ನಕ್ಸಲರ ನಾಡಿನಲ್ಲೊಂದು ಚಾರಣ

ನಕ್ಸಲರ ನಾಡಿನಲ್ಲೊಂದು ಚಾರಣ

ಬರಹ

ಉದುಪಿ ಜಿಲ್ಲೆ ನಕ್ಸಲ್ ಪಿಡುಗಿಗೊಳಗಾಗಿರುವ ಜಿಲ್ಲೆಗಳಲ್ಲೊಂದು. ಇದೇ ಕಾರಣವನ್ನು ಮಂದಿಟ್ಟುಕೊಂಡು ಅತ್ತ ಆಗುಂಬೆ ಮತ್ತು ಇತ್ತ ಅಮಾಸೆಬೈಲು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಚಾರಣಪ್ರಿಯರಿಗೆ ಕಿರಿಕಿರಿ. ಕುದ್ರೆಮುಖದ ಬದಿಗೆ ತಿರುಗಿದರೆ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಅನುಮತಿ ಇಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯ ಚಾರಣಿಗರಿಗೆ ಕೈ ಕಾಲು ಕಟ್ಟಿ ಹಾಕಿದ ಪರಿಸ್ಥಿತಿ. ಆದರೂ 'ಕ್ಯಾಲ್ಕ್ಯುಲೇಟೆಡ್ ರಿಸ್ಕ್' ತಗೊಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇವರಿಬ್ಬರ ಕಣ್ತಪ್ಪಿಸಿ, ಸ್ಥಳೀಯರ ನೆರವು ಪಡಕೊಂಡು ಸಣ್ಣ ಪುಟ್ಟ ಚಾರಣಗೈಯುವುದು ನಡೆದೇ ಇದೆ. ಚಾರಣದ ಹುಚ್ಚು ಹತ್ತಿದ ಮೇಲೆ ಬೇರೇನು ತಾನೆ ಮಾಡಲು ಸಾಧ್ಯ?

ಕುಂದಾಪುರ ತಾಲೂಕಿನ ವ್ಯಾಪ್ತಿಯೊಳಗಿರುವ ಅಮಾಸೆಬೈಲು ನಕ್ಸಲ್ ಪ್ರಸಿದ್ಧ ಪ್ರದೇಶ ಮತ್ತು ನಕ್ಸಲ್ 'ಸ್ಟ್ರಾಂಗ್ ಹೋಲ್ಡ್'. ಹಾಗಿದ್ದರೂ ೨೦೦೫ರ ಜುಲಾಯಿ ತಿಂಗಳಂದು ನಾವು ಹೊರಟದ್ದು ಅಮಾಸೆಬೈಲಿನಿಂದ ೧೦ ಕಿ ಮಿ ದೂರವಿರುವ ಬೊಳ್ಮನೆ ಎಂಬಲ್ಲಿಗೆ. ಅಮಾಸೆಬೈಲನ್ನು, ತೀರ್ಥಹಳ್ಳಿಗೆ ಸಂಪರ್ಕಿಸುವ ಬೆಟ್ಟ ಶ್ರೇಣಿಗಳಿಂದ ಇಳಿದು ಬರುವ ತೊರೆಯೊಂದರ ಜಾಡನ್ನು ಹಿಡಿದು ಹೊರಟ ನಮಗೆ ಸಿಕ್ಕಿದ್ದು, ಸುಮಾರು ೩೦ ಅಡಿ ಎತ್ತರವಿದ್ದ ಈ ಸಣ್ಣ ಜಲಪಾತ. ಸೂರ್ಯನ ಕಿರಣಗಳಿಗೂ ಆಸ್ಪದವಿಲ್ಲದ ದಟ್ಟ ಕಾಡಿನ ನಡುವಿನಲ್ಲಿರುವುದರಿಂದ ಬೊಳ್ಮನೆ ಜಲಪಾತ ಸುಂದರವಾಗಿದೆ. ಸುತ್ತಮುತ್ತಲಿನ ಪರಿಸರ, ಚಾರಣಗೈಯುವ ಕಠಿಣ ಹಾದಿ, ರವಿಯ ಕಿರಣಗಳಿಗೂ ಭೇಧಿಸಲಸಾಧ್ಯವಾದ ದಟ್ಟ ಕಾಡಿನಲ್ಲಿ ದಾರಿ ಮಾಡಿಕೊಂಡು, ಅಲ್ಲಲ್ಲಿ ಹೆಜ್ಜೇನಿನ ಗೂಡುಗಳು ಸಿಕ್ಕಾಗ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು, ದಟ್ಟ ಕಾಡಿನಲ್ಲಿ ದಿಕ್ಕಿನ ಅರಿವಿಲ್ಲದೆ ಆಗಾಗ ದಾರಿ ತಪ್ಪಿ, ಕೊನೆಗೂ ಜಲಪಾತದ ಸನಿಹ ಬಂದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ.

