ಅದು ಪಾದದೆಚ್ಚರ, ಇದು ಪದದೆಚ್ಚರ

ಅದು ಪಾದದೆಚ್ಚರ, ಇದು ಪದದೆಚ್ಚರ

ಬರಹ

  ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

  ಹಾಗೆ ರಾಜನು ನೇರ ನೋಡುತ್ತ ನಡೆಯುತ್ತಿದ್ದಾಗ, ಅವನ ಕಾಲಿನ ಬುಡದಲ್ಲಿ ಮೆಟ್ಟಿಲು ಎದುರಾಯಿತೆಂದರೆ ಆಗ ಪಕ್ಕದ ಆ ಸೇವಕ, ’ಪಾದದೆಚ್ಚರ’, ಎಂದೊಮ್ಮೆ ಧ್ವನಿ ಹೊರಡಿಸಿ ದೊರೆಯನ್ನು ಎಚ್ಚರಿಸುತ್ತಿದ್ದ. ಆಗ ದೊರೆಯು ಕೆಳಗೆ ನೋಡದೆಯೇ ಕಾಲಿನಿಂದಲೇ ನೆಲ ಸವರುತ್ತ ಮೆಟ್ಟಿಲನ್ನು ಗುರುತಿಸಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುತ್ತಿದ್ದ. ಇದು ಪಾದದೆಚ್ಚರ.

  ಈಚೆಗೆ ಕವಿಗೋಷ್ಠಿಯೊಂದರಲ್ಲಿ ಉದ್ಘಾಟನಾ ಭಾಷಣ ಮಾಡುತ್ತ ಕವಿ ನಿಸಾರ್ ಅಹಮದ್ ಅವರು ಬಾಯಿತಪ್ಪಿ, ’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗ ಮಾಡಿದರು. ಆದರೆ, ತತ್‌ಕ್ಷಣವೇ, ’ವೈವಿಧ್ಯ’, ಎಂದು ತಾವೇ ಅದನ್ನು ತಿದ್ದುವ ಎಚ್ಚರ ಮೆರೆದರು. ಇದು ಪದದೆಚ್ಚರ. ನನ್ನ ಈ ಬರಹದ ವಸ್ತು.

  ’ವೈವಿಧ್ಯತೆ’ ಎಂಬ ತಪ್ಪು ಪದಪ್ರಯೋಗವನ್ನು ಬಹುತೇಕ ಎಲ್ಲರೂ ಮಾಡುತ್ತೇವೆ. ಸಾಹಿತಿಗಳೂ ಹೊರತಲ್ಲ. ’ವೈವಿಧ್ಯ, ಕಾಠಿಣ್ಯ, ಪಾವಿತ್ರ್ಯ, ಅನುಕೂಲ’ ಮುಂತಾದ ನಾಮಪದಗಳನ್ನು ವಿರೂಪಗೊಳಿಸಿ ’ವೈವಿಧ್ಯತೆ, ಕಠಿಣತೆ, ಪವಿತ್ರತೆ, ಅನುಕೂಲತೆ’ ಎಂಬ ತಪ್ಪು ಪದಗಳನ್ನು ಸೃಷ್ಟಿಸಿರುವ ನಾವು ’ಉಪಯುಕ್ತ, ಸಾಂದರ್ಭಿಕ, ಖಿನ್ನ’ ಮೊದಲಾದ ಗುಣವಾಚಕಗಳನ್ನು ’ಉಪಯುಕ್ತತೆ, ಸಾಂದರ್ಭಿಕತೆ, ಖಿನ್ನತೆ’ ಮೊದಲಾಗಿ ತಪ್ಪು ರೀತಿಯಲ್ಲಿ ನಾಮವಾಚಕ ಮಾಡಿ ಬಳಸುತ್ತೇವೆ. ಮೇಲೆ ಉಲ್ಲೇಖಿಸಿರುವ ಕವಿಗೋಷ್ಠಿಯಲ್ಲಿಯೇ, ಜನಪ್ರಿಯ ಕವಿಯೋರ್ವರು ತಮ್ಮ ಕವನದಲ್ಲಿ ’ತಲ್ಲೀನತೆ’ ತೋರಿದರೆ ಕವಯಿತ್ರಿಯೋರ್ವರು ’ಸಹೃದಯತೆ’ ಮೆರೆದರು!

