ಬಿ.ಆರ್.ಎಲ್. -೬೦: ಅಭಿನಂದನಾ ಸಮಾರಂಭದ ವರದಿ

ಬಿ.ಆರ್.ಎಲ್. -೬೦: ಅಭಿನಂದನಾ ಸಮಾರಂಭದ ವರದಿ

ಬರಹ

ಬೆಂಗಳೂರು, ೧೦.೦೯.೨೦೦೬: 'ಬಿ. ಆರ್. ಲಕ್ಷ್ಮಣರಾವ್‍ಗೆ ೬೦ ತುಂಬಿದ ಪ್ರಯುಕ್ತ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ' -ಎಂಬ ಸಾಲುಗಳನ್ನು ವಿಜಯ ಕರ್ನಾಟಕದಲ್ಲಿ ಓದುತ್ತಿದ್ದಂತೆ ಹೌಹಾರಿಬಿಟ್ಟೆ. ನಮ್ಮ ತುಂಟಕವಿ ಬಿ.ಆರ್.ಎಲ್. ಗೆ ಅರವತ್ತು ವರ್ಷ ವಯಸ್ಸಾಯಿತೇ? Impossible ! ಅದು ಹೇಗೆ ಸಾಧ್ಯ? ನನ್ನ ಅನುಮಾನವನ್ನು ಬಗೆಹರಿಸುವಂತೆ, ನಿಜವಾಗಿಯೂ ಅರವತ್ತಾಗಿದೆ ಎನ್ನುವಂತೆ ಸಾಪ್ತಾಹಿಕದಲ್ಲಿ ಜಯಂತ ಕಾಯ್ಕಿಣಿ ಬಿ.ಆರ್.ಎಲ್. ಕುರಿತು ಬರೆದ ಲೇಖನವೊಂದಿತ್ತು. ಅಭಿನಂದನಾ ಕಾರ್ಯಕ್ರಮಕ್ಕೆ ಬರಲಿರುವವರ list ನೋಡಿದೆ. ಈ ಕಾರ್ಯಕ್ರಮವನ್ನು ನಾನು attend ಮಾಡಲೇಬೇಕು ಅನ್ನಿಸಿತು. Movie ಗೆ ಹೋಗೋಣ ಎಂದು ಗೆಳೆಯರ ಜೊತೆ ಮಾತಾಡಿಕೊಂಡಿದ್ದವನು, ಅದನ್ನೆಲ್ಲಾ cancel ಮಾಡಿ, ಮಧ್ಯಾಹ್ನ ಮೂರರ ಹೊತ್ತಿಗೆ ಸೀದಾ ಕಲಾಕ್ಷೇತ್ರಕ್ಕೆ ನಡೆದೆ.

ಕಾರ್ಯಕ್ರಮವನ್ನು ಮೂರು ಚರಣಗಳಲ್ಲಿ ಆಯೋಜಿಸಿದ್ದರು. ಮೊದಲನೇ ಚರಣದಲ್ಲಿ ಬಿ.ಆರ್.ಎಲ್. ಬರಹಗಳ ಬಗ್ಗೆ ಗೋಷ್ಠಿ, ಎರಡನೇ ಚರಣದಲ್ಲಿ ಬಿ.ಆರ್.ಎಲ್.ರ ಹನಿಗವನಗಳ ಸಂಕಲನ, ಸಿಡಿ ಮತ್ತು mp3 ಬಿಡುಗಡೆ, ಮತ್ತು ಮೂರನೇ ಚರಣದಲ್ಲಿ ಲಕ್ಷ್ಮಣರಾಯರಿಗೆ ಅಭಿನಂದನೆ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ.

ಮೊದಲನೇ ಚರಣದಲ್ಲಿ ಭಾಗವಹಿಸಿದ್ದವರು ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ ಮತ್ತು ಎನ್.ಎಸ್. ರಂಗನಾಥ ರಾವ್. ನರಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಲಕ್ಷ್ಮೀನಾರಾಯಣ ಭಟ್ಟರು ಬಿ.ಆರ್.ಎಲ್. ರವರ ಜೊತಿಗಿನ ತಮ್ಮ ಅವಿನಾಭಾವ ಸಂಬಂಧದ ಕುರಿತು ಹೇಳಿದರು. 'ಗೋಪಿ'ಗೆ 'ಕಡಿವಾಣ' ಹಾಕಲು ಅವರ ಮನೆಯವರು ಕೇಳಿಕೊಂಡಾಗ ಅವರಿಗೆ ಹೆಣ್ಣು ಹುಡುಕಿಕೊಟ್ಟವರು (ಸುಬ್ಬಾಭಟ್ಟರ ಮಗಳು!) ತಾವೇ ಎಂಬ ಸತ್ಯವನ್ನು ಬಹಿರಂಗಗೊಳಿಸಿದರು. ನಂತರ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಬಿ.ಆರ್.ಎಲ್. ರ ಕಾವ್ಯದ ಬಗ್ಗೆ ಪಕ್ಷಿನೋಟ ಬೀರಿದರು. ತದನಂತರ ರಂಗನಾಥರಾವ್, ಬಿ.ಆರ್.ಎಲ್. ರ ಗದ್ಯದ ಕುರಿತು ಮಾತನಾಡಿದರು.