ಚಾರಣದ ಆರಂಭದಲ್ಲಿ, ಸೊಂಟಮಟ್ಟಕ್ಕೆ ಬೆಳೆದು ನಿಂತಿರುವ ಗಿಡಗಳ ನಡುವೆ ದಾರಿ ಮಾಡಿಕೊಂಡು ಸರಿಸುಮಾರು ೪೫ ನಿಮಿಷಗಳಷ್ಟು ಏರುದಾರಿಯನ್ನು ಕ್ರಮಿಸಿದ ಬಳಿಕ ಆರಂಭವಾಗುವುದು ದಟ್ಟ ಕಾಡು. ಕಾಡು ಎಷ್ಟು ದಟ್ಟವಾಗಿದೆಯೆಂದರೆ ಪೂರ್ವಾಹ್ನ ೧೧ರ ಸಮಯವಾಗಿದ್ದರೂ, ಸಂಜೆ ೬ರಂತಹ ವಾತಾವರಣ. ಭೀಮಗಾತ್ರದ ಮರಗಳಿಗಂತೂ ಲೆಕ್ಕವೇ ಇಲ್ಲ. ತಿಂಗಳ ಹಿಂದೆ ಈ ಜಲಪಾತವನ್ನು ಹುಡುಕಿ ಬಂದಿದ್ದ ನಮ್ಮ ತಂಡದ ಕೆಲ ಸದಸ್ಯರು, ಹೆಜ್ಜೇನಿನ ಗೂಡಿಗೆ ನೀಡಬೇಕಾದ ಗೌರವ ನೀಡದಿದ್ದರಿಂದ ಅವುಗಳ ದಾಳಿಯನ್ನು ಎದುರಿಸಬೇಕಾಗಿ ಬಂದಿತ್ತು. ಧರಿಸಿದ್ದ ಜಾಕೆಟ್, ಕ್ಯಾಪ್ ಇತ್ಯಾದಿಗಳನ್ನು ಅಲ್ಲೇ ಬಿಸಾಡಿ ಚೆಲ್ಲಾಪಿಲ್ಲಿಯಾಗಿ ಎಲ್ಲಾ ದಿಕ್ಕುಗಳಲ್ಲಿ ಓಡಿ ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿದವರಿಗೆ, ಈಗ ತಾವು ಬಿಸುಟ ಎಲ್ಲಾ ವಸ್ತುಗಳು ಮತ್ತೆ ಸಿಕ್ಕಾಗ ಉಂಟಾದ ಸಂಭ್ರಮ ನೋಡುವಂತಿತ್ತು. ಅಲ್ಲಲ್ಲಿ ಹತ್ತಿ ಇಳಿದು, ಎದ್ದು ಬಿದ್ದು, ದೈತ್ಯ ಗಾತ್ರದ ವೃಕ್ಷಗಳನ್ನು ಅಚ್ಚರಿಯಿಂದ ವೀಕ್ಷಿಸುತ್ತಾ, ಕಾಡಿನೊಳಗೆ ಸುಮಾರು ೧೦೦ ನಿಮಿಷ ಕ್ರಮಿಸಿದ ಬಳಿಕ ಜಲಪಾತದ ದರ್ಶನ ಆಗುವುದು. ಚಾರಣಗೈದು ಅಭ್ಯಾಸವಿದ್ದವರಿಗೆ ಜಲಪಾತವನ್ನು ಹುಡುಕಿಕೊಳ್ಳುವುದು ಅಸಾಧ್ಯವೇನಲ್ಲ.