  ನಾಮವಾಚಕ ಮತ್ತು ಗುಣವಾಚಕಗಳಿಗೆ ’ತೆ’ ಅಕ್ಷರ ಬೆಸೆದು ನಾಮಪದ ಮಾಡಿಕೊಂಡು ಬಳಸುವ ಪರಿಪಾಠ ಕನ್ನಡದಲ್ಲಿ ಎಷ್ಟು ತೀವ್ರವಾಗಿ ಮತ್ತು ವ್ಯಾಪಕವಾಗಿ ಬೆಳೆದುಬಂದಿದೆಯೆಂದರೆ, ’ತೆ’(ಪೆ) ಹಚ್ಚಿದ ಇಂಥ ಶಬ್ದಗಳೆಲ್ಲವನ್ನೂ ನಿಘಂಟಿಗೆ ಸೇರಿಸಿಬಿಡುವುದೇ ಉತ್ತಮವೇನೋ ಅನ್ನಿಸುತ್ತಿದೆ!

  ಏಕೀ ಕರಣ?
  ’ಕರಣ’ ಎಂದರೆ ’ಕೆಲಸ’ ಎಂದರ್ಥವಷ್ಟೆ. ’ಮಾಡುವುದು’ ಎಂಬ ಅರ್ಥವನ್ನೂ ಆರೋಪಿಸೋಣ. ’ಏಕೀಕರಣ’ ಎಂಬ ಶಬ್ದವನ್ನು ಒಪ್ಪೋಣ. ಏಕೆಂದರೆ ಆ ಶಬ್ದವು ಕನ್ನಡ ನಿಘಂಟಿಗೆ ಪ್ರವೇಶ ಪಡೆದಿದೆ. ’ಸಮೀಕರಿಸು’ ಎಂಬ ಕ್ರಿಯಾಪದವನ್ನು ’ಸಮೀಕರಣ’ ಎಂದು ನಾಮವಾಚಕ ಮಾಡಿ ಬಳಸುವುದನ್ನೂ ಸಹಿಸಿಕೊಳ್ಳೋಣ. ಆದರೆ, ’ಸಮಾಜೀಕರಣ, ಉನ್ನತೀಕರಣ, ರಾಜಕೀಕರಣ(!), ವೈಭವೀಕರಣ, ಕನ್ನಡೀಕರಣ’ ಹೀಗೆ ಕಂಡಕಂಡ ಶಬ್ದಗಳಿಗೆಲ್ಲ ’ಕರಣ’ ಹಚ್ಚಿ ಕುಲಗೆಡಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವೆ? ಜಿ.ವೆಂಕಟಸುಬ್ಬಯ್ಯ ಅವರು ಸಮಾರಂಭವೊಂದರಲ್ಲಿ ಈ ’ಕ-ರಣ’ವನ್ನು ಎತ್ತಿ ಆಡಿ ಬೇಸರಪಟ್ಟಿದ್ದನ್ನು ನಾನು ಕೇಳಿದ್ದೇನೆ.

  ’ರಾಧಳಿಗೆ, ಗಂಗಳಿಗೆ, ಶುಭಳಿಗೆ, ಶ್ವೇತಳಿಗೆ’ ಎಂಬ ಪದಪ್ರಯೋಗಗಳಿಂದು ಸಾಮಾನ್ಯವಾಗಿಬಿಟ್ಟಿವೆ. ಕಥೆ-ಕಾದಂಬರಿ ಬರೆಯುವವರೂ ಈ ತಪ್ಪು ಪ್ರಯೋಗವನ್ನು ಒಪ್ಪವಾಗಿ ಮಾಡುತ್ತಿದ್ದಾರೆ! ’ರಾಧಾ’ ಅಥವಾ ’ರಾಧೆ’ ಎಂಬುದು ಸರಿಯಾದ ರೂಪ ಎಂಬುದು ಎಷ್ಟೋ ಲೇಖಕರಿಗೇ ಗೊತ್ತಿಲ್ಲ. ಹೆಣ್ಣುಮಕ್ಕಳ ಹೆಸರುಗಳನ್ನು ಹೀಗೆ ವಿರೂಪಗೊಳಿಸುವವರಮೇಲೆ ಶಿವರಾಮ ಕಾರಂತರಿಗೆ ಅಗಾಧ ಸಿಟ್ಟಿತ್ತು.

