ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. 2

ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. 2

ಸಾವು ೪:  ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ.  ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ.  ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು.  ಜೊತೆಗಾರ ಅರುಣ ಮತ್ತು ಗೋವಿಂದನ ನಡುವೆ ಅವಳಿಗೆ ಲೈನು ಹೊಡೆಯುವ ವಿಪರೀತ ಸ್ಪರ್ಧೆ ತರಗತಿಯ ಎಲ್ಲರಿಗೂ ಖುಷಿ ಕೊಡುತ್ತಿತ್ತು.  ಆದರೆ ಇವರ್ಯಾರ ಪುಂಗಿಗಳಿಗೂ ತಲೆ ಕೆಡಿಸಿಕೊಳ್ಳದೆ, ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುತ್ತಾ, ತನ್ನ ಸ್ನಿಗ್ಧ ನಗುವಿನಿಂದ ತನ್ನದೇ ಆದ ಛಾಪನ್ನು ಒತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಅವಳದ್ದು. ಒಂದು ದಿನ, ಪದವಿಯ ಅಂತಿಮ ವರ್ಷದಲ್ಲಿದ್ದಾಗ ಬರ ಸಿಡಿಲಿನಂತೆ ಬಡಿದ ಸುದ್ಧಿ, ಈ ಕೃಷ್ಣ ಸುಂದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದಾಗಿತ್ತು.  ಕಾರೊನೇಷನ್ ರಸ್ತೆಯಲ್ಲಿದ್ದ ಅವರ ಮನೆಗೆ ನಾವೆಲ್ಲ ದೌಡಾಯಿಸಿದೆವು.  ಕೆಲವು ಸಾಂಸಾರಿಕ ಕಾರಣಗಳಿಂದ ನೊಂದಿದ್ದ ಅವಳು, ತನ್ನಪ್ಪನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಸಾವಿಗೆ ಶರಣಾಗಿದ್ದಳು.  ಸದಾ ಚೈತನ್ಯದ ಚಿಲುಮೆಯಾಗಿದ್ದ ಅವಳ ಪಾರ್ಥಿವ ದೇಹವನ್ನು ನೋಡುವಾಗ ನಮಗೆ ಜಗತ್ತೇ ಬರಿದಾದಂತೆ ಅನ್ನಿಸಿತು.  ಅವಳ ಪ್ರೀತಿಗಾಗಿ ಹಂಬಲಿಸಿ ತೀವ್ರವಾಗಿ ಸ್ಪರ್ಧಿಸುತ್ತಿದ್ದ ಇಬ್ಬರೂ ಸ್ನೇಹಿತರು ಅಂದು ಕಣ್ಣೀರು ಸುರಿಸುತ್ತಾ ಅವಳ ಅಂತಿಮ ಸಂಸ್ಕಾರವಾಗುವವರೆಗೂ ಎಲ್ಲದಕ್ಕೂ ಭುಜ ಕೊಟ್ಟು ಅವರ ಮನೆಯಲ್ಲೇ ನಿಂತಿದ್ದರು.  ಇದೆಂಥಾ ಸಾವು, ಕೊಡುವುದದೆಂಥಾ ನೋವು!