ಮಳೆಗಾಲದ ತೊರೆ ಹಾಗೆ ಮುಂದಕ್ಕೆ ಸಾಗಿ ಇನ್ನೂ ಕೆಲವು ಸಣ್ಣ ದೊಡ್ಡ ಜಲಪಾತಗಳನ್ನು ಸೃಷ್ಟಿಸಿದೆ. ಆದರೆ ಈ ಪ್ರಮುಖ ಜಲಪಾತದ ಅಂದಕ್ಕೆ ಉಳಿದವು ಸಾಟಿಯಾಗಲಾರವು. ಸೂರ್ಯನ ಬೆಳಕಿಗೆ ಎಲ್ಲೂ ಆಸ್ಪದವೇ ಇರದಿದ್ದರೂ, ಸರಿಯಾಗಿ ಜಲಪಾತದ ನೆತ್ತಿಯ ಮೇಲೆ ಕಾಡು ಕರುಣೆ ತೋರಿ, ಸೂರ್ಯನ ಬೆಳಕು ತೂರಿ ಬರಲು ಅವಕಾಶ ಮಾಡಿಕೊಟ್ಟಿದ್ದು, ಇದು ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ನಡುಮಧ್ಯಾಹ್ನದ ಹೊತ್ತಿಗೆ ಸೂರ್ಯನ ಪ್ರಖರ ಕಿರಣಗಳು ಜಲಪಾತದ ಮೇಲೆ ಬಿದ್ದಾಗ ಮುತ್ತಿನ ಹನಿಗಳೇ ಉರುಳಿ ಬೀಳುತ್ತಿವೆಯೋ ಎಂದೆನಿಸುವುದು. ಜಲಪಾತದ ಮೇಲೆ ಬಲಬದಿಗೆ ಬಂಡೆಯೊಂದು ಹೊರಚಾಚಿ ನಿಂತಿದ್ದು, ಇದರ ಕೆಳಗೆ ನಿಂತು ಜಲಪಾತದ ಸೌಂದರ್ಯವನ್ನು ಬಹಳ ಸನಿಹದಿಂದ ಆಸ್ವಾದಿಸಬಹುದು.

ಬೊಳ್ಮನೆಗೆ ಹಿಂತಿರುಗಿ, ಅಮಾಸೆಬೈಲು ದಾಟುವ ತನಕ ನಮಗಿದ್ದ ಹೆದರಿಕೆ ನಕ್ಸಲರದ್ದಲ್ಲ. ಬದಲಾಗಿ ಪೊಲೀಸರದ್ದು. ನಕ್ಸಲರು ನಮ್ಮಂತಹ ಬಡಪಾಯಿ ಚಾರಣಿಗರಿಗೆ ಹಾನಿ ಮಾಡುವುದಿಲ್ಲವೆಂಬುದು ೨ ವರ್ಷಗಳ ಹಿಂದೆ ಈದು 'ಎನ್-ಕೌಂಟರ್'(?) ನಲ್ಲಿ ಮಡಿದ ಪಾರ್ವತಿ ಹಾಗೂ ಹಾಜಿಮಾ ನಮಗೆ ಸುಮಾರು ೩ ವರ್ಷಗಳ ಹಿಂದೆ ಬೆಳ್ತಂಗಡಿ ಸಮೀಪ ಅಳಂಗ ಜಲಪಾತದೆಡೆಗೆ ಚಾರಣ ಮಾಡುವಾಗ ಮತ್ತೊಬ್ಬ ಸಹಚರನೊಂದಿಗೆ ಮುಖಾಮುಖಿ ಸಿಕ್ಕಿದಾಗಲೇ ತಿಳಿದಿತ್ತು. ಅಂದು ಆತ್ಮೀಯವಾಗಿ ನಮ್ಮೊಂದಿಗೆ ಹರಟಿದ್ದ ಆ ಮೂವ್ವರು, ತಮ್ಮ ಹೋರಾಟದ ಬಗ್ಗೆ ನಮಗೆ ತಿಳಿಸಿದ್ದರು. ಅವರದ್ದು ಅದೇನಿದ್ದರೂ ದಬ್ಬಾಳಿಕೆ ನಡೆಸುವ ಸೊಕ್ಕಿನ ಜಮೀನುದಾರರ ವಿರುದ್ಧ ಹೋರಾಟ. ಅದರೆ ಪೊಲೀಸರು? ನಮ್ಮನ್ನೇ ನಕ್ಸಲರು ಅಂತ ಸಂಶಿಸಿ ಬಂಧಿಸಿದರೆ?

ಚಿತ್ರಗಳು: http://karnataka.fotopic.net/c518193.html