿರುವ ಜಾಮಿಯ ಮಸೀದಿಯನ್ನು ೧೩೬೭ರಲ್ಲಿ ಕಟ್ಟಿಸಿದನು. ಈ ಮಸೀದಿ ೨೧೬ ಅಡಿ ಉದ್ದ, ೧೭೬ ಅಡಿ ಅಗಲವಿದ್ದು ಸರಿಸುಮಾರು ೮೦ ಗುಮ್ಮಟಗಳನ್ನು ಹೊಂದಿದೆ. ಮಸೀದಿಯ ಒಳಗಡೆ, ದೊಡ್ಡ ಗುಮ್ಮಟದ ನೇರ ಕೆಳಗೆ ಇರುವ ಜಾಗದಲ್ಲಿ, ಈಗ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಇದೇ ಪ್ರಾರ್ಥನೆ ಸಲ್ಲಿಸುವ ಜಾಗದಲ್ಲಿ ನಾಲ್ಕನೆ ಬಹಮನಿ ಸುಲ್ತಾನನಾಗಿದ್ದ ಒಂದನೆ ದೌದ್ ಶಾನನ್ನು (೧೩೭೮), ಆತ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವಾಗಲೇ ಕೊಲೆ ಮಾಡಲಾಗಿತ್ತು. ಒಂದನೆ ದೌದ್ ಶಾ, ಸುಲ್ತಾನನ ಪಟ್ಟವನ್ನು ತನ್ನ ಕೈಗೆ ತೆಗೆದುಕೊಳ್ಳುವ ಸಲುವಾಗಿ, ಮೂರನೆ ಬಹ್ಮನಿ ಸುಲ್ತಾನನಾದ ಅಲ್ಲಾವುದ್ದೀನ್ ಮುಜಾಹಿದ್ ಶಾನನ್ನು (೧೩೭೫ - ೧೩೭೮)ಕೊಲೆ ಮಾಡಿದ್ದನು. ಇದಕ್ಕೆ ಪ್ರತಿಕಾರವಾಗಿ, ಅಲ್ಲಾವುದ್ದೀನ್ ಮುಜಾಹಿದ್ ಶಾನ ಸೋದರಿ ರುಹ್ ಪರ್ವಾರ್ ಆಘಾ, ಸೇವಕನೊಬ್ಬನ ಮೂಲಕ ದೌದ್ ಶಾನ ಕೊಲೆ ಮಾಡಿಸಿ ಸೇಡು ತೀರಿಸಿಕೊಂಡಳು. ನಾನು ಆ ಜಾಗದಲ್ಲಿ ನಿಂತು, ಯಾವ ರೀತಿ ಕೊಲೆ ಮಾಡಿರಬಹುದು ಎಂದು ಯೋಚಿಸುತ್ತಾ, ನೆತ್ತಿಯ ಮೇಲಿದ್ದ ದೊಡ್ಡ ಗುಮ್ಮಟದ ಒಳಮೇಲ್ಮ್ಯೆಯ ಅಂದವನ್ನು ಆಸ್ವಾದಿಸುತ್ತಾ ಸ್ವಲ್ಪ ಕಾಲ ಕಳೆದೆ. ನಂತರ ಮಸೀದಿಯಿಂದ ಹೊರಬಿದ್ದು, ಸ್ವಲ್ಪವೇ ದೂರದಲ್ಲಿದ್ದ ಕೋಟೆಯ ಬುರುಜುಗಳತ್ತ ನಡೆದೆ. ಇಲ್ಲೇ ಇರುವ ಒಂದು ಬುರುಜಿನ ಮೇಲೆ ಮತ್ತೊಂದು ತುಪಾಕಿ ಇದೆ. ಈ ತುಪಾಕಿ ರಂಗ ಮಹಲಿನ ಮೇಲಿರುವ ತುಪಾಕಿಗಳಿಗಿಂತಲೂ ದೊಡ್ಡದಾಗಿದೆ. ಇಲ್ಲಿಂದಲೇ ದೂರದಲ್ಲಿ ಒಂದು ದಿಬ್ಬದ ಮೇಲಿರುವ 'ಚೋರ್ ಗುಂಬಜ಼್' ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೋಟೆಯ ಗೋಡೆಗಳು ಈಗಲೂ ಸುದೃಢವಾಗಿವೆ ಆದರೆ ಸುತ್ತಲೂ ಇರುವ ಕಂದಕದಲ್ಲಿರುವ ಕೊಳಚೆ ನೋಡಿದಾಗ ಮಾತ್ರ ಅಸಹ್ಯವೆನಿಸುತ್ತದೆ. ಕೋಟೆಯೊಳಗೆ ವಾಸವಿರುವ ಮುಸಲ್ಮಾನರು ಮಾತ್ರ ಅಲ್ಲಲ್ಲಿ ಬಹಿರ್ದೆಸೆ ಮಾಡುತ್ತಾ, ಅಲ್ಲಲ್ಲಿ ಕೊಳಕನ್ನು ಎಸೆಯುತ್ತಾ, ಕೋಟೆಯನ್ನು ಮತ್ತಷ್ಟು ಅಸಹ್ಯಗೊಳಿಸುತ್ತಾ, ಬಂದವರನ್ನು ವಿಚಿತ್ರವಾಗಿ ದಿಟ್ಟಿಸುತ್ತಾ ಹಾಯಾಗಿದ್ದಾರೆ.

ಕೋಟೆಯಿಂದ ಮತ್ತೊಂದು ರಿಕ್ಷಾದಲ್ಲಿ ನನ್ನ ಸವಾರಿ ಹೊರಟಿತು ಸೂಫ಼ಿ ಸಂತ ಖ್ವಾಜಾ ಬಂದೇ ನವಾಜ್-ನ ದರ್ಗಾದ ಕಡೆಗೆ. ಈತನನ್ನು ಹಜ಼್ರತ್ ಖ್ವಾಜಾ ಸ್ಯೆಯದ್ ಮೊಹಮ್ಮದ್ ಗೇಸು ದರಾಜ಼್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಒಂಬತ್ತನೆ ಬಹಮನಿ ಸುಲ್ತಾನ, ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ಈ ದರ್ಗಾವನ್ನು ೧೪೨೨ರಲ್ಲಿ ಕಟ್ಟಿಸಿದನು. ದರ್ಗಾದ ಒಳಗೆ, ಗುಮ್ಮಟದ ಒಳಮೇಲ್ಮ್ಯೆಯಲ್ಲಿ ಕೆತ್ತಿರುವ ವಿಶಿಷ್ಟ ಹೊಳಪಿನ ಚಿತ್ರಗಳು ಮಾತ್ರ ಅದ್ಭುತವಾಗಿವೆ. ನನಗೆ ಇವುಗಳನ್ನು 'ಚಿತ್ರಗಳು' ಎನ್ನುವ ಬದಲು 'ಹೊಳಪಿನ ಲೇಪನಗಳು' ಅನ್ನುವುದೇ ಸೂಕ್ತ ಎಂದೆಣಿಸಿತು. ದರ್ಗಾದ ಒಳಗೆ ಕುಳಿತು ಸುಮಾರು ೧೦ ನಿಮಿಷಗಳಷ್ಟು ಕಾಲ ಈ ಹೊಳಪಿನ ಲೇಪನಗಳನ್ನು ವೀಕ್ಷಿಸಿ, ಬಂದೇ ನವಾಜ಼್-ರ ಗೋರಿಗೆ ನಮಸ್ಕರಿಸಿ ಹೊರಬಿದ್ದೆ. ದರ್ಗಾದ ಬಾಗಿಲಲ್ಲೇ ಹತ್ತಾರು ಹೆಂಗಸರು ಕತ್ತು ಕೊಂಕಿಸಿ ಒಳಗಿನ ದೃಶ್ಯವನ್ನು ಹಾಗೂ ಬಂದೇ ನವಾಜ಼್-ರ ಗೋರಿಯನ್ನು ನೋಡಲು ಹಪಿಹಪಿಸುತ್ತಿದರು. ದರ್ಗಾದ ಒಳಗೆ ಛಾಯಾಚಿತ್ರ ತೆಗೆಯುವುದು ಮತ್ತು ಹೆಂಗಸರಿಗೆ ಪ್ರವೇಶ ಇವೆರಡನ್ನು ನಿಷೇಧಿಸಲಾಗಿದೆ. ದರ್ಗಾದ ಹೊರಗಡೆ ಎಲ್ಲಾ ಕಡೆ ಗೋರಿಗಳೇ ಗೋರಿಗಳು. ಮುಘಲರು ಕಟ್ಟಿಸಿದ್ದು ಎನ್ನಲಾದ ಒಂದು ಮಸೀದಿ ದರ್ಗಾದ ಪ್ರಾಂಗಣದೊಳಗೆ ಇದೆ. ಸಮೀಪದಲ್ಲೆ ಕೆಲವು ಹೆಂಗಸರು ಕಲ್ಲೊಂದಕ್ಕೆ ತಲೆ ಬಡಿದುಕೊಳ್ಳುತ್ತಿದ್ದರು. ಅಲ್ಲೇ ಕೂತಿದ್ದವನೊಬ್ಬನಲ್ಲಿ ಅವರು ಹಾಗೇಕೆ ಮಾಡುತ್ತಿದ್ದಾರೆಂದು ಕೇಳಿ ಒಂದು ದೊಡ್ಡ ತಪ್ಪು ಮಾಡಿದೆ ನೋಡಿ, ಆತ ಮುಂದಿನ ೧೫ ನಿಮಿಷಗಳ ಕಾಲ ನನ್ನನ್ನು ಬಿಡಲೇ ಇಲ್ಲ. ಅದೆಷ್ಟೊ ಕೊರಕರನ್ನು ಕಂಡಿದ್ದೇನೆ, ಆದರೆ ಈತ ಮಾತ್ರ ಅವರೆಲ್ಲರನ್ನು ಮೀರಿ ನಿಲ್ಲುವ ಅನಾಹುತ ಕೊರಕ. ' ಯು ಸೀ, ದ ಮ್ಯಾಜಿಕಲ್ ಅಟ್ಮಾಸ್ಫ಼ಿಯರ್ ಆಫ಼್ ದಿಸ್ ಪ್ಲೇಸ್.......' ಅಂತ ಆಂಗ್ಲ ಭಾಷೆಯಲ್ಲಿ ಶುರುಮಾಡಿದವ ನನ್ನನ್ನು ಮುಂದಿನ ೧೫ ನಿಮಿಷಗಳ ಕಾಲ ಹಿಂದಿ, ಕನ್ನಡ ಹಾಗೂ ಆಂಗ್ಲ ಭಾಷೆಯ ಮಿಶ್ರಣದಲ್ಲಿ ನನ್ನ ಕೈಯನ್ನು ಬಲವಾಗಿ ಹಿಡಿದು ಏನೇನೋ ಕೊರೆದ, ಆದರೆ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲಿಲ್ಲ. ಆತನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯಿತು.