  ಪದಗಳನ್ನು ನಮಗೆ ಬೇಕಾದಂತೆ ಮಾರ್ಪಡಿಸಿಕೊಂಡು ಬಳಸುತ್ತಿರುವ ’ಅನುಕೂಲಸಿಂಧು’ವಿನ ಉದಾಹರಣೆಗಳು ಈ ಎಲ್ಲ ಅಪಶಬ್ದಗಳು. ಪದಶುದ್ಧಿಗೆ ಇಲ್ಲಿ ಬೆಲೆಯಿಲ್ಲದಿರುವುದೇ ಬೇಸರದ ಸಂಗತಿ. ಇಷ್ಟೇ ಬೇಸರದ ಇನ್ನೊಂದು ಸಂಗತಿಯೆಂದರೆ, ಇಂಗ್ಲಿಷ್ ನುಡಿಗಟ್ಟನ್ನು ಯಥಾಕ್ರಮದಲ್ಲಿ ಕನ್ನಡಕ್ಕೆ ಅನುವಾದಿಸಿ ನುಡಿಯುವ (ಅ)ಕ್ರಮ. ’ಗವರ್ನ್‌ಮೆಂಟ್ ಗರ್ಲ್ಸ್ ಹೈಸ್ಕೂಲ್’ಅನ್ನು ಅದೇ ಕ್ರಮದಲ್ಲಿ ನಾವು ’ಸರ್ಕಾರಿ ಬಾಲಕಿಯರ ಪ್ರೌಢಶಾಲೆ’ ಮಾಡುತ್ತೇವೆ! ಅದು ’ಬಾಲಕಿಯರ ಸರ್ಕಾರಿ ಪ್ರೌಢಶಾಲೆ’ ಆಗಬೇಕೆಂಬುದು ನಮ್ಮ ಅರಿವಿಗೇ ಬರುವುದಿಲ್ಲ. ’ಸರ್ಕಾರಿ ಬಾಲಕಿಯರು, ಖಾಸಗಿ ಬಾಲಕಿಯರು’ ಎಂದೇನಾದರೂ ಇದ್ದಾರೆಯೆ? ಪದಕ್ರಮದ ಎಚ್ಚರವಿಲ್ಲದಿರುವುದರಿಂದ ಇಂಥ ’ಚೋದ್ಯಸಂಭವ’ ಆಗುತ್ತದೆ. ಬೆಂಗಳೂರಿನಲ್ಲಿ ನಡೆದ (’ಮನೆಯಂಗಳದಲ್ಲಿ ಮಾತುಕತೆ’) ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬಂದಿದ್ದ ’ಜಿ.ವೆಂ.’ ಅವರು ಈ ಬಗ್ಗೆ ಆಕ್ಷೇಪವೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

  ಇಂಗ್ಲಿಷ್‌ನಿಂದ ಕನ್ನಡಕ್ಕೆ ಯಥಾಕ್ರಮದಲ್ಲಿ ಅನುವಾದಿಸಿದಾಗ ಉಂಟಾಗುವ ಇಂಥ ಚೋದ್ಯಕ್ಕೆ ನಮ್ಮ ಜಾಹಿರಾತುಗಳು (’ಜಾಹೀರಾತು’ ಅಲ್ಲ) ಉತ್ತಮ ಉದಾಹರಣೆಗಳು:

  ’ಬೇಕು ಒಂದು ಚೆಂಡು ಆಡಲು?’
  (’ವಾಂಟ್ ಎ ಬಾಲ್ ಟು ಪ್ಲೇ?’)

  ’ಬೇಡಿ ಚಿಂತೆ ಹೇಗೆ ಹೊಂದುವುದು ಒಂದು ಮನೆ.’
  (’ಡೋಂಟ್ ವರಿ ಹೌ ಟು ಓನ್ ಎ ಹೌಸ್.’)

  ’ಹೊಳಪಿಗಾಗಿ ನಿಮ್ಮ ಹಲ್ಲುಗಳ.’
  (’ಫಾರ್ ದ ಷೈನ್ ಆಫ್ ಯುವರ್ ಟೀತ್.’)

  ’ಪದಕ್ರಮದೆಚ್ಚರ’ ಒತ್ತಟ್ಟಿಗಿರಲಿ, ಸರಿಯಾಗಿ ಕನ್ನಡ ಭಾಷಾಜ್ಞಾನವೂ ಇಲ್ಲದಿರುವವರು ನಿಘಂಟನ್ನು ಕೈಯಲ್ಲಿ ಹಿಡಿದು ಅನುವಾದಿಸಿದಾಗ ಆಗುವ ಅಪಲಾಪಗಳು ಇವು.

  ಅಪಶಬ್ದ
  ಇನ್ನು ಅಪಶಬ್ದಗಳ ಅಟಾಟೋಪವೋ, ಕನ್ನಡದಲ್ಲಿ ಭರ್ಜರಿಯಾಗಿದೆ!

