ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

 


ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ ಜೊತೆಗೆ ತೀರ ಸಲುಗೆಯಿಂದ ವರ್ತಿಸುವ ಮಕ್ಕಳೂ ಇರಬಹುದು. ಅದೇ ತರಹ, ತೀರ ಸಲುಗೆಯ ಮಾತಾ ಪಿತರ ಜೊತೆಗೆ  ಗಂಭೀರವಾಗಿ ನಡೆದು ಕೊಳ್ಳುವ ಮಕ್ಕಳೂ ಕಂಡು ಬರಬಹುದು. ಮಕ್ಕಳು ಯಾವ ವಿಷಯಗಳ ಪ್ರಸ್ತಾಪವನ್ನು ತಮ್ಮ  ತಂದೆ ತಾಯಿಯರ ಮುಂದಿಡುತ್ತಾರೋ ಆ ವಿಷಯಗಳ ಗಾಂಭೀರ್ಯತೆಗೆ ಅನುಗುಣವಾಗಿ ತಮ್ಮ ಪ್ರಸ್ತಾಪದಲ್ಲೂ ಗಾಂಭೀರ್ಯತೆಯನ್ನು ತುಂಬಿಕೊಳ್ಳುತ್ತಾರೆ.


ನಾನು ಚಿಕ್ಕವನಿದ್ದಾಗ, ನನ್ನ ಅಕ್ಕ ಮತ್ತು ಅಣ್ಣಂದಿರು ತಮ್ಮ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನನ್ನನ್ನು ಬಳಸಿಕೊಳ್ಳುತ್ತಿದ್ದರು. ನಾನು ಅವರಿವರ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡುವಾಗ ಯಾವ ಭಯವೂ ಇರುತ್ತಿರಲಿಲ್ಲ. ಅಪ್ಪಯ್ಯನವರ ಆ ಹೊತ್ತಿನ ಮನೋಸ್ಥಿತಿಗನುಗುಣವಾಗಿ ಹತ್ತು ಹಲವು ಬಾರಿ ಬೈಸಿಕೊಂಡದ್ದೂ ಇದೆ. ಹಾಗೆ ಬೈಸಿಕೊಂಡಾಗ ನಾನು ನೊಂದುಕೊಳ್ಳುತ್ತಿರಲಿಲ್ಲ. ಏಕೆಂದರೆ, ಆ ಬೇಡಿಕೆಗಳು ತಿರಸ್ಕೃತವಾದರೆ ನನಗೇನೂ ತೊಂದರೆ ಇರುತ್ತಿರಲಿಲ್ಲ. ಆದರೆ ನನ್ನದೇ ವೈಯಕ್ತಿಕ ಬೇಡಿಕೆಗಳನ್ನು ಅಪ್ಪಯ್ಯನವರ ಮುಂದಿಡಲು ನಾನು ಭಯ ಪಡುತ್ತಿದ್ದೆ. ಸ್ವರವೇ ಬರುತ್ತಿರಲಿಲ್ಲ. ಅಂಜುತ್ತಾ ಅಂಜುತ್ತಾ ಹೇಳುವಾಗ ಮೈಬೆವರಿಸಿಕೊಳ್ಳುತ್ತಿದ್ದೆ. 