ನಂತರ ನಾನು ನಡೆದಿದ್ದು ಹಫ಼್ತ್ ಗುಂಬಜ಼್ ಕಡೆಗೆ. ದರ್ಗಾಕ್ಕೆ ರಿಕ್ಷಾದಲ್ಲಿ ಹೋಗುತ್ತಿರುವಾಗ, ಹಫ಼್ತ್ ಗುಂಬಜ಼್ ದಾಟಿ ಹೋಗಿದ್ದರಿಂದ ದಾರಿ ಕೇಳುವ ಅವಶ್ಯಕತೆಯಿರಲಿಲ್ಲ. ದರ್ಗಾದಿಂದ ನಡೆದರೆ ೧೦ ನಿಮಿಷದಲ್ಲಿ ಹಫ಼್ತ್ ಗುಂಬಜ಼್ ತಲುಪಬಹುದು. ಇಲ್ಲಿ ೭ ಗೋರಿಗಳಿವೆ. ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಾವುದ್ದೀನ್ ಬಹ್ಮನ್ ಶಾನ ಗೋರಿ ಇಲ್ಲಿದೆಯೋ ಇಲ್ಲವೊ ಎಂಬುದನ್ನು ಅರಿಯೆ. ಲಬ್ಧ ಮಾಹಿತಿಗಳ ಪ್ರಕಾರ ನಂತರದ ೭ ಸುಲ್ತಾನರ ಗೋರಿಗಳು ಇಲ್ಲಿವೆ. ಒಂಬತ್ತನೆ ಬಹ್ಮನಿ ಸುಲ್ತಾನ ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ೧೪೨೬ರಲ್ಲಿ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್-ಗೆ ವರ್ಗಾಯಿಸಿದ್ದರಿಂದ ಉಳಿದ ಬಹಮನಿ ಸುಲ್ತಾನರ ಗೋರಿಗಳು ಬೀದರ್ ಸಮೀಪದ ಅಶ್ತೂರ್-ನಲ್ಲಿವೆ.

ಹಫ಼್ತ್ ಗುಂಬಜ಼್ ನೋಡಿದ ನಂತರ ಅಳಂದ ರಸ್ತೆಯಲ್ಲಿರುವ ಚೋರ್ ಗುಂಬಜ಼್ ಕಡೆಗೆ ಆಟೋದಲ್ಲಿ ತೆರಳಿದೆ. ಎತ್ತರವಾದೊಂದು ದಿಬ್ಬದ ಮೇಲಿರುವುದರಿಂದ, ಗುಲ್ಬರ್ಗದಲ್ಲಿ ಎಲ್ಲಿಂದ ನೋಡಿದರೂ ಈ ಚೋರ್ ಗುಂಬಜ಼್ ಕಾಣಿಸುತ್ತದೆ. ಬಿಜಾಪುರದ ಗೋಲ್ ಗುಂಬಜ಼್ ಮಾದರಿಯಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು. ಯಾರು ಕಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಿರ್ಜನ ಪ್ರದೇಶದಲ್ಲಿರುವ ಚೋರ್ ಗುಂಬಜ಼್, ಅಂತಹ ವಿಶೇಷವೇನಿಲ್ಲದ ನಾಲ್ಕು ಗೋಡೆಗಳುಳ್ಳ ಎರಡಂತಸ್ತಿನ ಪಾಳು ಬೀಳುತ್ತಿರುವ ಸಾಧಾರಣ ಸೌಧವಾದರೂ ಭೇಟಿ ನೀಡಲು ಯೋಗ್ಯವಾಗಿರುವಂತದ್ದು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಸ್ವಾಗತಿಸಿದ್ದು ಧೂಳು, ಕಳಚಿ ಬಿದ್ದಿರುವ ಗೋಡೆಯ ಮೇಲುಕವಚಗಳು, ಗವ್ವೆಂದು ಬೀಸುತ್ತಿದ್ದ ಗಾಳಿ, ಎದ್ದು ಹೋದ ನೆಲಹಾಸು ಮತ್ತು ಕಪ್ಪನೆಯ ಬಣ್ಣ ಕಳೆದುಕೊಂಡ ಗುಮ್ಮಟದ ಒಳಮೇಲ್ಮ್ಯೆ. ಒಳಗಡೆ ಇರುವುದು ಎರಡಂತಸ್ತು ಉದ್ದದ ಒಂದೇ ದೊಡ್ಡ ಕೋಣೆ. ಗೋಡೆಗಳ ಮಧ್ಯೆ ಮನುಷ್ಯನೊಬ್ಬ ನಡೆದಾಡಲು ಅವಶ್ಯವಿರುವ ಜಾಗವನ್ನಷ್ಟೇ ಕೊರೆದು ಮೇಲಿನ ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಮಾಡಿದ್ದಾರೆ. ಕತ್ತಲೆ ಕವಿದ ಮೆಟ್ಟಿಲುಗಳನ್ನು ನೋಡಿ ಹೆದರಿಕೆಯಾದರೂ, ಹುಂಬ ಧೈರ್ಯದಿಂದ ಮೇಲಿನ ಅಂತಸ್ತುಗಳಿಗೆ ಹೋದೆ. ಒಬ್ಬನೇ ಇದ್ದಿದ್ದರಿಂದ ಚೋರ್ ಗುಂಬಜ಼್-ನಲ್ಲಿ 'ಚೋರ್'-ನಂತೆ ಆಚೀಚೆ ಓಡಾಡುತ್ತಿರುವಂತೆ ಭಾಸವಾಯಿತು. ಮೊದಲನೇ ಅಂತಸ್ತಿಗೆ ಒಂದು ಸುತ್ತು ಹಾಕಿ ಎರಡನೆ ಅಂತಸ್ತಿಗೆ ತೆರಳಿದೆ. ಗುಮ್ಮಟದ ಸುತ್ತ ಒಂದು ಸುತ್ತು ತಿರುಗುತ್ತಿರುವಾಗ, ರಭಸವಾಗಿ ಬೀಸುತ್ತಿದ್ದ ಗಾಳಿ ಭಯವನ್ನು ಹುಟ್ಟಿಸುತ್ತಿತ್ತು. ಮೆಟ್ಟಿಲುಗಳನ್ನು, ಸ್ಥಳ ವ್ಯರ್ಥ ಮಾಡದೆ ನಿರ್ಮಿಸಿರುವ ಪರಿಯನ್ನು ಮೆಚ್ಚಬೇಕು. ನಂತರ ಬೀದರ್ ಹಾಗೂ ಬಸವಕಲ್ಯಾಣಗಳಲ್ಲೂ ನೋಡಿದೆಲ್ಲಾ ಕಡೆ ಮೆಟ್ಟಿಲುಗಳ ರಚನೆ ನನ್ನನ್ನು ಬಹುವಾಗಿ ಆಕರ್ಷಿಸಿತು.

ಅದೇ ಆಟೋದಲ್ಲಿ ನಂತರ ತೆರಳಿದ್ದು ಶರಣ ಬಸವೇಶ್ವರ ದೇವಸ್ಥಾನಕ್ಕೆ. ಸುಂದರವಾಗಿ ಹಾಗೂ ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಸ್ಥಾನ, ಗೋರಿ - ಗುಂಬಜ಼್ ನೋಡಿ ನೋಡಿ ದಣಿಯುತ್ತಿದ್ದ ನನಗೆ ಅಪರಿಮಿತ ಉಲ್ಲಾಸವನ್ನು ನೀಡಿತು. ಈ ದೇವಸ್ಥಾನವನ್ನು ಶಾರ್ಟ್ ಆಗಿ ಎಸ್.ಬಿ.ಟೆಂಪಲ್ ಎಂದೂ ಕರೆಯುತ್ತಾರೆ. ಅದ್ದೂರಿಯಾಗಿ ಖರ್ಚು ಮಾಡಿ ಈ ದೇವಸ್ಥಾನವನ್ನು ನಿರ್ಮಿಸಲಾಗಿರುವುದರಿಂದ ಆಧುನಿಕ ನಿರ್ಮಾಣ ಶೈಲಿಯ ಎಲ್ಲಾ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿರುವ ಪ್ರಾಂಗಣ, ಪ್ರಶಾಂತ ವಾತಾವರಣ ಮತ್ತು ಕಂಬಗಳ ಮೇಲಿನ ಕರಕುಶಲ ಕೆಲಸ ಇಲ್ಲಿನ ವೈಶಿಷ್ಟ್ಯ. ಮುಂಜಾನೆಯಿಂದ ತಿರುಗಾಡಿ ದಣಿದಿದ್ದ ನನಗೆ ವಿರಮಿಸಲು ಎಸ್.ಬಿ.ಟೆಂಪಲ್ ಸೂಕ್ತ ಸ್ಥಳವಾಗಿತ್ತು. ವಸತಿ ಗೃಹದಿಂದ 'ಚೆಕ್ ಔಟ್' ಮಾಡಿ ಗುಲ್ಬರ್ಗ ಬಸ್ ನಿಲ್ದಾಣಕ್ಕೆ ಬಂದಾಗ ಮುಗಳಖೋಡದಿಂದ ಬಂದ ಬಸ್ಸು ಬೀದರ್-ಗೆ ಹೊರಡಲು ಅಣಿಯಾಗುತ್ತಿತ್ತು. ಸಂಜೆ ೬ಕ್ಕೆ ಗುಲ್ಬರ್ಗ ಬಿಟ್ಟ ಬಸ್ಸು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬೀದರ್ ತಲುಪಿತು. ಇಲ್ಲೊಂದು ವಸತಿ ಗೃಹಕ್ಕೆ ತೆರಳಿ ಮರುದಿನದ ಬೀದರ್ ಸುತ್ತಾಟವನ್ನು ಎದುರುನೋಡುತ್ತಾ ನಿದ್ರಾವಶನಾದೆ.