  ’ಆಮರಣಾಂತ, ಆಜೀವ ಸದಸ್ಯ, ಆಯೋಗ, ಅಭಿಧಾನ, ವಿಧ್ಯುಕ್ತ, ಕೋಟ್ಯಧೀಶ, ಜನಾರ್ದನ, ಪ್ರಶಸ್ತಿ ಪ್ರದಾನ, ಪ್ರಸಾಧನ, ಉಪಾಹಾರ, ಶ್ರುತಿ, ಚಿಹ್ನೆ,’ ಈ ಶಬ್ದಗಳನ್ನು ಕ್ರಮವಾಗಿ ’ಅಮರಣಾಂತ, ಅಜೀವ ಸದಸ್ಯ, ಅಯೋಗ, ಅಭಿದಾನ, ವಿದ್ಯುಕ್ತ, ಕೋಟ್ಯಾಧೀಶ, ಜನಾರ್ಧನ, ಪ್ರಶಸ್ತಿ ಪ್ರಧಾನ, ಪ್ರಸಾದನ, ಉಪಹಾರ, ಶೃತಿ, ಚಿನ್ಹೆ,’ ಎಂದು ಬರೆಯುವ ಕನ್ನಡ’ಬ್ರಮ್ಹ’ರನ್ನು ನಾವು ಎಲ್ಲೆಂದರಲ್ಲಿ ಕಾಣಬಲ್ಲೆವು! ’ಟೆಲಿವಿಷನ್ ವಾರ್ತೆ’ಯ ಕಚೇರಿಗಳಲ್ಲಂತೂ ಇಂಥ ಬ್ರಹ್ಮರೇ ತುಂಬಿಕೊಂಡಿದ್ದಾರೆ!

  ಪದದೆಚ್ಚರ ಮಾಯವಾದ ಪರಿಣಾಮ ಈಚೆಗೆ ವಿಧಾನಸಭೆಯಲ್ಲಿ ಸಚಿವರೋರ್ವರು ’ಮಧುಮೇಹ’ ಎನ್ನುವ ಬದಲು ’ಮಧುಮೋಹ’ ಎಂದರು! ಇನ್ನೋರ್ವ ’ಮಂತ್ರಿಮುಖ್ಯ’ರು ’ಮಾನವಸಂಪನ್ಮೂಲ’ವನ್ನು ’ಮಾನವಜಲಸಂಪನ್ಮೂಲ’ ಮಾಡಿಬಿಟ್ಟಿದ್ದರು! ಪವಾಡಪುರುಷರು!

  ಎಚ್ಚರ ತಪ್ಪುವುದು ತಪ್ಪಲ್ಲ. ಎಳ್ಚತ್ತು ತಿದ್ದಿಕೊಳ್ಳದಿದ್ದರೆ ಅದು ತಪ್ಪು. ತಿದ್ದಿಕೊಳ್ಳುವುದು ಸುಲಭದ ಮಾತಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಸಂಸ್ಕೃತದಿಂದ ಇಂಗ್ಲಿಷಿನವರೆಗೆ ಹಲವು ಭಾಷೆಗಳ ಸೇವನೆಯಿಂದಾಗಿ ಮತ್ತು ’ಬಳಕೆಗಾರ’ರ ಅನುಕೂಲಕ್ಕಾಗಿ ಕನ್ನಡದಲ್ಲಿ ಎಷ್ಟೋ ಅಶುದ್ಧ ಪದಗಳು ಬೇರು ಭದ್ರ ಮಾಡಿಕೊಂಡುಬಿಟ್ಟಿವೆ. ಇರಲಿ. ಆದರೆ, ತೀರಾ ಅಸಹ್ಯ ರೀತಿಯಲ್ಲಿ ನಾವು ಪದದೆಚ್ಚರ ತಪ್ಪಬಾರದಲ್ಲಾ! ಆಲಿಸುವವರಿಗೆ ನಮ್ಮ ಅಪಶಬ್ದಗಳು ಕರ್ಣಕಠೋರವೆನಿಸಬಾರದಲ್ಲಾ!

(’ಪದಜಿಜ್ಞಾಸು ಮಿತ್ರರಿಗಿದೋ ಉತ್ತರ’ ಎಂಬ ನನ್ನ ಬರಹವನ್ನೂ ಇದೇ ’ಸಂಪದ’ದಲ್ಲಿ ಓದಿರಿ. ಪದಜಿಜ್ಞಾಸೆಯಿಂದ ನಾನಿನ್ನು ವಿರಮಿಸುವ ಸೂಚನೆಯನ್ನೂ ಆ ಬರಹದಲ್ಲಿ ಗಮನಿಸಿರಿ.)