ಬಾಲ್ಯದಲ್ಲಿನ ನನ್ನ ಈ ತೆರನಾದ ಅನುಭವಗಳಿಂದಾಗಿ, ನಾನು ನನ್ನ ಮಗಳು ಸ್ಮಿತಾಳನ್ನು ಚಿಕ್ಕಂದಿನಿಂದಲೇ ವಿಭಿನ್ನವಾಗಿ ಬೆಳೆಸುವ ಪ್ರಯತ್ನ ಮಾಡಿದೆ. ಒಂದನೇ ತರಗತಿಯಿಂದಲೇ, ಆಕೆಗೆ ಆಕೆಯಿಂದಲೇ ತಯಾರಿಸಲ್ಪಟ್ಟ, ಆಕೆಯದೇ ಆದ ದಿನಚರಿಯ ವೇಳಾಪಟ್ಟಿ ಇರುತ್ತಿತ್ತು. ಅದರಲ್ಲಿ ಊಟ, ತಿಂಡಿ, ದೂರದರ್ಶನ ವೀಕ್ಷಣೆ, ನಿದ್ದೆ, ಸ್ನಾನ, ಹೀಗೆ ಎಲ್ಲದಕ್ಕೂ ನಿರ್ದಿಷ್ಟ ಸಮಯ ಇರುತ್ತಿತ್ತು. ಶಾಲಾದಿನಗಳಿಗೊಂದು. ರಜಾದಿನಗಳಿಗೊಂದು. ಆಕೆ ದೂರದರ್ಶನ ವೀಕ್ಷಿಸುತ್ತಿದ್ದರೆ ಆಕೆಯ ವೇಳಾಪಟ್ಟಿಯಲ್ಲಿ ಅದು ಇದೆ ಎಂದು ನಂಬಿರುತ್ತಿದ್ದೆ. ಆ ನಂಬಿಕೆಯೊಂದಿಗೇ ಆಕೆಯನ್ನು ಬೆಳೆಸಿದೆ. ಆಕೆಗೆ ನಾನೆಂದೂ ಭಾಷಣ, ಪ್ರಬಂಧ ಬರೆದುಕೊಟ್ಟುದಿಲ್ಲ, ಚಿತ್ರ ಬಿಡಿಸಿಕೊಟ್ಟುದಿಲ್ಲ. ಆಕೆಯಿಂದಲೇ ಬರೆಸುತ್ತಿದ್ದೆ. ಆಮೇಲೆ ಅದನ್ನು ನಾನು ೯೯ ಪ್ರತಿಶತ ಬದಲಾಯಿಸಿದ್ದಿರಲೂ ಬಹುದು. ಆದರೆ ಆಕೆಗೆ ಅದು ಆಕೆ ಬರೆದದ್ದು ಎನ್ನುವ ಭಾವನೆ ಹುಟ್ಟಿಸಿ ಆಕೆಯಲ್ಲಿ ಸ್ವಾಭಿಮಾನ ಹುಟ್ಟಿಸುವುದಕ್ಕೆ ಸದಾ ಸಹಕರಿಸಿದ್ದೆ. ಆ ಸ್ವಾಭಿಮಾನದಿಂದಾಗಿ,  ಆಕೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು, ಮನೆಗೆ ಹೊತ್ತು ತರುತ್ತಿದ್ದ ಬಹುಮಾನಗಳು, ಪ್ರಮಾಣ ಪತ್ರಗಳು, ಈಗ ಇಲ್ಲಿ ನಮ್ಮ ಕಣ್ಮನ ತುಂಬುತ್ತಿರುತ್ತವೆ.  ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿರುವ ಭಾರತೀಯ ವಾಯುಸೇನೆಯ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಆಕೆ ಎರಡು ಬಾರಿ ಸೋನಿ ದೂರದರ್ಶನದ "ಬೋರ್ನ್‍ವಿಟಾ ಕ್ವಿಜ್  ಕಂಟೆಸ್ಟ್" ನಲ್ಲಿ ಭಾಗವಹಿದ್ದಳು. ಅದಕ್ಕಾಗಿ ಡೆಹ್ರಾಡೂನ್ ಮತ್ತು ಕಲ್ಕತ್ತಾ ನಗರಗಳಿಗೆ ಪಯಣ ಮಾಡಿದ್ದಳು ಕೂಡ.


ಈ ಭಯದ ಮಾತಿನ ಬಗ್ಗೆ ಹೇಳಬೇಕೆಂದರೆ, ಆಕೆಗೆ ನಾನು ಚಿಕ್ಕಂದಿನಲ್ಲೇ ಹೇಳಿದ್ದೆ. ಆಕೆ ಯಾವುದೇ ಬೇಡಿಕೆಗಳನ್ನು ನನ್ನ ಮುಂದಿಡುವಾಗಲೂ ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ನಿನ್ನ ಬೇಡಿಕೆಗಳನ್ನು ನಾನು ಪೂರೈಸಲು ಶಕ್ತನೆಂದಾದರೆ ಅವುಗಳನ್ನು ಪೂರೈಸಿಯೇ ತೀರುತ್ತೇನೆ. ಇಲ್ಲವಾದರೆ ಇಲ್ಲ. ಆದರೆ ನೀನು ಮುಂದಿಡುವ ಯಾವುದೇ ಬೇಡಿಕೆಗಳಿಗೆ ನಿನಗೆ ಬೈಗುಳ ದೊರೆಯದು. ಅದು ಹಾಗೇಯೇ ನಡೆದುಕೊಂಡು ಬಂದಿತ್ತು ಕೂಡಾ. ಆಕೆಯ ಅಮ್ಮನಿಂದ ತಿರಸ್ಕೃತವಾದ ಬೇಡಿಕೆಗಳನ್ನೂ, ನನ್ನ ಮುಂದಿಟ್ಟು ಪೂರೈಸಿಕೊಂಡದ್ದೂ ಇದೆ. ಆಕೆಗೆ ನನ್ನೊಂದಿಗೆ ಪ್ರೀತಿಭರಿತ ತೀರ ಸಲುಗೆ ಕೂಡ ಇದೆ.


