ಎಲ್ಲಿಂದೆಲ್ಲಿಗೆ ಲಿಂಕು! (ಎತ್ತಣಿಂದೆತ್ತ ಸಂಬಂಧವಯ್ಯಾ!)
-೧-
ಜಡಾನಾಮವಿವೇಕಾನಾಮಶೂರಾಣಾಮಪಿ ಪ್ರಭೋ
ಭಾಗ್ಯಭೋಜ್ಯಾನಿ ರಾಜ್ಯಾನಿ ಸಂತ್ಯನೀತಿಮತಾಮಪಿ
(ವಿಷ್ಣುಪುರಾಣ)
ಸೋಮಾರಿಗಳು, ಅವಿವೇಕಿಗಳು, ಹೇಡಿಗಳು, ನೀತಿಯಿಲ್ಲದವರು ತಮ್ಮ ಅದೃಷ್ಟದಿಂದ ರಾಜ್ಯಾಡಳಿತವನ್ನು ಪಡೆಯುತ್ತಾರೆ.
-೨-
* ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷ ಕಾಲ..
* ಜಾಲಿಯ ಮರದಂತೆ, ಧರೆಯೊಳು ದುರ್ಜನರು ಜಾಲಿಯ ಮರದಂತೆ..
* ಧರ್ಮಕ್ಕೆ ಬಾರದೀ ಕಾಲ, ಪಾಪಕರ್ಮಕ್ಕೆ ಮನಸೋಲೋದೀ ಕಲಿಕಾಲ..
* ಮನುಜಶರೀರವಿದೇನು ಸುಖ, ಇದು ನೆನೆದರೆ ಘೋರವಿದೇನು ಸುಖ..
* ಆರೇನು ಮಾಡುವರು ಅವನಿಯೊಳಗೆ, ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ..
(ಪುರಂದರ ದಾಸರು)
-೩-
ಅರೆದಾರು ಮರೆದಾರು ಉರಿದಾರು ಜಗದೊಳಗೆ
ಕುರಿಗಳಾ ತಲೆಯ ತರಿದಂತೆ ರಕ್ತವನು
ಸುರಿದಾರು ನೋಡ ಸರ್ವಜ್ಞ.
-೪-
ಭ್ರಷ್ಟರ ಆಡಳಿತ. ವಿದ್ಯುತ್ ಇಲ್ಲ, ನೀರಿಲ್ಲ, ಪದಾರ್ಥಗಳ ಬೆಲೆ ಮುಟ್ಟುವಂತಿಲ್ಲ.
ಉಗ್ರರ ಉಪಟಳ. ಜನರ ಜೀವಕ್ಕೆ ರಕ್ಷಣೆಯೇ ಇಲ್ಲ.
-೫-
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ
ಇಲ್ಲೀಗ ವಿದ್ಯುತ್ತೇ ಮಾಯೆ ಕಾಣಾ ಆನಂದರಾಮೇಶ್ವರಾ!