ಮರುದಿನ ಮುಂಜಾನೆ ಕಣ್ಣು ಬಿಟ್ಟಾಗ ರವಿ ಕಿರಣಗಳನ್ನು ಪ್ರಖರವಾಗಿ ಹೊರಸೂಸುತ್ತಿದ್ದ. ಸಮಯ ೮.೩೦ ದಾಟಿರಬೇಕು ಎಂದು ದಡಬಡಿಸಿ ಎದ್ದರೆ, ಕೈಗಡಿಯಾರ ೫.೪೫ ಸೂಚಿಸುತ್ತಿತ್ತು. ನಂಬಲಾಗಲಿಲ್ಲ, ಆದರೆ ಸಮಯ ನಿಜಕ್ಕೂ ೫.೪೫ ಆಗಿತ್ತು. ಬೀದರ್-ನಲ್ಲಿ ನೋಡಲು ಬಹಳವಿದ್ದುದರಿಂದ ಮುಂಜಾನೆ ೭ಕ್ಕೆ ವಸತಿ ಗೃಹದಿಂದ ಹೊರಟೆ. ಆಟೋ ಮಾಡಿ ಚೌಬಾರಾ ಇದ್ದಲ್ಲಿಗೆ ತೆರಳಿದೆ. ಇದೊಂದು ೭೧ ಅಡಿ ಎತ್ತರವಿರುವ ಗಡಿಯಾರ ಗೋಪುರ. ನಾಲ್ಕು ರಸ್ತೆ ಕೂಡುವಲ್ಲಿ ಚೌಬಾರಾ ಇದೆ. ಒಳಗಡೆ ಇರುವ ವೃತ್ತಾಕಾರದ ಸುಮಾರು ೮೦ ಮೆಟ್ಟಿಲುಗಳನ್ನು ಹತ್ತಿ ಚೌಬಾರಾದ ನೆತ್ತಿಗೆ ಹೋದರೆ ಬೀದರ್ ನಗರದ ವಿಹಂಗಮ ನೋಟ ಲಭ್ಯ. ಆದರೆ ಬೀದರ್ ನಗರಪಾಲಿಕೆ ಚೌಬಾರಾದ ಬಾಗಿಲಿಗೆ ಬೀಗ ಜಡಿದಿದೆ. ಹೊರಗಿನಿಂದಲೇ ಚೌಬಾರಾದ ಅಂದ ಆಸ್ವಾದಿಸಿ, ಅನತಿ ದೂರದಲ್ಲಿದ್ದ ಮಹಮೂದ್ ಗವಾನ್ ಮದರಸಾ ಕಡೆಗೆ ಹೆಜ್ಜೆ ಹಾಕಿದೆ.

ಈ ಮದ್ರಸವನ್ನು ೧೪೭೨ರಲ್ಲಿ ಮಹಮೂದ್ ಗವಾನ್ ಎಂಬವನು ಕಟ್ಟಿಸಿದನು. ಮಹಮೂದ್ ಗವಾನ್ ೧೪೫೩ರಲ್ಲಿ ಪರ್ಷಿಯಾದಿಂದ ಬಂದು ಬೀದರ್-ನಲ್ಲಿ ನೆಲೆಸಿದವನು. ಕಲೆ ಹಾಗೂ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದವನಾಗಿದ್ದನು. ಸತತ ೩ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಹುದ್ದೆಯಲ್ಲಿದ್ದವನು. ಯಾವುದೇ ಸಮಯದಲ್ಲಿ ಇಲ್ಲಿ ೧೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ವಿದ್ಯಾಭ್ಯಾಸವನ್ನು, ಮುಸ್ಲಿಮ್ ಜಗತ್ತಿನ ಎಲ್ಲಾ ಕಡೆಯಿಂದಲೂ ಬರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ೩ ಮಹಡಿಗಳ ಈ ಕಟ್ಟಡದಲ್ಲಿ ಮಸೀದಿ, ಪ್ರಯೋಗಾಲಯ, ಗ್ರಂಥಾಲಯ, ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇವಿಷ್ಟಿದ್ದವು. ೧೬೯೬ರಲ್ಲಿ ಮಿಂಚು ಹೊಡೆದು ಮದ್ರಸದ ಕೆಲವು ಭಾಗಗಳಿಗೆ ಅಪಾರ ಹಾನಿಯುಂಟಾಗಿದೆ. ಇದ್ದ ನಾಲ್ಕು ಸ್ತಂಭಗಳಲ್ಲಿ ಕೇವಲ ಒಂದು ಉಳಿದಿದೆ.

ಮಹಮೂದ್ ಗವಾನ್ ಮದರಸದಿಂದ ೧೦ ನಿಮಿಷ ನಡೆದು ಬೀದರ್ ಕೋಟೆ ತಲುಪಿದೆ. ಇದೊಂದು ಭವ್ಯವಾದ ಕೋಟೆ. ನನಗಂತೂ ಬೀದರ್ ಕೋಟೆ ಬಹಳ ಇಷ್ಟವಾಯಿತು. ಬೆಳಗ್ಗೆ ೮.೩೦ಕ್ಕೆ ಕೋಟೆ ಒಳಹೊಕ್ಕ ನಾನು, ಹೊರಬಂದಾಗ ಮಧ್ಯಾಹ್ನ ೧.೩೦ ಆಗಿತ್ತು. ಇದು ಎರಡು ಸುತ್ತಿನ ಬಲಾಢ್ಯ ಕೋಟೆ. ಪ್ರಥಮ ಸುತ್ತಿನ ಕೋಟೆಯ ಗೋಡೆಯ ಹೊರಗಡೆ ಸುತ್ತ ಕಂದಕವಿದೆ. ಮತ್ತೊಂದು ಕಂದಕ ಪ್ರಥಮ ಹಾಗೂ ದ್ವಿತೀಯ ಸುತ್ತಿನ ಕೋಟೆಯ ಗೋಡೆಗಳನ್ನು ಬೇರ್ಪಡಿಸುತ್ತದೆ. ಆರಂಭದಲ್ಲಿ ಸಿಗುವುದೇ ಪ್ರಧಾನ ಬಾಗಿಲು. ಇದನ್ನು ದಾಟಿದರೆ ನಂತರ ಸಿಗುವುದು 'ಶಾರ್ಜ಼ಾ ದರ್ವಾಜ಼ಾ'. ಪ್ರಧಾನ ಬಾಗಿಲು ಹಾಗೂ ಶಾರ್ಜ಼ಾ ದರ್ವಾಜ಼ಾ, ಈ ಎರಡೂ ಬಾಗಿಲುಗಳ ಮಧ್ಯೆ ಒಂದಕ್ಕೊಂದು ತಾಗಿಕೊಂಡೇ ಹಲವಾರು ಕೋಣೆಗಳಿವೆ. ಬಹುಶಃ ಹೆಬ್ಬಾಗಿಲುಗಳನ್ನು ಕಾಯುವ ಕಾವಲುಗಾರರ ವಸತಿ ಯಾ ವಿಶ್ರಾಂತಿ ಕೊಠಡಿಗಳಾಗಿದ್ದಿರಬಹುದು. ಎರಡಂತಸ್ತಿನ ಶಾರಜ಼ಾ ದರ್ವಾಜ಼ಾ ಆಕರ್ಷಕವಾಗಿದ್ದು, ಆ ಕಾಲಕ್ಕೆ ಬಳಿದ ಬಣ್ಣದ ಅಲ್ಪ ಸ್ವಲ್ಪ ಕುರುಹು ಈಗಲೂ ಕಾಣುತ್ತಿದೆ. ಶಾರ್ಜ಼ಾ ದರ್ವಾಜ಼ದ ಮೇಲ್ಗಡೆ ಎಡ ಮತ್ತು ಬಲಭಾಗಗಳಲ್ಲಿ ಒಂದೊಂದು ಕೋಣೆಗಳಿದ್ದು, ಅವುಗಳೆರಡರ ಮಧ್ಯೆ ಸುಮಾರು ೩೫ ಅಡಿ ಉದ್ದ ೧೦ ಅಡಿ ಅಗಲದ ಕೋಣೆಯೊಂದಿದೆ. ಆದರೆ ಈ ೩ ಕೋಣೆಗಳಿಗೆ ಒಂದಕ್ಕೊಂದು ನೇರ ಸಂಪರ್ಕ ಇಲ್ಲ. ಶಾರಜ಼ಾ ದರ್ವಾಜ಼ಾದ ಮುಂಭಾಗದಲ್ಲಿ ಎಡಕ್ಕೆ ಇರುವ ಮೆಟ್ಟಿಲುಗಳನ್ನು ಹತ್ತಿ ಕಾವಲುಗಾರರ ಕೊಠಡಿಗಳ ತಾರಸಿಗೆ ಬಂದು, ಎಡಕ್ಕಿರುವ ಕೋಣೆಗೆ ಬರಬಹುದು. ಹಾಗೆ ಕಾವಲುಗಾರರ ಕೊಠಡಿಯ ತಾರಸಿಯ ಮೇಲೆ ಮುನ್ನಡೆದು, ಪ್ರಧಾನ ಬಾಗಿಲಿನ ಮೇಲ್ಭಾಗಕ್ಕೆ ಬಂದು ಹಾಗೆ ಅಲ್ಲಲ್ಲಿರುವ ವಿಸ್ಮಯವೆನ್ನಿಸುವ ಹತ್ತಾರು ಮೆಟ್ಟಿಲುಗಳನ್ನು ಹತ್ತಿ ಇಳಿದು ಅರ್ಧಚಂದ್ರಾಕೃತಿ ರೂಪದಲ್ಲಿ ಮುನ್ನಡೆದರೆ ಶಾರಜ಼ಾ ದರ್ವಾಜ಼ದ ಬಲಭಾಗದ ಕೋಣೆಗೆ ಬರಬಹುದು. ಈ ಕೋಣೆಗೆ ತಾಗಿಕೊಂಡೇ ಇರುವ ಮೆಟ್ಟಿಲುಗಳನ್ನು ಇಳಿದಾಗ, ನಾನು ಶಾರಜ಼ಾ ದರ್ವಾಜ಼ವನ್ನು ದಾಟಿ ಒಳಬಂದಾಗಿತ್ತು! ಅಲ್ಲೇ ನಿಂತು ಮಧ್ಯದಲ್ಲಿರುವ ಕೋಣೆಗೆ ದಾರಿ ಎಲ್ಲಿ ಎಂದು ಆಚೀಚೆ ನೋಡುತ್ತಿರುವಂತೆ ಬಲಕ್ಕೆ ಮೆಟ್ಟಿಲುಗಳು ಕಾಣಿಸಿ, ಹತ್ತಿದರೆ, ನೇರವಾಗಿ ಆ ಮಧ್ಯದ ಕೋಣೆಗೆ ಒಯ್ದವು. ಹೊರಗೆ ಬಿಸಿಲು ಧಗಧಗಿಸುತ್ತಿದ್ದರೂ, ಇಲ್ಲಿ ಬಹಳ ತಂಪಾಗಿತ್ತು. ಇಲ್ಲಿರುವ ಸಣ್ಣ ಕಿಂಡಿಯ ಮೂಲಕ ನಂತರ ಇರುವ ಗುಂಬಜ಼್ ದರ್ವಾಜ಼ ಕಾಣಿಸುತ್ತಿತ್ತು. ಈ ಕೋಣೆಯ ಹತ್ತಿರವೇ ಇರುವ ಚಾಣಾಕ್ಷತನದಿಂದ ಕೆತ್ತಿದ ಮೆಟ್ಟಿಲುಗಳು, ಶಾರಜ಼ಾ ದರ್ವಾಜ಼ದ ಮೇಲಿನ ಗುಮ್ಮಟದ ಬಳಿ ಕರೆದೊಯ್ದವು.