ಸಾವು ೫:  ಮುಕ್ತಾಂಬ, ನನ್ನ ಸಹಪಾಠಿ, ಚಿಕ್ಕನಾಯಕನಹಳ್ಳಿ ಪಕ್ಕದ ಶೆಟ್ಟಿಕೆರೆಯಿಂದ ದಿನಾ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಳು.  ಸದಾ ಓದಿನಲ್ಲಿ ಚುರುಕು, ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಮುಂದು.  ಎಲ್ಲೇ ಚರ್ಚಾ ಸ್ಪರ್ಧೆಗಳಿರಲಿ, ಪ್ರಬಂಧ, ಸ್ವರಚಿತ ಕವನ ಸ್ಪರ್ಧೆಗಳಿರಲಿ, ಅವಳು ಖಂಡಿತ ಬರುತ್ತಿದ್ದಳು, ಭಾಗವಹಿಸುತ್ತಿದ್ದಳು, ಒಂದಲ್ಲ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಳು.  ಹಲವಾರು ಬಾರಿ ಚರ್ಚಾ ಸ್ಪರ್ಧೆಗಳಲ್ಲಿ ನಾವಿಬ್ಬರೂ ಪರ-ವಿರೋಧವಾಗಿ ವಾದಿಸುತ್ತಿದ್ದೆವು, ಕೆಲವೊಂದು ಚರ್ಚೆಗಳಲ್ಲಿ ನನ್ನ ಕೈ ಮೇಲಾಗಿ ಗೆಲುವು ನನ್ನದಾದಾಗ ಬಳಿ ಬಂದು ನನ್ನನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಿದ್ದಳು.  ಒಬ್ಬ ಉತ್ತಮ ಸ್ನೇಹಿತೆಯಾಗಿದ್ದಳು, ನನ್ನ ಮೀನಾಳ ಪ್ರೇಮಕಥೆಯ ಬಗ್ಗೆ ಅರಿತಿದ್ದ ಅವಳು ನಮಗೆ ಯಾವಾಗಲೂ ಶುಭ ಹಾರೈಸುತ್ತಿದ್ದಳು.  ಸಹಪಾಠಿ ಯುವಕರು ಮಾಡುತ್ತಿದ್ದ ಯಾವ ತರಲೆಗಳಿಗೂ ಗಮನ ಕೊಡದೆ ತನ್ನ ವಿದ್ಯಾಭ್ಯಾಸದ ಬಗ್ಗೆ ಅತಿ ಹೆಚ್ಚು ಗಮನ ಕೊಡುತ್ತಿದ್ದಳು.  ಬಹುಶ: ಅಂದು, ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ ಹೆಗ್ಗಳಿಕೆ ಅವಳಿಗೆ ಸಲ್ಲುತ್ತದೆ.  ಇಂತಹ ವಿದ್ಯಾದಾಹಿಯಾಗಿದ್ದವಳು, ಇದ್ದಕ್ಕಿದ್ದಂತೆ ಒಮ್ಮೆ ಸಾವಿಗೆ ಶರಣಾಗಿ ಬಿಟ್ಟಿದ್ದಳು.  ಮನೆಯಲ್ಲಿನ ಅಸಹಜ ವಾತಾವರಣವೇ ಅವಳ ಸಾವಿಗೆ ಕಾರಣವಾಯಿತು ಎಂದು ಹಲವು ಸ್ನೇಹಿತರು ನಂತರ ನಮಗೆ ತಿಳಿಸಿದ್ದರು.  ಸುದ್ಧಿ ತಿಳಿದ ನಾವುಗಳು ಶೆಟ್ಟಿಕೆರೆಗೆ ತಲುಪುವ ವೇಳೆಗಾಗಲೇ ಅವಳ ಅಂತ್ಯ ಸಂಸ್ಕಾರ ಮುಗಿದು ಹೋಗಿತ್ತು.  ಮಿಂಚಿನ ಬಳ್ಳಿಯಂತೆ ನಮ್ಮ ಸಹಪಾಠಿಯಾಗಿದ್ದವಳ ಬದುಕು ಮುಗಿದು ಹೋಗಿತ್ತು.  ಸಾವು, ಮತ್ತೊಮ್ಮೆ ನಮ್ಮ ಮುಂದೆ ಬೃಹದಾಕಾರವಾಗಿ ನಿಂತು ವಿಕಟಾಟ್ಟಹಾಸ ಮಾಡಿತ್ತು.