ಎರಡನೇ ಚರಣದಲ್ಲಿ, ಕವಿ-ಕತೆಗಾರ್ತಿ ಎಂ.ಆರ್. ಕಮಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಆರ್.ಎಲ್. ರ ಹನಿಗವನಗಳ ಸಂಕಲನವನ್ನು ಬಿಡುಗಡೆ ಮಾಡಿದ ಚುಟುಕು ರತ್ನ ದುಂಡೀರಾಜ್, ಆ ಪುಸ್ತಕದಲ್ಲಿನ ಕೆಲ ಹನಿಗವಿತೆಗಳನ್ನು ಓದಿ ಹೇಳಿದರು. ಗಾಯಕ ಶಿವಮೊಗ್ಗ ಸುಬ್ಬಣ್ಣ ಭಾವಗೀತೆಗಳ ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿ, ಸಿಡಿಯಲ್ಲಿರುವ ಗೀತೆಗಳನ್ನು ಪರಿಚಯಿಸಿದರು. 'ಹೇಳಿ ಹೋಗು ಕಾರಣ' mp3 ಬಿಡುಗಡೆ ಮಾಡಿದ ಮುದ್ದುಕೃಷ್ಣ ಅದರಲ್ಲಿರುವ ಹಾಡುಗಳ ಬಗ್ಗೆ ಹೇಳಿದರು.

ಚಹಾ ವಿರಾಮದ ನಂತರ ಶುರುವಾದ ಸಮಾರಂಭದ ಮೂರನೇ ಚರಣದಲ್ಲಿ ವೇದಿಕೆ ಮತ್ತಷ್ಟು ಗಣ್ಯ ವ್ಯಕ್ತಿಗಳಿಂದ ತುಂಬಿತ್ತು. ಅಭಿನಂದನಾ ಸಮಾರಂಭ ಸಮಿತಿಯ ಗೌರವಾಧ್ಯಕ್ಷತೆಯನ್ನು ವಹಿಸಿದ್ದ ಜಿ.ಎಸ್. ಶಿವರುದ್ರಪ್ಪ, ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಯು.ಆರ್. ಅನಂತಮೂರ್ತಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿ ಬೆಳಗೆರೆ, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮತ್ತಿತರ ನಡುವೆ ಬಿ.ಆರ್.ಎಲ್. ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ ದೃಶ್ಯ ತುಂಬಾ ಚೆನ್ನಾಗಿತ್ತು. ಅಭಿನಂದನಾ ಗ್ರಂಥ 'ಚಿಂತಾಮಣಿ'ಯನ್ನು ಲೋಕಾರ್ಪಣ ಮಾಡಲಾಯಿತು. ಎಚ್ಚೆಸ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ತಮ್ಮ ಮತ್ತು ಲಕ್ಷ್ಮಣರಾಯರ ಸ್ನೇಹ ಸಂಬಂಧವನ್ನು ವಿವರಿಸಿದರು. ಕಾರ್ಯಕ್ರಮದುದ್ದಕ್ಕೂ ಸಿಕ್ಕ ಸಿಕ್ಕ ಕಾಗದಿಂದ ಗಾಳಿ ಬೀಸಿಕೊಳ್ಳುತ್ತ ಕುಳಿತಿದ್ದ ರವಿ ಬೆಳಗೆರೆ ತಮ್ಮ ಆಕರ್ಷಕ ಮಾತಿನಿಂದ ಚಪ್ಪಾಳೆ ಗಿಟ್ಟಿಸಿದರು. ಲಕ್ಷ್ಮಣರಾಯರ ಅನೇಕ ಭಾವಗೀತೆಗಳಿಗೆ ರಾಗ ಸಂಯೋಜಿಸಿ, ಹಾಡಿದ ಸಿ.ಅಶ್ವತ್ಥ್, ಬಿ.ಆರ್.ಎಲ್.ರ ಕಾವ್ಯ ತಮ್ಮನ್ನು ಸೆಳೆದಿದ್ದರ ಬಗ್ಗೆ ಹೇಳಿದರು. ಜಿ.ಎಸ್.ಎಸ್. ಅಭಿನಂದನಾ ಗ್ರಂಥದಲ್ಲಿರುವ ಹೂರಣವನ್ನು ಪ್ರೇಕ್ಷಕರಿಗೆ ಹಂಚಿದರು. ಯು.ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಿ.ಆರ್.ಎಲ್. ರ ಮಹತ್ವವನ್ನು ಕೊಂಡಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಂಟಕವಿ ಬಿ.ಆರ್.ಎಲ್., ತಮ್ಮ ಕಾವ್ಯರಚನೆಗೆ ಸ್ಪೂರ್ತಿಯಾದ, ನೆರವಾದ ಅನೇಕರನ್ನು ಈ ಸಂದರ್ಭದಲ್ಲಿ ನೆನೆದರು.