ನಂತರ ಬರುವುದು ಗುಂಬಜ಼್ ದರ್ವಾಜ಼. ಶಾರಜ಼ಾ ದರ್ವಾಜ಼ ಮತ್ತು ಗುಂಬಜ಼್ ದರ್ವಾಜ಼ಗಳ ಮಧ್ಯೆ ಇರುವುದೇ ಪ್ರಥಮ ಹಾಗೂ ದ್ವಿತೀಯ ಸುತ್ತಿನ ನಡುವೆ ಇರುವ ಕಂದಕ. ಗುಂಬಜ಼್ ದರ್ವಾಜ಼ದ ಸ್ವಲ್ಪ ಮೊದಲು ಎಡಕ್ಕೆ ಕೆಳಗಿಳಿದು ಹೋದರೆ ಪ್ರಥಮ ಸುತ್ತಿನ ಕೋಟೆಯ ಗೋಡೆಯ ಒಳಭಾಗದಲ್ಲಿರುವ ಹಲವಾರು ಕೋಣೆಗಳನ್ನು ಕಾಣಬಹುದು. ಅಲ್ಲಲ್ಲಿ ಸಣ್ಣ ಸಣ್ಣ ಕಿಂಡಿಗಳು ಹೊರಗಿರುವ ಕಂದಕದ ದರ್ಶನವನ್ನು ಮಾಡಿಸುತ್ತಿದ್ದವು. ಗುಂಬಜ಼್ ದರ್ವಾಜ಼ ದಾಟಿದ ಕೂಡಲೇ ಎಡಕ್ಕಿರುವುದು ರಂಗೀನ್ ಮಹಲ್. ಇದಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಸ್ವಲ್ಪ ಮುಂದಿರುವ ಕಛೇರಿಯಲ್ಲಿ ವಿನಂತಿಸಿದರೆ, ಬೀಗ ತೆಗೆದು ರಂಗೀನ್ ಮಹಲ್ ಒಳಗಡೆ ಕರೆದೊಯ್ಯುತ್ತಾರೆ. ಆದರೆ ನನಗೆ ಆ ಭಾಗ್ಯವಿರಲಿಲ್ಲ. ವಿನಂತಿಸಿದರೂ, ಆ ದಿನ ಪಾಳಿಯಲ್ಲಿದ್ದ ಸಿಬ್ಬಂದಿ ಎಲ್ಲೊ ತೆರಳಿದ್ದರಿಂದ ಬೇರೆಯವರಿಗೆ ಬೀಗ ತೆರೆಯುವ ಅಧಿಕಾರವಿಲ್ಲದ್ದರಿಂದ ಯಾರೇನು ಮಾಡುವಂತಿರಲಿಲ್ಲ. ನನಗಿದು ಅಲ್ಲಿದ್ದ ಸೋಮಾರಿ ಸಿಬ್ಬಂದಿಗಳ ಕ್ಷುಲ್ಲಕ ಸಬೂಬು ಎಂದೆನಿಸಿತು.

ಹಾಗೆ ಸ್ವಲ್ಪ ಮುಂದೆ ಇರುವ ಪ್ರಾಂಗಣವನ್ನು ಹೊಕ್ಕಾಗ ಸುಂದರವಾದ ಹದಿನಾರು ಕಂಬಗಳ ಮಸೀದಿ ಯಾರನ್ನೂ ಆಕರ್ಷಿಸದೆ ಇರುವುದಿಲ್ಲ. 'ಸೋಲಾಹ್ ಖಂಬ ಮಸ್ಜಿದ್' ಎಂದು ಕರೆಯಲ್ಪಡುವ ಈ ಮಸೀದಿಯನ್ನು ೧೪೫೩ರಲ್ಲಿ ಕುಬ್ಲಿ ಸುಲ್ತಾನ್ ಎಂಬವನು ಕಟ್ಟಿಸಿದ್ದ. ಮುಘಲ್ ದೊರೆ ಔರಂಗಜ಼ೇಬ್, ಇಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಎಂಬ ದಾಖಲೆಗಳಿವೆ. ಈ ಮಸೀದಿಗೆ ತಾಗಿಯೇ ಇರುವುದು ತರ್ಕಶ್ ಮಹಲ್. ಬಹಮನಿ ಸುಲ್ತಾನರು ಮತ್ತು ಅವರ ನಂತರ ಬೀದರ್ ಆಳಿದ ಬಾರಿದ್ ಶಾಹಿ ವಂಶದ ಸುಲ್ತಾನರು ಬೇರೆ ಬೇರೆ ದೇಶಗಳ ಸುಂದರ ಹೆಂಗಸರನ್ನು ತಮ್ಮ ವೇಶ್ಯಾಗೃಹದಲ್ಲಿ ಇಟ್ಟುಕೊಳ್ಳುತ್ತಿದ್ದರು. ತರ್ಕಶ್ ಮಹಲ್-ನ ಮೇಲ್ಮಹಡಿಗಳನ್ನು ಈ ಹೆಂಗಸರ ವಾಸ್ತವ್ಯಕ್ಕಾಗಿ ಬಳಸಲಾಗುತ್ತಿತ್ತು. ತರ್ಕಶ್ ಮಹಲ್-ನ, ಸೋಲಾಹ್ ಖಂಬ ಮಸ್ಜಿದ್-ಗೆ ತಾಗಿ ಇರುವ ಭಾಗವನ್ನು ಗಮನಿಸಿದರೆ, ಯಾವುದೇ ಕಿಟಕಿಗಳಿಲ್ಲದಿರುವುದನ್ನು ಕಾಣಬಹುದು ಮತ್ತು ಅದು ತರ್ಕಶ್ ಮಹಲ್-ನ ಹಿಂಭಾಗವಾಗಿರುವ ಸಾಧ್ಯತೆ ಹೆಚ್ಚು. ನೆಲ ಅಂತಸ್ತನ್ನು ಕಾವಲುಗಾರರ ಕೊಠದಿ ಹಾಗೂ ಆಹಾರ ವಸ್ತುಗಳ ಶೇಖರಣೆ ಪ್ರಯುಕ್ತ ಬಳಸಲಾಗುತ್ತಿತ್ತು. ಮೇಲಿನೆರಡು ಅಂತಸ್ತುಗಳ ಹಿಂಭಾಗ ಸೋಲಾಹ್ ಖಂಬ ಮಸ್ಜಿದ್ ಕಡೆಗೆ ಇದ್ದರೆ (ವೇಶ್ಯಾಗೃಹದಲ್ಲಿ ಏನು ನಡೆಯುತ್ತಿದೆ, ಯಾರ್‍ಯಾರಿದ್ದಾರೆ ಎಂಬುದು, ಮಸೀದಿಗೆ ಬರುವವರಿಗೆ ಕಾಣಿಸದಿರಲಿ ಎಂದಿರಬಹುದು), ನೆಲ ಅಂತಸ್ತಿನ ಮುಂಭಾಗ ಸೋಲಾಹ್ ಖಂಬ ಮಸ್ಜಿದ್ ಕಡೆಗಿದೆ. ತರ್ಕಶ್ ಮಹಲ್ ಒಳಗಡೆ ಸ್ವಲ್ಪ ಹೊತ್ತು ಅಲೆದಾಡಿದರೆ ಸುಲ್ತಾನರ ಕಾಮಕೇಳಿಯ ಕಲ್ಪನಾ ಚಿತ್ರಗಳು ಮನಸ್ಸಿನಲ್ಲಿ ಮೂಡದೇ ಇರುವುದಿಲ್ಲ. ಒಂದನೇ ಮಹಡಿಯ ಪಡಸಾಲೆಯಲ್ಲಿ ನಡೆಯುತ್ತಿರುವಾಗ, ಸಾಲಾಗಿ ಬರುವ ಕೋಣೆಗಳಲ್ಲಿ ನನಗಾಗಿ ಸುಂದರಿಯರು ಮುಗುಳ್ನಗುತ್ತಾ ಕಾಯುತ್ತಿರಬಾರದೇಕೆ? ಎಂದು ಕನಸು ಕಾಣುತ್ತಾ ಒಂದೊಂದೇ ಕೋಣೆಗಳನ್ನು ನೋಡುತ್ತಾ ಮುಂದುವರಿದೆ. ಎರಡನೇ ಮಹಡಿಗೆ ಹೋಗಲು ಮೆಟ್ಟಿಲುಗಳು ಬಹಳ ಹೊತ್ತು ಹುಡುಕಾಡಿದರೂ ಸಿಗಲಿಲ್ಲ. ಐದಾರು ನಿಮಿಷ ಹುಡುಕಿದ ಬಳಿಕ ಒಂದು ಸಂದಿಯುಲ್ಲಿ ಮತ್ತದೇ ಚಾಣಾಕ್ಷತನದಿಂದ ನಿರ್ಮಿಸಿದ ಮೆಟ್ಟಿಲುಗಳು ಕಾಣಿಸಿದವು. ಅತ್ಯಂತ ಕಡಿಮೆ ಸ್ಥಳ ಬಳಸಿ ಮೆಟ್ಟಿಲುಗಳ ರಚನೆ. ಎರಡನೇ ಮಹಡಿಯಿಂದ ಸೋಲಾಹ್ ಖಂಬ ಮಸ್ಜಿದ್ ಮುಂದಿರುವ ಉದ್ಯಾನವನ ಸುಂದರವಾಗಿ ಕಾಣುತ್ತದೆ. ಉದ್ಯಾನವನದ ಒಂದು ತುದಿಯಲ್ಲಿ ತರ್ಕಶ್ ಮಹಲ್ ಇದ್ದರೆ ಮತ್ತೊಂದು ತುದಿಯಲ್ಲಿ 'ಶಾಹಿ ಹಮಾಮ್' ಇದೆ. ಶಾಹಿ ಹಮಾಮ್ ಸುಲ್ತಾನರ ಕಾಲದ ಸ್ನಾನಗೃಹ. ಆಗಿನ ಸ್ನಾನಗೃಹವನ್ನು ಈಗ ಎ.ಎಸ್.ಐ ನ ಸಣ್ಣ ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಾಡಿಸಲಾಗಿದೆ.