ಸಾವು ೬:  ಚಂದ್ರಪ್ಪ, ನನ್ನ ಅಕ್ಕನ ಗಂಡ, ಅಪ್ಪನ ದುಡುಕುತನಕ್ಕೆ ಬಲಿಯಾಗಿ ಅಕ್ಕನಿಂದ, ತನ್ನ ಮಕ್ಕಳಿಂದ ಬೇರಾಗಿ ಬದುಕುತ್ತಿದ್ದ.  ಅವರಿಬ್ಬರನ್ನು ಮತ್ತೆ ಒಂದಾಗಿಸಲು ನನ್ನ ಶಕ್ತಿ ಮೀರಿ ನಾನು ಪ್ರಯತ್ನಿಸುತ್ತಿದ್ದೆ.  ತಿಂಗಳಿಗೊಮ್ಮೆ ಅಥವಾ ಎರಡು ಸಲ ಅವನೂರಿಗೆ ಹೋಗಿ, ಅವನೊಂದಿಗೆ ಕುಳಿತು, ಅವನ ಮನದ ಮಾತುಗಳನ್ನು ಕೇಳಿ, ಸಾಧ್ಯವಾದಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಬರುತ್ತಿದ್ದೆ.  ನನ್ನ ಭೇಟಿ, ಹೆಂಡತಿ ಮಕ್ಕಳಿಂದ ದೂರಾಗಿ, ತನ್ನವರಿಂದಲೇ ಅವಹೇಳನಕ್ಕೆ ಗುರಿಯಾಗಿ, ಮಾನಸಿಕವಾಗಿ ಜರ್ಝರಿತನಾಗಿದ್ದ  ಆ ಮನುಷ್ಯನಿಗೆ ಅಷ್ಟಿಷ್ಟು ನೆಮ್ಮದಿ ಕೊಡುತ್ತಿತ್ತು.   ತನ್ನ ಒಂಟಿತನವನ್ನು ಮರೆಯಲು, ಮನದ ನೋವನ್ನು ಇಂಗಿಸಲು, ಚಂದ್ರಪ್ಪ ಕುಡಿತದ ದಾಸನಾಗಿ ಬಿಟ್ಟಿದ್ದ.  ಹಾಗೆಯೇ ಒಮ್ಮೆ ವಿಪರೀತ ಕುಡಿದು ಮಲಗಿದವನು ಮತ್ತೆ ಮೇಲೇಳಲೇ ಇಲ್ಲ, ಇಲ್ಲಿನ ವ್ಯಾಪಾರ ಮುಗಿಸಿ ಅಪಾರ ಕೊರಗಿನೊಂದಿಗೆ ಸಾವಿನರಮನೆಗೆ ನಡೆದು ಬಿಟ್ಟಿದ್ದ.  ವಿಷಯ ತಿಳಿದು ಆತುರಾತುರವಾಗಿ ಅವನೂರಿಗೆ ಧಾವಿಸಿದ ನಾನು ಮುಂದೆ ನಿಂತು ಅಂತ್ಯಸಂಸ್ಕಾರಗಳನ್ನು ಮುಗಿಸಿ ಬಂದಿದ್ದೆ.  ವಿಷಯ ತಿಳಿಸಿ, ಬರಬಹುದೆಂದು ಸಂಜೆಯವರೆಗೂ ಕಾದರೂ ಅಕ್ಕನಾಗಲಿ, ಅವಳ ಮಕ್ಕಳಾಗಲಿ, ಅವರನ್ನು ತೊರೆಸಿದ್ದ ಅಪ್ಪನಾಗಲಿ, ಕೊನೆ ಪಕ್ಷ ಅವನ ಅಂತಿಮ ದರ್ಶನಕ್ಕೂ ಬರಲಿಲ್ಲ. ಇಲ್ಲಿಯೂ ಸಾವು ಗೆದ್ದಿತ್ತು, ಕ್ರೂರವಾಗಿ ನಕ್ಕಿತ್ತು.