ಇಷ್ಟೆಲ್ಲಾ ಇದ್ದರೂ, ಆಕೆಯ ಮನದ ಒಂದು ಮೂಲೆಯಲ್ಲಿ ನನ್ನ ಬಗ್ಗೆ ಒಂದು ಭಯ ಇದೆ ಎನ್ನುವ ಅರಿವು ನನಗೆ ಹಲವು ಬಾರಿ ಆಗಿದೆ. ತೀರ ಇತ್ತೀಚೆಗಿನ ಉದಾಹರಣೆಯೊಂದು ಈ ಬರಹಕ್ಕೆ ಕಾರಣವಾಯ್ತು.


ಸದ್ಯ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಆಕೆ  ವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ ಉಳಿದುಕೊಂಡಿರುತ್ತಾಳೆ. ಬಕ್ರೀದ್ ಪ್ರಯುಕ್ತ ೨೮ ನವಂಬರ್ ೨೦೦೯ರ ಶನಿವಾರದ ರಜೆ ಮತ್ತು ಭಾನುವಾರದ ರಜೆ ಸೇರಿ ಎರಡು ದಿನಗಳ ರಜೆ ಒಟ್ಟಿಗೇ ಸಿಕ್ಕಿತ್ತಾದ್ದರಿಂದ, ಶುಕ್ರವಾರದಂದು ಮಂಗಳೂರಿನಿಂದ ನಮ್ಮೂರು ಉಡುಪಿಗೆ ಹೋಗುವ ಬಗ್ಗೆ ನಮ್ಮ ಅನುಮತಿಯನ್ನು ಮೊದಲೇ ಪಡೆದುಕೊಂಡು ಹೊರಟು ಬಿಟ್ಟಿದ್ದಳು.


ಆಕೆಯ ಮಂಗಳೂರಿನಿಂದ ಉಡುಪಿ ತನಕದ ಒಂದೂವರೆ ಘಂಟೆಗಳ ಪ್ರಯಾಣದ ಅವಧಿಯಲ್ಲಿ ಎರಡು ಮೂರು ಬಾರಿ ದೂರವಾಣಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಲೇ ಇದ್ದ ನನಗೆ, ಆಕೆ, ತನ್ನ ಸೋಮವಾರದ ಮೊದಲನೇ ಪಾಠ ಎಂಟು ಘಂಟೆಗೆ ಆರಂಭ ಆಗುತ್ತಿದೆಯಾದ್ದರಿಂದ ತಾನು ಭಾನುವಾರ ಸಂಜೆಯೇ ಮಂಗಳೂರಿಗೆ ವಾಪಸು ಬರಬೇಕಾಗಿದೆ ಎಂದು ತಿಳಿಸಿದ್ದಳು. ನಾನೂ ಕೂಡ, ಮುಂಜಾನೆ ಐದೂವರೆ ಆರು ಘಂಟೆಯ ಒಳಗೆಲ್ಲಾ ಪ್ರಯಾಣ ಮಾಡೊದು ಬೇಡ ಭಾನುವಾರವೇ ಹಿಂದಿರುಗಿ ಬಿಡು ಅಂದಿದ್ದೆ.