ತರ್ಕಶ್ ಮಹಲ್-ನ ಸ್ವಲ್ಪ ಮುಂದೆ ಇರುವುದು ಗಗನ್ ಮಹಲ್. ಇದು ಕೂಡಾ ಸುಂದರವಾಗಿದೆ. ಯಾತಕ್ಕಾಗಿ ಉಪಯೋಗಿಸುತ್ತಿದ್ದರು ಎಂಬುದು ಗೊತ್ತಾಗಲಿಲ್ಲ. ಮನೋರಂಜನಾ ಕಾರ್‍ಯಕ್ರಮಗಳಿಗಾಗಿ ಸುಲ್ತಾನರು ಬಳಸುತ್ತಿದ್ದರೇನೋ ಎಂದು ಗಗನ್ ಮಹಲ್ ರಚನೆ ನೋಡಿದರೆ ಊಹೆ ಮಾಡಬಹುದು. ಇಲ್ಲಂತೂ ಮೆಟ್ಟಿಲುಗಳು ನನಗೆ ಪೂರಾ ಗಲಿಬಿಲಿಯನ್ನುಂಟುಮಾಡಿದವು. 'ರುಕ್ಕು ರುಕ್ಕು ರುಕ್ಕಮ್ಮ, ಲುಕ್ಕು ಲುಕ್ಕು ಲುಕ್ಕಮ್ಮ, ಸಿಟ್ಟ್ಯಾಕೆ ನನ್ನ ಮ್ಯಾಲೆ...' ಎಂದು ಗುನುಗುತ್ತಾ, ಮೊದಲ ಮಹಡಿಯಲ್ಲಿ ಸ್ವಲ್ಪ ಆಚೀಚೆ ಓಡಾಡಿದ ಬಳಿಕ, ಎರಡನೇ ಮಹಡಿ ತಲುಪಿದೆ. ಯಾವ ದಿಕ್ಕಿನಿಂದ ಮೆಟ್ಟಿಲುಗಳನ್ನು ಏರಿದೆ ಎಂಬುದು 'ರುಕ್ಕಮ್ಮ'ನ ಹಾಡಿನ ಗುಂಗಿನಲ್ಲಿ ಮರೆತೇಹೋಯಿತು. ಕೆಳಗಿಳಿಯುವಾಗ ಸ್ವಲ್ಪ ಗಲಿಬಿಲಿಯಾದರೂ, ದಾರಿ ಕಂಡುಕೊಂಡು ಕೆಳಗಿಳಿದುಬಂದೆ. ತರ್ಕಶ್ ಮಹಲ್ ಮತ್ತು ಗಗನ್ ಮಹಲ್ ಎದುರು ಬದುರು ಇದ್ದು, ಮಧ್ಯದಲ್ಲಿ ಟೆನ್ನಿಸ್ ಅಂಕಣದಷ್ಟು ಚೌಕಾಕಾರದ ಜಾಗ ಇದೆ. ಈ ತೆರೆದ ಜಾಗದ ಮಧ್ಯ ನಿಂತರೆ ಒಂದು ಕಡೆ ತರ್ಕಶ್ ಮಹಲ್-ನಿಂದ ಸುಂದರಿಯರು, ಮತ್ತೊಂದು ಕಡೆ ಗಗನ್ ಮಹಲ್-ನಿಂದ ನರ್ತಕಿಯರು ದಿಟ್ಟಿಸುತ್ತಾ ಇರುವಂತೆ ಹುಚ್ಚು ಕಲ್ಪನೆ. ಆಗ ಅಲ್ಲೇ ಗೋಡೆ ಮೇಲೆ ಬೆಳೆದಿದ್ದ ಹುಲ್ಲುಗಳನ್ನು ತೆಗೆದು ಸ್ವಚ್ಛ ಮಾಡುತ್ತಿದ್ದ ಎ.ಎಸ್.ಐ ಉದ್ಯೋಗಿ ದೇವೇಂದ್ರಪ್ಪ ದಂಡಿನ, 'ಯಾಕ್ರೀ ಸರ, ಅಲ್ ನಿಂತು ಎನ್ ಯೋಚ್ನೆ ಮಾಡಾಖತ್ತೀರಿ?' ಎಂದು ಬೆಚ್ಚಿಬೀಳಿಸಿದರು. ಬಾದಾಮಿಯ ದೇವೇಂದ್ರಪ್ಪ, ಅಲ್ಲೇ ಗುಹಾ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಿಪರೀತ ಕುಡಿತದ ಚಟ ಇದ್ದಿದ್ದರಿಂದ, ಮೇಲಧಿಕಾರಿಗಳು, 'ಮಗನ, ಸಿಗೊ ಪಗಾರ್-ನಾಗ ಈಗ್ ಹೆಂಗ್ ಕುಡಿತಿ? ನೋಡೇಬಿಡೋಣ' ಎಂದು ದೂರದ ಬೀದರ್-ಗೆ ಶಿಕ್ಷೆ ವರ್ಗಾವಣೆ ಮಾಡಿಬಿಟ್ಟರು. ತನ್ನ ತಪ್ಪನ್ನರಿತು ಕುಡಿತ ಬಿಟ್ಟಿರುವ ದೇವೇಂದ್ರಪ್ಪ ಈಗ ಮರಳಿ ಬಾದಾಮಿಗೆ ವರ್ಗಾ ಆಗುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಶುಭವನ್ನು ಕೋರಿ ನಾನು ಮನ್ನಡೆದದ್ದು 'ದೀವಾನ್-ಏ-ಆಮ್' ಕಡೆಗೆ.

ದೀವಾನ್-ಏ-ಆಮ್', ಸುಲ್ತಾನರ ಸಭೆ, ದರ್ಬಾರ್ ಇತ್ಯಾದಿಗಳು ನಡೆಯುತ್ತಿದ್ದ ಸ್ಥಳ. ಹರಳುಗಳಿಂದ ಅಲಂಕರಿಸಲ್ಪಟ್ಟ ಸಿಂಹಾಸನ ಇಲ್ಲೇ ಇದ್ದು, ಸುಲ್ತಾನರು ಅದರ ಮೇಲೆ ಆಸೀನರಾಗುತ್ತಿದ್ದರು. ಹೊಸ ಸುಲ್ತಾನರ ಪಟ್ಟಾಭಿಷೇಕವೂ ಇಲ್ಲೇ ನಡೆಯುತ್ತಿತ್ತು. ಬೀದರ್ ಆಳಿದ ಬಹಮನಿ ಹಾಗೂ ಬಾರಿದ್ ಶಾಹಿ ವಂಶದ ಪ್ರತಿಯೊಂದು ಸುಲ್ತಾನರ ಪಟ್ಟಾಭಿಷೇಕವು ಇದೇ 'ದೀವಾನ್-ಏ-ಆಮ್'ನಲ್ಲಿ ನಡೆದಿತ್ತು. ಪಾಳುಬಿದ್ದು ಹೋಗಿದ್ದರೂ, ಆಸ್ಥಾನಕ್ಕಿರುವಂತಹ ಗಾಂಭೀರ್‍ಯ ಆಳಿದಿಲ್ಲ. ಆಸ್ಥಾನದ ನೆಲದಲ್ಲಿ ೩ ಸಾಲುಗಳಲ್ಲಿ ಗ್ರಾನೈಟ್ ಬುಡಗಳು ಹಾಗೇ ಉಳಿದಿವೆ. ಇವುಗಳ ಮೇಲೆ ಅಲಂಕಾರಿಕ ಮರದ ಕಂಬಗಳಿದ್ದವು, ಈಗ ಗ್ರಾನೈಟ್ ಬುಡ ಮಾತ್ರ ಉಳಿದಿದೆ.

ಸ್ವಲ್ಪ ಮುಂದೆ ಇರುವುದು ಅರಮನೆ ಮತ್ತು ತಖ್ತ್ ಮಹಲ್. ಇವೆರಡು ಒಂದೇ ಪ್ರಾಂಗಣದಲ್ಲಿವೆ. ದೀವಾನ್-ಏ-ಆಮ್ ದಾಟಿ ಬಲಕ್ಕೆ ಹೊರಳಿದರೆ, ಅರಮನೆ ಹಾಗೂ ತಖ್ತ್ ಮಹಲ್ ಇರುವ ಪ್ರಾಂಗಣದ ಕಾವಲು ಬಾಗಿಲಿಗೆ ಬರಬಹುದು. ಬಲಕ್ಕೆ ಹೊರಳದೇ ನೇರ ಬಂದರೆ, ಅರಮನೆಗೆ ತಾಗಿ ಇರುವ ಸಣ್ಣ ಕಳ್ಳ ದಾರಿಯಲ್ಲಿ ೮-೧೦ ಮೆಟ್ಟಿಲುಗಳನ್ನು ಹತ್ತಿ, ಅರಮನೆಯ ಆವರಣಕ್ಕೆ ಬರಬಹುದು. ಇಲ್ಲೂ ಮುಂಭಾಗದ ಕೋಣೆಗಳಲ್ಲಿ ಕೆಲವು ಗ್ರಾನೈಟ್ ಬುಡಗಳು ಉಳಿದಿವೆ. ಅರಮನೆಯ ಮಧ್ಯದಲ್ಲಿ ಬಿಸಿ ನೀರಿನ ಈಜುಕೊಳವೊಂದಿದ್ದು, ಕೇವಲ ಸುಲ್ತಾನ ಮತ್ತು ಆತನ ಪತ್ನಿಯರಿಗಾಗಿ ಮೀಸಲಾಗಿತ್ತು. ಇಬ್ಬರು ಮಾತ್ರ ಹಾಯಾಗಿ ಜಲಕ್ರೀಡೆ ಆಡುವಷ್ಟು ದೊಡ್ಡದಿದೆ ಈ ಬಿಸಿ ನೀರಿನ ಈಜುಕೊಳ. ಅರಮನೆ ಭವ್ಯವಾಗಿದ್ದು, ಅಳಿದುಳಿದ ಕೋಣೆಗಳಲ್ಲಿ ನಡೆದಾಡಿದರೆ, ೫೦೦ ವರ್ಷಗಳಷ್ಟು ಹಿಂದಿನ ಲೋಕಕ್ಕೆ ಮನಸ್ಸು ತೆರಳುತ್ತದೆ. ಅರಮನೆಗೆ ತಾಗಿಕೊಂಡು ಇರುವುದೇ ತಖ್ತ್ ಮಹಲ್. ಇದು ಸುಲ್ತಾನರು ಖಾಸಗಿಯಾಗಿ ತಮ್ಮ ಆಪ್ತರಿಗೆ, ಮಿತ್ರರಿಗೆ ಭೇಟಿ ನೀಡುತ್ತಿದ್ದ ಸ್ಥಳ. ಇನ್ನೂ ಸ್ವಲ್ಪ ಮುಂದೆ ತೆರಳಿದರೆ ಇರುವುದು ಹಜ಼ಾರ್ ಕೋಠ್ರಿ ಮತ್ತು ನೌಬತ್ ಖಾನ. ಹಜ಼ಾರ್ ಕೋಠ್ರಿಯಲ್ಲಿ ಹಜ಼ಾರ್ ಕೋಣೆಗಳಿರಲಿಲ್ಲ, ಬರೀ ಐದಾರಿದ್ದವು. ಅಲ್ಲೇ ಮುಂದಿರುವುದು ತುಪಾಕಿ ಬುರುಜು. ಕೋಟೆಯ ಗೋಡೆಯ ಸಮೀಪವಿರುವುದು ಚಿನ್ನಿ ಮಹಲ್.