ಸಾವು ೭: ಮಂಜುಳ, ನನ್ನಕ್ಕ, ಹೆಸರಿಗೆ ತಕ್ಕಂತೆ ಮಾಸದ ಮುಗುಳ್ನಗೆಯೊಂದಿಗೆ ಅಪಾರ ಜೀವನಪ್ರೀತಿಯಿಂದ ಬದುಕುತ್ತಿದ್ದವಳು.  ಗಂಡನೊಂದಿಗಿನ ಭಿನ್ನಾಭಿಪ್ರಾಯ, ಅಪ್ಪನ ಸಂಪೂರ್ಣ ಬೆಂಬಲ, ಸರ್ಕಾರಿ ಕೆಲಸ, ಸಹೋದ್ಯೋಗಿಗಳ ಸಹಕಾರ, ಕುಹಕ, ವಿಷಾದಗಳೆಲ್ಲವನ್ನೂ ಅನುಭವಿಸುತ್ತ ಬದುಕಿ, ಕೊನೆಗೊಂದು ದಿನ, ತನ್ನಿಬ್ಬರು ಹೆಣ್ಣು ಮಕ್ಕಳನ್ನು ಅನಾಥರಾಗಿಸಿ, ಆತ್ಮಹತ್ಯೆಗೆ ಶರಣಾಗಿದ್ದಳು. ಅಂದು ಗೆಳೆಯ ಗಂಗಾಧರನನ್ನು ನೋಡಲು ಹುಳಿಯಾರಿಗೆ ಹೋಗಿ ಅವನು ಸಿಕ್ಕದಿದ್ದಾಗ ಚಿಕ್ಕನಾಯಕನಹಳ್ಳಿಯಲ್ಲಿದ್ದ ಅಕ್ಕನ ಮನಗೆ ಬಂದಿದ್ದೆ.  ಬೀಗ ಹಾಕಿದ್ದ ಅಕ್ಕನ ಮನೆಯ ಮುಂದೆ ಮನೆಯ ಮಾಲೀಕ ಗೋವಿಂದಪ್ಪ ಮತ್ತವರ ಮಕ್ಕಳು ವಿಷಣ್ಣ ವದನರಾಗಿ ನಿಂತಿದ್ದರು.  ನನ್ನನ್ನು ಕಂಡೊಡನೆ ಅವರಲ್ಲಿ ಸ್ವಲ್ಪ ಗೆಲುವು ಕಂಡು ಬಂದು "ಸಧ್ಯ ಬಂದಿರಲ್ಲ" ಎಂದವರಿಗೆ ’ಅಕ್ಕ ಎಲ್ಲಿ’ ಅಂದರೆ ಪೂರಾ ಬೇಸ್ತು ಬಿದ್ದಿದ್ದರು.  ಅವರಾಗಲೇ ಎಲ್ಲರಿಗೂ ಅಕ್ಕನ ಸಾವಿನ ಸುದ್ಧಿಯನ್ನು ಫೋನ್ ಮೂಲಕ ತಿಳಿಸಿ ನಮ್ಮವರ ನಿರೀಕ್ಷೆಯಲ್ಲಿದ್ದರು.  ಆದರೆ ಬೆಳಿಗ್ಗೆಯೇ ಬೆಂಗಳೂರಿನಿಂದ ಹುಳಿಯಾರಿಗೆ ಹೋಗಿದ್ದ ನನಗೆ ಆ ವಿಷಯವೇ ಗೊತ್ತಿರಲಿಲ್ಲ.  ಆಸ್ಪತ್ರೆಯಲ್ಲಿ ಅಕ್ಕನ ಮೃತದೇಹವನ್ನು ನೋಡಿ ಸ್ತಂಬೀಭೂತನಾಗಿ ಬಿಟ್ಟಿದ್ದೆ.  ಎಲ್ಲರನ್ನೂ ಛೇಡಿಸುತ್ತಾ, ತಾನು ಮಾಡುವುದೆಲ್ಲ ಸರಿ ಎಂದೇ ವಾದಿಸುತ್ತಾ ಅಪಾರ ಆತ್ಮ ವಿಶ್ವಾಸದ ಪ್ರತೀಕದಂತಿದ್ದ ಅವಳ ಸಾವು, ನನಗೆ ನಂಬಲಸಾಧ್ಯವಾಗಿತ್ತು.  ಆದರೂ ಅದು ತಣ್ಣಗಿನ ನಿಜವಾಗಿತ್ತು.  ಸಾವು, ಮತ್ತೊಮ್ಮೆ ಗೆದ್ದಿತ್ತು.  ತನ್ನ ವಿಶ್ವರೂಪ ತೋರಿಸಿತ್ತು.

