ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು...

ಸಂತಾಪಕೀಯ: ಹೊಸ ಮೈಲುಗಲ್ಲ ತಿರುವಿನ ಬಳಿ ಕುಳಿತು...

ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ sataapakeeya ಅನುಭವದ ಬುತ್ತಿ ನೆರವಿಗೆ ಬರುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ನಗೆ ನಗಾರಿ ಹುಟ್ಟಿ ಎರಡು ವರ್ಷಗಳು ಪೂರೈಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ನಮ್ಮ ಆಪ್ತ ಚೇಲ ಕುಚೇಲ ನಮ್ಮ ಬಳಿ ತಂದಾಗ ನಾವು ಬಹಿರ್ದೆಶೆಯ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಕುಚೇಲ ತಂದ ಸುದ್ದಿ ಸರ್ಕಾರಿ ಹೂಡಿಕೆ ಹಿಂತೆಗೆತದಂತಹ ಪರಿಣಾಮವನ್ನು ನಮ್ಮ ಪುಣ್ಯದ ಕಾರ್ಯದ ಮೇಲೆ ಉಂಟುಮಾಡಿತು. ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದುಕೊಂಡು ನಾವು ಫ್ಲಶ್ ಮಾಡಿ ಹೊರಬಂದೆವು.

ಎರಡು ವರ್ಷಗಳ ಅವಧಿ ಸಾಮಾನ್ಯವಾದದ್ದಲ್ಲ. ಹತ್ತು ಹದಿನೈದು ನಿಮಿಷಕ್ಕೊಂದು ಶಿಶುವು ಸಾವನ್ನಪ್ಪುವ ಈ ಜಗತ್ತಿನಲ್ಲಿ ಇಷ್ಟು ಅವಧಿಯವರೆಗೆ ಬದುಕಿ ಉಳಿದಿರುವುದೇ ಅಸಾಮಾನ್ಯ ಸಾಧನೆ. ಹೀಗಿರುವಾಗ ಇರುವ ಎಲ್ಲಾ ಕೆಲಸಗಳನ್ನು ಬಿಟ್ಟು ಗತಕಾಲದ ಇತಿಹಾಸವನ್ನು ಕೆದಕುತ್ತ ಕೂರದಿರಲು ಸಾಧ್ಯವೇ?

ನಮ್ಮ ಏಕಮೇಜು, ಏಕ ಕುರ್ಚಿ ಕೋಣೆಯಲ್ಲಿ ಕುಚೇಲ, ನಮ್ಮ ಆಲ್ಟರ್ ಈಗೋ, ತೊಣಚಪ್ಪ, ಸ್ವಾಮಿ ಅಧ್ಯಾತ್ಮಾನಂದರನ್ನು ಕಲೆ ಹಾಕಿ ನಾವು ಚರ್ಚೆಯನ್ನು ಪ್ರಾರಂಭಿಸಿದೆವು. “ನಾವು ಇದುವರೆಗೆ ನಡೆದು ಬಂದ ಹಾದಿಯನ್ನೊಮ್ಮೆ ಪರಿಶೀಲಿಸಿ ಮುಂದೆ ನಡೆಯುವ ಸಮಯವಿದು. ಹೀಗೆ ಪರಿಶೀಲಿಸುವುದರಿಂದ ಮುಂದಿನ ಹಾದಿಯು ಸುಗಮವಾಗುವುದೆಂಬ ವಿಶ್ವಾಸವಿಲ್ಲವಾದರೂ ಹಾದಿಯಲ್ಲಿ ಸಿಕ್ಕಬಹುದಾದ ಶಾರ್ಟ್ ಕಟ್ಟುಗಳ ಬಗ್ಗೆ ಎಚ್ಚರವಹಿಸಬಹುದು.”