ಕೋಟೆಯಿಂದ ಹೊರಬಂದು ಒಂದು ರಿಕ್ಷಾ ನಿಲ್ಲಿಸಿದೆ. 'ಅಶ್ತೂರ್-ಗೆ ಪಚಾಸ್ ರುಪ್ಯಾ ಆಗುತ್ತೆ ಸರ' ಆಂದ. ಅಲ್ಲಿಂದ ವಾಪಸ್ ಬೀದರ್ ಬರೊದಾದ್ರೆ? 'ಇನ್ನೊಂದು ಪಚಾಸ್ ರುಪ್ಯಾ ಆಗುತ್ತೆ ಸರ' ಅಂದ. ಅಶ್ತೂರ್-ನಲ್ಲಿರುವುದು ಬೀದರ್ ಆಳಿದ ಬಹಮನಿ ಸುಲ್ತಾನರ ಗೋರಿಗಳು. ಒಂಬತ್ತನೇ ಬಹಮನಿ ಸುಲ್ತಾನ ಒಂದನೇ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿಯ ಗೋರಿಯಲ್ಲಿ ಪ್ರತಿ ವರ್ಷ ಊರುಸ್ ನಡೆಯುತ್ತದೆ. ಈತನನ್ನು ಹಿಂದುಗಳು 'ಅಲ್ಲಮ ಪ್ರಭು' ಎಂದು ಗುರುತಿಸಿ ಪೂಜಿಸುತ್ತಾರೆ. ಹನ್ನೊಂದನೇ ಬಹಮನಿ ಸುಲ್ತಾನ ಅಲ್ಲವುದ್ದೀನ್ ಹುಮಾಯೂನ್ ಜ಼ಾಲಿಮ್ ಶಾನ ಗೋರಿ ಮಿಂಚು ಹೊಡೆದು ಹಾನಿಗೊಳಗಾಗಿದ್ದರೂ, ತನ್ನ ಈಗಿನ ಅವತಾರದಲ್ಲಿ ಆಕರ್ಷಕವಾಗಿ ಕಾಣಿಸುತ್ತಿದೆ. ೧೫ನೇ ಬಹಮನಿ ಸುಲ್ತಾನ ನಾಲ್ಕನೇ ಅಹ್ಮದ್ ಶಾ ಮತ್ತು ೧೬ನೇ ಬಹಮನಿ ಸುಲ್ತಾನ ಅಲ್ಲಾವುದ್ದೀನ್ ಶಾ ಇವರಿಬ್ಬರ ಗೋರಿಗಳು ಅಶ್ತೂರ್-ನಲ್ಲಿಲ್ಲ, ಎಲ್ಲಿದೆ ಎಂಬ ಮಾಹಿತಿಯೂ ಸಿಗಲಿಲ್ಲ. ನನ್ನ ರಿಕ್ಷಾ ಚಾಲಕ ಮೊಹಮ್ಮದ್ ಸಮದ್-ನೊಂದಿಗೆ ಮಾತುಕತೆಗಿಳಿದು ನೋಡಬೇಕಾದ ಉಳಿದೆಲ್ಲಾ ಸ್ಥಳಗಳಿಗೂ ಕರೆದೊಯ್ಯುವಂತೆ ಒಪ್ಪಿಸಿದೆ.

ಅಶ್ತೂರ್ ಗೋರಿಗಳನ್ನು ನೋಡಿದ ಬಳಿಕ ಅಲ್ಲೇ ಸಮೀಪದಲ್ಲಿರುವ 'ಚೌಖಂಡಿ'ಗೆ ತೆರಳಿದೆ. ಇದು ೧೦ನೇ ಬಹಮನಿ ಸುಲ್ತಾನ ಎರಡನೇ ಅಲ್ಲಾವುದ್ದೀನ್ ಅಹ್ಮದ್ ಶಾ, ತನ್ನ ಧಾರ್ಮಿಕ ಗುರುವಾಗಿದ್ದ ಹಜ಼್ರತ್ ಖಲೀಲುಲ್ಲಾನಿಗೆ ಕಟ್ಟಿಸಿದ ಗೋರಿ. ಸುಲ್ತಾನರ ಗೋರಿಗಳಿಗಿಂತಲೂ ಇದು ಆಕರ್ಷಕವಾಗಿದೆ. ಗರ್ಭಗುಡಿಯಲ್ಲಿ ಖಲೀಲುಲ್ಲಾ ಮತ್ತು ಆತನ ಇಬ್ಬರು ಹೆಣ್ಣು ಮಕ್ಕಳ ಗೋರಿಯಿದ್ದರೆ, ಹೊರಗಡೆ ಆತನ ಎಲ್ಲಾ ಸಂಬಂಧಿಕರ ಗೋರಿಗಳಿವೆ. ಚೌಖಂಡಿಯ ಮೇಲೆ ತೆರಳಲು ಮೆಟ್ಟಿಲುಗಳನ್ನು ಹುಡುಕತೊಡಗಿದರೆ, ಸಿಗುತ್ತಲೇ ಇರಲಿಲ್ಲ. ಗರ್ಭಗುಡಿಗೆ ೩ ಸುತ್ತು ಹೊಡೆದರೂ ಮೆಟ್ಟಿಲುಗಳು ಸಿಗಲಿಲ್ಲ. ಹೊರಬಂದು ಚೌಖಂಡಿಗೆ ಸುತ್ತು ಹಾಕಿದರೂ ಮೆಟ್ಟಿಲುಗಳ ಪತ್ತೆ ಇಲ್ಲ. ಸಮದ್-ನನ್ನು ಕೇಳಿದರೆ 'ಪತಾ ನಹೀ ಸಾಬ್' ಎಂದು ಮೂರ್ಖ ನಗು ಕೊಟ್ಟ. ಈ ಮೆಟ್ಟಿಲುಗಳು ಮತ್ತೆ ವಿಸ್ಮಯವನ್ನುಂಟುಮಾಡಲಾರಂಭಿಸಿದವು. ಆಗ ಸಮದ್ ಅಲ್ಲೇ ಆಟವಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೇಳಿದಾಗ, ಅವರು ಮೆಟ್ಟಿಲು ಇರುವ ಜಾಗ ತೋರಿಸಿದರು. ನಿಜಕ್ಕೂ ಅದ್ಭುತ! 'ಕತ್ತಲೆ ಇದೆ ಸರ, ಅಂಧೇರಾ, ನಾ ಬರಂಗಿಲ್ಲ ಸರ. ಅಂದರ್ ಬಾವ್ಲಿ ಅದಾವು ಸರ. ಆ ಬಾವ್ಲಿಗಳು ಕಾನ್ ಪಕಡ್ತೆ ಸಾಬ್' ಎಂದು ಮತ್ತೆ ಮೂರ್ಖನ ಹಾಗೆ ಸಮದ್ ತೊದಲಿದ. ನಾನು ಹುಂಬ ಧೈರ್ಯದಿಂದ 'ನೀ ಬರೋದಿದ್ರೆ ಬಾ' ಎಂದು ಕಡಿದಾಗಿ ಕೆತ್ತಿದ ಮೆಟ್ಟಿಲುಗಳನ್ನೇರಿದೆ. ಅದ್ಭುತವಾಗಿ ಕೆತ್ತಿದ ಮೆಟ್ಟಿಲುಗಳು. ಮೊದಲನೇ ಮಹಡಿ ತಲುಪಿ, ಹಿಂತಿರುಗಿ ನೋಡಿದರೆ, ಸಮದ್ ಎರಡೂ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡು ಬರುತ್ತಾ ಇದ್ದ! ಹಾಗೇ ಮೊದಲನೇ ಮಹದಿಗೆ ಸುತ್ತು ಹಾಕುತ್ತಿರುವಾಗ, ತಾರಸಿಗೆ ತೆರಳುವ ಮೆಟ್ಟಿಲುಗಳು ಕಾಣಿಸಿದವು. ಕೆಳಗಿಳಿಯುವಾಗ ಆದ 'ಕನ್-ಫ಼್ಯೂಶನ್' ಹೇಳಿ ಪ್ರಯೋಜನವಿಲ್ಲ, ಅನುಭವಿಸಬೇಕು.

ನಂತರ ತೆರಳಿದ್ದು ನರಸಿಂಹ ಜ಼ರಣಿಗೆ. ಇದೊಂದು ಗುಹಾ ದೇವಸ್ಥಾನ. ನರಸಿಂಹ ದೇವರನ್ನು ಗುಹೆಯ ಒಳಗೆ ಗೋಡೆಯಲ್ಲಿ ಕೆತ್ತಲಾಗಿದೆ. ಆದರೆ ನರಸಿಂಹ ದೇವರ ದರ್ಶನ ಪಡೆಯಲು ೯೧ ಮೀಟರ್, ಪ್ರಾರಂಭದಲ್ಲಿ ಎದೆ ಮಟ್ಟಕ್ಕೆ ನಂತರ ಸೊಂಟ ಮಟ್ಟಕ್ಕಿರುವ ನೀರಿನಲ್ಲಿ ತೆರಳಬೇಕು. ಇದೊಂದು ಭೂಮಿಯ ಕೆಳಗಿರುವ ಕರ್ನಾಟಕದ ಏಕೈಕ (ಸಾಕ್ಷಿ ಆಧಾರಗಳಿಲ್ಲ) ತೊರೆ. ರವಿವಾರವಾದ್ದರಿಂದ ಭಕ್ತರ ಮಹಾಪೂರವೇ ಅಲ್ಲಿತ್ತು. ನನಗೂ ಗುಹೆ ಒಳಗೆ ತೆರಳುವ ಆಸೆಯಿತ್ತು. ಆದರೆ, ದೇವರ ದರ್ಶನ ಪಡೆದು ಹೊರಬಂದವರನ್ನು ನೋಡಿ ಆ ಆಸೆಯನ್ನು ಕೈಬಿಟ್ಟೆ. ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ತಲೆಯಿಂದ ಕಾಲಿನವರೆಗೆ ಪೂರ್ತಿಯಾಗೆ ಒದ್ದೆಯಾಗಿ ಗುಹೆಯಿಂದ ಹೊರಬರುತ್ತಿದ್ದರು. ಇನ್ನೂ ಸುಮಾರು ಸ್ಥಳಗಳನ್ನು ನೋಡುವುದು ಬಾಕಿ ಇದ್ದಿದ್ದರಿಂದ, ಮೈ ತೋಯಿಸಿಕೊಂಡು ದೇವರ ದರ್ಶನ ಮಾಡುವ ಮನಸ್ಸಾಗದೆ ಸಮದ್-ನ ರಿಕ್ಷಾಗೆ ಹಿಂತಿರುಗಿದೆ.