ಸಾವು ೮: ಮೇಲಿನೆಲ್ಲ ಪ್ರಸಂಗಗಳಿಗಿಂತ ಮನಸ್ಸಿಗೆ ಅತಿ ಹೆಚ್ಚು ನೋವನ್ನು ಕೊಟ್ಟು ನನ್ನನ್ನು ಅಕ್ಷರಶ: ದಿವಾಳಿಯನ್ನಾಗಿಸಿದ್ದು ನನ್ನ ಅಮ್ಮನ ಸಾವು.  ದಾದಿಯಾಗಿ ಮೂವತ್ತು ವರ್ಷ ಕೆಲಸ ಮಾಡಿ ನಿವೃತ್ತರಾಗಿ ನೆಮ್ಮದಿಯ ಬದುಕಿನ ಕನಸು ಕಂಡಿದ್ದ ಅಮ್ಮನಿಗೆ ಸಕ್ಕರೆ ಖಾಯಿಲೆ "ನಿಗೂಢ ಹಂತಕ"ನಾಗಿ ಕಾಡಿತ್ತು.  ತನ್ನ ಅತ್ಯಂತ ಉನ್ನತ ಮಟ್ಟಕ್ಕೇರಿದ್ದ ಆ ಖಾಯಿಲೆ ಅಮ್ಮನ ಎರಡೂ ಮೂತ್ರ ಪಿಂಡಗಳನ್ನು ಘಾಸಿಗೊಳಿಸಿ, ಅವರನ್ನು ಜರ್ಝರಿತಗೊಳಿಸಿತ್ತು.  ವಿಕ್ಟೋರಿಯಾ ಆಸ್ಪತ್ರೆಯ ಮೂತ್ರಪಿಂಡ ಖಾಯಿಲೆಗಳ ಖ್ಯಾತ ವೈದ್ಯ ಡಾ.ಕೃಷ್ಣಮೂರ್ತಿಯವರು ಅಮ್ಮನನ್ನು ಪರೀಕ್ಷಿಸಿದ ಮೊದಲ ದಿನವೇ ಹೇಳಿ ಬಿಟ್ಟರು, " ಮಂಜು, ಸಕ್ಕರ್ ಖಾಯಿಲೆ ಅಂತಿಮ ಮಟ್ಟಕ್ಕೆ ಮುಟ್ಟಿ ಅವರ ಎರಡೂ ಮೂತ್ರಪಿಂಡಗಳು ತಮ್ಮ ಕೆಲಸ ನಿಲ್ಲಿಸಿವೆ.  ಈ ಖಾಯಿಲೆ ಇರುವವರಿಗೆ ಮೂತ್ರಪಿಂಡ ಕಸಿ ಮಾಡಲೂ ಆಗುವುದಿಲ್ಲ.  ಅವರು ಅಬ್ಬಬ್ಬಾ ಅಂದರೆ ಇನ್ನಾರು ತಿಂಗಳು ಬದುಕಬಹುದು.  ಇರುವವರೆಗೆ ಅವರನ್ನು ಚೆನ್ನಾಗಿ ನೋಡಿಕೋ, ಏನೂ ಮಾಡಲು ಸಾಧ್ಯವಿಲ್ಲ"  ಅಂದವರ ಮುಖ ನಿರ್ಭಾವುಕವಾಗಿತ್ತು.  ಅಲ್ಲಿಂದ ಅಮ್ಮ ಸುಮಾರು ಎಂಟು ತಿಂಗಳು ಆ ಆಸ್ಪತ್ರೆಯ ವಾಸಿಯಾಗಿದ್ದರು.  ಅವರು ಅನುಭವಿಸಿದ ನೋವು ಅಪಾರ, ಪ್ರತಿದಿನ ಅವರ ಚಿಕಿತ್ಸೆಗೆಂದು ಖರ್ಚಾದ ಹಣ ಅಪಾರ.  