ಆದರೆ, ಆಕೆ ತನ್ನ ತಾಯಿಯಲ್ಲಿ ಬೇರೆಯೇ ಬೇಡಿಕೆಯನ್ನು, ನನ್ನ ಒಪ್ಪಿಗೆಗಾಗಿ ಮುಂದಿಟ್ಟಿದ್ದಳು ಎನ್ನುವ ವಿಚಾರ ನಾನು ಶುಕ್ರವಾರ ಕಚೇರಿಯ ಕೆಲಸ ಮುಗಿಸಿ ಮನೆಗೆ ತೆರಳಿದಾಗಲೇ ನನ್ನ ಗಮನಕ್ಕೆ ಬಂದದ್ದು. ಸೋಮವಾರದಂದು ಎಂಟು ಘಂಟೆಯ ಮೊದಲ ಪಾಠಕ್ಕೆ ಹೆಚ್ಚಿನೆಲ್ಲಾ ವಿದ್ಯಾರ್ಥಿಗಳು ಗೈರುಹಾಜರಾಗುವ ಸಾಧ್ಯತೆ ಇದೆಯಾದ್ದರಿಂದ, ತಾನೂ ಕೂಡ, ಸೋಮವಾರ ಮುಂಜಾನೆಯೇ ಉಡುಪಿಯಿಂದ ಹೊರಡುತ್ತೇನೆ ಹಾಗೂ ಒಂಭತ್ತು ಘಂಟೆಯ ಪಾಠಕ್ಕೆ ಹಾಜರಾಗುತ್ತೇನೆ. ಇದಕ್ಕೆ ಅಪ್ಪನವರ ಒಪ್ಪಿಗೆ ಪಡೆದು ತಿಳಿಸಿ ಅಂದಿದ್ದಳಂತೆ.


ಯಾವನೇ ಒಬ್ಬ ತಂದೆಗೆ ಇಂತಹ ಮಾತುಗಳು ಕಿವಿಗೆ ಬಿದ್ದಾಗ, ಕೋಪ ಬರುವ ಸಾಧ್ಯತೆ ಇರಬಹುದೇನೋ. ಕೋಪಿಸಿಕೊಂಡವನು "ಬೇಡ... ಆಕೆ ಎಂಟು ಘಂಟೆಯ ಪಾಠಕ್ಕೆ ಹಾಜರಾಗಲೇ ಬೇಕು" ಅನ್ನಬಹುದು. ಕೋಪಿಸಿಕೊಳ್ಳದವನು, "ಇರಲಿ ಬಿಡು ಆಕೆಗೆ ಇಷ್ಟ ಬಂದ ಹಾಗೆ ಮಾಡಲಿ.." ಅನ್ನಬಹುದು.


ನನಗೆ ಕೋಪವೂ ಬರಲಿಲ್ಲ. ಸುಮ್ಮನಿದ್ದು ಬಿಡುವಂತೆಯೂ ಇರಲಿಲ್ಲ. ಆದರೆ ಮನಸ್ಸಿಗೆ ಸ್ವಲ್ಪ ಬೇಸರ ಆಯ್ತು. ಜೊತೆಗೆ ಮನದಲ್ಲಿ ಪ್ರಶ್ನೆಗಳು ಎದ್ದವು. ಆಕೆಯೊಂದಿಗೆ ಮಾತಾಡಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಬೇಕೆಂದಿದ್ದೆ.


ಅಂದು ರಾತ್ರಿ ಆಕೆಗೆ ಕರೆ ಮಾಡಿದಾಗ ಆಕೆ ಮತ್ತು ನನ್ನ ನಡುವೆ ನಡೆದ ಸಂಭಾಷಣೆ ಹೀಗಿತ್ತು:


ನಾನು: "ಸಿಮಿ, ನೀನು ಈ ವಿಚಾರವನ್ನು ನನ್ನಲ್ಲಿ ಹೇಳದೇ, ಅಮ್ಮನ ಮುಖಾಂತರ ಹೇಳಿಸಿದ್ದು ಯಾಕೆ?"


ಸಿಮಿ: "ಅಪ್ಪಾ...ನೀವು ಬೈತೀರಿ ಅನ್ನೋ ಭಯ ನನಗೆ"


ನಾನು: "ನಾನು ನಿನಗೆ ಸುಮ್ಮ ಸುಮ್ಮನೇ ಬೈಯೋದಿದೆಯೇ?"


ಸಿಮಿ: "ಇಲ್ಲ"


ನಾನು: "ಮತ್ಯಾಕೆ ಈ ಭಯ?"


ಸಿಮಿ: ಮೌನ.