ನಮ್ಮ ಕಛೇರಿಯ ಹೈರಾರ್ಖಿಯನ್ನು ಮುರಿದು ಸ್ವಾಮಿ ಅಧ್ಯಾತ್ಮಾನಂದರು ಮಾತಾಡತೊಡಗಿದರು. “ನಗೆ ನಗಾರಿ ಹತ್ತಿರತ್ತಿರ ಎರಡು ವರ್ಷಗಳ ಕಾಲ ಬಡಿದುಕೊಳ್ಳುತ್ತಿದ್ದರೂ ಜನರಿಗೆ ಬೇಕಿರುವುದೇನು ಎಂಬುದು ನಮ್ಮ ಸಾಮ್ರಾಟರಿಗೆ ಅರಿವಾಗಲಿಲ್ಲ. ದಿನದ ರೊಟ್ಟಿಯನ್ನು, ರುಚಿಕಟ್ಟಾದ ಚಟ್ನಿ ಪುಡಿಯನ್ನು ಜೊತೆಗೆ ಕೆನೆ ಮೊಸರನ್ನು, ಊಟದ ಕಷ್ಟ ನಿವಾರಿಸುವುದಕ್ಕಾಗಿ ಹೊಚ್ಚಹೊಸ ಹಿಂದಿ ಸಿನೆಮಾದ ಪೈರೇಟೆಡ್ ಸಿಡಿಯನ್ನು ಸಂಪಾದಿಸುವುದರಲ್ಲೇ ಹೈರಾಣಾಗಿ ಹೋಗುವ ಪ್ರಜೆಗಳ ಅಪೇಕ್ಷೆಯೇನು ಅದು ಅರಿಯದೆಯೇ ಅವರ ಗಂಟಲೊಳಗೆ ಹಾಸ್ಯರಸವನ್ನು ತುರುಕುತ್ತಿದ್ದಾರೆ ಸಾಮ್ರಾಟರು ಎಂಬುದು ನಮ್ಮ ಅಭಿಪ್ರಾಯ.”

ಹೈರಾರ್ಖಿ ಮುರಿದ ಸಿಟ್ಟಿನ ಭರದಲ್ಲಿ ತೊಣಚಪ್ಪ ಅಬ್ಬರಿಸಿದರು, “ಸ್ವಾಮ್ಗಳು ಪ್ರವಚ್ನ ಬುಟ್ಟು ವಿಸ್ಯ ಏನಂತ ಒದರಬೇಕು.”

ಹೆಸರಿನಲ್ಲಿದ್ದ ಆಧ್ಯಾತ್ಮವನ್ನು ನೆನೆಸಿಕೊಂಡು ಕೋಪ ಹತ್ತಿಕ್ಕಿಕೊಂಡ ಅಧ್ಯಾತ್ಮಾನಂದರು ಮುಂದುವರೆದರು, “ ನಗಾರಿ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಜನಪ್ರಿಯವಾದ ವರದಿ ಯಾವುದು ಎಂದು ಅವಲೋಕಿಸಿದರೆ ನಾವು ಹೇಳಲು ಹೊರಟಿದ್ದೇನು ಎಂಬುದು ವೇದ್ಯವಾಗುತ್ತೆ.”

ಸ್ವಾಮಿಗಳ ವಾಕ್ಯ ಪೂರ್ಣಗೊಂಡು ಫುಲ್ ಸ್ಟಾಪ್ ಬೀಳುವ ಮೊದಲೇ ಕುಚೇಲ ವರದಿಯನ್ನು ತಂದಿರಿಸಿದ. ನಾವು ಅತಳ-ಸುತಳ-ಪಾತಾಳಗಳನ್ನು ಬೇಧಿಸಿ, ಗವಿ ಗುಡಾರಗಳನ್ನು ಸ್ಪೋಟಿಸಿ ಮಾಡಿದ ಯಾವ ವರದಿಗಳೂ ಪಡೆಯದಷ್ಟು ಜನಪ್ರಿಯತೆಯನ್ನು “ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ” ವರದಿ ಪಡೆದಿದ್ದು ಗಮನಕ್ಕೆ ಬಂದಿತು.