ನನಗೆ ಬರುತ್ತಿದ್ದ ಸಂಬಳದಲ್ಲಿ ಇತ್ತ ಸಂಸಾರದ ಖರ್ಚುಗಳನ್ನು ಸರಿದೂಗಿಸಲಾಗದೆ, ಅತ್ತ ಅಮ್ಮನ ಚಿಕಿತ್ಸೆಗೂ ಹಣ ಹೊಂದಿಸಲಾಗದೆ ನಾನು ಪಟ್ಟ ಪಾಡು, ನನ್ನ ವೈರಿಗೂ ಬೇಡ.  ಸಿಕ್ಕಲ್ಲೆಲ್ಲಾ ಸಾಲ ಮಾಡಿ, ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿಕೊಳ್ಳಲೇ ಬೇಕೆಂದು ಪಟ್ಟು ಹಿಡಿದು ವೈದ್ಯರು ಹೇಳಿದ ಚಿಕಿತ್ಸೆಗಳನ್ನೆಲ್ಲಾ ಮಾಡಿಸಿದರೂ, ಯಾವುದೂ ಫಲ ನೀಡಲಿಲ್ಲ.  ಕೊನೆಗೊಮ್ಮೆ ಅಮ್ಮ, ನಾನು ಮನೆಗೆ ಬಂದಿದ್ದಾಗ, ಅಪ್ಪನ ಭುಜಕ್ಕೊರಗಿ ಹಾಗೇ ಇಹಲೋಕ ತ್ಯಜಿಸಿದ್ದರು.  ಮನೆಯಲ್ಲಿ ಹೆಂಡತಿ ಬಿಸಿಬಿಸಿಯಾಗಿ ಮಾಡಿಟ್ಟಿದ್ದ ರಾಗಿ ಮುದ್ದೆಯ ಎರಡು ತುತ್ತು ನುಂಗಿ ಮೂರನೆಯ ತುತ್ತು ಮುರಿಯುತ್ತಿದ್ದಾಗ, ಅಪ್ಪನಿಂದ ನನ್ನ ಮೊಬೈಲಿಗೆ ಕರೆ ಬಂತು, ಅಮ್ಮನ ಸಾವಿನ ಸುದ್ಧಿ ಬಿತ್ತರಿಸಿತು.  ಊಟವನ್ನು ಹಾಗೆಯೇ ಬಿಟ್ಟು, ಗೆಳೆಯ ಸುರೇಶನಲ್ಲಿ ಮತ್ತೊಂದೈದು ಸಾವಿರ ಸಾಲ ಮಾಡಿ, ಹೆಂಡತಿ ಮಕ್ಕಳೊಡನೆ ಸೀದಾ ಆಸ್ಪತ್ರೆಗೆ ಹೋಗಿದ್ದೆ, ಅಮ್ಮನ ಕ್ರಿಯಾ ಕರ್ಮಗಳನ್ನೆಲ್ಲ ಮುಗಿಸಿ ಮತ್ತೆ ಮನೆಗೆ ಮರಳಿದಾಗ ಮನವೆಲ್ಲ ಖಾಲಿ ಖಾಲಿ, ಆ ಅಮ್ಮನ ಸ್ಥಾನ ಮತ್ತೆಂದೂ ಯಾರಿಂದಲೂ ತುಂಬಲಾಗದೆ ಬರಿದಾಗಿತ್ತು.  ನನ್ನೆಲ್ಲ ಪ್ರಯತ್ನಗಳು ಆ ಸಾವಿನ ಮುಂದೆ ವ್ಯರ್ಥವಾಗಿದ್ದವು.  ಸಾವು ತನ್ನ ವಿಜಯೋತ್ಸವ ಮುಂದುವರೆಸಿತ್ತು.  ನನ್ನ ಅಸಹಾಯಕತೆಯನ್ನು ಎತ್ತಿ ತೋರಿಸಿತ್ತು.

Rating
No votes yet

Comments