'ಕನ್ನಡವೇ ಸತ್ಯ' ಖ್ಯಾತಿಯ ಪ್ರಭಾಕರ್ ರಾವ್ ಸಹಕಾರದಲ್ಲಿ ಉಪಾಸನಾ ಮೋಹನ್ ಆಯೋಜಿಸಿದ್ದ ಈ ಕಾರ್ಯಕ್ರಮ ನಿಜಕ್ಕೂ ಚೆನ್ನಾಗಿತ್ತು, ಮನ ಮುಟ್ಟುವಂತಿತ್ತು. ಕೊಟ್ಟ ಕಾಫಿ ತುಂಬಾ ಬಿಸಿಯಿತ್ತು. ಎನ್.ಎಸ್. ರಂಗನಾಥರಾವ್ ಲಕ್ಷ್ಮಣರಾಯರ ಗದ್ಯದ ಕುರಿತು ಮಾತನಾಡುವಾಗ, ಜನಕ್ಕೆ ಅವರ ಗದ್ಯದ ಬಗ್ಗೆ ಹೆಚ್ಚು ಪರಿಚಯವಿಲ್ಲದ್ದರಿಂದ ಪ್ರೇಕ್ಷಕರು ಮಧ್ಯದಲ್ಲೇ ಚಪ್ಪಾಳೆ ಹೊಡೆದರು (ಆದರೂ ಅವರು ಮಾತು ನಿಲ್ಲಿಸಲಿಲ್ಲ!) -ಇಂಥ ಕೆಲವೊಂದು ಅಪಸವ್ಯಗಳು ಸಂಭವಿಸಿದ್ದು ಬಿಟ್ಟರೆ ಇಡೀ ಸಮಾರಂಭದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರ್‍ಏಕ್ಷಕರು ಭಾವನೆಗಳಲ್ಲಿ, ಖುಷಿಯಲ್ಲಿ, ನಗೆಗಡಲಿನಲ್ಲಿ ತೇಲುತ್ತಿದ್ದರು. ಸಮಾರಂಭದ ಪ್ರಯುಕ್ತ ಖ್ಯಾತ ಗಾಯಕರಿಂದ ಬಿ.ಆರ್.ಎಲ್. ರಚನೆಯ ಭಾವಗೀತೆಗಳ ಗಾಯನವೂ ಇತ್ತು.

ಹೊರಗೆ discount ನಲ್ಲಿ ಪುಸ್ತಕಗಳ ಮಾರಾಟ ಇತ್ತು. ನಾನು 'ಸುಬ್ಬಾಭಟ್ಟರ ಮಗಳೇ' ಪುಸ್ತಕ (ಬಿ.ಆರ್.ಎಲ್. ಇದುವರೆಗಿನ ಭಾವಗೀತೆಗಳ ಸಂಕಲನ) ಮತ್ತು 'ಹೇಳಿ ಹೋಗು ಕಾರಣ' mp3 ಕೊಂಡುಕೊಂಡೆ. ಪುಸ್ತಕದ ಮೇಲೆ ಲಕ್ಷ್ಮಣರಾಯರ ಹಸ್ತಾಕ್ಷರ ಪಡೆಯಲು ಹೆಣಗಿದೆನಾದರೂ ಕೊನೆಗೂ ಸಾಧ್ಯವಾಗಲಿಲ್ಲ. ಆ ನಿರಾಶೆ ದೂರಾದದ್ದು ರೂಮಿಗೆ ಮರಳಿ ರಾತ್ರಿಯಿಡೀ ಕುಳಿತು 'ಹೇಳಿ ಹೋಗು ಕಾರಣ' ಸಿಡಿಯಲ್ಲಿದ್ದ ಹಾಡುಗಳನ್ನು ಕೇಳಿಸಿಕೊಂಡಾಗಲೇ.

Thanx to BRL for all that...