ಆ ವರದಿಗೆ ಬಂದ ಪ್ರಜೆಗಳ ಪ್ರತಿಕ್ರಿಯೆಗಳ ಮಹಾಪೂರ ಕೋಣೆಯೊಳಗಿದ್ದ ಎಲ್ಲರನ್ನೂ ದಿಗ್ಮೂಢರನ್ನಾಗಿಸಿತು- ಅಧ್ಯಾತ್ಮಾನಂದರ ಹೊರತು. “ಜನರು ತಮ್ಮ ಭವಿಷ್ಯತ್ತಿನ ಬಗ್ಗೆ, ಮುಂದಾಗಲಿರುವ ಘಟನೆಗಳ ಬಗ್ಗೆ ಈ ಮಟ್ಟಿಗೆ ವ್ಯಾಕುಲರಾಗಿರುವಾಗ ಸಾಮ್ರಾಟರು ಹೀಗೆ ಇತಿಹಾಸವನ್ನು, ವರ್ತಮಾನ ಪತ್ರಿಕೆಗಳನ್ನು ಅರೆದು ನಗೆ ಗುಳಿಗೆ ತಯಾರಿಸುವುದರಲ್ಲಿ ಮಗ್ನರಾಗುವುದು ಸಮಂಜಸವಲ್ಲ.”

ಮರದಿಂದ ಉದುರಿದ ಸೇಬು ನ್ಯೂಟನ್ನಿನನಿಗೆ ಗುರುತ್ವಾಕರ್ಷಣೆಯನ್ನು ಕಾಣಿಸಿದ ಹಾಗೆ ಸ್ವಾಮಿಗಳ ಪ್ರವಚನ ಕೇಳಿ ತೂಕಡಿಸುತ್ತಿದ್ದ ನಮ್ಮ ಆಲ್ಟರ್ ಈಗೋನ ಎಂಜಲು ನಮ್ಮ ನಿದ್ದೆಯನ್ನು ಕೆಡಿಸಿತು. ಕೂಡಲೇ ಕಾರ್ಯಪ್ರವೃತ್ತರಾದ ನಾವು ಸೀದಾ ಖೋಡಿ ಹಳ್ಳಿ ಸ್ವಾಮೀಜಿಯ ಪಾದಕ್ಕೆರಗಿದೆವು. ಸ್ವಾಮಿಗಳು ಕೈಲಿದ್ದ ಬ್ಲ್ಯಾಕ್ ಬೆರ್ರಿಯನ್ನು ಬದಿಗಿಟ್ಟು ನೆತ್ತಿ ಮುಟ್ಟಿದೊಡನೆಯೇ ಮಿದುಳಲ್ಲಿ ಮಿಂಚಿನ ಸಂಚಾರವಾಯಿತು. ಪ್ರಳಯಕಾಲದ ಸಿಡಿಲು ಸ್ಪೋಟಿಸಿ ಅದರ ಸದ್ದು ಖಾಲಿ ಬುರುಡೆಯೊಳಗೆ ಮಾರ್ದನಿಸಿತು. ಇನ್ನು ದೇಹದಲ್ಲಿರುವ ಪ್ರತಿ ಕೋಶವನ್ನೂ, ಭಗವಂತ ನೀಡಿರುವ ಪ್ರತಿ ಕ್ಷಣವನ್ನೂ ಜನಸಾಗರದ ಭವಿಷ್ಯವನ್ನು ಸುಭದ್ರಗೊಳಿಸುವ ಕಾಯಕಕ್ಕೆ ವಿನಿಯೋಗಿಸಬೇಕು ಎಂದು ತೀರ್ಮಾನಿಸಿದೆವು. ಕೂಡಲೇ ಎಲ್.ಐ.ಸಿ ಕಛೇರಿ ಹೊಕ್ಕು ಅಲ್ಲಿಂದ ಹೊರದಬ್ಬಿಸಿಕೊಂಡೆವು.

ಹುಚ್ಚುಖೋಡಿ ಮಠದ ಪರಮಯೋಗ್ಯ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಜನರ ಭವಿಷ್ಯವನ್ನು ಕಾಣುವ ಸಿದ್ಧಿಯನ್ನು ಪಡೆದುಕೊಂಡೆವು. ಈ ದಿವ್ಯಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸದೆ ಹೇರಳವಾಗಿ ಧನ ದ್ರವ್ಯಾದಿಗಳನ್ನು ಅರ್ಪಿಸುವ ಟಿವಿ ಚಾನಲು, ಸಿನೆಮಾ ತಾರೆಯರು, ರಾಜಕಾರಣಿಗಳ ಸೇವೆಗೆ ಬಳಸು ಎಂಬ ದಿವ್ಯೋಪದೇಶದೊಂದಿಗೆ ಹಿಂದಿರುಗಿದೆವು.

Rating
No votes yet