ನಾನು: "ನಾನು ನಿನ್ನನ್ನು ಮಂಗಳೂರಿನಲ್ಲಿ ಬಿಟ್ಟು ಬರುವಾಗಲೇ ತಿಳಿಸಿದ್ದೆ. ನಿನ್ನ ವಿದ್ಯಾಭ್ಯಾಸದ ಬಗ್ಗೆ ನಿನಗೆ ನೀನೇ ತೀರ್ಪುಗಾರ್ತಿ. ಯಾವ ಪಾಠಕ್ಕೆ ಹಾಜರಾಗಬೇಕು, ಯಾವುದಕ್ಕೆ ಹಾಜರಾಗಬೇಕಿಲ್ಲ ಅನ್ನುವುದು ನಿನಗೆ ಬಿಟ್ಟ ವಿಚಾರ. ನಾವ್ಯಾರೂ ನಿನ್ನನ್ನು ಯಾವುದೇ ಕಾರಣಕ್ಕೂ ರಜೆ ಹಾಕು ಅನ್ನುವಂತಿಲ್ಲ. ಅಲ್ಲದೆ ನಿನಗೆ ಬೇಡವೆಂದೆನಿಸಿದಾಗ ಹೋಗು ಅನ್ನುವಂತೆಯೂ ಇಲ್ಲ. ನಿನ್ನ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮಾತ್ರ ನಮಗೆ. ಓದು, ಪರೀಕ್ಷೆ, ಫಲಿತಾಂಶ, ಪದವಿ, ಇವೆಲ್ಲದರ ಜವಾಬ್ದಾರಿ ನಿನ್ನದು ಅಂತ ಆಗಲೇ ಹೇಳಿದ್ದೆ. ಇಂದೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಅಲ್ಲಿನ ವಸ್ತುಸ್ಥಿತಿಯ ಅರಿವು ನಮಗೆ ಇರುವುದಿಲ್ಲ. ನನಗೆ ನನ್ನ ಮೇಲಿರುವ ನಂಬಿಕೆಗಿಂತಲೂ ಜಾಸ್ತಿಯಾದ ನಂಬಿಕೆ ನಿನ್ನ ಮೇಲೆ ಇದೆ. ಹಾಗಾಗಿ, ನಿನ್ನ ಯಾವುದೇ ನಿರ್ಣಯದ ಬಗ್ಗೆ ನನ್ನ ಅಭ್ಯಂತರ ಇರದು. ಆದರೆ, ನಿನಗೆ ಮಾರ್ಗದರ್ಶನ ಬೇಕೆಂದು ನೀನು ಕೇಳಿದಾಗ ಮಾರ್ಗದರ್ಶನ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಅದಲ್ಲದೆ, ಅನಾವಶ್ಯಕ ನಿನ್ನ ದಿನಚರಿಯಲ್ಲಿ ಮೂಗು ತೂರಿಸಲಾರೆ. ಅಲ್ಲದೆ ನೀನು ವಿದ್ಯಾಭ್ಯಾಸದ ಹಾದಿಯಿಂದ ವಿಚಲಿತಳಾಗಿದ್ದಿ ಎನ್ನುವುದು ನನ್ನ  ಅರಿವಿಗೆ ಬಂದರೆ ಮಾತ್ರ, ನಾನು ನನ್ನ ವಿಚಾರಗಳನ್ನು ನಿನ್ನ ಮೇಲೆ ಹೇರಿ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇನೆ, ಅಷ್ಟೇ. ನಿನ್ನ ಅಪ್ಪ ನಾನು, ಹೊಲಗದ್ದೆಗಳಲ್ಲಿ ನಿಲ್ಲಿಸಿಡುವ ಬೆದರುಬೊಂಬೆ ಅಲ್ಲ ನಾನು. ನೀನು ಭಯ ಪಡುವ ಅವಶ್ಯಕತೆಯೇ ಇಲ್ಲ. ನಿನ್ನ ಬೇಡಿಕೆಯನ್ನು ನನ್ನ ಮುಂದಿಡು. ನನಗೊಪ್ಪಿಗೆಯಾದರೆ ಒಪ್ಪಿಗೆ. ಇಲ್ಲಾಂದ್ರೆ ಒಪ್ಪೋಲ್ಲ, ಅಷ್ಟೇ. ನೀನು ಸೋಮವಾರದ ಎಂಟು ಘಂಟೆಯ ಪಾಠಕ್ಕೆ ಹಾಜರಾಗದಿರುವ  ಬಗ್ಗೆ ನನ್ನ ಅಭ್ಯಂತರ ಇಲ್ಲ. ನೀನು ಸೋಮವಾರ ಮುಂಜಾನೆಯೇ ವಿದ್ಯಾಲಯಕ್ಕೆ ಹಿಂದಿರುಗಬಹುದು.