ನಂತರದ ಸರದಿ ಗುರು ನಾನಕ್ ಜ಼ೀರಾದ್ದು. ಸಿಖ್ ಗುರು, ಗುರು ನಾನಕ್-ರ ಬೀದರ್ ಭೇಟಿಯ ಸ್ಮಾರಕವಾಗಿ ಸ್ಥಾಪಿಸಲಾದ ಸಣ್ಣ ಗುರುದ್ವಾರ, ಇಂದು ಭವ್ಯವಾದ ಬಿಳಿ ಬಣ್ಣದ ಸುಂದರ ಗುರುದ್ವಾರವಾಗಿದೆ. ಶೂ ತೆಗೆದರೆ ಸಾಲದು ಸಾಕ್ಸ್ ಕೂಡಾ ತೆಗೆದು, ತಲೆಗೆ ರುಮಾಲೊಂದನ್ನು ಸುತ್ತಿ, ಮೆಟ್ಟಿಲುಗಳ ಮೊದಲೇ ಇದ್ದ ನೀರಿನಲ್ಲಿ ಕಾಲು ತೊಳೆದುಕೊಂಡೇ ನಾನು ಒಳಹೊಕ್ಕಬೇಕೆಂದು ಅಲ್ಲಿದ್ದವನೊಬ್ಬ ಒತ್ತಾ(ಸತಾ)ಯಿಸುತ್ತಿದ್ದ. ಪ್ರಥಮ ಬಾರಿಗೆ ಗುರುದ್ವಾರವೊಂದನ್ನು ಸಮೀಪದಿಂದ ನೋಡಿದೆ, ಒಳ ಹೊಕ್ಕಿದೆ. ನೀಡಿದ ಪ್ರಸಾದ ಮಾತ್ರ ಬಹಳ ರುಚಿಯಾಗಿತ್ತು. ನಾಚಿಕೆ ಬಿಟ್ಟು ಪ್ರಸಾದವನ್ನು ಮತ್ತೊಮ್ಮೆ ಕೇಳಿದೆ. ನಗುತ್ತಲೇ ಆತ ನೀಡಿದ. ಮತ್ತೆ ಕೇಳಬೇಕೆಂದು ಅನಿಸಿದರೂ, ಅಷ್ಟೂ ನಾಚಿಕೆ ಬಿಟ್ಟವನಾಗುವುದು ಬೇಡವೆಂದು ಸುಮ್ಮನುಳಿದೆ. ಯಾವಾಗಲೂ ಪ್ರಸಾದ ಹೀಗೆ ಮಾಡುತ್ತೀರಾ ಎಂದು ಕೇಳಿದಾಗ ಆತ ಹೌದೆಂದ. ಈ ಗುರುದ್ವಾರಕ್ಕೆ ಏನಿಲ್ಲವೆಂದರೂ ಪ್ರಸಾದ ತಿನ್ನುವುದಕ್ಕಾದರೂ ಹೋಗಲೇಬೇಕು.

ಗುರುದ್ವಾರದಿಂದ ಸಮದ್ ತೆರಳಿದ್ದು ಬಾರಿದ್ ಪಾರ್ಕಿಗೆ. ಆದರೆ ಪಾರ್ಕ್ ತೆರೆಯುವುದೇ ಸಂಜೆ ೫ ಗಂಟೆಗಾದ್ದರಿಂದ ಮತ್ತು ಸಮಯವಿನ್ನೂ ೪.೪೫ ಆಗಿದ್ದರಿಂದ, ಸಮದ್, ರಿಕ್ಷಾವನ್ನು ಪಾಪನಾಶ ಶಿವ ದೇವಸ್ಥಾನದತ್ತ ಓಡಿಸಿದ. ಬೀದರ್ ನಗರದ ಮಧ್ಯದಲ್ಲೇ ಒಂದು ಪ್ರಶಾಂತ ಕಣಿವೆಯಲ್ಲಿ ಪಾಪನಾಶ ಶಿವ ದೇವಸ್ಥಾನವಿದೆ. ಈ ದೇವಸ್ಥಾನದ ವೈಶಿಷ್ಟ್ಯವೆಂದರೆ, ಭಕ್ತರು ಗರ್ಭಗುಡಿಯ ಒಳಗೆ ಹೋಗಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಬಹುದು. ಶ್ರೀ ರಾಮನು ಲಂಕಾದಿಂದ ಹಿಂತಿರುಗುವಾಗ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬುದು ಪ್ರತೀತಿ. ಶಿವಲಿಂಗ ಬಹಳ ಸುಂದರವಾಗಿದೆ. ಬೀದರ್ ನಗರದಲ್ಲಿ ಇಂತಹ ಸುಂದರ ಸ್ಥಳ ಇರಬಹುದು ಎಂದು ಕಲ್ಪಿಸಿರಲಿಲ್ಲ.

ಮತ್ತೆ ಬಾರಿದ್ ಪಾರ್ಕಿಗೆ ಹಿಂತಿರುಗಿದೆ. ಈ ಸ್ಥಳವನ್ನು ಬೀದರ್ ನಗರಪಾಲಿಕೆ, ಒಂದು ಸುಂದರ ಉದ್ಯಾನವನವನ್ನಾಗಿ ಮಾರ್ಪಡಿಸಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿದೆ. ಪ್ರವೇಶ ಶುಲ್ಕ ರೂ.೨. ನನಗೆ ಎರಡನೇ ಕಾಸಿಮ್ ಬಾರಿದ್ ಶಾ ಹಾಗೂ ಅಲಿ ಬಾರಿದ್ ಶಾ ಇವರುಗಳ ಗೋರಿಗಳನ್ನು ನೋಡಬೇಕಿತ್ತು. ಇವೆರಡು ಬಾರಿದ್ ಪಾರ್ಕಿನಲ್ಲಿರಬಹುದೆಂದು ಒಳ ಹೊಕ್ಕರೆ ಅಲ್ಲಿ ಎರಡನೇ ಕಾಸಿಮ್ ಬಾರಿದ್-ನ್ ಮಡದಿ ಚಾಂದ್ ಬೀಬಿ ಹಾಗೂ ಸಂಸಾರದ ಇತರ ಸದಸ್ಯರ ಗೋರಿಗಳು ಮಾತ್ರ ಇದ್ದವು. ನಿರಾಶೆಯಿಂದ ಪಾರ್ಕಿನ ಹೊರಬಂದಾಗ ದೂರದಲ್ಲಿ ಒಂದು ವಿಶಾಲವಾದ ತೋಪಿನ ಮತ್ತೊಂದು ತುದಿಯಲ್ಲಿ ಎರಡು ದೊಡ್ಡ ಗೋರಿಗಳು ಕಂಡವು. ಸಮದ್-ನಿಗೆ ಅಲ್ಲಿ ಒಯ್ಯಲು ಹೇಳಿದೆ. ಇಲ್ಲಿದ್ದವು ನಾನು ನೋಡಬೇಕೆಂದ ಎರಡು ಗೋರಿಗಳು. ಅದ್ಭುತವಾಗಿ ರಚಿಸಲಾಗಿರುವಂತಹ ಈ ಎರಡು ಬಾರಿದ್ ಶಾಹಿ ವಂಶದ ಸುಲ್ತಾನರ ಗೋರಿಗಳು, ಬಹಮನಿ ಸುಲ್ತಾನರ ಗೋರಿಗಳನ್ನು ಮೀರಿಸಿ ನಿಂತಿವೆ. ಸಮೀಪದಲ್ಲೇ ಇತ್ತು ಸ್ಮಶಾನದ ಮಸೀದಿ.

ಮರಳಿ ವಸತಿಗೃಹಕ್ಕೆ ಬಂದಾಗ ಸಂಜೆ ೬.೩೦. ಮಧ್ಯಾಹ್ನ ೧.೩೦ರಿಂದ ಸಂಜೆ ೬.೩೦ರ ವರೆಗೆ ನನ್ನೊಂದಿಗಿದ್ದು ಸುಮಾರು ೪೦ ಕಿ.ಮಿ.ಗಳಷ್ಟು ದೂರ ರಿಕ್ಷಾ ಓಡಿಸಿದ ಸಮದ್ ಕೇಳಿದ್ದು ಕೇವಲ ೩೫೦ ರೂಪಾಯಿ. ೭.೦೦ ಗಂಟೆಗೆ ಬೀದರ್-ನಿಂದ ಬಸವಕಲ್ಯಾಣ ಬಸ್ಸಿನಲ್ಲಿ ಹೊರಟು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬಸವಕಲ್ಯಾಣ ತಲುಪಿ ಮತ್ತೊಂದು ವಸತಿಗೃಹಕ್ಕೆ ಹೊಕ್ಕು, ಭರ್ಜರಿ ಜವಾರಿ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬೆಂಡೆಕಾಯಿ ಪಲ್ಯ ಊಟ ಮಾಡಿ ಪ್ರಯಾಣದ ಎರಡನೇ ದಿನ ಮುಗಿಸಿದಾಗಲೇ ನೆನಪು, ಮಧ್ಯಾಹ್ನ ಊಟಾನೇ ಮಾಡಲಿಲ್ಲ ಎಂದು.