ನೀನು ಅಂದು  "ಟೀನೇಜರ್" ಎಂಬ ಹಣೆ ಪಟ್ಟಿ ಹೊತ್ತುಕೊಂಡ ನಿನ್ನ ಹದಿಮೂರನೇ ಜನ್ಮದಿನದಂದು ನಾನು ಬರೆದ ಪತ್ರದಲ್ಲಿ ಹೀಗೆ ಬರೆದಿದ್ದೆ ಗೊತ್ತೆ. - ಇಂದಿನಿಂದ ನೀನು ಸರ್ವ ರೀತಿಯಲ್ಲೂ ಸ್ವತಂತ್ರಳು. ನಾವಿಬ್ಬರೂ ಸ್ನೇಹಿತರಂತೆ ಇರಬೇಕು. ನಿನ್ನ ಸ್ವಾತಂತ್ರ್ಯದ ಪರಿಧಿಯಲ್ಲಿ ಸದಾ ನಾನಿರುತ್ತೇನೆ ಅಷ್ಟೇ. ಆದರೆ ನಿನಗೆ ಯಾವುದೇ ಭಯ ಇರಬಾರದು. ನೀನು ಯಾವುದೇ ಕೆಲಸ ಮಾಡುವಾಗಲೂ ನೀನು ಯಾರು ಮತ್ತು ಯಾರ ಮಗಳು ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ಮಾಡು. ಅಷ್ಟು ಸಾಕು -  ನಿನಗದರ ನೆನಪಿದೆಯೇ?" ಅಂದೆ.


ಸಿಮಿ: "ಹೌದು ಅಪ್ಪ, ನನಗೆ ಅದಿನ್ನೂ ನೆನಪಿದೆ. ಅಲ್ಲದೆ...ಇನ್ನು ಮುಂದೆ ನಾನು ಹಾಗೇಯೇ ಮಾಡುತ್ತೇನೆ...ಆದರೂ ಒಮ್ಮೊಮ್ಮೆ ನೀವು ಬೈತೀರೇನೊ ಅನ್ನುವ ಭಯ ಇರುತ್ತದೆ ನನಗೆ ಅಷ್ಟೆ..." ಅಂದು ನಕ್ಕಳು.


ನನ್ನ ಮಗಳು ಹಾಗೆ ನಡೆದುಕೊಂಡಾಗ ನನ್ನಲ್ಲೇನೋ ಕೊರತೆ ಇದೆಯೇನೋ,  ನಾನು ಬೆದರು ಬೊಂಬೆ ಆಗಿ ಬಿಟ್ಟಿದ್ದೆನೇನೋ ಅನ್ನುವ ಅನುಮಾನ  ಮೂಡುತ್ತದೆ.


ಈ ಮಕ್ಕಳು ಯಾಕೆ ಹೀಗೆ? ಮಕ್ಕಳಲ್ಲಿ ಈ ರೀತಿಯ ಭಯ ಯಾಕೆ ಇರುತ್ತದೆ. ಅಪ್ಪನಿಗಿಂತಲೂ ಹೆಚ್ಚಾಗಿ ಅಮ್ಮನಿಂದಲೇ ಬೈಸಿಕೊಂಡಿರುವ ಮಕ್ಕಳೂ ಅಪ್ಪನೆಂದರೆ ಭಯ ಪಡುವುದೇಕೆ? ಅಪ್ಪಂದಿರು ಎಷ್ಟು ಸಲುಗೆಯಿಂದ ಇದ್ದರೂ ಅವರ ಮನದೊಳಗೆ ಅಪ್ಪ ಬೈತಾರೇನೋ ಅನ್ನುವ ಭಯ ಯಾಕೆ? ಅಮ್ಮನನ್ನು ಚಾಣಾಕ್ಷತನದಿಂದ ಒಪ್ಪಿಸಿಕೊಳ್ಳುವ ಮಕ್ಕಳಲ್ಲಿ ಅಪ್ಪಂದಿರನ್ನು ಒಪ್ಪಿಸಲು ಹಿಂಜರಿತ ಏಕೆ? ಅವರೊಳಗಿನ ಈ ಭಯ ಸಹಜವೇ ಮತ್ತು ಸೂಕ್ತವೇ?


- ಆತ್ರಾಡಿ ಸುರೇಶ್ ಹೆಗ್ಡೆ.

Rating
No votes yet

Comments