ಮರುದಿನ ಸೋಮವಾರ ಬೆಳಗ್ಗೆ ಬಸವಕಲ್ಯಾಣದಿಂದ ೪ ಕಿ.ಮಿ ದೂರದಲ್ಲಿರುವ ನಾರಾಯಣಪುರಕ್ಕೆ ಹೊರಟೆ. ಮುಂಜಾನೆ ೭.೩೦ಕ್ಕೆ ನಾರಾಯಣಪುರ ಕ್ರಾಸ್ ಬಳಿ ಬಂದಾಗ ಹಲವಾರು ರಿಕ್ಷಾಗಳು ನಿಂತಿದ್ದವು. ಇವಕ್ಕೆ ಟಮ್ ಟಮ್ ಅಂತಾರಂತೆ. ಒಂದು ಟಮ್ ಟಮ್ ೧೧-೧೨ ಜನರನ್ನು ತುಂಬಿಸಿಕೊಂಡು ಹೋಗುತ್ತೆ. ಇನ್ನೂ ಸರಿಯಾಗಿ ಮೀಸೆ ಬರದ ಹುಡುಗ ನನ್ನನ್ನು ಆತನ ಟಮ್ ಟಮ್-ನ ಒಳಗೆ ಕೂರಿಸಿ ಇನ್ನುಳಿದ ಪ್ರಯಾಣಿಕರಿಗಾಗಿ ಕಾಯತೊಡಗಿದ. ೧೨ ಜನರಿಗೆ ರೂಪಾಯಿ ಮೂರರಂತೆ ನಾರಾಯಣಪುರಕ್ಕೆ ಒಂದು ಸವಾರಿಗೆ ಟಮ್ ಟಮ್ ೩೬ ರೂಪಾಯಿ ಗಳಿಸುತ್ತದೆ. ನಾನೊಬ್ಬನೇ ಅಷ್ಟು ಹಣವನ್ನು ನೀಡುತ್ತೇನೆ ಎಂದಾಗ ಟಮ್ ಟಮ್ ಹೊರಟಿತು. ನಾರಾಯಣಪುರದಲ್ಲಿ ಚಾಳುಕ್ಯರ ಕಾಲದ ಸುಂದರವಾದ ಶಿವ ದೇವಸ್ಥಾನವೊಂದಿದೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆಯೇ ಯಾವುದೋ ಪ್ರಾಚೀನ ಕಾಲಕ್ಕೆ ತೆರಳಿದಂತೆ ಭಾಸವಾಗುವುದಂತೂ ನಿಜ. ಇಲ್ಲೂ ಗರ್ಭಗುಡಿಯೊಳಗೆ ಪ್ರವೇಶಿಸಬಹುದು. ದೇವಾಲಯಕ್ಕೆ ಸುತ್ತು ಹಾಕಿದರೆ ಸುಂದರವಾಗಿ ಕೆತ್ತಿರುವ ಶಿಲಾಬಾಲಿಕೆಯರು ಗಮನ ಸೆಳೆಯುತ್ತಾರೆ.

ಬಸವಕಲ್ಯಾಣದಲ್ಲಿರುವ ಬಸವಣ್ಣನವರ ದೇವಸ್ಥಾನ ನನ್ನ ಮುಂದಿನ ಸ್ಟಾಪ್. ಹೊರಗಿನಿಂದ ದೇವಸ್ಥಾನ ಅಷ್ಟೇನು ಆಕರ್ಷಕವಾಗಿಲ್ಲ. ಕಲ್ಯಾಣ ಮಂಟಪಕ್ಕೆ ಬಂದಂತೆ ಅನ್ನಿಸತೊಡಗಿತು. ನಿಜಕ್ಕೂ ಅಲ್ಲಿ ಕಲ್ಯಾಣ ಮಂಟಪವಿತ್ತು. ಅದನ್ನು ದಾಟಿದ ನಂತರ ದೇವಾಲಯಕ್ಕೆ ಪ್ರವೇಶ. ಬಸವಣ್ಣನವರ ಮೂರ್ತಿಯಂತೂ ಬಹಳ ಆಕರ್ಷಕವಾಗಿದೆ. ನಂತರ ಬಸವಕಲ್ಯಾಣ ಕೋಟೆಯತ್ತ ತೆರಳಿದೆ. ಮಹಾದ್ವಾರದ ಒಳಗೆ ಹೋದರೆ ಅಲ್ಲೊಂದು ಶಾಲೆ. ಕೋಟೆಯ ಮಹಾದ್ವಾರ ಮತ್ತು ಪ್ರಥಮ ದ್ವಾರದ ನಡುವೆ ಇರುವ ವಿಶಾಲ ಪ್ರಾಂಗಣದಲ್ಲಿ ಈಗ ಸರಕಾರ ಶಾಲೆಯೊಂದನ್ನು ನಡೆಸುತ್ತಿದೆ. ಹಾಗೆ ಮುಂದೆ ಎರಡನೇ ಬಾಗಿಲತ್ತ ನಡೆದರೆ ಅದಕ್ಕೆ ಬೀಗ ಹಾಕಿತ್ತು. ಅಲ್ಲೇ ಒಂದು ಸೂಚನೆ: ಸೋಮವಾರ ರಜಾ ದಿನ. ಅಲ್ಲೇ ಕಲ್ಲಿಗೆ ತಲೆ ಹೊಡೆದುಕೊಳ್ಳುವಷ್ಟು ಸಿಟ್ಟು ಮತ್ತು ನಿರಾಸೆ ಎರಡೂ ಒಟ್ಟಿಗೆ ಆಯಿತು. ಬೇರೆ ದಾರಿ ಕಾಣದೆ ತಿರುಗಿ ಮಹಾದ್ವಾರದತ್ತ ಬಂದೆ. ಮತ್ತದೇ ಮೆಟ್ಟಿಲುಗಳು! ಆಕರ್ಷಕವಾಗಿ ಕೆತ್ತಿದ, ಕಡಿದಾದ ಮೆಟ್ಟಿಲುಗಳು ಮೊದಲ ಮಹಡಿಗೆ ಕರೆದೊಯ್ದವು. ಅಲ್ಲಿ ಕೆಲವರು 'ಕಾರ್ಡ್ಸ್' ಆಡುತ್ತ ಕಾಲಹರಣ ಮಾಡುತ್ತಿದ್ದರು. ನಂತರ ಹಾಗೇ ಎರಡನೇ ಮಹಡಿಗೆ ತೆರಳಿದೆ. ಇಲ್ಲಿಂದ ಕೋಟೆಯ ಸಂಪೂರ್ಣ ದೃಶ್ಯ ಲಭಿಸಿ, ಸ್ವಲ್ಪ ಸಮಾಧಾನವೆನಿಸಿತು. ಕೋಟೆಯಲ್ಲಿ ೧೯೪೮ರ ತನಕ ಹೈದರಾಬಾದಿನ ನಿಜ಼ಾಮರ ವಂಶಜರು ವಾಸಿಸುತ್ತಿದ್ದರು. ಕೋಟೆಯನ್ನು ಅಷ್ಟಕೋನಾಕೃತಿಯಲ್ಲಿ ಕಟ್ಟಲಾಗಿದ್ದು, ಪ್ರತಿಯೊಂದು ಹಂತವು ಮೊದಲಿನ ಹಂತಕ್ಕಿಂತ ಮೆಲ್ಮಟ್ಟದಲ್ಲಿರುವುದು. ಸುಮಾರು ೫ ಹಂತಗಳು ಇದ್ದಿರಬಹುದು ಎಂದು ಮಹಾದ್ವಾರದ ಮೇಲಿನಿಂದ ಊಹಿಸಿದೆ. ಕೋಟೆಯು ಕಂದಕದಿಂದ ಸುತ್ತುವರಿದ ಒಂದು ದಿಬ್ಬದ ಮೇಲಿದೆ. ಇಂತಹ ಅದ್ಭುತ ಮತ್ತು ವಿಶಿಷ್ಟ ಕೋಟೆಯನ್ನು ಒಳಹೊಕ್ಕು ನೋಡಲಾಗಲಿಲ್ಲವಲ್ಲ ಎಂಬ ಕೊರಗು ಮಾತ್ರ ಈಗಲೂ ಇದೆ.

ಅಕ್ಕನಾಗಮ್ಮನ ಗವಿ, ಬಸವಣ್ಣನವರ ಗವಿ ಮತ್ತು ಅರುಹಿನ ಮನೆ ಇವಿಷ್ಟನ್ನು ನೋಡಲು ಸಮಯವಿರಲಿಲ್ಲ. ಹುಮ್ನಾಬಾದ್-ನಿಂದ ೮ ಕಿ.ಮಿ. ದೂರವಿರುವ ಜಲಸಂಘಿಯಲ್ಲಿ ಚಾಳುಕ್ಯರು ಕಟ್ಟಿಸಿದ ಅದ್ಭುತವಾದ ದೇವಾಲಯವಿದೆ. ಆದರೆ ಸಮಯದ ಅಭಾವದಿಂದ ಇದನ್ನೂ ಕೈಬಿಡಬೇಕಾಯಿತು. ಬೀದರ್-ನಿಂದ ಮಧ್ಯಾಹ್ನ ೧೨.೩೦ಕ್ಕೆ ಹೊರಡುವ ಬೀದರ್ - ಉಡುಪಿ ಬಸ್ಸು ೧.೪೦ಕ್ಕೆ ಹುಮ್ನಾಬಾದ್ ಬಸ್ ನಿಲ್ದಾಣದಿಂದ ಹೊರಡುವುದರಿಂದ, ೧.೪೦ರ ಮೊದಲೇ ನಾನು ಹುಮ್ನಾಬಾದ್ ತಲುಪಬೇಕಿತ್ತು. ಅವಸರದಲ್ಲಿ, ಬಸವಕಲ್ಯಾಣದಿಂದ ಚಿಂಚೋಳಿಗೆ ಹೊರಟ ಬಸ್ಸನ್ನೇರಿ ೧.೩೦ಕ್ಕೆ ಹುಮ್ನಾಬಾದ್ ತಲುಪಿದೆ. ೨.೦೦ ಗಂಟೆಗೆ ಬೀದರ್ - ಉದುಪಿ ಬಸ್ಸು ಹೊರಟಿತು. ಶೋಲಾಪುರ, ಜ಼ಳಕಿ ಮಾರ್ಗವಾಗಿ ಬಿಜಾಪುರಕ್ಕೆ ಬಂದು ಮರುದಿನ ಅಂದರೆ ಮಂಗಳವಾರ ಮಧ್ಯಾಹ್ನ ೧೨.೩೦ಕ್ಕೆ ಉಡುಪಿಯಲ್ಲಿ ನಾನು ಇಳಿದಾಗ ಬಹು ದಿನದ ಆಸೆ ಪೂರೈಸಿದ ತೃಪ್ತಿಯಿತ್ತು.

ಶುಭ ಪ್ರಯಾಣ .. ... ರಾಜೇಶ್ ನಾಯ್ಕ